Friday 28 October 2016

Kavite- Deepavali

ನನ್ನೆಲ್ಲಾ ಸಹೃದಯೀ ಮಿತ್ರರಿಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು.. ಈ ದೀಪಾವಳಿಯೂ ನಿಮ್ಮೆಲ್ಲರ ಮನೆಮನಗಳನ್ನು ಬೆಳಗಲಿ..
ಅಂಧಕಾರವನ್ನು - ಮೌಢ್ಯವನ್ನು  ಕಳೆದು ಹೊರಜಗತ್ತನ್ನು ಪ್ರೀತಿಯಿಂದ ನೋಡುವ ಹಾಗೆ ಆಗಲಿ..
ಶ್ರೀಲಕುಮಿ- ಶ್ರೀಹರಿಯ ಕೃಪೆ ಸದಾ ನಿಮಗೊಲಿಯಲಿ..

~ ಶ್ರೀಮತಿ ಸಿಂಧುಭಾರ್ಗವ್ ಮತ್ತು ಮನೆಯವರು..
~~~~~~~~~~~~~~~~~~~~~

)(@)(


ದೀಪಾವಳಿ ಪರ್ಬ ಮತ್ತೊಮ್ಮೆ ಬಂದಿದೆ..
ಮನೆ-ಮನಗಳಲಿ ಬೆಳಕ ತಂದಿದೆ..

ಎಣ್ಣೆ ಹಚ್ಚಲು ಗರಿಕೆಹುಲ್ಲು ಕಾದಿದೆ..
ಅಲಂಕಾರಗೊಂಡು ಹರಿಯು ನಿಂತಿದೆ..

ದೇವರಿಗೆ ತುಪ್ಪದ ದೀಪ..
ನಡುನಡುವೆ ತುಂಬಿದ ದೂಪ..

ಹೂವಿನ ಹಾರಗಳದ್ದೇ ಹಾಡು..
ಪುಟಾಣಿಗಳ ಹೊಸಬಟ್ಟೆ ನೋಡು..

ವಿವಿಧ ಖಾದ್ಯ ನೈವೇದ್ಯಕ್ಕೆ...
ನೆಂಟರು ಬರುವರು ಭೋಜನಕ್ಕೆ..

ಬಿಡುವಿರದ ಕೆಲಸ ಅಮ್ಮನಿಗೆ..
ಹೊರಗಿನ ಕೆಲಸಗಳು ಅಪ್ಪನಿಗೆ..

ಅಣ್ಣ ತಮ್ಮಂದಿರ ಪಟಾಕಿ..
ಅಕ್ಕತಂಗಿಯರ ಮಾತಿನ ಚಟಾಕಿ..

ಹಿರಿಯರ ನೆನಪಿಸುವ ಆಕಾಶಬುಟ್ಟಿ..
ಗೋಪೂಜೆಗೆ ಕಾಯುತಲಿದೆ ಹಟ್ಟಿ..

ರೈತರಿಗೆ ಬಿಡುವು ಹಸುಗಳಿಗೆ ಮೇವು
ಊರಿಡೀ ತುಂಬಿದೆ ಸಂತಸವು..

~ ಸಿಂಧುಭಾರ್ಗವ್. ಬೆಂಗಳೂರು
((ಹರಿ - ದೊಡ್ಡ ಪಾತ್ರೆ, ಹಟ್ಟಿ - ಕೊಟ್ಟಿಗೆ))

Happy Deepavali 2016

)(@)(

#ದೀಪಾವಳಿ ಎಂದರೆ ನೆನಪಾಗುವುದು
ಪಕ್ಕದ ಶೆಟ್ಟರ ಮನೆಯ  ಶ್ರೀಮಂತಿಕೆ,
ಆಗಸದೆತ್ತರಕ್ಕೆ ಹಾರಿ ಚಿತ್ತಾರ ಮೂಡಿಸುವ ರಾಕೇಟ್, 
ನಮ್ಮ ಮನೆಯಲಿ ನಗುತಲಿದ್ದ ಪುಟ್ಟ ಹಣತೆ,  ಹಿರಿಯರ ನೆನಪಿಸುವ ಆಕಾಶಬುಟ್ಟಿ, ಬಿಡಿ ಪಟಾಕಿ ಕಲ್ಲಿನಿಂದ ಜಜ್ಜುತ್ತಿದ್ದ, ಪಿಸ್ತೂಲ್ ತೋರಿಸಿ ಹೆದರಿಸುತ್ತಿದ್ದ ನೆರೆಮನೆ ಮಕ್ಕಳು,
ಎಲ್ಲಿ ಯಾವಾಗ ಪಟಾಕಿ ಸಿಡಿಯುವುದೋ ಎಂಬ ಭಯದ ಜೊತೆಜೊತೆಗೆ ಪೇಚಿಗೆ ಸಿಲುಕಿಸುವ ತರಲೆ ಮಕ್ಕಳು, 
ಅಮ್ಮನ ಬಿಡುವಿರದ ಕೆಲಸ,
ಅಪ್ಪನ ಗಡಿಬಿಡಿ ತಕಪಕ ಕುಣಿತ,
ಅಕ್ಕ-ಅಣ್ಣನ ಲೆಕ್ಕದ ನಕ್ಷತ್ರಕಡ್ಡಿ ಕದಿಯುವುದು,
ಕೈಸುಟ್ಟುಕೊಂಡು ವಿಪರೀತ ನೋವಿನಿಂದ ಅಳುವುದು,

#ದೀಪಾವಳಿ ಎಂದರೆ ನೆನಪಾಗುವುದು,
ಎಣ್ಣೆ ಸ್ನಾನ, ಗೋಪೂಜೆ, ಲಕ್ಷ್ಮಿ ಪೂಜೆ, ತುಳಸೀಪೂಜೆ, ಗದ್ದೆಗೂ, ಕಟಾವು ಮಾಡಿ ತಂದ ಬತ್ತದ ರಾಶಿಗೂ ಪೂಜೆ ಮಾಡುವುದು.

#ದೀಪಾವಳಿ ಎಂದರೆ,
