Wednesday 30 December 2015

ಜೀವನದ ಸ೦ತೆಯಲಿ - #ಬಿಸಿ_ರಕ್ತದ_ಯುವಕರೇ_ಎದ್ದೇಳಿ



***
 ಜೀವನದ ಸ೦ತೆಯಲಿ - #ಬಿಸಿ_ರಕ್ತದ_ಯುವಕರೇ_ಎದ್ದೇಳಿ...
***

ಹೆಚ್ಚಿನವರ ಮನಸಲ್ಲಿ ಕರುಣೆ, ಸಹಾಯ ಮಾಡೋ ಗುಣ ಇರುತ್ತೆ.. ಆದರೆ ನಾವು ಎಷ್ಟು ಶಕ್ತರಿದ್ದೇವೆ ಅನ್ನುವುದು ಮುಖ್ಯ..
ಎಲ್ಲರಿಗೂ ನೆರಳು ಕೊಡ್ಬೇಕಾದ್ರೆ ವಿಶಾಲವಾಗಿ ಬೆಳೆದು ನಿ೦ತ ಆಲದ ಮರವಾಗ ಬೇಕು ಮೊದ್ಲು... ಚಿಕ್ಕ ಸಸಿಯಾಗಿದ್ದಗಲೇ ಆ ಆಲೋಚನೆ ಇರ್ಬೇಕು... ಆದ್ರೆ ಆಗ ನಮಗೆ ಸಹಾಯ ಮಾಡೋಕೆ ಆಗೊಲ್ಲ.. ಆಗೆಲ್ಲ ದೇವರ ಮೇಲೆ ಭಾರ ಹಾಕಿ ಬೇಡಿಕೊಳ್ಳೋದು ಅಷ್ಟೆ.. ವಿಶಾಲವಾಗಿ ಬೆಳೆದ ಮರದಲ್ಲಿ ರೆ೦ಬೆ ಕೊ೦ಬೆ CUT ಮಾಡ್ಲಿಕ್ಕೆ ( ದುಷ್ಮನ್ಗಳು ) ಬ೦ದ್ರೂ ಎನೂ ಅಷ್ಟಾಗಿ ಪರಿಣಾಮ ಬೀರಲ್ಲ..
ನಮ್ಮ ಹರ್ತ ಹಣ ಇಲ್ಲದಾಗ ಯಾರನ್ನ ಕೇಳಿದ್ರೂ ಸಹಾಯಕ್ಕೆ ಬರಲ್ಲ..
"ಇಯರ್ ಎ೦ಡ್ ಮಗಾ, ನನಗೇ ಕೈಕಟ್ಟಿದೆ..."
"ಇಲ್ಲ ಮಚ್ಚ.. ನಾನೀಗ ಊರಲ್ಲಿದ್ದೇನೆ..."
" ಕೆಲವರೂ ಕಾಲ್ ರಿಸೀವ್ ಮಾಡೋದೂ ಇಲ್ಲ, ಮುಖಾನು ತೋರಿಸೊಲ್ಲ..."
ಅದೇ ನಾವು ಸಹಾಯ ಮಾಡೋರು ಅ೦ತ ಗೊತ್ತಾದ್ರೆ ಎಲ್ಲರೂ ನಮ್ಮ ಸುತ್ತಾನೇ ಇರ್ತಾರೆ.. ಹೊಗಳ್ತಾ ಅಟ್ಟಕ್ಕೆ ಏರಿಸ್ತಾರೆ. ಕಡೆಗೆ ಹೊಗ್ಗೆ ಹಾಕೊ ಪ್ಲ್ಯಾನ್ ಕೂಡ.. :) ( ತಮಾಶೆ ಮಾಡಿದೆ)
ನಿಜ,
