Friday 31 May 2019

Tulasi Naveen's Interview to Yourquote Kannada










Yourquote Kannada (ಇಂದಿರಾನಗರ ಬೆಂಗಳೂರು) ಇವರು‌ ನಡೆಸಿದ ಸಂದರ್ಶನದಲ್ಲಿ ನಮ್ಮ ತುಳಸಿ ಭಟ್. ಶುಭಹಾರೈಕೆಗಳು💐
ಯುವರ್ಕೋಟ್ ನಲ್ಲಿ ೬೦೦ಕ್ಕೂ ಹೆಚ್ಚು ಕೋಟಗಳನ್ನು ಮತ್ತು ಅದಲ್ಲದೆ ೧೨೦೦ಕ್ಕೂ ಹೆಚ್ಚು ಸಹಬರಹಗಳನ್ನು ಬರೆದಿರುವ ನಮ್ಮ ಹೆಮ್ಮೆಯ ಬರಹಗಾರ್ತಿ TULASI NAVEEN (ಸಿಂಧು ಭಾರ್ಗವ್) ಅವರ ಮನದಾಳದ ಮಾತುಗಳನ್ನು ಅರಿಯೋಣ ಬನ್ನಿ*.
*ಸಂಗಮೇಶ* : ನಮಸ್ತೆ! ತುಳಸಿ ಮೇಡಂ ಅವರೇ, ನಿಮ್ಮ ಅಮೂಲ್ಯ ಸಮಯದಿಂದ ಸ್ವಲ್ಪ ಸಮಯವನ್ನು ಕೊಟ್ಟಿದ್ದಕ್ಕಾಗಿ ನಾನು ಬಹಳ ಕೃತಜ್ಞನಾಗಿದ್ದೇನೆ. ಮೊದಲನೆಯದಾಗಿ, ನೀವು ನಿಮ್ಮ ಪರಿಚಯವನ್ನು ಪರಿಚಯಿಸಿ ಕೊಡಿ, ಹಾಗೆಯೇ ಒಂದು ಹವ್ಯಾಸವನ್ನು ಆದ್ಯತೆಯಾಗಿ ನಿರ್ವಹಿಸುವುದು ಹೇಗೆಂದು ತಿಳಿಸಿಕೊಡಿ.
ಇದರಿಂದ ನಾವು, ನಿಮ್ಮ ಹಿಂದಿನ ಜೀವನದ ಸ್ಪಷ್ಟ ಚಿತ್ರಣವನ್ನು ಮತ್ತು ನಿಮ್ಮ ಜೀವನದ ಪ್ರಸ್ತುತತೆಯನ್ನು ಅರಿಯಬಹುದು!
*ತುಳಸಿ ನವೀನ* : ಎಲ್ಲರಿಗೂ ನಮಸ್ಕರಿಸಿ, ನಾನು ತುಳಸಿ ಭಟ್. ಪೊಡವಿಗೊಡೆಯ ಶ್ರೀಕೃಷ್ಣನ ನೆಲೆಬೀಡಾದ ಕರಾವಳಿಯ ಕಡಲತೀರದ ಉಡುಪಿಯಲ್ಲಿ ನನ್ನ ಜನನ. ತಂದೆ ಶ್ರೀ. ಚಂಡೆ ನರಸಿಂಹ ಭಟ್. ತಾಯಿ ಶ್ರೀಮತಿ ವಸಂತಿ.ಎನ್.ಭಟ್. ನಾವು ಮೂವರು ಹೆಣ್ಣುಮಕ್ಕಳು. ಅಕ್ಕ-ತಂಗಿಯ ನಡುವೆ ಪ್ರೀತಿಯ ರಾಧಿಕಾ ನಾನು.(ಮನೆಯಲ್ಲಿ ಕರೆಯುವ ಹೆಸರು). ವಿದ್ಯಾಭ್ಯಾಸ ನ್ಯಾಶನಲ್ ಜೂನಿಯರ್ ಕಾಲೇಜು ಬಾರಕೂರಿನಲ್ಲಿ ಪಿ.ಯೂ. ಮುಗಿಸಿ ತದನಂತರ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ಯನ್ನು ಉಡುಪಿಯ ಕಡಿಯಾಳಿ ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ನಲ್ಲಿ ಮಾಡಿ ಮುಗಿಸಿದೆ. ನಂತರ ಕ್ಯಾಂಪಸ್ ಇಂಟರ್ವೀವ್ ಮುಖಾಂತರ BHEL ನಲ್ಲಿ ಒಂದುವರ್ಷ HR ವಿಭಾಗದಲ್ಲಿ Traineeಆಗಿ ಕೆಲಸಕ್ಕೆ ಆಯ್ಕೆಯಾದೆ.ಆಮೇಲೆ ಮದುವೆ ಮಕ್ಕಳು. ಜೊತೆಗೆ ನನ್ನ ಬರವಣಿಗೆ. ಹೀಗೆ ನಡೆಯುತ್ತಲಿದೆ ಜೀವನ. ನಮಗಿರುವ ಆಸಕ್ತಿ ಅಭಿರುಚಿಗಳಿಗೆ ಪುಷ್ಠಿ ನೀಡಿ ಅದರ ಬಗೆಗೆ ನಿರಂತರ ಅಧ್ಯಯನ ನಡೆಸುತ್ತಾ ಇದ್ದರೆ ಯಶಸ್ಸು ಕಟ್ಟಿಟ್ಟಬುತ್ತಿ. ಹಾಗೆಯೇ ಏನಾದರೂ ಸಾಧನೆ ಮಾಡಬಹುದು ಎಂದು ಹೇಳಬಯಸುವೆ.
*ಸಂಗಮೇಶ* : ನೀವು ಹೇಗೆ ಬರೆಯಲು ಪ್ರಾರಂಭಿಸಿದ್ದು ?
*ತುಳಸಿ ನವೀನ* : ಮೊದಲಿನಿಂದಲು ಏನಾದರೂ ಹೊಸದಾಗಿ ವಿಭಿನ್ನವಾಗಿ ಮಾಡುವ ನನಗೆ ಈ ಯುವರ್ ಕೋಟ್ ತುಂಬಾ ಸಹಾಯವಾಗಿದೆ. ನಮ್ಮ ಹವ್ಯಾಸ ಕ್ಕೆ ಅಭಿರುಚಿಗೆ ವೇದಿಕೆ ನಿರ್ಮಿಸಿಕೊಟ್ಟಿದೆ. ಮೊದಲಿಗೆ ಮನದಾಳದ ವಂದನೆಗಳನ್ನು ಅರ್ಪಿಸುವೆನು. ನಾನು ಚಿಕ್ಕವಳಿದ್ದಾಗಿನಿಂದ ನನ್ನ ಗೆಳತಿಯರಿಗೆ ಜನ್ಮದಿನದ ಹಾರೈಕೆಗೆಂದು ಇಲ್ಲ ಆಟೋಗ್ರಾಫ್ ಬುಕ್ ನಲ್ಲಿಯೋ ನನ್ನದೇ ಆದ ನಾಲ್ಕುಸಾಲುಗಳ ಚುಟುಕು ಬರೆದು ಶುಭಹಾರೈಸುತ್ತಿದ್ದೆ. ಅವರಿವರು ಮಾಡಿದ ಹಾಗೆ ನನಗೆ ಮಾಡಲು ಇಷ್ಟವಿರಲಿಲ್ಲ. ಅಲ್ಲದೇ ಆಗಾಗ ಗೆಳತಿಯರಿಗೆ ಪತ್ರ ಬರೆಯುತ್ತಿದ್ದೆ. ಆಗಲೇ ನನಗರಿವಿಲ್ಲದೇ ಪುಟಗಟ್ಟಲೆ ಬರೆಯುವ ಗುಣ ಮೈಗೂಡಿಕೊಂಡಿತು ಎನ್ನಬಹುದು. ಬರವಣಿಗೆ ಎಂದರೇನೆ ನಮ್ಮ ಭಾವನೆಗಳನ್ನು, ಅಭಿಪ್ರಾಯಗಳನ್ನು ಹೊರಹಾಕುವ ಮಾಧ್ಯಮ ತಾನೆ. ಹಾಗೆ ಬರವಣಿಗೆ ಶುರುವಾಯಿತು. ಸಾಹಿತ್ಯ ಲೋಕದಲ್ಲಿ ಬರೆಯಲು  ಆರಂಭಿಸಿದ್ದು 2011 ಅಕ್ಟೋಬರ್ ತಿಂಗಳಲ್ಲಿ. ನನ್ನ ಮುಖಪುಟದ ಗೆಳೆಯ ಪ್ರಸಾದ್ ತುಂಬಾ ಪ್ರಭಾವ ಬೀರಿದ್ದ. ಅವನಿಂದಲೇ ಕವಿತೆ ಬರೆಯಲು ಶುರುಮಾಡಿದೆ. ಇಲ್ಲಿಯ ತನಕ ಬರೆಯುತ್ತಲೇ ಇರುವೆ (ಸಣ್ಣನಗು).
*ಸಂಗಮೇಶ* : ನಿಮ್ಮ ಮತ್ತು ಯುವರ್ಕೋಟ್ ನಂಟು ಹೇಗೆ ಶುರುವಾಗಿದ್ದು?
*ತುಳಸಿ ನವೀನ* : ಯಾರೆಂದು ಸರಿಯಾಗಿ ನೆನಪಿಗೆ ಬರುತ್ತಾ ಇಲ್ಲ. ಮುಖಪುಟದ ಗೆಳೆಯರು ಯಾರೋ ದಿನವೂ ಸಣ್ಣ ಸಣ್ಣ ಕೋಟ್ ಬರೆದು ಪೋಸ್ಟ್ ಮಾಡುತ್ತಾ ಇದ್ದರು. ಅದರಲ್ಲಿ YourQuote.in logo ಕಾಣಿಸಿತ್ತು. ಅದನ್ನು ಗೂಗಲ್ ಲಿ ಹುಡುಕಿ Play store ನಿಂದ ಡೌನ್‌ಲೋಡ್ ಮಾಡಿಕೊಂಡೆ. ಕಾರಣ ಅದೇ ಕ್ರಿಯೇಟಿವ್ ಬುದ್ಧಿ. ನನಗೆ ಅದೊಂದು ಹುಚ್ಚು. ಏನಾದರೂ ಬರೆಯುವುದನ್ನು ಒಂದು ಇಮೇಜ್(ಫ್ರೇಮ್ ನಲ್ಲಿ) ಫೈಲ್ ಮಾಡಿ ಎಲ್ಲರಿಗೂ ಸೆಂಡ್ ಮಾಡುವುದು‌ ಹಾಗಾಗಿ ಇದನ್ನು ಹಿಂಬಾಲಿಸಿದೆ.
*ಸಂಗಮೇಶ* : ನಿಮ್ಮ ಪೆನ್ / ಬ್ಲಾಗ್ ಹೆಸರಿನ ಹಿಂದಿನ ಕಥೆ ಯಾವುದು?
*ತುಳಸಿ ನವೀನ* : ನಾನು ಮೂರ್ನಾಲ್ಕು ಬ್ಲಾಗ್ ಹೊಂದಿರುವೆ. ಒಂದು ಮಕ್ಕಳ ಕಥೆಗಾಗಿ, ನನ್ನ ಕವನಗಳಿಗಾಗಿ, ಆರೋಗ್ಯಕ್ಕಾಗಿ, ಕಲಾವಿದರಿಗಾಗಿ. ಅದರಲ್ಲಿ ಆರೋಗ್ಯ ದೀಪಿಕಾ - ಬಸುರಿ ಮತ್ತು ಬಾಣಂತಿಯ ಆರೋಗ್ಯಕ್ಕಾಗಿ ಸಲಹೆ ಸೂಚನೆಗಳನ್ನು ನಮ್ಮ ಅನುಭವಗಳನ್ನು ಕೆಲವು ಔಷದೋಪಚಾರಗಳನ್ನು ಬರೆದಿರುವೆನು. ಅದು ಲಕ್ಷಾಂತರ ಜನರು ಸರ್ಚ್ ಮಾಡಿ ಓದಿದ್ದಾರೆ. ಹೆಮ್ಮೆ ಅನ್ನಿಸುತ್ತದೆ.
https://www.tulasinac6.blogspot.com
ಅಲ್ಲದೇ ಮಕ್ಕಳ ದಿನಕ್ಕೊಂದು ಕಥೆ, ಹಾಗೂ ಜೀವನದ ಸಂತೆಯಲಿ - ಭಾವಬಿಂದು ಹರಿದಳಾಗಿ ಕಾವ್ಯಸಿಂಧು ಇದರಲ್ಲಿ ಸುಮಾರು ನಾಲ್ಕುನೂರು ಬರಹಗಳ ಸಂಗ್ರಹವಿದೆ , ಹಾಗೇ ಕಾಲಾಭಿಮಾನಿ, ಭಕ್ತಿ ಸೇತು ಈಗಲೂ ಬರೆಯುತ್ತಿರುವೆನು.  https://sindhubhargavbengaluru.blogspot.com  
ಇನ್ನೂ ಮುಖಪುಟದಲ್ಲಿ ನನ್ನ ಅಭಿರುಚಿ  ಫೋಟೋಗ್ರಫಿ ಗೆ ಒತ್ತುಕೊಟ್ಟು ಒಂದು ಪೇಜ್ ತೆರೆದಿರುವೆ. VillageBeauty - https://www.facebook.com/karavalikampu ಸುಮಾರು ಮೂರುಸಾವಿರ ಜನ ಲೈಕ್ ಮಾಡಿದ್ದಾರೆ.
ವಿ.ಸೂ: ನನ್ನ ಎಲ್ಲ ಬರಹಗಳನ್ನು ಸಿಂಧು ಭಾರ್ಗವ್ ಕಾವ್ಯನಾಮದಡಿಯಲ್ಲಿಯೇ ಬರೆಯುವುದು.
*ಸಂಗಮೇಶ* : ಯುವ ಬರಹಗಾರರಿಗೆ ಯುವರ್ಕೋಟ್ ಸೂಚಿಸುವುದಾದರೆ ಹೇಗೆ ಮತ್ತೆ ಅದಕ್ಕೆ ಕಾರಣವೇನು ?
*ತುಳಸಿ ನವೀನ* : ಯುವರ್ಕೋಟ್ ಹೆಸರೇ ಹೇಳುವ ಹಾಗೆ ಇದು ನಿಮ್ಮ ಕೋಟ್. ನಿಮ್ಮ ನುಡಿಗಳನ್ನು ಮುದ್ರಿಸುವ ವಾಹಿನಿ. ನೀವು ಓದಿರುತ್ತೀರಿ "ಸ್ವಾಮಿ ವಿವೇಕಾನಂದರ ನುಡಿಗಳು, ಅಬ್ದುಲ್‌ ಕಲಾಂ ಅವರ ನುಡಿಗಳು" ಇಂದಿಗೂ ಜೀವಂತ. ಹಾಗೆಯೇ ಒಂದು ವಾಕ್ಯದಲ್ಲಿ ನೀವು ಬರೆಯಬಹುದು. ನಿಮ್ಮ ನುಡಿಗಳು ಕೂಡ ಇತರರಿಗೆ ಸ್ಪೂರ್ತಿಯಾಗಬಹುದು. ಅಲ್ಲದೇ ನೀವು ಗಮನಿಸಿರಬಹುದು ಇಲ್ಲಿ ಕೇವಲ ಬರವಣಿಗೆಗೆ ಮಾತ್ರ ಒತ್ತು ನೀಡಿಲ್ಲ. ಬದಲಾಗಿ ನಿಮ್ಮ ಬಹುಮುಖ ಪ್ರತಿಭೆಗೊಂದು ಮಹಾಸಭಾಂಗಣವನ್ನೇ ಕಲ್ಪಿಸಿಕೊಟ್ಟಿದ್ದಾರೆ. ಇಲ್ಲಿ ನೀವು ಹಾಡಬಹುದು, ಗಿಟಾರ್ ನುಡಿಸಬಹುದು, ಸಂಭಾಷಣೆ ನಡೆಸಿದ ವೀಡಿಯೋವನ್ನು ದಾಖಲಿಸಬಹುದು. ತೆರೆದ ವೇದಿಕೆ ನಿಮಗಾಗಿಯೇ ಇದೆ. ನಿಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಿ. ಕಲೆ‌ ಎಲ್ಲರಲ್ಲಿಯೂ ಇದೆ. ಆದರೆ ಅದನ್ನು ಗುರುತಿಸುವವರು ಬೇಕು. ಇಲ್ಲದಿದ್ದರೆ ಅವಕಾಶ ವಂಚಿತರಾಗಿ ಪ್ರತಿಭೆಗಳು ಮರುಗುತ್ತಾರೆ. ಅದಕ್ಕಾಗಿಯೇ ಯುವರ್ಕೋಟ್ ಇದೆ. ವಯಸ್ಸಿನ ಪರಿಮಿತಿಯಿಲ್ಲ. ಎಲ್ಲರೂ ಭಾಗವಹಿಸಬಹುದು. ಹಾಗೆಯೇ ಇದರ ಇನ್ನೊಂದು ವಿಶೇಷತೆ ಕೊಲ್ಯಾಬ್ ಮಾಡಿ ಖುಷಿ ಪಡುವುದು. ನಿಮ್ಮ ಸಾಲಿಗೆ ನನ್ನೆರೆಡು ಸಾಲು ಸೇರಿಸಿ ಜುಗಲ್ ಬಂದಿ ತರಹ ಓದಿ ಆನಂದಿಸುವುದು.