ಹೊಸ ಬಟ್ಟೆ , ಪಾಯಸ, ಸಿಹಿಯೂಟ, ಗೆಜ್ಜೆಸದ್ದು ,ಬಳೆಯ ಸಂಗೀತ ರಂಗೋಲಿ, ಭಜನೆ,ಭಕ್ತಿ, ಮದುವೆಯಾದ ಮೊದಲ ವರುಷ ಅಳಿಯ ಬರುವ ಸಡಗರ,  ಕತ್ತಲೆ ಕವಿದ ಪುಟ್ಟ ಗೂಡಿಗೂ ಹಣತೆ ಹಚ್ಚಿ ದೀಪ ತೋರಿಸಿ ಬೆಳಕು ತುಂಬುವ ಸಮಯ.#ಬಲಿಚಕ್ರವರ್ತಿ ಬಂದು ಈ ಸಂಭ್ರಮ ನೋಡಿ ಎಲ್ಲಾ ರೀತಿಯಲ್ಲಿಯೂ ಸಂತುಷ್ಟನಾಗಿ ಆಶೀರ್ವದಿಸಿ ಮುಂದೆ ಸಾಗುವ ಹಬ್ಬ..

#ದೀಪಾವಳಿ ಎಲ್ಲರಿಗೂ ಶುಭವನ್ನೇ ತರಲಿ. 
ಕತ್ತಲೆ ಎಂದರೆ ಅಂಧಕಾರ ಎಲ್ಲಾ ರೀತಿಯ ಅಂಧಕಾರ ಕಳೆದು ಜನರ ಮನಸ್ಸಿನಲ್ಲಿ ಹೊಂಗಿರಣ ಮೂಡಲಿ. 
ಒಳ್ಳೆಯ ಮನಸ್ಸಿನಿಂದ ಹೊರ ಜಗತ್ತನ್ನು ನೋಡುವಂತಾಗಲಿ..ನಗುನಗುತಾ ಬಾಳಿರಿ..

- ಶ್ರೀಮತಿ ಸಿಂಧುಭಾರ್ಗವ್. ಬೆಂಗಳೂರು

ಕವನ ದೀಪಾವಳಿಯ ಶುಭಾಶಯಗಳು

)(@)(


ಜೀವನದ ಸಂತೆಯಲಿ,
ಬೆಳಕಿನ ಸಂಭ್ರಮ..
ಒಂದೊಂದು ಹಣತೆಯಲು
ಭಾವ ಅನುಪಮ..

ದೀಪ ಹಚ್ಚಿ ಬನ್ನಿ, ಮನೆಯ ಬೆಳಗಿಸಿ..
ಮನದ ಮೂಲೆಮೂಲೆಗೂ ಬೆಳಕ ಹಾಯಿಸಿ..

ಅಲ್ಲೊಬ್ಬ ದೇಶ ಕಾಯುತಲಿರುವ,
ಅವನ ನೆನಪಿಸುತ ದೀಪ ಹಚ್ಚುವ..

ಊಟವಿಲ್ಲದೇ ಬಡವ ನರಳುತಿರುವ..
ನಮ್ಮ ಪಾಲಿನ ಸಿಹಿಯ ಅವಗೆ ನೀಡುವ..

ಕೋಪ ಮಾಡುವ ಜೀವಕೆ ತಾಳ್ಮೆ ತುಂಬುವ..
ಕೊಲ್ಲು ಎನ್ನುವ ಕೈಗೆ ಹೂವ ನೀಡುವ..

ಪಂಜರದ ಪಕ್ಷಿಯ ಹಾರಿಬಿಡುವಾ..
ದವಸ ನೀಡುವ, ಪ್ರೀತಿ ಮಂತ್ರ ಸಾರುವ..

ಸಿರಿತನದ ಸೌಂದರ್ಯ ಕಣ್ಣ ತುಂಬಿಸಿಕೊ.
ತನ್ನ ಪಾಲಿನ ತುತ್ತು ತನಗೆ ಎಂದುಕೊ..

ಬೇಧಭಾವ ಮರೆತು ಹಣತೆ ಬೆಳಗಿಸಿ..
ದೀಪಾವಳಿಯ ಖುಷಿಯಿಂದ ಆಚರಿಸಿ..


ಸಿಂಧುಭಾರ್ಗವ್. ಬೆಂಗಳೂರು

ಕವನ ನಿನ್ನ ಕಂಡಾಗಲೆಲ್ಲ....

ನಿನ್ನ ಕಂಡಾಗೆಲ್ಲ ನೆನಪು ಮತ್ತೆ ಕಾಡುವುದು..
ದಿನವ ದೂಡಬೇಕಲ್ಲ ಮರೆತಂತೆ ನಟಿಸುವುದು..

ಮಾತು ಮೂಕವಾಗಿದೆ..
ಕಣ್ಣಸನ್ನೆ ಮರೆತಂತಿದೆ..
ನೋಟ ಓರೆಯಾಗಿದೆ..
ಹಾಡು ಹುಟ್ಟಿಕೊಂಡಿದೆ..

ಕಣ್ಣಹನಿಯೂ ಸದ್ದಿಲ್ಲದೇ ಉರುಳುತಿದೆ..
ಎದೆಬಡಿತವು ಬಿಡದೇ ಬಡಬಡಿಸುತಿದೆ..

ವಿರಹದ ಗೀತೆ ಮೂಡಿದೆ..
ಮನವು ಮೌನವಾಗಿದೆ..
ಪದಗಳ ಉಸಿರು ಕಟ್ಟಿದೆ..
ಲೇಖನಿ ಅರ್ಧಕ್ಕೆ ನಿಂತಿದೆ..

ನೀನು ಬಂದು ಗೋರಿ ಮೇಲೆ ಹೂವು ಇಡಬೇಕಿದೆ...

ಸಿಂಧುಭಾರ್ಗವ್. ಬೆಂಗಳೂರು

Bayake baduku

(@)ಬಯಕೆ ಮತ್ತು ಬದುಕು
ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ...

(@)ಬಯಕೆ ಕೊನೆಗೊಳ್ಳುವುದು ಬದುಕು ಕೊನೆಗೊಂಡಾಗಲೇ...

(@)ಬಯಕೆಯನ್ನು ಬಂಧಿಸಬೇಕೆಂಬುದೂ ಕೂಡ ಒಂದು ರೀತಿಯ ಬಯಕೆಯೇ...

(@)ನಮ್ಮೆಲ್ಲ ಬಯಕೆಗಳು ಈಡೇರಿಸಲೆಂದೆ ಬದುಕು  ಸವೆಸುವುದು...