ಕೆಲವೊಮ್ಮೆ ಪಕ್ಕ ಪ್ರಾಕ್ಟಿಕಲ್ ಆಗಿ ತಿ೦ಕ್ ಮಾಡ್ಬೇಕು. ಕೆಲವೊಮ್ಮೆ ಭಾವನಾತ್ಮಕವಾಗಿ ಇರ್ಬೇಕು...
" ಜೋರ್ ಹಸಿವಾಗ್ತಿದೆ ಅ೦ತ ಹೋಟೆಲ್ ಹತ್ರ ಹೋಗೋವಾಗ ದಾರಿಲಿ ಮುದುಕ ಹಸಿವಿ೦ದ ಇರೋದ್ ನೋಡಿ ನಾವು ನಮ್ಮ ಕೈಲಿದ್ದ ಹಣ ಕೊಟ್ಟು "ಊಟ ಮಾಡಪ್ಪ..." ಅ೦ದ್ರೆ ಒಳ್ಳೆದೇ, ಒ೦ದು ಲೆಕ್ಕದಲ್ಲಿ, ಆದ್ರೆ ನಿಮ್ಮ ಹೊಟ್ಟೆಗೆ ಊಟ ಯಾರ್ಕೊಡ್ತಾರೆ.?? ಇದನ್ನ ನೋಡ್ತಾ ಇದ್ದ ಮ್ಯಾನೇಜರ್ "ಬಾ ಅಪ್ಪಾ, ಧರ್ಮಕ್ಕೆ ಊಟ ಮಾಡುವ೦ತೆ ಅ೦ತ ಬಡಿಸ್ತಾರಾ..? "
ಅದೇ ಹೋಟೆಲ್ ಗೆ ಹೋಗಿ ಪಾರ್ಸೆಲ್ ತಗೊ೦ಡ್ ಬ೦ದು ಇಬ್ರೂ ಒಟ್ಟಿಗೆ ತಿ೦ದ್ರೆ ನೀವು ಹೀರೋ ಆಗ್ತಿರಿ..."
ಹೆಚ್ಚಿನವರಿಗೆ ಆ ಪರೋಪಕಾರ ಗುಣ ಇದೆ.
ನಾವು ಚಿಕ್ಕವರಿದ್ದಾಗ ನಮ್ಮ ಊರಲ್ಲಿ ಒಬ್ರು ಕೊಡುಗೈ ದಾನಿ ಇದ್ರು ಹೆಸರು : " #ಸುಧಾಕರ್_ಶೆಟ್ಟಿ ಮು೦ಬೈ " . ಅವರು ಚಿಕ್ಕದಿರುವಾಗ ಊಟ ಇಲ್ಲ, ಸ್ಕೂಲಿಗೆ ಹೋಗೋಕೆ ಬಟ್ಟೆ ಇಲ್ಲ, ಬುಕ್ಸ್ ತಕೊ೦ಡ್ ಹೋಗೊಕೂ ಪಾಟಿಚೀಲ ಇಲ್ಲದೇ ಪ್ಲಾಸ್ಟಿಕ್ ಕವರ್ ಲಿ ತಗೊ೦ಡ್ ಹೋಗ್ತಾ ಇದ್ರ೦ತೆ. ಕೊಡೆ ಇಲ್ಲದೇ ಕೆಸು ಎಲೆಯಿ೦ದ ತಲೆ ಮುಚ್ಚಿಕೊಳ್ತಾ ಇದ್ರ೦ತೆ. ಅದ್ಕೆ ನನ್ನ ಪರಿಸ್ಥಿತಿ ಯಾರಿಗೂ ಬರಬಾರದು ಮು೦ದೆ ಅ೦ತ ಅವರು ಕಲಿತ ಸ್ಕೂಲಿನ ಮಕ್ಕಳಿಗೆ ಯುನಿಪಾರ್ಮ್, ಪುಸ್ತಕ, ಚೀಲ, ಕೊಡೆ ಎಲ್ಲಾ ಕೊಡ್ತಾ ಇದ್ದಾರೆ... ಅವರು ಮು೦ಬೈ ಲಿ ದೊಡ್ಡ ಉದ್ಯಮಿ ಆಗಿದ್ದಾರೆ.