*ಸಂಗಮೇಶ* :  ನಿಮ್ಮ ಜೀವನವನ್ನು ಬದಲಿಸಿದ ಕಥೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ?
*ತುಳಸಿ ನವೀನ* : ನಾನು ಪಿ.ಯೂ.ಸಿ ಯಲ್ಲಿರುವಾಗ ನರ್ಸ್ ಆಗಬೇಕಂತಿದ್ದೆ. ಡಾ.ತುಳಸಿ ಎಂದು ಕರೆಯಬೇಕು ಎಂಬ ಆಸೆಯಿತ್ತು. ಆದರೆ ಅದು ಸಾಧ್ಯವಿಲ್ಲ ಅಂತ ಗೊತ್ತಾಗಿ ನರ್ಸ್ ಆದರೂ ಆಗಬೇಕು ಎಂದೆನಿಸಿದೆ. ಅದೇ ಕ್ಷೇತ್ರದಲ್ಲಿರಬಹುದಲ್ಲ ಎಂದು. ನರ್ಸಿಂಗ್ ಕೆಲಸ ನನಗೆ ತುಂಬಾ ಇಷ್ಟ‌ . ಆದರೆ ನಿಜವಾಗಿ ಹೇಳಬೇಕೆಂದರೆ ಅದಕ್ಕೆ ಬೇಕಾದಷ್ಟು ಓದಲಿಲ್ಲ. ಕನ್ನಡ ಮೀಡಿಯಂ ನಲ್ಲಿ ಓದಿದ ನಮಗೆ ಏಕಾಏಕಿ ಎಲ್ಲ ವಿಷಯವು ಇಂಗ್ಲೀಷಿನಲ್ಲೇ ಇರುವುದು ಎಂದಾಗ ಕಷ್ಟವಾಗಿತ್ತು. ಕಷ್ಟಪಟ್ಟು ಓದಬೇಕಿತ್ತು. ಆದರೆ ಒತ್ತಡ, ಭಯದಿಂದಲೇ ಇದ್ದೆ. ಪರಿಣಾಮವಾಗಿ ಪಿ.ಯೂ ನಲ್ಲಿ ಫೇಲ್ ಆದೆ.  ಅಮ್ಮನಿಗೆ ತುಂಬಾ ತಲೆಬಿಸಿಯಾಗಿ "ಇವಳ ಭವಿಷ್ಯ ಹೇಗೆ" ಎಂದು ಯೋಚಿಸಿದರು. ಕೂಡಲೇ ಎಸ್.ಎಸ್.ಎಲ್.ಸಿ ಯಲ್ಲಿ ಪಡೆದ ಅಂಕದಿಂದ ಡಿಪ್ಲೋಮಾ ಇಲ್ಲ ಐ.ಟಿ.ಐ ಓದಬಹುದು‌ ಎಂದು ಹಿತೈಷಿಗಳು ಸಲಹೆ ನೀಡಿದರು‌ .ಆಗ ಕಡಿಯಾಳಿ ಪಾಲಿಟೆಕ್ನಿಕ್ ಗೆ ಸೇರಿದೆ. ಅಲ್ಲಿಂದ ಜೀವನದ ಹಾದಿಯೇ ಬದಲಾಯಿತು.
ಯಾಕೆ ನನ್ನ ವೈಫಲ್ಯವನ್ನೂ ಇಷ್ಟು ವಿಸ್ತಾರವಾಗಿ ಹೇಳಿದೆನೆಂದರೆ, "ಕೇವಲ ನನಗೆ ಹಾಗಾಗ ಬೇಕು ಹೀಗಾಗ ಬೇಕು ಎಂಬ ಆಸೆ ಇದ್ದರೆ ಸಾಲದು ಅದನ್ನು ಸಾಕಾರಗೊಳಿಸಲು ಶ್ರದ್ಧೆ, ಛಲ ನಮ್ಮಲ್ಲಿರಬೇಕು. ಆಗಲೇ ಯಶಸ್ಸು ಸಿಗುವುದು". ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಡಿ‌ ಎಂದು ಈ ಮೂಲಕ ಕೇಳಿಕೊಳ್ಳುವೆ.ಹಾಗೆಯೆ ಮಕ್ಕಳ ಸೋಲಿನಲ್ಲಿ ಹೆತ್ತವರ ಜೊತೆಗಾರಿಕೆ, ಧೈರ್ಯದ ನುಡಿಗಳು ಸದಾ ಬೇಕು.
*ಸಂಗಮೇಶ* : ಬರಹಗಾರರಾಗಿ ನಿಮ್ಮನ್ನು ಪ್ರೇರೇಪಿಸುವಂತಹ ವಿಷಯಗಳು ಯಾವುವು? ನೀವು ಉತ್ತಮವಾಗಿ ಬರೆಯಲು ಅಥವಾ ಪ್ರೇರಣೆ ಪಡೆಯಲು ಸಹಾಯ ಮಾಡುವ ವಿಷಯಗಳು ಯಾವುವು?
*ತುಳಸಿ ನವೀನ* : ನಾನು  ಮೊದಲು ಸಣ್ಣ ಸಣ್ಣ ಚುಟುಕು ಬರೆಯುತಲಿದ್ದೆ. ಜೊತೆಗೆ ಕವನ ಬರೆಯಲು ಪ್ರಾರಂಭಿಸಿದೆ‌ ಆದರೆ ಅದು ಗದ್ಯ ರೂಪ ಪಡೆಯುತಲಿತ್ತು. ಇದು ಸರಿ ಕಾಣದು ಎಂದು ಲೇಖನಗಳ ಬರೆಯಲು ಶುರು ಮಾಡಿದೆ. ನಿಜ ಘಟನೆಗಳನ್ನೇ ಆಧಾರವಾಗಿಸಿಕೊಂಡು ಕಥೆಗಳನ್ನು ಬರೆದೆ. ಕಾರಣ ನನ್ನಲ್ಲಿ ತುಂಬಾ ವಿಚಾರಗಳಿದ್ದವು. ಅದನ್ನು ಕವಿತೆಯಲ್ಲಿ ಹಿಡಿದಿಡಲು ಸಾಧ್ಯವಾಗುತ್ತ ಇರಲಿಲ್ಲ. ಹಾಗಾಗಿ ಲೇಖನವನ್ನು ಬರೆಯತೊಡಗಿದೆ. ಕವಿತೆ ಬರೆಯುವಾಗ ಕೃಷ್ಣಪ್ರಸಾದ್ ಸರ್ (ಈಗ ಆಸ್ಟ್ರೇಲಿಯಾ ದಲ್ಲಿದ್ದಾರೆ) ನನಗೆ ಮಾರ್ಗದರ್ಶನವನ್ನು ನೀಡಿದರು. ರಾಗ ತಾಳ ಪ್ರಾಸಬದ್ಧವಾಗಿಯೇ ಬರೆಯಬೇಕು. ಬರೆದರೆ ಅದರಲ್ಲಿ ಲಯವಿರಬೇಕು. ಹಾಡುವಂತಿರಬೇಕು. ಅದೇ ಕವಿತೆಯಾಗುವುದು ಎಂದು ಹೇಳಿಕೊಟ್ಟರು. ಅವರ ಮಾರ್ಗದರ್ಶನದಲ್ಲಿ ಈಗಲೂ ಬರೆಯುತ್ತಾ ಇದ್ದೇನೆ. "ಯಾವ ಮೋಹನ ಮುರಳಿ ಕರೆಯಿತೋ.." "ಕಾಣದ ಕಡಲಿಗೆ ಹಂಬಲಿಸಿದೆ ಮನ.." "ನಿಂಬೀಯಾ ಬನಾದ ಮ್ಯಾಗಲ.." ಹೀಗೆ ಅನೇಕ ಹಾಡುಗಳು ಇನ್ನೂ ಜೀವಂತವಾಗಿವೆ ಅಂದರೆ ಅದು ಲಯಬದ್ಧವಾಗಿ ಬರೆದ ಕಾರಣವೇ ತಾನೆ? ಗದ್ಯರೂಪದಲ್ಲಿ ಬರೆಯಿರಿ.ಆದರೆ ಆದಷ್ಟು ಕಡಿಮೆಮಾಡಿ.
*ಸಂಗಮೇಶ* : ಲೇಖನ /ಕಥೆ / ಕವಿತೆ / ಚುಟುಕುಗಳಲ್ಲಿ ನಿಮಗೆ ಯಾವುದು ಪ್ರಮುಖವಾದುದು?
*ತುಳಸಿ ನವೀನ* : ಲೇಖನ, ಕಥೆಗಳು, ಹಾಗೆ ಕವಿತೆಗಳನ್ನು ಹೆಚ್ಚಾಗಿ ಬರೆಯುತ್ತೇನೆ.
*ಸಂಗಮೇಶ* : ನಿಮ್ಮ ಬರವಣಿಗೆಗೆ ಬಂದಾಗ ನೀವು ಮಾಡಲು ಬಯಸುವ ಸುಧಾರಣೆಗಳು ಯಾವುವು? / ಬರಹಗಾರ / ಕವಿಯಾಗಿ ನೀವು ಪ್ರಯೋಗಿಸಲು ಬಯಸುವ ವಿಷಯಗಳನ್ನು ಯಾವುದು? / ಬರಹಗಾರ / ಕವಿಯಾಗಿ ನಿಮ್ಮ ಗುರಿಗಳು ಯಾವುವು?
*ತುಳಸಿ ನವೀನ* : ನನ್ನ ಬರವಣಿಗೆ ಎಂದಾಗ ಹೊಸಹೊಸ ಪದಗಳ ಬಳಕೆಮಾಡಿ ವಾಕ್ಯಕ್ಕೆ ಇನ್ನೂ ಹೊಳಪು ನೀಡಬೇಕೆಂಬ ಆಸೆಯಿದೆ. ಶಿಶು ಗೀತೆ, ಮಕ್ಕಳ ಕಥೆಗೆ ಹೆಚ್ಚು ಒತ್ತು ನೀಡಬೇಕೆಂಬ ಆಸೆಯಿದೆ.ಪ್ರಕೃತಿ ಬಗೆಗೆ, ಸಮಾಜಮುಖಿಯಾಗಿ ಬರೆಯವುದು ನನಗಿಷ್ಟ.
ಒಬ್ಬ ಕವಯಿತ್ರಿಯಾಗಿ ಈಗಾಗಲೇ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವೆನು. ಕಳೆದ ಹತ್ತು ವರುಷಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವೆನು. ಅನೇಕ ಮ್ಯಾಗಜೀನ್ ಗಳಲ್ಲಿ, ದಿನಪತ್ರಿಕೆಗಳಲ್ಲಿ, ಆನ್ಲೈನ್ ಬ್ಲಾಗ್ ಗಳಲ್ಲಿ ವಾರ್ತಾಪತ್ರಿಕೆಗಳಲ್ಲಿ, ಹಾಗೆಯೇ ಅನೇಕ ಕೃತಿಗಳಲ್ಲಿಯೂ (ಸುಮಾರು ೧೦ ಕೃತಿಗಳಲ್ಲಿ) ನನ್ನ ಬರಹಗಳು ಪ್ರಕಟವಾಗಿವೆ. ಪ್ರಸಕ್ತ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಯುಗಾದಿ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಕರೆದಿದ್ದರು. ನಾನೂ ಭಾಗಿಯಾಗಿದ್ದೆ. ಅಲ್ಲದೇ ಸಾಹಿತ್ಯ ಸೇವೆಯನ್ನು ಗುರುತಿಸಿ ಪತ್ರಿಕಾ ಲೇಖಕರ ವಿಭಾಗದಲ್ಲಿ "ಕನ್ನಡ ಸೇವಾರತ್ನ" ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈಗ ಜವಾಬ್ದಾರಿ ಜಾಸ್ತಿಯಾಗಿದೆ.ಇನ್ನಷ್ಟು ಸಾಹಿತ್ಯ ಲೋಕದಲ್ಲಿ ಕೆಲಸಮಾಡಬೇಕಿದೆ‌. "ನವಪರ್ವ ಫೌಂಡೇಶನ್" ಅನ್ನು ಸ್ಥಾಪನೆಮಾಡಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗೆಗೆ ಆಸಕ್ತಿ ಮೂಡಿಸುವ ಹಾಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಆಲೋಚನೆಯಿದೆ. ಅದಕ್ಕೆ ಮುರುಳೀಧರ್ ಗೌಡ ಅವರು ಅಧ್ಯಕ್ಷರಾಗಿದ್ದಾರೆ. ನಾನು ಉಪಾಧ್ಯಕ್ಷೆ. ಅಲ್ಲದೇ "ಜೀವನದ ಸಂತೆಯಲಿ- ಕವನ ಸಂಕಲನ ಬಿಡುಗಡೆ ಮಾಡಬೇಕೆಂದಿರುವೆ. ಮಕ್ಕಳ ಕಥಾ ಪುಸ್ತಕ, ಶಿಶುಗೀತೆ ಪುಸ್ತಕ ಪ್ರಕಟವಾಗಬೇಕು.
*ಸಂಗಮೇಶ* : ಯುವರ್ಕೋಟ್ ನಲ್ಲಿ ನಿಮ್ಮ ಮೆಚ್ಚಿನ ಬರಹಗಾರರು ಯಾರು?
*ತುಳಸಿ ನವೀನ* :  ನಾಗೇಶ್ ಜಿ ಅವರ ತಲೆಯೊಳಗೆ ಸಾಕಷ್ಟು ವಿಷಯಗಳಿವೆ. ಅವರೊಬ್ಬ ಯೋಗಿಯಂತೆ ಕಾಣುತ್ತಾರೆ.ವಾಸ್ತವವನ್ನು ಸರಳವಾಗಿ ಹೇಳುತ್ತಾರೆ.
ಪ್ರಮೋದ್ ಶೇಕರ್ ಅವರಿಗೆ ತುಂಬಾ ಜ್ಞಾನವಿದೆ. ಕಥೆ ಕಾದಂಬರಿಗಳನ್ನು ಓದುವ ಕಾರಣ ಪದಗಳ ಪ್ರಯೋಗ ಉತ್ತಮವಾಗಿರುತ್ತದೆ.
ಪ್ರವೀರ ಆಚಾರ್ಯ ಅವರು ಒಂದು ಅಕ್ಷರ ಹಿಡಿದು ಅದರಿಂದ ಮೂಡಿಬರುವ ಅನೇಕ ಪದಗಳನ್ನೇ ವಾಕ್ಯವಾಗಿಸುವ ಚಾಕಚಕ್ಯತೆ &ಜಾಣ್ಮೆ ಗೆ ನಾನು ಅಚ್ಚರಿಗೊಂಡಿದ್ದೆ.