(@)ನಮ್ಮ ಬದುಕಿನಲಿ ಬಯಕೆಗಳೇ ಇಲ್ಲದಿದ್ದರೆ ಹಾದಿ ಮುಂದೆ ಸಾಗದು...

(ಗಮನಿಸಿ ಇಲ್ಲಿ ಬಯಕೆ= ಆಸೆ,ಅಭಿಲಾಷೆ,ಆಸಕ್ತಿ ಹೀಗೆ ಅನೇಕ ಅರ್ಥವನ್ನು ಕೊಡುತ್ತದೆ.)

-ಸಿಂಧುಭಾರ್ಗವ್ 😍

Wednesday 19 October 2016

ಕವನ - ನಿನ್ನ ಒಂದು ಮಾತೇ ಸಾಕು

ನಿನ್ನ ಒಂದು ಮಾತೇ ಸಾಕು
ನನ್ನ ಮೌನ ಮುರಿಯಲು..
ನಿನ್ನ ಒಂದು ನೋಟ ಸಾಕು
ನನ್ನ ಮೈಯ ತಣಿಸಲು..

ನನ್ನ ನಿನ್ನ ಪ್ರೀತಿಯಲ್ಲಿ
ಕವನಗಳದೇ ಹಾವಳಿ..
ಸನಿಹ ವಿರಹವೆರಡು ಈಗ
ಪ್ರೀತಿಯಲಿ ಮಾಮೂಲಿ..

ಹೂವ ಹಾಸಿ ಕಾಯಿತಿರುವೆ
ನಿನ್ನ ಒಂದು ಬರುವಿಗೆ..
ಕಾದುಕುಳಿತು ಸಮಯ ಕಳೆದೆ
ನಿನ್ನ ಮತ್ತೆ ನೆನೆಯುತ..

ಹರುಷಗೊಂಡ ರವಿಯು ತಾನು
ನನ್ನ ನೋಡಿ ಕೆಂಪಾದನು..
ಪಡುಗಡಲ ಅಲೆಯಲಿ ಕಲೆತು
ಮುಳುಗಲು ಸಜ್ಜಾದನು..

ಕೈಯ ರಂಗವಲ್ಲಿ ಈಗ
ಘಮವ ಹೊತ್ತು ಸಾಗಿದೆ..
ಯಾರ ಬಳಿಗೆ ಕೇಳಿದಾಗ
 ನಿನ್ನ ಹೆಸರ ಹೇಳಿದೆ..

ಮದುವೆ ದಿಬ್ಬಣವ ಕಂಡು
ಮನವು ಹಕ್ಕಿಯಾಗಿದೆ..
ನಾಳಿನ ಜೀವನವ ಎನಿಸಿ
 ಹಣೆಯ ಬಿಂದಿ ನಕ್ಕಿದೆ..

- ಸಿಂಧುಭಾರ್ಗವ್ 

ಲೇಖನ- ಸಾಹಿತ್ಯ ಕ್ಷೇತ್ರ

               ಸಾಹಿತ್ಯ ಕ್ಷೇತ್ರ ಅನ್ನುವಂತದ್ದು ಬಹುದೊಡ್ಡ ಸಾಗರದಂತೆ.. ಅದರ ಆಳದಲ್ಲಿರುವ ಪದಭಂಡಾರಗಳೆಂಬ ಮುತ್ತುರತ್ನಗಳನ್ನು ಹುಡುಕಿ ತರುವುದು ಅಷ್ಟು ಸುಲಭದ ಮಾತಲ್ಲ..ಸತತ ಪರಿಶ್ರಮ, ಕೃಷಿ, ಅಗತ್ಯ.. ಅದೊಂದು ರೀತಿಯ ತಪಸ್ಸು.. ಈಗೀಗ ಮಾಧ್ಯಮಗಳ ಸಂಖ್ಯೆ ಅತಿಯಾಗಿದೆ.. ಸಾಮಾಜಿಕ ಜಾಲತಾಣಗಳದ್ದೇ ಮಹಿಮೆ. ನಾವು ಬರೆದ ಬರಹಗಳು ಪತ್ರಿಕೆಗಳಿಗೆ , ಮಾಸಪತ್ರಿಕೆಗಳಿಗೆ ಕಳುಹಿಸಬೇಕೆಂದಿಲ್ಲ. ವಾಟ್ಸ್ಅಪ್ / ಫೇಸ್ ಬುಕ್ ಗಳಲ್ಲಿ ಎರಡೆರಡು ಸಾಲು ಬರೆದು  ಪೋಸ್ಟ್ ಮಾಡಿದರೂ ಲೈಕ್/ಕಮೆಂಟ್ಸ್ ಗಳು ಬರುತ್ತವೆ.. ಕೆಲವರಿಗೆ ಅಷ್ಟೆ ಸಾಕು ಎಂಬ ತೃಪ್ತಿ.. ಅದು ಒಳ್ಳೆಯದಲ್ಲ.. ನಮ್ಮ ಬರಹ ಅಲ್ಲಿಗೆ ಮಾತ್ರ ಸೀಮಿತವಾಗಬಾರದು. ಇನ್ನು ಕೆಲವರಿದ್ದಾರೆ, ನಾಲ್ಕು ಸಾಲು ಬರೆದು ಹಾಕಿದ ಕೂಡಲೇ ಅವನು ಕವಿಯಾಗಲು ಅರ್ಹನಾಗಿರುವುದಿಲ್ಲ.. ಒಂದಷ್ಟು ಜನ ಹೊಗಳುವರು ತನ್ನದೇ ಅಭಿಮಾನ ಬಳಗವಿದೆ ಎನ್ನುವ ಅಹಂ ತಲೆಗೇರಿಸಿಕೊಂಡು ತಾನೊಬ್ಬ ಕವಿಯೆಂದು ತಿರುಗಾಡುವುದು ಈಗೀಗ ಸಾಮಾನ್ಯವಾಗಿಬಿಟ್ಟಿದೆ.. ಅದಕ್ಕೆ ಮೂಲಕಾರಣ ಅಂಗೈಯಲ್ಲಿ ಮನೆಮಾಡಿರುವ ಫೇಸ್ಬುಕ್/ವಾಟ್ಸ್ಅಪ್. ವ