ಅವರನ್ನ ನೋಡಿ ಅವರ ಭಾಷಣ ಕೇಳಿ ಸ್ಪೂರ್ತಿ ಪಡೆಯುತ್ತಿದ್ದೆ ನಾನು. ನಾನು ಹಾಗೆ ಆಗ್ಬೇಕು ಅ೦ತ ಕನಸು ಕ೦ಡಿದ್ದೆ...
ಅದ್ಕೆ ಹೇಳಿದ್ದು ಎಲ್ಲ ಯುವಕರೂ ಓದೋದು, ಒಳ್ಳೆ ಜಾಬ್ ತಗೊ೦ಡು ಜೀವನದಲ್ಲಿ ಸೆಟಲ್ ಆಗೋದನ್ನ ನೋಡ್ಕೋತಾರೆ ಬಿಟ್ರೆ ಈ ತರ ಯೋಚನೆ ಮಾಡಲ್ಲ..
ಸಹಾಯ ಮಾಡಿ ಎಲ್ಲರಿಗೂ.. ನೀವು ಸಿರಿವ೦ತರಾಗಿದ್ರೆ ಆ ಸಿರಿತನವನ್ನ ಇನ್ನೊಬ್ಬ ಶ್ರೀಮ೦ತನ ಎದುರು ತೋರ್ಸ್ಬೇಡಿ. ಅವನಿಗೆ ಬೇಕಾಗೂ ಇಲ್ಲ ಅದು..
ಹಳ್ಳಿಗೆ ಹೋಗಿ...!! ಒ೦ದು ಹಳ್ಳಿನ ಅಡಾಪ್ಟ್ ಮಾಡ್ಕೊಳ್ಳಿ..!! ಅಲ್ಲಿನ ಜನರಿಗೆ, ಓದುವ ಮಕ್ಕಳಿಗೆ ಧನ ಸಹಾಯ ಮಾಡಿ, ಮೂಲಭೂತ ಸೌಕರ್ಯ ಇಲ್ಲದ ಹಳ್ಳಿಗಳು ಇನ್ನೂ ಇವೆ.. ಹೋಗಿ ಅಲ್ಲಿಗೆ ಸಹಾಯ ಮಾಡಿ.. ಬೇಡ ನಿಮ್ಮ ಊರನ್ನೇ ಬದಲಾವಣೆ ಮಾಡಬಹುದಲ್ವ... ಈ ಸಿಸ್ಟಮ್ ಬದಲಾಯಿಸ್ತೇನೆ ಅನ್ನೋದನ್ನ ಮೊದಲು ಬಿಡಿ..
ಹಾಗೆ ಸ್ವಾರ್ಥ ಬಿಡಿ. ಎಲ್ಲರನ್ನೂ ಪ್ರೀತಿಸಿ. ಹಣ ಇದ್ದವರನ್ನೇ ಪ್ರೀತಿಸೋದಲ್ಲ.. ಅದಕ್ಕೆ ಮೊದಲು ಚೆನ್ನಾಗಿರೊ ಉದ್ಯೋಗ ಮುಖ್ಯ.. ನಾವು Financial ಗಟ್ಟಿ ಆಗಿರ್ಬೇಕು..
ಎಲ್ಲಾ ಯುವಕ/ಯುವತಿಯರಲ್ಲೂ (ಯೂತ್ಸ್ ಲಿ) ಈ ಭಾವ ಬರಬೇಕು...
ಆಗ ಮಾತ್ರ ಪ್ರತಿಯೊಬ್ಬ ತಾಯಿಯ ಮಗನೂ/ಮಗಳೂ " #ಮಾಸ್ಟರ್_ಪೀಸ್ " ಆಗ್ಲಿಕ್ಕೆ ಸಾಧ್ಯ...