ಇನ್ನುಳಿದಂತೆ Naresh Kamath, ಅಭಿಜ್ಞಾ ಪಿ.ಎಮ್ ಗೌಡ, Nikhil Honnalli, ಶ್ರೀಕಾಂತ್ ಭಟ್, Shashikant Desai, Sudarshan Harnalli, ಗೀತಾಂಜಲಿ ಮೇಡಮ್, ಸಂಗಮೇಶ ಸಜ್ಜನ್,  ಹಂಸಪ್ರಿಯ ಅವರು, ಹಾಲಸಿದ್ದಪ್ಪ ಪುಜೇರಿ ಅವರು, ಡಾ.ಮಲ್ಲಿನಾಥ ಶಿ. ತಳವಾರ ಅವರು, ಅಶೋಕ್ ದೇಸಾಯಿ ಅವರು, ಸುಹಾ ಸು ಅವರು, ವೈಶಾಲಿ ಎಮ್.ಸುಮ ಮೇಡಮ್, ಕನಸು ಜೈನ್ ಅವರು, ನವೀನ್ ಕುಮಾರ್ ಕಲಾಲ್ ಹೀಗೆ ತುಂಬಾ ಜನ ಸ್ನೇಹಿತರು ಒಬ್ಬರಿಗಿಂತ ಒಬ್ಬರು ಉತ್ತಮವಾಗಿ ಬರೆಯುತ್ತಾರೆ.
*ಸಂಗಮೇಶ* : ನಿಮಗಾಗಿ ಅತ್ಯುತ್ತಮವಾದ ವೈಯಕ್ತಿಕ ಆವಿಷ್ಕಾರ ಯಾವುದು?
*ತುಳಸಿ ನವೀನ* : ನಾನು ಬರೆಯುತ್ತಾ ಹೋದ ಹಾಗೆ ಅಚ್ಚರಿಯಾದದ್ದು ಒಂದೆರಡು ಪುಟಗಳಲ್ಲ, ಸುಮಾರು ಆರೇಳು ಪುಟಗಳಷ್ಟು ಬರೆಯುವ ಶಕ್ತಿ ನನ್ನ ಲೇಖನಿಗಿದೆ ಎಂದು. ಹಾಗೆಯೆ ನನ್ನ ಮಗ ಚಂದನ್ ಗೆ ದಿನವೂ ನಾನೇ ಕಲ್ಪಿಸಿ ಹೇಳುವ ಮಕ್ಕಳ ಕಥೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಅದನ್ನೆ ಮರುದಿನ ಬರೆಯುವೆ.
*ಸಂಗಮೇಶ* : ನಿಮ್ಮ ಪ್ರಕಾರ ಬರಹಕ್ಕೂ ಅನುಭವಕ್ಕೂ ಹೇಗೆ ಸಂಬಂಧವಿದೆ?
*ತುಳಸಿ ನವೀನ* : ಸಂಬಂಧ ಅಂತ ಅಲ್ಲ, ನಮ್ಮ ಅನುಭವಗಳನ್ನು ಬರೆಯಬಹುದು. ಆತ್ಮಕಥೆ ಯಲ್ಲಿ ಕವಿಗಳು, ಸಾಹಿತಿಗಳು ಬರೆಯುತ್ತಾರೆ‌. ಕೆಲವರು ಬರೆಯುವುದಿಲ್ಲ. ಆದರೆ ಭಾವನೆಗಳಿಗೆ ನೇರ ನಂಟಿದೆ. ನಮ್ಮ ಭಾವನೆಗಳನ್ನು, ಅಭಿಪ್ರಾಯಗಳನ್ನು ಹೊರಹಾಕಲು ಬರವಣಿಗೆ ಮಾಧ್ಯಮವಾಗಿದೆ.
*ಸಂಗಮೇಶ* : ಯುವರ್ಕೋಟ್ ನಲ್ಲಿ ನೀವು ಬರೆದ 5 ಉತ್ತಮ ಬರಹಗಳನ್ನು ಆರಿಸಿ ?
*ತುಳಸಿ ನವೀನ* : a)ವಿಶ್ವಗುಬ್ಬಚ್ಚಿದಿನಕ್ಕೆ ಬರೆದ ಕವಿತೆ, b)ಮುಂದಿನ ಜನ್ಮದಲ್ಲಿ ಏನಾಗ ಬಯಸುತ್ತೀರಿ ಎಂದು ಕೇಳಿದ್ದರು. ಕಲಾವಿದನಾಗ ಬಯಸುವೆ ಎಂದು ಬರೆದಿದ್ದೆ. c) ಹೆಣ್ಣು ಜಗದ ಕಣ್ಣು d) ಪ್ರೀತಿ ಅದರ ನೀತಿ e) ಬೀದಿದೀಪ ಹೀಗೆ. f)ಅರಣ್ಯಕ್ಕೆ ಬೆಂಕಿಬಿದ್ದಾಗ ಬರೆದ ಕವಿತೆ ಇನ್ನೂ ಇದೆ.
*ಸಂಗೇಶ* : ನಿಮ್ಮ ಆಟೋ ಹಿಂದಿನ ಬರಹಕ್ಕೆ ಪ್ರೇರೇಪಣೆ ಯಾರು??ಹಾಗೂ ಈ ನಿಮ್ಮ ಬರಹಗಳಿಗೆ ಸ್ಫೂರ್ತಿ ಯಾರು??
*ತುಳಸಿ ನವೀನ* : ಆಟೋ ಹಿಂದಿನ ಸಾಲು- ಇದು ದಿ.ಶಂಕರ್ ನಾಗ್ ಅವರ ನೆನಪಿಗಾಗಿ ನಾನು ಬರೆಯಲು ಶುರುಮಾಡಿದೆ. ರಮೇಶ್ ಭಟ್ ಅವರು ಒಂದು ಸಂದರ್ಶನದಲ್ಲಿ ಶಂಕರ್ ನಾಗ್ ಅವರ ಬಗೆಗೆ ವಿವರಿಸಿದ್ದರು. "ಅವರೊಬ್ಬ ಧನಾತ್ಮಕ ಶಕ್ತಿ. ಬೆಂಕಿಯ ಕಿಡಿ. ಪಾದರಸದಂತೆ ಇದ್ದರಂತೆ. ಬೆಂಗಳೂರಿನ ಬಗೆಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದರಂತೆ. ಹಾಗಾಗಿ ಅವರು ಒಂದು ರೀತಿಯಲ್ಲಿ ಸ್ಪೂರ್ತಿ ನನಗೆ. ಕ್ರಿಯೇಟಿವ್ ಆಗಿ ಏನಾದರೂ ಮಾಡಬೇಕು ಎಂಬ ಆಸೆ. ಹಾಗಾಗಿ. ಯಾವಾಗಲೂ ಆಟೋ ಹಿಂದೆ ಸಾಲುಗಳನ್ನು ಬರೆದಿರುವುದು ನಾನು ನೋಡಿದ್ದೆ. ನಾನ್ಯಾಕೆ ಬರೆಯಬಾರದು ಎಂದು ಒಂದಷ್ಟು ಆಟೋಗಳ ಚಿತ್ರಗಳನ್ನು ಡೌನ್‌ಲೋಡ್ ಮಾಡಿ ಅದರ ಹಿಂದೆ ನನ್ನ ಒಂದು ವಾಕ್ಯದ ಕೋಟ್ ಗಳನ್ನು ಬರೆಯಲು ಶುರುಮಾಡಿದೆ. ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಓದುಗರು ಈ ದಿನ ಯಾವ ಆಟೋ ಬರುತ್ತದೆ ಎಂದು ಕಾಯುತ್ತಾ ಇದ್ದರು.  ಅಲ್ಲದೇ "ಸಿಂಹನೋಟ- ದಿನಪತ್ರಿಕೆಯ" ಸಂಪಾದಕರಿಗೆ ಅಚ್ಚರಿಯಾಗಿ ಅದನ್ನು ತಮ್ಮ ಪತ್ರಿಕೆಯಲ್ಲಿ ದಿನವೂ ಪ್ರಕಟಿಸುತ್ತಾ ಇದ್ದರು.
ವಿದ್ಯಾರ್ಥಿ ಜೀವನದಲ್ಲಿ ಓದಿ ಗುಡ್ಡೆಹಾಕಿದ್ದು ಏನೂ ಇಲ್ಲ ಎಂದು ಅರ್ಥವಾಗಿ ಮದುವೆಯಾದ ಮೇಲೆ ಮನಸ್ಸಿನಲ್ಲಿ ಒಂದು ಹಠ ಬಂದಿತು. ಓದುವಾಗ ಕಷ್ಟಪಟ್ಟು ಓದಿ ನನ್ನ ಕನಸನ್ನು ನನಸಾಗಿಸಿಕೊಳ್ಳಲಿಲ್ಲ. ನಾನು ಯಾವುದಕ್ಕೂ ಪ್ರಯೋಜನ ಇಲ್ಲದವಳು ಎಂದಾಗಬಾರದು ,ಕೇವಲ ಮದುವೆ ಮಕ್ಕಳು ಮನೆಯ ಸೇವೆಯಲ್ಲಿ ಮುಳುಗಬಾರದು. ಹೆಣ್ಮಕ್ಕಳು ಮದುವೆಯಾದ ಮೇಲೂ ತಮ್ಮ ಆಸಕ್ತಿ ಅಭಿರುಚಿಗಳಿಗೆ ಪುಷ್ಠಿಕೊಡಬಹುದು ಎಂದು ಜಿದ್ದಿಗೆ ಬಿದ್ದು ಸಾಹಿತ್ಯ ಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಈ ಸಾಹಿತ್ಯ ಕೃಷಿಯಲ್ಲಿ ನನ್ನನ್ನು ತೊಡಗಿಸಿಕೊಂಡೆ. ಅದಕ್ಕೆ ಮನೆಯವರ ಸಹಕಾರವೂ ಸಿಕ್ಕಿದೆ. ಇದೇ ಹಾದಿಯಲ್ಲಿ ಮುಂದುವರಿಯುತ್ತಾ ಇದ್ದೇನೆ.
*ಸಂಗಮೇಶ* : ಇತ್ತೀಚಿಗೆ ನಿಮಗೆ ಕನ್ನಡ ಸೇವಾರತ್ನ ಪ್ರಶಸ್ತಿ ದೊರಕಿದೆ. ಅದರ ಬಗ್ಗೆ ತಿಳಿಸಿರಿ?
*ತುಳಸಿ ನವೀನ* : ಆ ಹಠವೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿತು‌. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಳಕು ಸಂಸ್ಥೆಗೆ ಧನ್ಯವಾದಗಳನ್ನು ಹೇಳಬಯಸುವೆ. ಸಾಧನೆ ಎನ್ನುವುದು ತಪಸ್ಸು. ನಮ್ಮ ಗುರಿಯ ಕಡೆಗೆ ಮಾತ್ರ ಗಮನ ಕೊಡಬೇಕು. ಮನಸ್ಸು ಸ್ವಲ್ಪ ಚಂಚಲವಾದರೂ , ಉದಾಸೀನತೆ ಬಂದರೂ ಯಶಸ್ಸು ಸಿಗಲು ಸಾಧ್ಯವಿಲ್ಲ. ಹಾಗಾಗಿ ಕನ್ನಡ ನಮ್ಮ ಮಾತೃಭಾಷೆ. ಕನ್ನಡ ಉಳಿಸಿ ಉಳಿಸಿ ಎಂದು ಬೊಬ್ಬೆ ಹಾಕುತ್ತಾರೆ ಜನ. ಆದರೆ ನಾವೇ ಏಕೆ ಕನ್ನಡವ ಬೆಳೆಸುವ ಪ್ರಯತ್ನ ಮಾಡಬಾರದು. ಇದು ಕೂಡ ಒಂದು ಸೇವೆ. ಸಾಹಿತ್ಯ ಸೇವೆ. ಕನ್ನಡವ ಬೆಳೆಸುವ ನಮ್ಮ ಪ್ರಯತ್ನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿ ಪ್ರಶಸ್ತಿ ನೀಡಿತು‌. ತುಂಬಾ ಸಂತಸದ ಕ್ಷಣವದು. ಹೆತ್ತವರಿಗೆ, ನಾನು ಕಲಿತ ಶಾಲೆಗೆ, ಸ್ನೇಹಿತರಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು ಎಂಬುದು ನನ್ನ ಕನಸಾಗಿತ್ತು.
*ಸಂಗಮೇಶ* : ನಿಮಗೆ ಸಾಹಿತ್ಯ ಬಿಟ್ಟು ಬೇರೆ ಏನೆಲ್ಲ ಹವ್ಯಾಸಗಳಿವೆ ?
*ತುಳಸಿ ನವೀನ* : ಸಾಹಿತ್ಯ ಬಿಟ್ಟು ಓದುವುದು ಆಗಾಗ ಚಿತ್ರಬಿಡಿಸುವುದು, ಮನೆಯಲ್ಲಿ ಹೂದೋಟ ಬೆಳೆಸುವುದು , ಅಲ್ಲದೇ ಆಧ್ಯಾತ್ಮದ ಕಡೆಗೆ ಒಲವು ಜಾಸ್ತಿ. ಒಮ್ಮೆ ಶೇರ್ ಚಾಟ್ ಕನ್ನಡ ದಲ್ಲಿ ಮಹಿಳಾದಿನದ ಪ್ರಯುಕ್ತ ನಡೆಸಿದ ಲಕ್ಕಿ ವಿನ್ನರ್ ಗಳಲ್ಲಿ ನಾನು ಕೂಡ ಆಯ್ಕೆಯಾಗಿದ್ದೆ. Mother&Womb ಚಿತ್ರ ಬಿಡಿಸಿ ಕವನ ಬರೆದಿದ್ದೆ. ಆಯ್ಕೆಯಾಗಿದ್ದು ಒಂದು ಸರ್ಪ್ರೈಸ್ ನ್ಯೂಸ್ ನನಗೆ. ಖುಷಿಯಾಗಿತ್ತು.
*ಸಂಗಮೇಶ* : ಕೊನೆಯದಾಗಿ ಯುವರ್ಕೋಟ್ ನಲ್ಲಿ ಬರೆಯುತ್ತಿರುವ ಬರಹಗಾರರಿಗೆ ಏನೆಂದು ಹೇಳಬಯಸುವಿರಿ ?
*ತುಳಸಿ ನವೀನ* : ನಾನು ಮೊದಲೇ ಹೇಳಿದ ಹಾಗೆ ಯುವರ್ಕೋಟ್ ಒಂದು ಉತ್ತಮ ವೇದಿಕೆ. ನಮ್ಮ ಪ್ರತಿಭೆಯ ಅನಾವರಣಕ್ಕೆ ಎಲ್ಲೆಲ್ಲ ಅವಕಾಶಗಳು ಸಿಗುತ್ತವೆಯೋ ಅದನ್ನು ಸದುಪಯೋಗ ಪಡಿಸಿಕೊಂಡರೇ ಮಾತ್ರ ನಮಗೆ ಯಶಸ್ಸು ಸಿಗುತ್ತದೆ. ಹಾಗೆ "ಅವರಿವರು ಬರೆಯುತ್ತಾರೆ ಎಂದು ನಾನೂ ಬರೆಯುವೆ", "ನಾನು ಏನು ಎಂದು ನನಗೇ ಗೊತ್ತಿಲ್ಲ, ಗೊತ್ತಾದ ಮೇಲೆ ನಿಮಗೆ ಹೇಳುವೆ", "ತೋಚಿದ್ದು ಗೀಚುವೆ", ಸಮಯ ಕಳೆಯಲು ಬರೆಯುವೆನು" ಇಂತಹ ಬಾಲಿಶ ನುಡಿಗಳನ್ನು ಆಡುವುದು ಬಿಟ್ಟು "ಸಾಹಿತ್ಯಕ್ಕೆ ನಿಜವಾಗಿಯೂ ಸೇವೆ ಸಲ್ಲಿಸಬೇಕು. ನಿಲ್ಲಿ ನೆಲೆನಿಲ್ಲಬೇಕು" ಎಂದು ಧೃಡ ನಿರ್ಧಾರ ಮಾಡಿ ಬರೆಯಲು ಶುರುಮಾಡಿ. ಜೊತೆಗೆ ಗಾಂಭಿರ್ಯತೆ ಇರಲಿ. ಯಾವ ಕ್ಷೇತ್ರವನ್ನೂ ಕೇವಲವಾಗಿ ನೋಡಬೇಡಿ‌. ಶುಭವಾಗಲಿ💐
TULASI NAVEEN ಅವರ ಬರಹವನ್ನು ಓದಲು YourQuote ನಲ್ಲಿ ಹಿಂಬಾಲಿಸಿ. ❤