ಮೊಟ್ಟಮೊದಲಾಗಿ ಮನದಲ್ಲಿ ವಿನಯತೆ ಮತ್ತು ವಿಧೇಯತೆ ಇರಬೇಕು.. ಇಂದು ನಿಮ್ಮನ್ನು ಹೊಗಳುವವರು ನಾಳೆ ಇನ್ನು ಸ್ವಲ್ಪ ಚೆಂದವಾಗಿ ಬರೆಯುವವನ ಸ್ನೇಹ ಸಿಕ್ಕಿತೆಂದು ಅಲ್ಲಿಗೆ ಹಾರಿಬಿಡುವರು.. ಅವರನ್ನು ಹೊಗಳಲು ಶುರುಮಾಡುವರು. ನಿಮಗೆ ಬರುವ ಲೈಕ್/ ಕಮೆಂಟ್ ಗಳು ಕಡಿಮೆಯಾಗತೊಡಗಿದಾಗಲೇ ಅರಿವಾಗುವುದು, ಮನಸ್ಸು ಮಂಕಾಗುವುದು.. ತಲೆಕೆಡಿಸಿಕೊಳ್ಳುವುದು.. ದಡದಲ್ಲಿಯೇ ಕುಳಿತು ಸಮುದ್ರದ ಅಲೆಗಳಲಿ ತೆಲಿದಂತೆ ಕನಸುಗಾಣುವುದಲ್ಲ.. ತೆರೆಗಳಿಗೆ ವಿರುದ್ಧವಾಗಿ ಈಜಬೇಕು‌. ಜಯಿಸಬೇಕು.
**
ಅಷ್ಟು ಸುಲಭದಲ್ಲಿ ಸಾಹಿತಿ ಎನ್ನುವ ಪಟ್ಟ ಸಿಗುವುದಿಲ್ಲ‌‌‌.. ಕವಿಯಾಗಲು ಸಾಧ್ಯವಿಲ್ಲ.. ನಮ್ಮಲ್ಲಿ ಇನ್ನಷ್ಟು ಬರೆಯಬೇಕೆಂಬ ಹಸಿವು ಇರಬೇಕು.ಸತತವಾಗಿ ಹೊಸಹೊಸ ಪದಗಳ ಬಳಕೆ, ವಾಕ್ಯರಚನೆ, ಚುಟುಕಾಗಿ ನಾವು ಏನು ಹೇಳಬಯಸಿದ್ದೇವೆ ಅನ್ನುವುದನ್ನು ಸ್ಪಷ್ಟವಾಗಿ ಹೇಳುವ ತಾಕತ್ತು ಇದ್ದರೇನೆ ಬರವಣೆಗೆಯಲ್ಲಿ ನಮ್ಮದೇ ಆದ ಛಾಪನ್ನು ಮೂಡಿಸಲು ಸಾಧ್ಯ..
ನಾನು ಹೇಳುತ್ತಿರುವುದು ಪತ್ರಿಕೋದ್ಯಮ ಪದವಿ ಓದಿ ಲೇಖಕರೆನಿಸಿಕೊಳ್ಳುವವರಿಗಲ್ಲ..ಅವರ ಹಾದಿಯೇ ಬೇರೆ..ಅವರ ನಡುವೆ ಇರುವ ಬರವಣಿಗೆಯಲ್ಲಿ ಆಸಕ್ತಿಯಿರುವವರು ಹೇಗೆ ಗುರುತಿಸಿಕೊಳ್ಳುವುದು?  ಎಲೆಮರೆ ಕಾಯಿಯಂತೆ ಮುತ್ತು ಉದುರಿಸುವ ಹಾಗೆ ಸ್ಫುಟವಾಗಿ ಬರೆಯುವ ಯುವಬರಹಗಾಗರಿಗೆ ಹೇಳುತ್ತಿರುವುದು.. ವೃತ್ತಿಯೊಂದಿರುತ್ತದೆ, ಪ್ರವೃತ್ತಿಯಾಗಿಯೋ ಇಲ್ಲಾ ಹವ್ಯಾಸವಾಗಿಯೋ ಬರಹವನ್ನು ಆಯ್ಕೆ ಮಾಡಿಕೊಂಡಿರುವವರಿಗೆ ಹೇಳುತ್ತಿರುವುದು.. ಅವರು ಪ್ರಕಾಶಿಸುವುದು ಹೇಗೆ.. ಹೊರ ಜಗತ್ತಿಗೆ ಗುರುತಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಮಾತನಾಡುತ್ತಿರುವುದು.
**
ಅದಕ್ಕೆ ಶ್ರೀಯುತ ಡಾ. ನ. ದಯಾನಂದ ಶೆಟ್ಟಿಯವರು ಹೇಳಿದಂತೆ, "ಹೆಚ್ಚೆಚ್ಚು ಓದುವ ಅಭ್ಯಾಸವಿಟ್ಟುಕೊಳ್ಳಬೇಕು, ಪದಗಳ ಭಂಡಾರ ನಮ್ಮ ಮಸ್ತಕದೊಳಗಿರಬೇಕು.." ಪೇಪರ್ ಆಗಲಿ, ಕಾದಂಬರಿಯಾಗಲಿ, ಸಣ್ಣ ಬಜ್ಜಿ ಕಟ್ಟಿಕೊಟ್ಟ ಪೇಪರಿನ ಪೀಸಿನಲ್ಲಿ ಕೂಡ (ಚಿಂದಿ ಹಾಳೆಯೆನ್ನಬಹುದು) ನಮಗೇನು ವಿಷಯ ಸಿಗುತ್ತದೆ? ಹೊಸದಾದ ಪದಗಳು ಇದೆಯಾ? ಅದರ ಅರ್ಥ ಹೇಗೆ? ಯಾಕಾಗಿ ಉಪಯೋಗಿಸಿದರು ಎಂಬಿತ್ಯಾದಿ ತರ್ಕ, ಆಲೋಚನೆಗಳನ್ನು ಮನದಲ್ಲೇ ಮಾಡುತ್ತಾ ಹೋದಂತೆ ನಮಗೆ ಅದರ ಹಿಡಿತ ಸಿಗುತ್ತದೆ.. ಅದೊಂದು ಅಭ್ಯಾಸವಾಗುತ್ತದೆ.. ಅಲ್ಲದೇ ನಾವು ಬರೆದುದನ್ನು ಪತ್ರಿಕೆಗಳಿಗೆ ಕಳುಹಿಸಿದರೆ ಆಯ್ಕೆಯಾಗುವುದಿಲ್ಲ‌ ಎಂಬ ಕೊರಗು ಕೆಲವರಿಗೆ. "ಅವನು ಕಳುಹಿಸಿದ ನಿನ್ನೆಯಷ್ಟೆ ದೊಡ್ಡದಾಗಿ ಪೇಪರಿನಲ್ಲಿ ಬಂತು.. ನಾನು ಎಷ್ಟು ಕಳುಹಿಸಿದ್ದೇನೆ ಆದರೆ ಆಯ್ಕೆ ಮಾಡುವುದೇ ಇಲ್ಲ.." ನನಗೆ ಅದೃಷ್ಟ ವೇ ಸರಿ ಇಲ್ಲ.. ಎಂದು ವೈರಾಗಿಗಳ ಹಾಗೆ ಯುದ್ಧದಲ್ಲಿ ಸೋತವರ ಹಾಗೆ ಮಂಕಾಗಿ ಕುಳಿತುಬಿಡಬೇಡಿ..