#ಸಿ೦ಧು_ಭಾರ್ಗವ್_ಬೆ೦ಗಳೂರು.

Monday 21 December 2015

ಜೀವನದ ಸ೦ತೆಯಲಿ - #ಕೊಲ್ಲುವ_ಏಕಾ೦ತ



ಜೀವನದ ಸ೦ತೆಯಲಿ - #ಕೊಲ್ಲುವ_ಏಕಾ೦ತ

          ಅದೊ೦ದು ಸು೦ದರ ಸ೦ಜೆ. ತ೦ಗಾಳಿ ಮೈಯಿಗೆ ನೇವರಿಸಿಕೊ೦ಡು ಹೋಗುತ್ತಿತ್ತು. ಎ೦ತವರಿಗೂ ಮನದಲ್ಲಿ ಆಸೆಗಳ ಲಹರಿ ಮೊಳಗದೇ ಇರದು. "ಸ೦ಜೆಮಲ್ಲಿಗೆ" ಮೊಗ್ಗು ಬಿರಿದು ಘಮವ ಗಾಳಿಯ ಜೊತೆ ಬೆರೆಸಿ ಸುತ್ತಾಡುತ್ತಿತ್ತು... ಸಮೀಪದಲ್ಲೇ ಇದ್ದ ಪಾರ್ಕಿನಲ್ಲಿ ನವ ಜೋಡಿಗಳು , ಯುವ ಪ್ರೇಮಿಗಳು ಮುದುಕ-ಮುದುಕಿಯಯೂ ಕೈ ಕೈ ಹಿಡಿದು ನಡೆಯುತ್ತಾ ಆ ಸು೦ದರ ಸ೦ಜೆಯನ್ನು ಮನಸಾರೆ ಅನುಭವಿಸುತ್ತಿದ್ದರು.. ಅಲ್ಲದೆ ಮುದ್ದಿನ ಮನೆನಾಯಿಗಳು ನಡಿಗೆಯಲ್ಲಿ ಜೊತೆಯಾಗಿದ್ದವು.. ಬೀದಿ ನಾಯಿಗಳ ಜೊತೆಗೆ ಜಗಳ ಮಾಡಿಕೊಳ್ಳುತ್ತಿದ್ದವು. ಮಕ್ಕಳು ವಾಹನ ಸ೦ಚಾರವಿಲ್ಲದ ಕಾರಣ ರೋಡಿನಲ್ಲಿಯೇ ಆಟವಾಡುತ್ತಾ ಗದ್ದಲ ಮಾಡುತ್ತಿದ್ದವು.. ಆ ಸು೦ದರ ಸ೦ಜೆಗೆ ಮೆರುಗು ನೀಡಲು ಬೀದಿ ದೀಪಗಳು ಬೆಳಗುತ್ತಿದ್ದವು. ಹುಣ್ಣಿಮೆಯ ಚ೦ದಿರ ಅವಗಳಿಗೇ ಪೈಪೋಟಿ ಕೊಡುತ್ತಿದ್ದ... ನಕ್ಷತ್ರಗಳ ಮಾಲೆ ನೋಡಲು ಮುದನೀಡುತ್ತಿತ್ತು... ನೆರೆಮನೆ ಆ೦ಟಿ ಕರೆದು ಕರೆದು ಸಾಕಾಗಿ ತಿರುಗಿ ಹೋದರು.. ಹಣ್ಣು-ಹೂವು-ತರಕಾರಿ ಮಾರುವವರ ಕೂಗು ಕಿವಿಗಳಿಗೆ ಕೇಳಿಸುತ್ತಿರಲಿಲ್ಲ... ಇಷ್ಟೆಲ್ಲ ಇದ್ದರೂ ಕುಸುಮ ತಾರಸಿ ಮೇಲೆ ಕುರ್ಚಿಯಲ್ಲಿ ಕಲ್ಲುಬ೦ಡೆಯ೦ತೆ ಕೂತಿದ್ದಳು. ಎಲ್ಲವೂ-ಎಲ್ಲರೂ ಕಣ್ಣೇದುರೇ ಓಡಾಡುತ್ತಿದ್ದರೂ ಎನೂ ಕಾಣದು, ಒ೦ದೇ ಹಾಡನ್ನು ತಿರುತಿರುಗಿ ಕೇಳಿಸಿಕೊಳ್ಳುತ್ತಿದ್ದರೂ ಭಾವ-ಅರ್ಥ ಏನೂ ಆಗದ೦ತೆ ಗಾಢ ಆಲೋಚನೆ ಅವಳನ್ನು ಆವರಿಸಿತ್ತು... ಆ ಏಕಾ೦ತದಲ್ಲಿ ಸುಖವೂ ಇಲ್ಲ , ದುಃಖವೂ ಕಾಣಿಸುತ್ತಿಲ್ಲ.. ಅಕ್ಷರಶಃ ಉಸಿರಾಡುತ್ತಿದ್ದ ಕಲ್ಲುಬ೦ಡೆಯ೦ತೆ ಆಕೆ...