#yqinterviews #yqjogi #kannadainterview #ಕನ್ನಡ #ಸಂದರ್ಶನ #sajjan_dairies, Sindhubhargavquotes
Dedicating a #testimonial to TULASI NAVEEN.

Read Sangamesh Sajjan's thoughts on the YourQuote app at https://www.yourquote.in/sangamesh-sajjan-xkzy/quotes/sjjn-qynon

Tuesday 21 May 2019

School reopened ಮಕ್ಕಳ ಹಾಡು ಶಾಲೆಗೆ ಹೊರಟೆನು

Googleimage
*****
ಮಕ್ಕಳ ಹಾಡು: ಶಾಲೆಗೆ ಹೊರಟೆನು


ಶಾಲೆಗೆ ಹೊರಟೆನು ಅಮ್ಮ ನಾನು ಶಾಲೆಗೆ ಹೊರಟೆನು
ಗೆಳೆಯರ ನೋಡದೇ ತಿಂಗಳೇ ಕಳೆದಿದೆ
ಹರಟೆ ಹೊಡೆಯದೇ ಬೇಸರವಾಗಿದೆ
ಯುನಿಫಾರ್ಮ್ ಧರಿಸುವ ಆಸೆಯಾಗಿದೆ
ಪಾಠೀಚೀಲವು ನನ್ನನೇ ಕರೆದಿದೆ
ಶಾಲೆಗೆ ಹೊರಟೆನು ಅಮ್ಮ ನಾನು ಶಾಲೆಗೆ ಹೊರಟೆನು!


ಕೂಡಿಸಿ ಕಳೆಯಲು ಗಣಿತದ ತರಗತಿ
ಹಾಡಿ ಕುಣಿಯಲು ಕನ್ನಡವು
ಸೋಜಿಗ ಮೂಡಿಸೊ ವಿಜ್ಞಾನದ ತರಗತಿ
ಇತಿಹಾಸವ ಅರಿಯಲು ಸಾಮಾಜವು
ಎಲ್ಲವನೂ ಕಲಿಯುವ ಆತುರವಮ್ಮ ಕ್ಲಾಸಿಗೆ ಮೊದಲು ಬರುವೆನಮ್ಮ!
ಶಾಲೆಗೆ ಹೊರಟೆನು ಅಮ್ಮ ನಾನು ಶಾಲೆಗೆ ಹೊರಟೆನು!


ಗದರಿಸಿರಿ ಕಲಿಸುವ ಶಿಕ್ಷಕರು ನಮ್ಮನು ತಿದ್ದುವ ಶಿಲ್ಪಿಗಳು
ಮಮತೆಯ ತೋರಿಸಿ ಓದಿಸುತ ತಾಯಿಯ ಸ್ಥಾನವ ತುಂಬುವರು
ಬೇಧಭಾವವಿಲ್ಲವಮ್ಮ ನಾವೆಲ್ಲರೂ ಒಂದೇ ಎಂದೆಂದೂ
ಯಾವ ಬಣ್ಣ ದ್ವೇಷವಿಲ್ಲ ನಾವು ಗೆಳೆಯರು ಎಂದೆಂದೂ
ಒಗ್ಗಟ್ಟಿನ ಮಂತ್ರವ ಸಾರಲು, ಶಾಲೆಯೇ ಮೊದಲ ಗುಡಿಯಮ್ಮ
ದೇಶಕೆ ಉತ್ತಮ ಪ್ರಜೆಯಾಗಿ ನಾನು ಬಾಳುವೆ ಸರಿಯಮ್ಮ!
ಶಾಲೆಗೆ ಹೊರಟೆನು ಅಮ್ಮ ನಾನು ಶಾಲೆಗೆ ಹೊರಟೆನು!



ಸಿಂಧು ಭಾರ್ಗವ್.

Monday 20 May 2019

ಐದು ಪದಗಳ ಸಮಾಜ ಸಂದೇಶ








ಹೂವಿಗೊಂದು ಪತ್ರ

Source pick_googleimages

Source picg_oogleimages

ಆತ್ಮೀಯ ಹೂವೇ,
     ನೀನೆಂದರೆ ನನಗೆ #ಸ್ಪೂರ್ತಿ. ಮುಂಜಾನೆ ಅರಳಿ ಸಂಜೆ ಬೀಳುವ ನೀನು, ಗಾಳಿ, ಮಳೆ, ಉರಿ ಬಿಸಿಲಿಗೂ ಬಾಡದೇ ನಗುತ ನಿಂತಿರುವುದು ನನಗಂತಲ್ಲ ಎಲ್ಲರಿಗೂ ಸ್ಪೂರ್ತಿಯ ಸೆಲೆಯೇ ತಾನೆ. ಬುಡದಲಿ ನೀರು ಹಾಕಿ ಆರೈಕೆ ಮಾಡಿದರೆ ಸಾಕು ನೀನು ರಾಶಿ ರಾಶಿ ಹೂವ ನೀಡುವುದರ ಮೂಲಕ ನಿನ್ನ #ಪ್ರೀತಿ_ವಿಶ್ವಾಸವ ತೋರಿಸುವೆ. ಬೇಸಿಗೆ ಕಾಲದಲಿ ಉಸಿರ ಬಿಗಿ ಹಿಡಿದು ಕಾದು ಮಳೆಗಾಲದಲ್ಲಿ ಸಾಧ್ಯವಾಗುವಷ್ಟು ನೀರು ಕುಡಿದು ಬೆಳೆದು ಮತ್ತೆ ಉಸಿರಾಡುವೆ. ಏನೇ ಕಷ್ಟ ಬಂದರೂ ನಿನ್ನ #ಪ್ರಯತ್ನವ ನೀನು ಬಿಡುವುದಿಲ್ಲ.
     ಸಂಜೆಯೇ ಮೊಗ್ಗು ಅರಳಿಸಿಕೊಂಡು ಘಮವ ಹರಡಲು ಶುರು ಮಾಡುವೆ. ಎಲ್ಲರನೂ ತನ್ನತ್ತ ಸೆಳೆದುಕೊಳ್ಳುವೆ. ವಿಕಾರ ಮನಸ್ಸಿನ ಜನರಿಂದಾಗಿ ರಕ್ಷಿಸಿಕ್ಕೊಳಲು ಮುಳ್ಳುಗಳಿಂದ ರಕ್ಷಣೆ ಪಡೆಯುವೆ.
    ನಿಜ ನಿನ್ನನ್ನು ಹೆಣ್ಣಿಗೆ ಹೋಲಿಸುವರು. ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು ಎಂದು ನೀನು ಸಾರಿಸಾರಿ ಹೇಳುತಿರುವೆ ನೋಡು. ಹೂವೇ, ಎಲ್ಲರಿಗೂ ಮೆಚ್ಚುಗೆಯಾಗುವ ನೀನು ಪ್ರಕೃತಿಯ ಮಡಿಲಿನಲಿ ಸದಾ ಸುಖಿಯಾಗಿರು.

ಇಂತೀ ಪ್ರೀತಿಯ,
ಸಿಂಧು

Kannada SevaRatna Award ಕನ್ನಡ ಸೇವಾರತ್ನ ಪ್ರಶಸ್ತಿ

Dear Friends,
On the occasion of Yugadi Kavitha in Bangalore Urbun Dist, I was honored with the Kannada Seva Ratna Award for promoting Kannada Language. 
🌷🍁🌷🍁🌷🍁💞💕💞💕💖💞
ನಿಮಗೊಂದು ಸಿಹಿಸುದ್ಧಿ ತಿಳಿಸಲು ಕೊಂಚ ವಿಳಂಬವಾಗಿದೆ.
ನನಗೆ ಪ್ರಸಕ್ತ ಸಾಲಿನಲ್ಲಿ ಕ.ಸಾ.ಪ ದಿಂದ ( ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರಜಿಲ್ಲೆ ಚಾಮರಾಜಪೇಟೆ ) 

"ಕನ್ನಡಸೇವಾರತ್ನ_ಪ್ರಶಸ್ತಿ" -೨೦೧೯ ದೊರಕಿದೆ.
#ಕಸಾಪಬೆಂಗಳೂರುನಗರ ಜಿಲ್ಲೆ
#ಕನ್ನಡಸೇವಾರತ್ನ_ಪ್ರಶಸ್ತಿ  #ಯುಗಾದಿಕವಿಗೋಷ್ಠಿ
#sindhubhargavquotes #kannadasevaratna_award
*******

ನನ್ನ ಪತಿರಾಯರು (ನವೀನ್ ಭಟ್ ) ನನ್ನ ಬೆನ್ನೆಲುಬು. ನನ್ನ ಆಸಕ್ತಿ ಅಭಿರುಚಿಗಳಿಗೆ ಪ್ರೋತ್ಸಾಹ ನೀಡುವವರು.

Kannada Sevaratna awad2019
ಕನ್ನಡ_ಸೇವಾರತ್ನ_ಪ್ರಶಸ್ತಿ


ಯುಗಾದಿ ಕವಿಗೋಷ್ಟಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ....



ಚಿನ್ಮಯ ಮುಖ್ಯಪ್ರಾಣನ ಬಂಟ. ನನ್ನ ಬರವಣಿಗೆಗೆ ಸ್ಪೂರ್ತಿ.









()********()
()*****()
()***()
(**)
(*)
()

Kavana Naya_Naajooku ಕವನ ನಯ‌ ನಾಜೂಕು




****

ಕವಿತೆ: ನಯ ನಾಜೂಕು
*** **** ****** *****
ಹೂವಲ್ಲಿ ಗಂಧವು ಇಹುದು
ಮಾತಲ್ಲಿ ವಂಚನೆ ಇಹುದು
ನಯವಾಗಿದೆ ಎಂದು ನಂಬದಿರು
ನಂಬಿ ಮೋಸ ಹೋಗದಿರು!