ಅದನ್ನು‌ ಮೊದಲು ಮನಸ್ಸಿನಿಂದ ತೆಗೆದು ಹಾಕಿ.. ನನ್ನ ಬರಹಗಳನ್ನು ಇನ್ನಷ್ಟು ಓರೆಗೆ ಹಚ್ಚಬೇಕೇನೋ? ಅದಕ್ಕೆ ಆಯ್ಕೆಯಾಗಲಿಲ್ಲವೆಂದು ಮನಸ್ಸಿನಲ್ಲೇ ಯೋಚಿಸಿ. ಪ್ರಯತ್ನ ಪಡುತ್ತಾ ಇರಿ. ಧನಾತ್ಮಕವಾಗಿ ಯೋಚಿಸಿದಷ್ಟು ನಮಗೇ ಒಳ್ಳೆಯದು..
ಎಲ್ಲ ಯುವಬರಹಗಾರರಿಗೂ ಸಾಹಿತ್ಯ ಕ್ಷೇತ್ರದಲ್ಲಿ ಮಿನುಗಲು ಆ ಶಾರದಾ ಮಾತೆಯ ಅನುಗ್ರಹವಿರಲಿ ಎಂದು ಪ್ರಾರ್ಥಿಸುವೆ. ಎಲ್ಲರಿಗೂ ಶುಭವಾಗಲಿ.

-ಸಿಂಧುಭಾರ್ಗವ್. ಬೆಂಗಳೂರು.

Avalokhana - preeti mattu kartavya

*ಪ್ರೀತಿ ಮತ್ತು ಕರ್ತವ್ಯ* :
~~~~~~~~~~~~~~
ಗಮನಿಸಿ ಸ್ನೇಹಿತರೆ, ಮಳೆರಾಯ ಕಲ್ಲು ಬಂಡೆಗಳ ಮೇಲೆ ಹಾಗೂ ಕಾಡು ಮರಗಳಿರುವ ಭುವಿಯಲ್ಲೂ ತನ್ನ ಕರ್ತವ್ಯವೆಂದು ಜೋರಾಗಿ ಸುರಿಯತೊಡಗಿದ..
ಏನಾಗುತ್ತದೆ ಅದರ ಪರಿಣಾಮ ಹೇಳಿ ನೋಡುವ?! ಕಲ್ಲು ಸ್ವಲ್ಪವೂ ನೀರನ್ನು ಹೀರುವುದಿಲ್ಲ, ಏನೂ ಉಪಯೋಗವೂ ಇಲ್ಲ..ಅದೇ ಕಾಡಿನಲ್ಲಿರುವ ಗಿಡಮರಗಳೆಲ್ಲ ಮಳೆಗೆ ಕುಡಿಯೊಡೆದು ಬೆಳೆಯತೊಡಗಿದವು, ಚಿಗುರಿ ನಿಂತ ಕುಡಿಗಳಲ್ಲಿ ಹೂವು ಹಣ್ಣು ತುಂಬಿಹೋಗಿತ್ತು. ಚಿಟ್ಟೆಗಳಿಗೂ, ಪ್ರಾಣಿಪಕ್ಷಿಗಳಿಗೂ ಗಿಜಿಗಿಜಿ ಎಂದು ಹಾಡುತ್ತಾ ಹೊಟ್ಟೆತುಂಬಾ ಹಣ್ಣುಗಳನ್ನು ತಿನ್ನುತ್ತಾ ಹೂವಿನ ಮಕರಂದವನ್ನು ಹೀರುತ್ತಾ ಝೇಂಕರಿಸುತ್ತಾ ಸಂಭ್ರಮಿಸಿದವು.. ಹೊಸ ಪರ್ವವೇ ಶುರುವಾದಂತೆ ಎಲ್ಲೆಲ್ಲೂ ಸಂಭ್ರಮದ ವಾತಾವರಣ ಸೃಷ್ಡಿಯಾಗಿತ್ತು.
ಇಲ್ಲಿ ಗಮನಿಸಬೇಕಾದುದು ಭುವಿಗೂ ಮಳೆಗೂ ಇರುವ ಪ್ರೀತಿಯನ್ನು.
ಹಾಗೆಯೇ,
ನಮ್ಮ ಮಕ್ಕಳನ್ನ ಹೆತ್ತಿದ್ದೇವೆ ಎಂದು ಅವರ ಚಾಕರಿ( *SpoonFeedBaby* ) ಮಾಡುತ್ತಾ ಅದೆಲ್ಲವೂ‌ ನಮ್ಮ ಕರ್ತವ್ಯ ಎನ್ನುವುದು ಶುದ್ಧ ತಪ್ಪು.. ಕರ್ತವ್ಯ ಯಾವುದೆಂದರೆ ಮಕ್ಕಳನ್ನು ಉತ್ತಮ‌ ಪ್ರಜೆಯನ್ನಾಗಿಸುವುದು, ಸುಶಿಕ್ಷಿತರನ್ನಾಗಿಸುವುದು, ತಮ್ಮಕಾಲಮೇಲೆ ತಾವು ನಿಲ್ಲುವಂತೆ ಮಾಡುವುದು,ಅವರ ಏಳುಬೀಳಿನಲ್ಲಿ ಜೊತೆಗೇ ಇದ್ದು ಧೈರ್ಯತುಂಬುವುದು ಇವೆಲ್ಲವೂ ಕರ್ತವ್ಯವೇ. ಆದರೆ ಇದೆಲ್ಲವನ್ನೂ ಪ್ರೀತಿಯಿಂದ ಮಾಡಿದರೇ ಮಾತ್ರ ಅದಕ್ಕೊಂದು ಅರ್ಥ ಸಿಗುತ್ತದೆ. ಮಕ್ಕಳನ್ನು ಪ್ರೀತಿಯಿಂದ ಸಾಕಿ-ಸಲಹಬೇಕೆ ಹೊರತು ನಮ್ಮ ಕರ್ತವ್ಯ ಎಂದು ಮಾಡಬಾರದು. ಆಗ ಮಾತ್ರ ಆ ಪ್ರೀತಿ ಫಲನೀಡುತ್ತದೆ..
~ * ~
📝 *ಸರಿ ಎನಿಸಿದರೆ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ*.

Kavana- jeevanada santeyali ulida bhaavanegaLu


ಜೀವನದ ಸಂತೆಯಲಿ,
ಕೊಂಡುಕೊಳ್ಳದೇ ಉಳಿದಿರುವ ಭಾವನೆಗಳು..
ಮಾರಲಾಗದೇ ಕುಳಿತಿರುವ ಪ್ರೀತಿಗಳು..

ಕೊಳೆತುಹೋದ ಕನಸುಗಳು..
ಬಾಡಿಹೋದ ಚಡಪಡಿಕೆಗಳು..

ರಾಶಿಯಲಿ ಬೆಂದುಹೋದ ಬಿಸಿಕಣ್ಣಿರು..
ಆಗಾಗ ಮನಸಿಗೆ ಮಳೆಯ ಪನ್ನೀರು..

ಅರೆಬರೆ ನೋಟ ಬೀರುವ ಕೊಳ್ಳುಬಾಕ..
ಮಾನ ಮುಚ್ಚಿಕೊಳ್ಳುವ ವ್ಯಾಪಾರಿಗ..

ಹೊಗೆಧೂಳು ಬರಿತ ಹಸಿವಿನ ಬುತ್ತಿ..
ಕಸಿದು ತಿನ್ನುತಿವೆ ಕಾಗೆಗಳು ಕುತ್ತಿಕುತ್ತಿ..

ನಿಂತಲ್ಲೆ ನಿದಿರೆ , ಮತ್ತದೆ ಕನಸಿನ ಹೊದಿಕೆ..

- ಸಿಂಧುಭಾರ್ಗವ್.