ಹಸಿದಿದ್ದ ಜಿಂಕೆ ಮರಿಗೆ
ಹಸಿಹುಲ್ಲು ತಿನ್ನುವ ಆಸೆ
ವ್ಯಾಘ್ರನಿಗೇ ಹಸಿದ ಉದರ
ಎರಗಿ ತಿಂದಿತು ಜಿಂಕೆಯನೇ
ಹಸಿಬಿಸಿ ರಕುತದಲಿ ದಿನವು
ಕಳೆದು ಹೋಯಿತು ಕ್ಷಣವು
     ನಯವಾಗಿದೆ ಎಂದು ನಂಬದಿರು
     ನಂಬಿ ಮೋಸ ಹೋಗದಿರು!

ಮುಂಜಾನೆ ಇಬ್ಬನಿ ಮೇಲೆ
ಹಸಿರಲೆಯ ಮಿಂಚುವ ಲೀಲೆ
ರವಿತೇಜ ಬರುವನು ನೋಡು
ಇಬ್ಬನಿಯು ಕರಗಿತು ನೋಡು
ಹಸಿರ ಹೃದಯಕೆ ಆದ ಘಾಸಿಯ
ಕೇಳದೇ ಹೋದರೇ ಯಾರು
      ನಯವಾಗಿದೆ ಎಂದು ನಂಬದಿರು
      ನಂಬಿ ಮೋಸ ಹೋಗದಿರು!

ಹರಿಯುವ ನದಿಯಲಿ ಕಲರವ
ಈಜುವ ಮೀನಿಗೆ ಸಂಭ್ರಮ
ಬೇಸಿಗೆ ಕಾಲದ ಬೇಗೆಗೆ
ಆವಿಯಾಗಿದೆ ಜೀವಜಲ
ನೀರನೇ ನಂಬಿದ ಮತ್ಯಕೆ
ಬದುಕಿ ಉಳಿಯುವ ಬಗೆಯೇನು?
      ನಯವಾಗಿದೆ ಎಂದು ನಂಬದಿರು
      ನಂಬಿ ಮೋಸ ಹೋಗದಿರು!



- ಸಿಂಧು ಭಾರ್ಗವ್.

Wedding Anniversary- ವಿವಾಹದ ದಿನ

ವೈವಾಹಿಕ ಜೀವನದ ವಾರ್ಷಿಕೋತ್ಸವ




*****

ಅಪರಿಚಿತ ಮನಸುಗಳ
ಮೂರು ಗಂಟು ಬೆಸೆಯುವುದು!
ನೂರಾರು ಕನಸಿನೊಂದಿಗೆ
ಸಪ್ತಪದಿ ತುಳಿಯುವುದು!
ದೋಷ-ಆರೋಪಗಳ
ಬಗೆಹರಿಸಿ ಬದುಕುವುದು!
ಕಷ್ಟ-ಸುಖಗಳಲಿ
ಜೊತೆಯಾಗಿ ಜೀಕುವುದು!

****


ಹಣೆಗೆ ಸಿಂಧೂರ
ಕೈಗಳಿಗೆ ಕಾಜಿ,
ಕೆನ್ನೆಗೆ ಅರಸಿನ
ಕಾಲ್ಳಿಗೆ ಕಾಲುಂಗುರ
ಮೂಗಿನ ನತ್ತು ಹೊಳೆಯುತ
ಮುದುಕಿ ಮುತೈದೆಯ
ಭಾಗ್ಯವ ಕರುಣಿಸಲು
ಪತಿರಾಯರ ಆಯಸ್ಸು
ಇಮ್ಮಡಿಯಾಗಲಿ ಎಂದು
ಬೇಡುವೆನು ಹರಿಯೇ!
ತ್ಯಾಗ-ಸಹನೆಯ ಈ
ಬಾಳಿನಲಿ ಪ್ರೀತಿಯಲ್ಲದೇ
ಇನ್ನೇನು ನಾ ಅರಿಯೆ‌!!


:- ತುಳಸಿ ನವೀನ್ ಭಟ್

World family day - ಕೌಟುಂಬಿಕ ಜೀವನ

ಕೌಟುಂಬಿಕ ಜೀವನ:

ಹಿರಿಯರ ಹಿತವಚನಗಳು
ಹೆತ್ತವರ ಹರಕೆ ಹಾರೈಕೆಗಳು
ಒಡಹುಟ್ಟಿದವರ ಜೊತೆಗಿನ ಒಡನಾಟವು
ನಗುವು -ಅಳುವು ಕಷ್ಟ-ಸುಖವು
ಹಸಿವು-ಭೂರೀ ಭೋಜನವು
ಕಾಲಕಾಲಗಳನೇ ಕಳೆಯುತ್ತಾ
ಸವಿನೆನಪುಗಳನು ಕೂಡಿಸುತ್ತಾ
ಜೀವನದ ಪತದಲಿ ಚಲಿಸುತ್ತಾ
ಸಾಗುವುದೇ - ಕೌಟುಂಬಿಕ ಜೀವನ!!
World Family Day (May15th)
🐣🐤🐥🐓🐔🐣🐥🐔🐓🐣🐤🐥🐔🐓🐣

ಮೊಟ್ಟೆ ಒಡೆದು ಮರಿ ಕೋಳಿ ಹೊರಬರುವಂತೆ
ಹುಳ ಹುಪ್ಪಟೆಯ ಗಂಡು ಹಕ್ಕಿ ತನ್ನ ಮರಿಗಳಿಗೆ ಹೆಕ್ಕಿ ತರುವಂತೆ
ತಾನು ಹಸಿದಿದ್ದರೂ ಬಿಸಿನಿಸಿ ಗಂಜಿಯನ್ನು ಅವ್ವ ಬಡಿಸುವಂತೆ
ದುಡಿದು ದಣಿದಿದ್ದರೂ ಮಕ್ಕಳಿಗೆ ಖಾರದಕಡ್ಡಿ ತರಲು ಮರೆಯದ ಅಪ್ಪನಂತೆ
ಎಲ್ಲರೂ ಎಲ್ಲವನೂ ಬೇಕು ಎನ್ನುವ ಈ ಸ್ವಾರ್ಥಿ ಜೀವ,

        ಆದರೆ ನಾವು ಎಷ್ಟು ವಾಪಾಸು ಕೊಡ್ತೇವೆ.?ಎಷ್ಟು ಪ್ರೀತಿಸ್ತೇವೆ.?

ಒಮ್ಮೆ ಯೋಚಿಸಿ.

Thursday 16 May 2019

Kavana ಹಿಡಿದ ಗುರಿಯನು ಬಿಡದಿರು

Google photosource- 
*****

ಕವನ: ಹಿಡಿದ ಗುರಿಯನು ಬಿಡದಿರು

ಅಂದುಕೊಂಡಂತೆ ಎಂದೂ ನಡೆಯದು
ಹಿಡಿದ ಹಠವ ಮನವು ಬಿಡದು!

ಸುಖದ ಸುಪ್ಪತ್ತಿಗೆ ಬೇಕು ಎನದು; ಮನ
ಕಷ್ಟಗಳನು ಎದುರಿಸಿ ನಿಲ್ಲುವುದು

ನಾಳಿನ ಹಾದಿಯ ಜಾಡನು ಹಿಡಿದು
ಇಂದೇ ಒಂದಷ್ಟು ಸಾಗಬೇಕು!
ಗಮ್ಯದ ಕಡೆಗೆ ಸಾಗಿದಂತೆಲ್ಲ
ಆತ್ಮದ ಅವಲೋಕನವಾಗಬೇಕು!

ಏರಿದ ಏಣಿಯ, ಹಿಡಿದ ಕರಗಳ
ಮರೆಯಲೇ ಬಾರದು ಗೆಳೆಯ
ನಾಳಿನ ನಮ್ಮಯ ದಿನಗಳ ಎನಿಸುತ
ಈ ದಿನವ ಹಾಳುಗೆಡವದಿರು ಗೆಳೆಯ

ಕಠಿಣತೆಗೆ ಫಲವು ಆರಾಮಕ್ಕಲ್ಲ
ಮುಳ್ಳಿನ ಜೊತೆಗೆ ಸುಮವು ಇದೆಯಲ್ಲ
ಮೋಡವು ಕರಗಿದರೆ ಮಳೆ ಬರುವುದು
ಬತ್ತಿದ ತೊರೆಯಲಿ ನೀರು ಹರಿಯುವುದು

ಕಾಯಲೇಬೇಕು ಜೊತೆಗೆ ಪ್ರಯತ್ನಗಳು ಬೇಕು
ಕಾಯಲೇಬೇಕು ಜೊತೆಗೆ ನಂಬಿಕೆಯು ಬೇಕು
ದೇವಬಲವು ತನ್ನಛಲವು ಎರಡರ ಮಿಶ್ರಣವು
ಸಾಧನೆಯ ಮುಕುಟಕೆ ಕಳಶಪ್ರಾಯವು,
ಅದುವೇ ಕಳಶಪ್ರಾಯವು!!

- ಸಿಂಧು ಭಾರ್ಗವ್.🍁

Article about Dr. Shivakumar swamiji and Tumkur mata

ಲೇಖನ : ಕಾರ್ಯಮುಗಿಸಿ ನಡೆದ ನಡೆದಾಡುವ ದೇವರು

      ದೇಹೀ ಎಂದು ಬಂದವರಿಗೆ ಅನ್ನ, ಅಕ್ಷರ, ಆಶ್ರಯ ಎಂಬ ಮೂರು ವಿಧದ  ದಾಸೋಹ ನಡೆಸಿ ದೀನರ  ಬಾಳಿಗೆ ಬೆಳಕಾದ ಶಿವಯೋಗಿಗಳು. ಭಕ್ತಮಾನಸದಲ್ಲಿ ನೆಲೆನಿಂತು ಅಂಧಕಾರವ ತೊಡೆದು ಹಾಕಿ ಸರ್ವಧರ್ಮ ಸಮಾನತೆಯ ಸಾರಿದ ಮಹಾತ್ಮರು. ಇವರು ಬಸವಣ್ಣನವರ ವಚನಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಿದ ಧರ್ಮಯೋಗಿಗಳು. ತನ್ನ ಇಚ್ಚಾಶಕ್ತಿಯಿಂದ ಬದುಕಿ ಲಕ್ಷಾಂತರ ಮಕ್ಕಳ ಜೀವನಕ್ಕೆ ದಾರಿದೀಪವಾದ ಕರ್ಮಯೋಗಿಗಳು. ಕೊನೆಯುಸಿರಿರುವ ತನಕ ಶಿವ ಮೆಚ್ಚಿದ ಜೀವನ ನಡೆಸಿದ ಕಲ್ಪತರು ಶಿವಪ್ರಿಯ ಶ್ರೀ. ಶಿವಕುಮಾರ ಸ್ವಾಮೀಜಿಗಳು ೨೧-೦೧-೨೦೧೯ ಸೋಮವಾರದಂದು ಬೆಳಿಗ್ಗೆ ೧೧.೪೪ರ ಸಮಯಕ್ಕೆ  ಲಿಂಗೈಕ್ಯರಾದರು. ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಯಕೃತ್ತು , ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಂದ ಅವರ ದೇಹಸ್ಥಿತಿ ಕ್ಷೀಣಿಸುತ್ತಾ  ಕೊನೆಗೂ ವೈದ್ಯರಿಗೆ ಏನೂ ಮಾಡಲಾಗದೇ ಅಸಹಾಯಕರಾಗಿ ನಡೆದಾಡುವ ದೇವರನ್ನು ಆ ಪರಶಿವನೇ ಕೈಹಿಡಿದು ಕೈಲಾಸಕ್ಕೆ ಕರೆದುಕೊಂಡು ಹೋದರು.

      ಸಿದ್ಧಗಂಗಾ ಶೀಗಳು ನೂರ ಹನ್ನೊಂದು ವರುಷ ಬದುಕಿದವರು ಎಂಬ ಎಣಿಕೆಗಿಂತ ಬದುಕಿರುವ ಕೊನೆಯವರೆಗೂ ಶಿವನ ಒಲುಮೆಗೆ ಪಾತ್ರರಾಗಿ ಮಠದಲ್ಲಿ ವಾತ್ಸಲ್ಯಮಯೀಯಾಗಿ, ಗುರುಗಳಾಗಿ, ದಾರಿದೀಪವಾಗಿ ದೀನರಿಗಾಗಿಯೇ ಸೇವೆಮಾಡುತ್ತಿದ್ದರು. ಲಿಂಗಾಯತ ಧರ್ಮದ ಸಾಕಾರ ಮೂರ್ತಿ, ಕಲ್ಲುಂಬಂಡೆಯಂತಿದ್ದ ಕ್ಷೇತ್ರದಲ್ಲಿ ನಂದನವನವನ್ನು ಸೃಷ್ಟಿ ಮಾಡಿದ ಪೂಜ್ಯರಿವರು.
****

     ಕ್ಷೇತ್ರದ ಇತಿಹಾಸ:- ಸುಮಾರು ಆರುನೂರು ವರ್ಷಗಳ ಇತಿಹಾಸವಿರುವ ಸಿದ್ಧಗಂಗಾ ಕ್ಷೇತ್ರದ ಸಂಸ್ಥಾಪಕರು ಚಾಮರಾಜನಗರದ ಹರದನಹಳ್ಳಿಯಲ್ಲಿ ಸ್ಥಾಪಿಸಲ್ಪಟ್ಟ ಶೂನ್ಯಸಿಂಹಾಸನದ ಪ್ರಭುಗಳಾದ ಶ್ರೀಗೋಸಲ ಸಿದ್ಧೇಶ್ವರರು. ಅವರು ಮಹಾನ್ ತಪಸ್ವಿಗಳು. ಒಮ್ಮೆ ಅವರ ಜೊತೆಗೆ ಅನೇಕ ಸಮಕಾಲೀನ ಯತಿಗಳು ಬೆಟ್ಟದ ತುದಿಯಲ್ಲಿ ತಪಸ್ಸು ಮಾಡುತ್ತಿರುವಾಗ ಹಿರಿಯ ಯತಿಗಳಿಗೆ ಬಾಯಾರಿಕೆಯಾಯಿತಂತೆ. ಆಗ ಎಲ್ಲಿ ಹುಡುಕಿದರೂ ನೀರು ಸಿಗದಿದ್ದ ಕಾರಣ, ಶ್ರೀ ಗೋಸಲ ಸಿದ್ಧೇಶ್ವರರು ತಮ್ಮ ಪವಿತ್ರವಾದ ಹಸ್ತದಿಂದ ಬಂಡೆಯನ್ನು ಬಡಿದಾಗ ಅಲ್ಲಿ ಗಂಗೆ ಉದಯಿಸಿದಳಂತೆ. ಅವರ ತಪಸ್ಸಿನ ಸಿದ್ಧಿಯಿಂದ ಉದಯಿಸಿದ ಜೀವಜಲದಿಂದ ಆ ಕ್ಷೇತ್ರಕ್ಕೆ ಸಿದ್ಧಗಂಗಾ ಕ್ಷೇತ್ರ ಎಂಬ ಹೆಸರು ಬಂದಿತು.