Kavana - Jeevanada santeyali tiruvondide

ಜೀವನದ ಸಂತೆಯಲಿ ತಿರುವೊಂದಿದೆ,
ತಿರುವಿನ ಮೂಲೆಯಲಿ ಕನಸೊಂದಿದೆ,

ಬುಟ್ಟಿಯ ತುಂಬಾ ಪ್ರೀತಿ ತುಂಬಿದೆ,
ನೀನು ಬಂದು ಖರೀದಿಸ ಬೇಕಿದೆ..

ಅಂದು
ನಿನ್ನನು ಒಪ್ಪಿಕೊಂಡಿದ್ದೆ, ಅಪ್ಪಿಕೊಂಡಿದ್ದೆ,
ನೋಡು ಮನವೀಗ ಬೆಪ್ಪಾಗಿ ಕುಳಿತಿದೆ..

ನೀ ನನಗಾಗಿ ಬರೆದ ಆ ಮೊದಲ
ಕವನವನ್ನು ಇನ್ನೊಮ್ಮೆ ಹೇಳಬೇಕಿದೆ.

ನಾನಿನ್ನ ಮಡಿಲಿನಲಿ ಮಲಗಿ
ಅದನ್ನೆಲ್ಲಾ ಕೇಳುವ ಆಸೆಯಾಗಿದೆ..

ಇತ್ತಿಚೆಗೆ ನೀನೇಕೋ ಬದಲಾದಂತಿದೆ..
ನಿನ್ನ ಮಾತಿನಲ್ಲಿ  ಏನೋ ಮರೆಯಾಗಿದೆ..

ನಿನ್ನ ಮನವೀಗ ಬೇರೆಲ್ಲೋ ಮುಳುಗಿ ಹೋಗಿದೆ..
ಪ್ರೀತಿಯ ಕಂಗಳಿಂದ  ನೋಡುವುದ ಮರೆತಂತಿದೆ..

GIO Side Effect

: ಪೋಲಿಗಳ_ಪರದಾಟ :
ಅಂದದ ಹುಡುಗೀರ ಕಂಡಾಗೆಲ್ಲ ಮನಸ್ಸು ಹಿಂದ್ ಹಿಂದೇ ಓಡುವುದು..

'ಲವ್ ಯೂ ಕಣ್ರೀ' ಎಂದು ಬಾಯಲಿ ಅರಿಯದೇನೇ ಮುತ್ತು ಉದುರುವುದು..

ಉಗಿದರೂ ಉಗಿಸಿಕೊಳ್ಳುವ ಮರ್ಯಾದೆಗೆಟ್ಟ ಹಾರ್ಟು..

ಬಿಸ್ಕೇಟ್ ಹಾಕೋಣ ಅಂದ್ರೆ ಜೇಬು ತೂತು..

ಕರೆನ್ಸಿ ಹಾಕು ಅನ್ನಲ್ಲ ಜೀಯೋ ಸಿಮ್ ಇದೆ ಅವಳಲ್ಲಿ..

ಸೆಲ್ಫೀ ತೆಗೆಸೋಕೂ ಬರಲ್ಲ ಸೆಲ್ಫೀಸ್ಕಿಟ್ ಇದೆ ಅವಳಲ್ಲಿ..

ಥೋ.. ರಾಹುಕಾಲದಲ್ಲೇ ಹುಡ್ಗೀರ್ ಸಿಕ್ತಾರೋ ಇಲ್ಲಾ
ಪ್ರಪೋಸ್ ಮಾಡೋ ಟೈಮ್ ಲಿ ಬೆಕ್ಕು ಅಡ್ಡ ಬಂತಾ..?
ಶಿವನೇ...
😇😜

Kavana- Namma sainikaru

ನಮ್ಮ ಸೈನಿಕರು :

ಯುದ್ಧ ಘೋಷಣೆ ಮಾಡಿಯೇ
ಎಲ್ಲವೂ ನಡೆಯಬೇಕಂದಿಲ್ಲ..
ಸೇನೆಗೆ ಸೇರಿದ ದಿನದಿಂದಲೇ
ಅವರಲ್ಲಿ ಯುದ್ಧ ಶುರುವಾಗುವುದಲ್ಲ..

ನಮ್ಮನ್ನು ರಕ್ಷಿಸಲು ಪ್ರಾಣದ
ಹಂಗು ತೊರೆಯುವರು..
ಹೆತ್ತವರ /ಸಂಸಾರವ ತೊರೆದು
ಪ್ರಾಣ ತ್ಯಾಗಮಾಡುವರು..

ನಾವು ಕಣ್ತುಂಬಾ ನಿದಿರೆ ಮಾಡಲು
ಅವರ ಕಾವಲಿದೆ..
ಈ ಸತ್ಯವ ಅಂಧರಂತೆ ನಾವೆಲ್ಲ
ಮರೆತ ಹಾಗಿದೆ..

ಪ್ರಾಣಪಕ್ಷಿ ಹಾರಿತೆಂದು ಕಣ್ಣೀರು
ಸುರಿಸಿದರೇನು ಪ್ರಯೋಜನ..?!
ಅವರ ಪ್ರಾಣಕ್ಕೇನಾಗದಿರಲಿ
ಎಂದು ಈಗಲೇ ಪ್ರಾರ್ಥಿಸೋಣ..

~ಸಿಂಧು ಭಾರ್ಗವ್.

Kavana- Tavarumane sagga kaalige kattida hagga

: ತವರುಮನೆ ಸಗ್ಗ :

ಚೂರಾದ ಚಂದಿರನ‌ ಬಿಂಬ
 ಕೆರೆಯಲಿ ಮೂಡಿದೆ..
ರವಿಯ ಕಿರಣಗಳಿಗೆ
ನೈದಿಲೆಯು ಕಾದಿದೆ..