ಶ್ರೀಗಳ ಕಿರುಪರಿಚಯ:- ೦೧-೦೪-೧೯೦೮ ರಲ್ಲಿ ಬೆಂಗಳೂರು ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಗಂಗಮ್ಮ ಮತ್ತು ಹೊನ್ನಪ್ಪ ದಂಪತಿಯ ೧೩ನೇ ಪುತ್ರನಾಗಿ ಹಾಗೂ ಕೊನೆಯ ಪುತ್ರನಾಗಿ ಜನಿಸಿದರು. ಜನಿಸಿದ ಹದಿಮೂರು ಮಕ್ಕಳು ಆಯುರ್-ಆರೋಗ್ಯವಂತರಾಗಿದ್ದುದು ಪರಶಿವನ ಕೃಪೆಯೇ ಸರಿ. ಆಗ ಅವರಿಗೆ ಪ್ರೀತಿಯಿಂದ ಶಿವಣ್ಣ ಎಂದು ಜನ್ಮನಾಮವಿಟ್ಟಿದ್ದರು. ೧೯೧೩ ರಿಂದ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಶುರುಮಾಡಿದರು. ಆಗಿನ ಕಾಲದಲ್ಲಿಯೇ ಅಂದರೆ ಸರಿಸುಮಾರು ೧೯೨೬ ರ ಇಸವಿಯಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ತದನಂತರ ೧೯೨೭-೩೦ ರ ವರೆಗೆ ಬೆಂಗಳೂರು, ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದು ತಮ್ಮ ಬಿ.ಎ ತರಗತಿಯನ್ನು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಮುಗಿಸಿದರು.  ಅದಾದ ನಂತರವೇ ಅವರನ್ನು ೦೩-೦೩-೧೯೩೦ ರಲ್ಲಿ "ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆಮಾಡಲಾಯಿತು. ನಂತರ ೧೧-೦೧-೧೯೪೧ ರಲ್ಲಿ ಶ್ರೀ ಉದ್ದಾನಸ್ವಾಮಿಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಶ್ರೀಸಿದ್ಧಗಂಗಾ ಮಠದ "ಅಧ್ಯಕ್ಷರಾಗಿ" ಇವರು ಅಧಿಕಾರ ಸ್ವೀಕರಿಸಿದರು. ಅಲ್ಲಿಂದ ಇಲ್ಲಿಯ ತನಕವೂ ತಮ್ಮ ದೂರದೃಷ್ಟಿ, ಇಚ್ಛಾಶಕ್ತಿಯಿಂದ, ಬಸವಣ್ಣನವರ ತತ್ವ ಸಿದ್ಧಾಂತಗಳ ಅನುಸರಣೆಯಿಂದ, ಧರ್ಮಮಾರ್ಗದಲ್ಲಿ ,ಸಂಪ್ರದಾಯಗಳ ಆಚರಣೆಯಿಂದ ಅವರ ಸೇವೆ ಆಧ್ಯಾತ್ಮಿಕವಾಗಿ, ಶೈಕ್ಷಣಿಕವಾಗಿ, ಸತ್ಕರ್ಮವಾಗಿ, ಸತ್ಸಂಗಪರವಾಗಿ ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ನಡೆಯುತ್ತಲೇ ಬಂದಿದೆ. ಅವರಾಡುವ ಮಾತು, ಪಾಂಡಿತ್ಯ, ಅಧ್ಯಯನಶೀಲತೆ ಹಾಗೂ ಪ್ರಾಮಾಣಿಕ ಸೇವೆಯಿಂದಲೇ ಅವರು ನಡೆದಾಡುವ ದೇವರೆನಿಸಿಕೊಂಡರು.

ಮುಂಜಾನೆ ಮೂರಕ್ಕೆಲ್ಲ ಎದ್ದು ಸ್ನಾನ ಮಾಡಿ ಏಕಾಂತ ಪೂಜೆಗೆ ಕೂರುತ್ತಿದ್ದರು‌. ನಂತರ ೫.೩೦ರಿಂದ ೬ರ ತನಕ ಸಾಮೂಹಿಕ(ಶಿಷ್ಯರ ಜೊತೆಗೆ) ಲಿಂಗ ಪೂಜೆ ಮಾಡುತ್ತಿದ್ದರು. ಆದಾದ ನಂತರ ಬೆಳಿಗ್ಗಿನ ಪ್ರಸಾದ ಸ್ವೀಕಾರ, ಅದೂ ಕೂಡ ಒಂದೂವರೆ ಇಡ್ಲಿ, ಬೇಳೆಕಟ್ಟು ಸಾರು, ಒಂದು ಲೋಟವಾಗುವಷ್ಟು ಕಹಿಬೇವಿನ ತೊಗಟೆಯ ಕಷಾಯ, ಹಾಲು- ಹಣ್ಣುಗಳ ಸೇವನೆ ಮಾಡುತ್ತಿದ್ದರು. ನಂತರ ಯಂತ್ರಧಾರಣೆ ಮಾಡುತ್ತಿದ್ದರು. ೬.೩೦ಕ್ಕೆಲ್ಲ ಕಛೇರಿಗೆ ಬಂದು ದಿನಪತ್ರಿಕೆಯ ಓದುತಲಿ, ಕಡತಗಳ ವಿಲೇವಾರಿ ಮಾಡಿ, ಭಕ್ತರಿಗೆ ದರುಶನ ನೀಡಿ ,ಸಮಸ್ಯೆಯ ಆಲಿಸುತ್ತಿದ್ದರು.  ಮಧ್ಯಾಹ್ನ ಮತ್ತೆ ಸ್ನಾನ, ಪೂಜೆ, ಸ್ವಲ್ಪ ಆಹಾರ ಸೇವನೆ,  ಕಛೇರಿ ಭೇಟಿ,  ತಮ್ಮ ಕಾರ್ಯದಲ್ಲಿ ಮಗ್ನರಾಗುತ್ತಿದ್ದರು. ನಂತರ ಸಂಜೆ ಹೊಲ, ಜಮೀನು, ಗೋಶಾಲೆಗಳಿಗೆ ಭೇಟಿ ನೀಡಿ  ಆರುಗಂಟೆಗೆ ವಾಪಾಸ್ಸಾಗುತ್ತಿದ್ದರು.  ಆರಕ್ಕೆ ವಿದ್ಯಾರ್ಥಿಗಳ ಜೊತೆಗೆ  ಸಾಮೂಹಿಕ ಪ್ರಾರ್ಥನೆ ಯಲ್ಲಿ ಕುಳಿತು, ಆಶಿರ್ವಚನ ನೀಡಿ ೯ ಗಂಟೆಗೆ ಹಳೆ ಮಠಕ್ಕೆ ಆಗಮಿಸುತ್ತಿದ್ದರು. ರಾತ್ರಿ ಮತ್ತೊಮ್ಮೆ ಪೂಜೆ, ಪ್ರಸಾದ ಸ್ವೀಕಾರ ಮಾಡಿ ಸ್ವಲ್ಪ ಅಧ್ಯಯನ ನಡೆಸಿ ರಾತ್ರಿ ೧೧ ಗಂಟೆಗೆ ವಿಶ್ರಾಂತಿ ಪಡೆಯುತ್ತಿದ್ದರು. ಇದು ಕೇವಲ ಒಂದು ದಿನದ ದಿನಚರಿಯಲ್ಲ. ಅವರು ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ದಿನದಿಂದ ಕೊನೆಯುಸಿರು ಎಳೆಯುವ ತನಕವೂ ಸಾಗುತ್ತಲೇ ಬಂದಿತ್ತು. ವಿಪರೀತವಾಗಿ ಆರೋಗ್ಯ ಹದಗೆಟ್ಟ ಕಾರಣ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಪೂಜೆ ಮಾಡುವುದು ನಿಲ್ಲಿಸಲಿಲ್ಲ. ನಿತ್ಯವೂ ತ್ರಿಕಾಲ ಪೂಜೆ, ಲಘು ಪ್ರಸಾದ ಸ್ವೀಕರಣೆ, ಯಂತ್ರಧಾರಣೆ, ಭಕ್ತರಿಗೆ ದರ್ಶನ,ಪಾದಪೂಜೇ, ಶಿವಪೂಜೆ, ಮಕ್ಕಳಬಗ್ಗೆ ಕೇಳುವುದು, ತೋಟ ಜಮೀನಿಗೆ ಭೇಟಿ ಕೊಡುವುದು.

ಶಿಕ್ಷಣದ ಮಹತ್ವ ಮೊದಲೇ ಅರಿತಿದ್ದ ಶ್ರೀಗಳು ಅಧಿಕಾರ ಸ್ವೀಕರಿಸಿ ಮೂರ್ನಾಲ್ಕು ವರುಷದಲ್ಲಿಯೇ ಸಿದ್ಧಗಂಗಾ ಪ್ರೌಢಶಾಲೆ ತುಮಕೂರು ನಗರದಲ್ಲಿ ಸ್ಥಾಪನೆ ಮಾಡಿದರು.ಹಾಗೆಯೇ ಸಂಸ್ಕೃತ ಭಾಷೆಯ ಅರಿವು ಪ್ರತಿಯೊಬ್ಬರಿಗೂ ಆಗಬೇಕು ಎನ್ನುವ ದೃಷ್ಟಿಯಿಂದ, ಜಾತಿ ಧರ್ಮದ ಬೇಧಭಾವವಿಲ್ಲದೇ ೧೯೫೬ ರಲ್ಲಿ ಸ್ವಕ್ಷೇತ್ರದಲ್ಲಿ ಸಂಸ್ಕೃತ ಕಾಲೇಜು ಕಟ್ಟಡದ ನಿರ್ಮಾಣ ಕಾರ್ಯ ನಡೆಸಲಾಯಿತು. ೧೯೬೦ ರಲ್ಲಿ ಜನರಿಗೆ ಆಶ್ರಯ ನೀಡುವ ನಿಟ್ಟಿನಲ್ಲಿ ಶ್ರೀಮಠದಲ್ಲಿ ಹಾಸ್ಟೆಲ್ ನಿರ್ಮಾಣವಾಯಿತು. ೧೯೬೩ ರಲ್ಲಿ ಉನ್ನತ ಮಟ್ಟದ ಶಿಕ್ಷಣಕ್ಕಾಗಿ ಇಂಜಿನಿಯರಿಂಗ್ ಕಾಲೇಜನ್ನು ಕೂಡ ಆರಂಭ ಮಾಡಲಾಯಿತು. ಅಷ್ಟೇ ಅಲ್ಲದೇ ನಂತರದ ವರುಷಗಳಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ಕಾಲೇಜುಗಳು, ನರ್ಸಿಂಗ್ ಕಾಲೇಜು, ಓದುವ ಮಕ್ಕಳಿಗೆ  ವಿದ್ಯಾರ್ಥಿ ನಿಲಯದ ಕಟ್ಟಡದ ಸ್ಥಾಪನೆ ಕೂಡ ಮಾಡಲಾಗಿದೆ. ಹಾಗೆಯೇ ಶ್ರೀಗಳಿಗೆ ಸುವರ್ಣ ಮಹೋತ್ಸವ, ವಜ್ರಹೋತ್ಸವ, ನೂರು ವರ್ಷಕ್ಕೆ ಕಾಲಿಟ್ಟ ಸಂಭ್ರಮ ದಲ್ಲಿ ರಾಜ್ಯ ಸರ್ಕಾರದಿಂದ "ಕರ್ನಾಟಕ ರತ್ನ" ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಕರ್ನಾಟಕ ವಿವಿ "ಗೌರವ ಡಾಕ್ಟರೇಟ್" ಪ್ರದಾನ, ರಾಜ್ಯ ಸರ್ಕಾರದಿಂದ "ರಾಷ್ಟ್ರೀಯ ಬಸವ ಪುರಸ್ಕಾರ" ಪ್ರದಾನ, ಭಾರತ ಸರ್ಕಾರದಿಂದ "ಪದ್ಮಭೂಷಣ" ಪ್ರಶಸ್ತಿ ಪ್ರದಾನ , ರಾಜ್ಯ ಸರ್ಕಾರದಿಂದ ಮಹಾವೀರ ವಿಶ್ವ ಶಾಂತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ. ತಾನು ಮಾಡು ಕೆಲಸ ಪ್ರಶಸ್ತಿಗಾಗಿ ,ಮೆಚ್ಚುಗೆಗಾಗಿ ಅಲ್ಲ , ಬದಲಾಗಿ ಶಿವನ ಇಚ್ಛೆಯಂತೆ ಎಲ್ಲವೂ ನಡೆಯುತ್ತಲೇ ಇದೆ ಎಂದು  ಹೇಳುವ ಶ್ರೀಗಳು ತಮಗೆ ಬಂದ ಅನೇಕ ಪ್ರಶಸ್ತಿ ಸನ್ಮಾನಗಳನ್ನು ನಯವಾಗಿಯೇ ಪಕ್ಕಕ್ಕೆ ಸರಿಸಿದವರು‌. ಆದರೂ ಭಕ್ತರು ಕೇಳುವುದಿಲ್ಲ. ಅವರಿಗೆ ಸಮಾಧಾನವಾಗಲೆಂದು ಅನೇಕಾನೇಕ ಬಿರುಗಳನ್ನು ನೀಡಿ ಅದರಿಂದಲೇ ಕರೆದು ಹರುಷಗೊಳ್ಳುತ್ತಾ ಇದ್ದಾರೆ. ಅದರಲ್ಲಿ "ಶತಮಾನದ ಸಂತ, ನಡೆದಾಡುವ ದೇವರು, ಕಾಯಕ ಯೋಗಿ, ಅಭಿನವ ಬಸವಣ್ಣ, ತ್ರಿವಿಧ ದಾಸೋಹಿ, ವಿಶ್ವ ಚೇತನ ಪ್ರಮುಖವಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ಭಕ್ತರು ಆತ್ಮೀಯವಾಗಿ, ಭಕ್ತಿ-ಗೌರವಾರ್ಥವಾಗಿ " ಬುದ್ಧಿ....ಬುದ್ಧಿ...." ಎಂದೇ ಕರೆಯುತ್ತಿದ್ದರು. ಶ್ರೀಗಳಿಗೂ ಅದು ಇಷ್ಟವಾಗುತ್ತಿತ್ತು.

ಶ್ರೀಮಠದಲ್ಲಿ ಊಟಕ್ಕೂ ಕೊರತೆಯಿದ್ದ ಕಾಲದಲ್ಲಿ ಪೀಠಕ್ಕೆ ಬಂದ ಶ್ರೀ ಗಳು ಇಂದು ಹತ್ತುಸಾವಿರ ಮಕ್ಕಳಿಗೆ ದಿನಂಪ್ರತಿ ಊಟ, ವಸತಿ, ಶಿಕ್ಷಣ ನೀಡುವಷ್ಟರ ಮಟ್ಟಿಗೆ ಮಠವನ್ನು ಮನ್ನಡೆಸಿಕೊಂಡು ಬಂದಿದ್ದಾರೆ. ನಾಳೆ ಹೀಗೆ ಮಾಡಬೇಕು ಎಂದು ಅವರ ಮನಸ್ಸಿನಲ್ಲಿ ಬಂದರೆ ಸಾಕು ಎಂತಹ ಅನಾರೋಗ್ಯವಿದ್ದರೂ ರಾತ್ರಿಯೇ ಆಪ್ತ ವೈದ್ಯರನ್ನು ಕರೆಸಿ ಔಷಧೋಪಚಾರ ಮಾಡಿಸಿಕೊಂಡು ಬೆಳಗಾಗುವುದರಲ್ಲಿ
ಸಿದ್ಧರಾಗುತ್ತಿದ್ದರಂತೆ. ಜಾತಿಬೇಧವಿಲ್ಲದ ಮಠದಲ್ಲಿ ಹಿಂದುಗಳಲ್ಲದೇ ಕ್ರಿಶ್ಚಿಯನ್, ಮುಸ್ಲಿಮ್ ಮಕ್ಕಳು ಆಶ್ರಯ ಪಡೆದಿರುವುದು ಹಾಗೆಯೇ ಸುಲಲಿತವಾಗಿ ಸಂಸ್ಕ್ರತ ಮಂತ್ರ ಸ್ತೋತ್ರ ಪಠಿಸುವುದು ನೋಡಿದರೆ  ಯಾರಿಗಾದರೂ ಅಚ್ಚರಿಯಾಗಲೇ ಬೇಕು. ಎಲ್ಲ ಧರ್ಮದ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ವಿದ್ಯೆಯ ಜೊತೆಗೆ ವಿನಯತೆ, ಶಿಸ್ತು, ಸಂಯಮ, ಕಲಿಸಿ ಪೋಷಣೆಮಾಡುತ್ತಿದ್ದಾರೆ. ಕೃಷಿ ಮತ್ತು ಶಿಕ್ಷಣದಿಂದಷ್ಟೇ ಸಮಾಜದ ಅಭಿವೃದ್ಧಿಯಾಗಲು ಸಾಧ್ಯ ಎಂದು ಸಾರಿ ಸಾರಿ ಹೇಳುತ್ತಿದ್ದರು. ಹಾಗಾಗಿ ಶ್ರೀಗಳು ಸಿದ್ಧಗಂಗಾ ಎಜುಕೇಶನ್ ಸೊಸೈಟಿ ಅಡಿಯಲ್ಲಿ ಈವರೆಗೆ ೧೨೫ ಶಾಲೆ-ಕಾಲೇಜುಗಳನ್ನು ಕಟ್ಟಿ ಬೆಳೆಸಿದ್ದಾರೆ. ಅದರಿಂದಲೇ ಅವರಿಗೆ ತ್ರಿವಿಧ ದಾಸೋಹಿ ಎಂಬ ಬಿರುದು ಬಂದಿರುವುದು. ಈ ಮಹಾಕ್ರಾಂತಿಯ ಹರಿಕಾರ ಶತಾಯುಷಿ ಶ್ರೀಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು.

೧೯೬೪ರಲ್ಲಿ ಶ್ರೀಮಠದಲ್ಲಿ ಆರಂಭಿಸಿದ ಕೃಷಿ ಮತ್ತು ಕೈಗಾರಿಕೆ ವಸ್ತು ಪ್ರದರ್ಶನ ಈಗಲೂ ನಡೆಯುತ್ತಲೇ ಬಂದಿದೆ. ಅಲ್ಲಿ ಪ್ರಮುಖವಾಗಿ ರಾಸುಗಳ ಸಾಕಾಣಿಕೆಗೆ ಒತ್ತು ನೀಡಲೋಸುಗ ರಾಸುಗಳ ಸ್ಪರ್ಧೆ, ರಾಸುಗಳ ಪರಿಷೆ ಗೆದ್ದವರಿಗೆ ದೊಡ್ಡಮೊತ್ತದ ಬಹುಮಾನ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತದೆ. ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಅವರ ಜೀವಿತದ ನೂರಹನ್ನೊಂದು ವರುಷದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯಿಂದ ಹಿಡಿದು ಇಂದಿನ ಪ್ರಧಾನಿ ನರೇಂದ್ರ ಮೋದಿಯವರನ್ನೂ ನೋಡಿದ ಹೆಗ್ಗಳಿಗೆ ಅವರಿಗಿದೆ. ಅಲ್ಲದೇ ಪ್ರತಿಯೊಬ್ಬ ಪ್ರಧಾನಿಗಳು, ರಾಷ್ಟ್ರಪತಿಗಳು ,ಮುಖ್ಯಮಂತ್ರಿಗಳು , ಗಣ್ಯಾತಿಗಣ್ಯರು ಬಂದು ಶ್ರೀಗಳ ಆಶಿರ್ವಾದ ಪಡೆದು ಹೋಗುತ್ತಿದ್ದರು‌.
***

ಅವರಲ್ಲಿನ ಕೆಲವು ವಿಶೇಷತೆಗಳು:-
📌 ಶಿವಕುಮಾರ ಶ್ರೀಗಳು ಇಪ್ಪತೈದು ವರುಷ ತಮ್ಮ ಹುಟ್ಟೂರಿಗೆ ಹೋಗಲೇ ಇರಲಿಲ್ಲ. ಕಾರಣ ಅವರ ತಂದೆಗೆ ಮಗ ಸನ್ಯಾಸಿಯಾಗುವುದು ಇಷ್ಟವಿರಲಿಲ್ಲ. ಆದರೆ , ತನ್ನೊಂದು ಮನೆಯ ಸಂತೋಷಕ್ಕಿಂತ ಲಕ್ಷಾಂತರ ಮನೆಯ ಸಂತೋಷವೇ ನಮಗೆ ಮುಖ್ಯವೆಂದು ಭಾವಿಸಿದ ಗುರುಗಳು ಸನ್ಯಾಸ ಸ್ವೀಕಾರಮಾಡಿದ್ದರು‌.
📌 ಶ್ರೀಗಳು ಧರ್ಮಾಧಿಕಾರ ಸ್ವೀಕಾರ ಮಾಡುವಾಗ ಮಠದ ಆಸ್ತಿ ಕೇವಲ ಮುನ್ನೂರು ರೂಪಾಯಿ, ಹಾಗೂ ಹದಿನಾರು ಎಕರೆ ಜಾಗವಿತ್ತು. ಆದರೆ ಈಗ ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳ ಭವಿಷ್ಯ ಬರೆದು  ಜ್ಞಾನ ಪ್ರಸಾರದ ಮಹಾಕೇಂದ್ರವಾಗಿಸಿದವರು ಶಿವಕುಮಾರ ಸ್ವಾಮಿಗಳು.
📌 ಸಿದ್ಧಗಂಗಾ ಶ್ರೀಗಳು ಕೇವಲ ಮಠದಲ್ಲಿ ಕುಳಿತಿರದೇ ಜನರ ಯೋಗಕ್ಷೇಮ ವಿಚಾರಿಸುತ್ತಲೂ, ಹಳ್ಳಿ ಜನರು ತಂಟೆ ತಕರಾರು ಮಾಡಿಕೊಂಡು ಬಂದು ನ್ಯಾಯ ಒದಗಿಸಲು ಕೇಳಿಕೊಂಡಾಗ ನ್ಯಾಯವನ್ನೂ ನೀಡುತ್ತಿದ್ದರು. ಹಳ್ಳಿಜನರಲ್ಲಿನ ಮೌಢ್ಯತೆ ಕಳೆಯಲು ಅವರು ತುಂಬಾ ಶ್ರಮಿಸಿದ್ದರು. ಗ್ರಾಮಾಂತರ ಪ್ರದೇಶದ ಜನರ ಅನೇಕ ವ್ಯಾಜ್ಯಗಳು ಇಲ್ಲಿ ತೀರ್ಮಾನವಾಗುತ್ತಿದ್ದವು. ಅವರ ಗುರುಗಳಾದ ಉದ್ದಾನ ಶಿವಯೋಗಿಗಳ ವರ್ಚಸ್ಸು ನಿಷ್ಪಕ್ಷಪಾತವಾದ ಬುದ್ಧಿ, ನೇರ ನಿಷ್ಠುರತೆಯ ತೀರ್ಮಾನ ನೀಡಿ ಜಗಳ ಬಿಡಿಸಿ ಮನೆಗೆ ಕಳುಹಿಸಲು ಸುವಿಖ್ಯಾತರಾಗಿದ್ದರು. ಅಂತೆಯೇ ಸುತ್ತಮುತ್ತಲ ಜನರು ತಮ್ಮ ತಮ್ಮ ಸಮಸ್ಯೆ ವ್ಯಾಜ್ಯ ಪರಿಹಾರಕ್ಕೆ ಶ್ರೀಗಳ ಮೊರೆ ಹೋಗುತ್ತಿದ್ದರು. ಶ್ರೀಗಳು ಗೊತ್ತುಪಡಿಸಿದ ದಿನ ಎರಡೂ ಕಡೆಯವರು ಬಂದು ತಮ್ಮ ತಮ್ಮ ಅಹವಾಲುಗಳನ್ನು ಹೇಳಿದ ಮೇಲೆ ಸರಿಯಾಗಿ ಸತ್ಯಪರ ನಿಂತು ನ್ಯಾಯ ಒದಗುಸುವ ಕೆಲಸ ಶ್ರೀಗಳದ್ದಾಗಿತ್ತು. ಅದಕ್ಕೆ ಎರಡು ಮಾತನಾಡದೇ ಎರಡೂ ಕಡೆಯವರು ಒಪ್ಪುತ್ತಾ ಇದ್ದರು ಕೂಡ‌.
📌ಕುದುರೆ ಸವಾರಿ ಶ್ರೀಗಳು ಬಲ್ಲವರಾಗಿದ್ದರು. ಆಗಿನ ಕಾಲದಲ್ಲಿ ತಮ್ಮ ಕುದುರೆಯ ಮೇಲೆರಿ ಜನರ ಮನೆಮನೆಗೆ ತೆರಳಿ ಅಹವಾಲನ್ನು ಕೇಳುತ್ತಿದ್ದರು‌.
📌 ಅವರು ಉತ್ತಮ ಓದುಗಾರರೂ ಹೌದು. ದಿನಪತ್ರಿಕೆಯನ್ನು ಪ್ರತಿದಿನ ಓದಿ ವಿದೇಶದಲ್ಲಿ ನಡೆಯುವ ವಿದ್ಯಮಾನಗಳ ಬಗೆಗೂ ಮಾಹಿತಿ ಕಲೆಹಾಕುತ್ತಿದ್ದರು. ಇಳಿವಯಸ್ಸಿನಲ್ಲೂ ಕನ್ನಡಕ ಹಾಕಿಕೊಳ್ಳದೇ ದಿನಪತ್ರಿಕೆಯ ಓದುತ್ತಿದುದು ಅವರ ಉತ್ತಮ ಆರೋಗ್ಯಕ್ಕೆ ಹಿಡಿದ ಕನ್ನಡಿ. ಅದರ ಬಗ್ಗೆ ಎಲ್ಲರಿಗೂ ಅಚ್ಚರಿಯಾಗುತ್ತಿತ್ತು.
📌 ಅಸೌಖ್ಯಕ್ಕೆ ತುತ್ತಾಗುವ ಮೊದಲು ಶ್ರೀಗಳು ಪೂಜೆ, ಜಪತಪ, ಭಕ್ತರಿಗೆ ದರುಶನ, ಸೇರಿ ದಿನದ ೧೮ಗಂಟೆ ಚಟುವಟಿಕೆಯಿಂದ ಇರುತ್ತಿದ್ದರು.
📌 ಇವರು ಮತದಾನ ಮಾಡುವುದನ್ನು ಎಂದಿಗೂ ಮರೆಯುತ್ತಿರಲಿಲ್ಲ.
📌  ಸಿದ್ಧಗಂಗಾ ಶ್ರೀಗಳು ಉತ್ತಮ ಬರಹಗಾರರು ಹೌದು‌. ಇದಕ್ಕೆ ನಿದರ್ಶನವೆಂಬಂತೆ "ಸಿದ್ಧಗಂಗಾ" ಮಾಸಪತ್ರಿಕೆ, ಅವರ ಪ್ರವಚನಗಳನ್ನು ಒಳಗೊಂಡ "ಶ್ರೀವಾಣಿ" ಸಾಹಿತ್ಯ ಕೃತಿಯು, ಮೂರುಸಾವಿರ ಮಠದ ಬಗ್ಗೆ ಬರೆದ ಪುಸ್ತಕವನ್ನು ನಾವು ಕಾಣಬಹುದಾಗಿದೆ‌.
📌 ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿದ ಇವರ ಶಿಷ್ಯರು ಈಗ ಉನ್ನತ ಹುದ್ದೆಗಳಲ್ಲಿ ಸೇವೆ ಮಾಡುತ್ತಾ ಶ್ರೀಗಳು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿಯೇ ಜೀವನ ನಡೆಸುತ್ತಿರುವುದನ್ನು ನಾವು ಕಾಣಬಹುದಾಗಿದೆ.
📌 ನಮ್ಮಲ್ಲಿ ಒಂದೊಂದು ಜಾತಿಗೆ ಒಂದೊಂದು ಧರ್ಮಕ್ಕೆ ಗುರುಗಳನ್ನು ನಾವು ಕಾಣಬಹುದಾಗಿದೆ. ಆದರೆ ಇವರು ಜಾತಿ,ಧರ್ಮದ ಹಂಗು ತೊಡೆದುಹಾಕಿ, ಎಲ್ಲರನ್ನೂ ಒಟ್ಟುಗೂಡಿಸಿ, ಧರ್ಮಮಾರ್ಗವನ್ನೂ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಲು ಬಂದ ಅವತಾರಪುರುಷರು‌. ಹಾಗಾಗಿಯೇ ಇವರು ಧರ್ಮಯೋಗಿ, ಕರ್ಮಯೋಗಿ , ಅಭಿನವ ಬಸವಣ್ಣನೆಂದು ಸುವಿಖ್ಯಾತಿ ಪಡೆದವರು.
📌 ಶ್ರೀಗಳು ಉತ್ತಮ ವಾಗ್ಮಿಗಳು ಹೌದು. ಅವರ ಪ್ರವಚನ ಕೇಳಲು ಶಾಲೆಯ ಮಕ್ಕಳಲ್ಲದೇ ಸಾವಿರಾರು ಭಕ್ತಾದಿಗಳು ಸಂಜೆ ಸೇರುತ್ತಿದ್ದರು‌.
***