ಹೆಜ್ಜೇನ್ನು ಝೇಂಕರಿಸುತಾ
 ಹೂವ ಪೀಡುಸುತಿದೆ..
ಚಿಲಿಪಿಲಿಯ ಸುಪ್ರಭಾತವು
 ಕಿವಿಗೆ ಇಂಪಾಗಿದೆ..

ಅಳಿಲಿನ ಉಪಚಾರ
ಮನಕೆ ಖುಷಿನೀಡಿದೆ..
ಗಿಳಿಮರಿ ಪೇರಲೆಯ
ಕೊಯ್ದು ತಂದಿದೆ.‌

ನವಿಲಿನ ನರ್ತನ ,
ಮನದಲಿ ತನನನಾ..
ಬಿಸಿಬಿಸಿ  ಖಾದ್ಯ ,
ಅಮ್ಮನ ಗುಣಗಾನ..

ಹಸಿರು ಹಾಸಿಗೆ,
 ಬೇಲಿಹೂವುಗಳು
ಪೋದೆಯ ಮೊಲದಮರಿ,
 ಬಿದ್ದ ಗರಿಗಳು..

ಆಕಾಶ ನೋಡುವ ಅಡಿಕೆಮರ,
ತಂಪಾದ ಎಳನೀರು..
ಹುತ್ತದ ಹಾವು,
ಗದ್ದೆಯ ಪೈರು..


- ಸಿಂಧುಭಾರ್ಗವ್

Kavana nere-kere

ಕವನ : ನೆರೆ-ಕೆರೆಯಲಿ

ನೆರೆ-ಕೆರೆಯಲಿ
ಮುಳುಗಿಹೋದ ಊರದು,
ಹಣತೆ ಹಚ್ಚಬೇಕಿದೆ..

ಕತ್ತಲೆಯ ಬತ್ತಿ ಹೊಸೆದು
ಕಾಯುತಿರುವರು,
ತೈಲ ಸುರಿಯಬೇಕಿದೆ..

ಕಂಟಮಟ್ಟ ನೆನೆದು
ತಂಡಿಗಟ್ಟಿರುವರು
ಹೊದಿಕೆ ನೀಡಬೇಕಿದೆ..

ಬೆಚ್ಚಗಿನ ಹೊದಿಕೆಯಲಿ
ಹಚ್ಚಿದ ಹಣತೆಯಲಿ
ಜೀವನ ನಡೆಸಬೇಕಿದೆ..

ಬನ್ನಿ ಕೈಜೋಡಿಸಿ,
ಬೆಳಕಾಗೋಣ, ಪ್ರೀತಿ ಹಂಚೋಣ,
ಅಸಹಾಯಕರಿಗೆ ಸಹಾಯಮಾಡೋಣ..
ಮೊಗದಲಿ  ಹೂವರಳಿಸೋಣ..
ಭರವಸೆಯ ದೀವಟಿಗೆ ಬೆಳಗಿಸೋಣ..
ಭಯವ ದೂರಾಗಿಸೋಣ..
ನಂಬುಗೆಯ ಹೊದಿಕೆ ಹೊದೆಸೋಣ..

~ಸಿಂಧುಭಾರ್ಗವ್ .

Kavana apoorNa kanasu


ಅಮವಾಸ್ಯೆ ರಾತ್ರಿಯಲಿ
ಚಂದಿರನ ಹುಡುಕುವ ಆಸೆ..

ಕೋಟಿ ತಾರೆಗಳನ್ನ ದಿನವೂ
ದೋಚುವ ಆಸೆ..

ಮುದ್ದು ಬೆನ್ನೇರಿ
ಹತ್ತೂರ ಸುತ್ತುವ ಆಸೆ..

ಗುಬ್ಬಿಗೂಡಿನಲಿ
ಜೀವನ ಕಳೆಯುವ ಆಸೆ..

ಕನಸಿನಲಿ ಅವನ
ಪ್ರತಿರೂಪ ಕಾಣುವಾಸೆ..

Kavana- ee Hunnime muddubigaagi

ಏಕಾಂತದಲಿ ಕುಳಿತಾಗ
ಕಣ್ಣೊಳಗೆ ಇಳಿದ
ಚಂದಿರನ ತುಣುಕು ನೀನೇನಾ..?!

ಪ್ರೀತಿಯ ಪರಿಯ
ವಿವರಿಸಿ ಹೇಳಲು
ಕಾತುರ ನಾಗಿರುವವ ನೀನೇನಾ..?!

ಮನದ ಮೂಲೆಯಲಿ
ಬೆಳದಿಂಗಳಿಗೆ
ಹೊಳೆಯುವ ನೆರಳು ನಿನದೇನಾ..?!

ದೂರದಲೇ ನಿಂತರೂ
ತಂಗಾಳಿ ರೂಪದಲಿ
ಮೈಸೋಕುವವ ನೀನೇನಾ..?!

ಮತ್ತದೇ ಪೂರ್ಣಚಂದಿರ
ನಿದಿರೆ ಗೆಡಿಸಲು,
ಮತ್ತದೇ ಪ್ರೀತಿ ಅಮಲು
ಮನವ ತಣಿಸಲು,

ಮತ್ತದೇ ಮುದ್ದು,
ಮುದ್ದಾಗಿ ಮನಕ್ಕಿಳಿಯುವ ಪರಿ
ನನ್ನನ್ನೇ ನಾ ಮರೆಯುವ ಪರಿ
ಸೋಜಿಗಕೂ ಸೋಜಿಗ..

(( ಮತ್ತೊಂದು ಹುಣ್ಣಿಮೆ ಮುದ್ದುವಿಗಾಗಿ))