ಹಾಗಾಗಿ ಕೇವಲ ಮಠದಲ್ಲಿ ಕೂರದೇ ಜನಮಾನಸದಲ್ಲಿ ಬೇರೂರಲು ಸಾಧ್ಯವಾಯಿತು. ಕೇವಲ ಪರರಿಗಾಗಿಯೇ ಜನ್ಮ ಸವೆಸಿದ ,ಸೇವೆಮಾಡಿದ ಯೋಗಿಗಳು ಶ್ರೀ ಶಿವಕುಮಾರ ಸ್ವಾಮಿಗಳು. ಬದುಕಲು ಕೇವಲ ಹೊಟ್ಟೆಗೆ ಊಟವಿದ್ದರೆ ಸಾಲದು , ವಿದ್ಯೆಯೂ ಪ್ರತಿಯೊಬ್ಬ ಮನುಷ್ಯನಿಗೂ ಬೇಕು. ಜ್ಞಾನ ಸಂಪತ್ತು ಎಲ್ಲಕ್ಕಿಂತ ಶ್ರೇಷ್ಠವಾದುದು ಎಂಬ ಸತ್ಯ ಅರಿತಿರುವುದರಿಂದಲೇ, ಅವರ ನೇತೃತ್ವದಲ್ಲಿ ೧೨೫ ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಂಡವು. ಆದ್ದರಿಂದಲೇ ತುಮಕೂರಿನ ಸಿದ್ಧಗಂಗಾ ಮಠವನ್ನು ವಿಶ್ವವೇ ತಲೆ ಎತ್ತಿ ನೋಡುವಂತಾಯಿತು. ಇಂತಹ ಅವತಾರಪುರುಷನಿಗೆ "ಭಾರತ ರತ್ನ" ಪ್ರಶಸ್ತಿ ನೀಡಬೇಕೆಂದು ಸರ್ಕಾರಕ್ಕೆ ಸಾಕಷ್ಟು ಬೇಡಿಕೆ ಇಟ್ಟರೂ ಅವರು ಬದುಕಿರುವಾಗ ದೊರಕಲಿಲ್ಲ. ಇನ್ನಾದರೂ ಅದರ ಕಡೆಗೆ ಗಮನ ಹರಿಸಿದರೆ ಭಕ್ತಾದಿಗಳಿಗೆ ಮನಃತೋಷವಾಗುತ್ತದೆ.
***
ಕೊನೆಯದಾಗಿ:-
ಅವರು ಲಿಂಗೈಕ್ಯರಾದ ಕಹಿಸತ್ಯ ಜನಮಾನಸಕ್ಕೆ ಇನ್ನೂ ಅರಗಿಸಿಕೊಳ್ಳು ಸಾಧ್ಯವಾಗುತ್ತಲೇ ಇಲ್ಲ. ವಿಷಯ ಕಾಡ್ಗಿಚ್ಚಿನಂತೆ ಹರಿದಾಗ ಜನರು ತಮ್ಮ ಪ್ರೀತಿಯ ಬುದ್ಧಿಯನ್ನು ನೋಡಲು ಓಡೋಡಿ ಬರಲು ಪ್ರಾರಂಭಿಸಿದರು. ಬಿಕ್ಕುತಾ ಕಣ್ಣೀರು ಹಾಕಿ ಮಠದ ಕಡೆಗೆ ಓಡೋಡಿ ಬಂದರು. ಮಠದ ಆವರಣವು ೧೫ಲಕ್ಷ ಜನರಿಂದ ತುಂಬಿಹೋಗಿ ಜನಪ್ರವಾಹವಾಯಿತು. ಅವರ ಅಂತಿಮ ದರುಶನಕ್ಕಾಗಿ ವಿಶೇಷವಾಗಿ ರೈಲುಗಳು, ಬಸ್ಸುಗಳ ವ್ಯವಸ್ಥೆಯೂ ಮಾಡಲಾಯಿತು.ವಿವಿಧ ಕಡೆಯಿಂದ ಬರುವ ರೈಲುಗಳಿಗೂ ತುಮಕೂರಿನಲ್ಲಿ ನಿಲುಗಡೆಗೆ ಅವಕಾಶ ಕೊಡಲಾಯಿತು.  ಅವರು ಹಾಕಿಕೊಟ್ಟ ಆದರ್ಶ, ಅವರು ಮಾಡುತ್ತಿದ್ದ ಪ್ರವಚನಗಳು, ವಿದ್ಯಾಸಂಸ್ಥೆಗಳು, ಅಲ್ಲಿನ ಮಕ್ಕಳು ದೇಶವಿದೇಶದಲ್ಲಿ ಹೆಸರು ಕೀರ್ತಿ ತಂದು ಶ್ರೀಗಳನ್ನು ಅಮರರನ್ನಾಗಿಸುತ್ತಾರೆ ಎಂಬುದಕ್ಕೆ ಎರಡು ಮಾತಿಲ್ಲ. ಲಕ್ಷಾಂತರ ಜನರು ಜನಸಾಗರವಾಗಿ ಬಂದು ಶ್ರೀಗಳ ಪಾರ್ಥಿವ ಶರೀರವನ್ನು ಕೊನೆಯದಾಗಿ ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದರು. ಅನೇಕಾನೇಕ ಗಣ್ಯರು ಆಗಮಿಸ ಅಂತಿಮ ನಮನ ಸಲ್ಲಿದ್ದರು. ಅದ್ಭುತವೆಂದರೆ, ತಮ್ಮ ಕೊನೆಯ ಉಸಿರಿರುವಾಗಲೂ , "ನಾನು ಯಾವಾಗಲಾದರೂ ತೆರಳಬಹುದು ಆದರೆ ಮಕ್ಕಳಿಗೆ ಮಧ್ಯಾಹ್ನದ ಅನ್ನದಾಸೋಹ ಆಗುವವರೆಗೂ ವಿಷಯ ಹೊರ ತಿಳಿಸಬೇಡಿ..." ಅಂದಿದ್ದರಂತೆ. ಅದಕ್ಕಿಂತ ಮೊದಲು ಚೆನೈನಲ್ಲಿ ವಿಶೇಷ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾಗ "ನನಗೇನು ಆಗಲಿಲ್ಲ, ನನ್ನನ್ನು ವಾಪಾಸು ಹಳೆಯ ಮಠಕ್ಕೆ  ಕಳುಹಿಸಿ ಎಂದು ಮಕ್ಕಳಂತೆ ಹಠಹಿಡಿದಿದ್ದರಂತೆ..." ಡಿಸೆಂಬರ್ ನಿಂದ ಅವರಿಗೆ ಆರೋಗ್ಯ ಆಗಾಗ ಹದಗೆಡುತ್ತಲೆ ಇತ್ತು.  ಉತ್ತರಾಯಣ ಪುಣ್ಯಕಾಲದ ವೆರೆಗು ಕಾದು ಶಿವನಿಗೆ ಪ್ರಿಯವಾದ ಸೋಮವಾರದಂದು ಹುಣ್ಣಿಮೆಯ ದಿನ ಗ್ರಹಣದ ಮುಕ್ತಾಯವಾದ ಮೇಲೆ ತಮ್ಮ ಕೊನೆಯುಸಿರೆಳೆದರು ಇಚ್ಛಾಮರಣೀ ಶಿವಯೋಗಿ,  ಸಿದ್ಧಗಂಗಾ ಮಠದ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು. ಮಠದಲ್ಲಿಯೇ ನಿರ್ಮಿಸಲಾಗಿರುವ ಗದ್ದುಗೆಯೊಳಗೆ ಕುಳಿತ ಭಂಗಿಯಲ್ಲಿ ಶ್ರೀಗಳ ಕ್ರಿಯಾ ವಿಧಿವಿಧಾನಗಳು ಮಂಗಳವಾರ ಸಂಜೆ ೪.೩೦ ರ ಮೇಲೆ (೨೨-೦೧-೨೦೧೯) ಸಕಲ ಸರ್ಕಾರಿ ಗೌರವದೊಂದಿಗೆ ಶೈವ ಸಂಪ್ರದಾಯದಂತೆ ನಡೆಸಲಾಯಿತು. ಲಕ್ಷಾಂತರ ಜನರು , ಗಣ್ಯರು ಭಾವಪೂರ್ಣ ವಿದಾಯವನ್ನು ಹೇಳಿದರು. "ಓಂ ನಮಃ ಶಿವಾಯ" ಪಂಚಾಕ್ಷರಿ ಮಂತ್ರಘೋಷ ನೆರದಿದ್ದ ಭಕ್ತಾದಿಗಳಿಂದ ಮನದಿಂದ ಹೊಮ್ಮಿ ಆಗಸವ ತಲುಪಿತು. ಪವಿತ್ರಭೂಮಿ ತುಮಕೂರಿನ ಸಿದ್ಧಗಂಗಾ ಮಠವು ಇದೆಲ್ಲದಕ್ಕೂ ಮೂಕಸಾಕ್ಷಿಯಾಯಿತು.
***

ಇನ್ನು ಮುಂದೆ ಸಿದ್ಧಲಿಂಗ ಶ್ರೀಗಳ ಸಾರಥ್ಯ:-
ಶ್ರೀ ಶಿವಕುಮಾರ ಸ್ವಾಮೀಜಿಗಳು ತಮ್ಮ ಕಿರಿಯ ಶ್ರೀಗಳಾದ ಶ್ರೀ ಸಿದ್ಧಲಿಂಗಾ ಸ್ವಾಮೀಜಿಯವರಿಗೆ ೧೯೮೮ ರಲ್ಲಿ ಉತ್ತರಾಧಿಕಾರದ ಪಟ್ಟ ನೀಡಿದ್ದರು. ತದನಂತರ ತಮ್ಮ ಆರೋಗ್ಯ ಹದಗೆಡುತ್ತ ಬಂದ ಕಾರಣ ೨೦೧೧ ರಲ್ಲಿಯೇ ಶ್ರೀಗಳು ಸಂಪೂರ್ಣ ಅಧಿಕಾರವನ್ನು, ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದ್ದರು.  ಅಲ್ಲದೇ ಶ್ರೀಗಳು ಜೊತೆಗೇ ನಿಂತು ಅವರ ಮಾಹಿತಿ-ಮಾರ್ಗದರ್ಶನದ ಮೇರೆಗೆ ಕಾರ್ಯಗಳೆಲ್ಲವೂ ಇಲ್ಲಿಯ ತನಕ ಸಾಗುತ್ತಾ ಬಂದಿದೆ. ಶಿವಕುಮಾರ ಸ್ವಾಮಿಗಳ ಅಂತಿಮ ಕ್ರಿಯಾ ವಿಧಿಯ ವೇಳೆ ಪೀಠಾಧಿಕಾರದ ಕುರುಹಾಗಿ ಪೇಟ ಹಸ್ತಾಂತರಿಸಲಾಯಿತು. ಇನ್ನು ಮುಂದೆಯೂ ಕೂಡ ಮಠದ ಸರ್ವತೋಮುಖ ಏಳಿಗೆಗೆ ಕಾಯಾ-ವಾಚಾ-ಮನಸಾ ಸೇವೆ ಮಾಡುವ ಪಣತೊಟ್ಟಿದ್ದಾರೆ‌. ಈಗಾಗಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

!! ಓಂ ನಮಃ ಶಿವಾಯ !!

ಲೇಖನ ಬರೆದವರು : ಸಿಂಧು ಭಾರ್ಗವ್.ಬೆಂಗಳೂರು

Kannadasong_nee kaanuve

ಹಾಡು : ನೀ ಕಾಣುವೆ

ಕಂಡ ವಸ್ತುಗಳಲ್ಲೆಲ್ಲ ನೀ ಕಾಣುವೆ ಹೌಹಾರಿ ದಂಗಾಗಿ ನಾ ಕೂರುವೆ

ನಡೆಯುವ ಹಾದಿಯಲಿ ನೆರಳಾಗಿ ನೀ
ಬೀಸುವ ಗಾಳಿಯಲಿ ಮುದವಾಗಿ ನೀ
ಅರಳಿದ ಹೂವಿನಲಿ ಕಂಪಾಗಿ ನೀ
ದುಂಬಿಯ ನಾದದಲಿ ಸೊಂಪಾಗಿ ನೀ
ಕಂಡ ವಸ್ತುಗಳಲ್ಲೆಲ್ಲ ನೀ ಕಾಣುವೆ ಹೌಹಾರಿ ದಂಗಾಗಿ ನಾ ಕೂರುವೆ!

ಹರಿವ ನದಿಯಲಿ ನೊರೆಯಾಗಿ ನೀ
ಚಲಿಪ ಮೋಡದಲಿ ಮಳೆಹನಿಯಾಗಿ ನೀ
ಈಜುವ ಮೀನಿಗೆ ರೆಕ್ಕೆಗಳಾಗಿ ನೀ
ಸುರಿಯುವ ಮಳೆಯಲಿ ಕುಣಿವ ಮಗುವಾಗಿ ನೀ
ಕಂಡ ವಸ್ತುಗಳಲ್ಲೆಲ್ಲ ನೀ ಕಾಣುವೆ ಹೌಹಾರಿ ದಂಗಾಗಿ ನಾ ಕೂರುವೆ!

ಕನ್ನಡಿ ಎದುರಲಿ ನೀನೇ ನಿಂತಿರುವೆ
ನನ್ನ ಬಿಂಬವನೇ ಮರೆಯಾಗಿಸುವೆ
ಸೀರೆ ನೆರಿಗೆ ತೆಗೆಯಲು ನೀ ಬರುವೆ
ಕಳಗುಳಿ ಇಡುತ ಮಾಯವಾಗುವೆ
ಭ್ರಮೆಯೋ, ಮರುಳೋ ಒಂದೂ ಅರಿಯದು
ಹರೆಯದ ಅಮಲಿನಲಿ ಎಲ್ಲ ನಡೆವುದು
ಕಂಡ ವಸ್ತುಗಳಲ್ಲೆಲ್ಲ ನೀ ಕಾಣುವೆ ಹೌಹಾರಿ ದಂಗಾಗಿ ನಾ ಕೂರುವೆ!

ಸಿಂಧು ಭಾರ್ಗವ್.