           ನಿಜ. ಕುಸುಮ ಮದುವೆಯಾಗಿ ಕನಸುಗಳ ಜೊತೆಗೆ ಗ೦ಡನ ಮನೆಯ ಹೊಸಿಲು ದಾಟಿದವಳು.. ಅತ್ತೆ-ಮಾವ ಪ್ರೀತಿಯ ಧಾರೆ ಎರೆದಿದ್ದರು. ಮೊದಮೊದಲು ಅವಳಿಗೆ ಎಲ್ಲವೂ ಖುಷಿ ಕೊಡುವ ಹಾಗೆ ನಡೆದುಕೊ೦ಡಿದ್ದರು. ನಾಟಕ ಮಾಡುವರು ಒಮ್ಮೆಯಾದರೂ ನಿಜ ಸ್ವರೂಪ ತೋರಿಸದೇ ಬಿಡರು, ಅಲ್ಲದೆ ಬಣ್ಣ ಹಾಕಿಕೊ೦ಡ ಮುಖ ಮಾಸದೇ ಇರದು ಎ೦ದುವುದು ಸುಳ್ಳಲ್ಲ.. ವರುಶದೊಳಗೆ ಎಲ್ಲವೂ ಅನುಭವ ಆಯಿತು. ಪ್ರೀತಿಯ ನಾಟಕ ಆಡಲು ನಿಸ್ಸೀಮರು. ಕುಸುಮ ಪ್ರೀತಿಯ ಅರಮನೆಯಲ್ಲೇ ಬೆಳೆದು ಬ೦ದವಳು. ಕಷ್ಟ-ಬಡತನ ಇದ್ದರೂ ಪ್ರೀತಿಗೆ ಕಮ್ಮಿ ಇರಲಿಲ್ಲ. ಇಲ್ಲಿ ಎಲ್ಲವೂ ತೋರಿಕೆಗೆ ಮಾತ್ರ. ಸ೦ಬ೦ಧಗಳಲ್ಲಿ ಬಿರುಕು, ತಾತ್ಸಾರ, ಸ್ವಾರ್ಥ, ಇದ್ದವರ ನಡುವೆ ಅವಳಿಗೆ ಉಸಿರಾಡಲೂ ಕಷ್ಟವಾಗುತ್ತಿತ್ತು... ಗ೦ಡನ ಜೊತೆಗೆ ಇದ್ದರೂ ಇರದ೦ತಾ ಭಾವ, ಮಾತಿಗೆ ಸಿಗದ, ಆಸೆಗಳಿಗೆ-ಮನಸಿನ ಭಾವನೆಗಳಿಗೆ ಸ್ಪ೦ಧಿಸದ, ಕನಸುಗಳಿಗೆ ಜೀವ ತು೦ಬದ, ಯಾವುದೋ ಕೆಲಸದಲ್ಲಿ ಮುಳುಗಿರುವ ಆತನನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎ೦ಬುದೇ ಸವಾಲಾಗಿತ್ತು. ಎಲ್ಲರನ್ನು, ಎಲ್ಲವನ್ನೂ ಬಿಟ್ಟುಬ೦ದ ಕುಸುಮ ನಿಜವಾಗಿಯು ಅನಾಥೆಯಾದಳು. ಅವಳ ಮನಸಿಗೆ ಘಾಸಿ ನೀಡುವ ಘಟನೆಗಳೇ ದಿನದಿ೦ದ ದಿನಕ್ಕೆ ಧಾರವಾಹಿಯ ಹೊಸ ಹೊಸ ಕ೦ತಿನ೦ತೆ ಎದುರುಗಾಣುತ್ತಿತ್ತು.. ಎಲ್ಲವನ್ನೂ ಎದುರಿಸುವ ಶಕ್ತಿ ಅವಳಿಗಿರಲಿಲ್ಲ. ಯಾರೊ೦ದಿಗೂ ಹ೦ಚಿಕೊಳ್ಳಲೂ ಮನಸಿರಲಿಲ್ಲ. ಅಳುತ್ತಾ ಮನಸಿನ ಭಾರ ಕಡಿಮೆ ಮಾಡಿಕೊಳ್ಳುತ್ತಿದ್ದಳು. ಮನಸಿಗೆ ಹಚ್ಚಿಕೊ೦ಡು ತಲೆಬೇನೆ ಬ೦ತೇ ಹೊರತು ಸಮಸ್ಯೆಗೆ ಪರಿಹಾರ ಸಿಗಲಿಲ್ಲ.. ಕೆಲವೊಮ್ಮೆ ಏನೋ ಗಾಢ ಆಲೋಚನೆಯಲ್ಲಿ ಮುಳುಗುವ ಅವಳಿಗೆ ಜೊತೆಯಾದದ್ದು ಸ೦ಗೀತ... ಕೊನೆಗೆ ಅದೂ ಕೂಡ ಮನಸಿಗೆ ನಾಟುತ್ತಿರಲಿಲ್ಲ.. ಕ೦ಡ ಒ೦ದೂ ಕನಸು ನನಸಾಗುವ ಸೂಚನೆಯೇ ಸಿಗುತ್ತಿಲ್ಲ ಎ೦ದು ಗೊತ್ತಾದಾಗ ಮನದಲ್ಲಿ ಸೂತಕದ ಛಾಯೆ. ಅವಳ ಶವವನ್ನೇ ಕಣ್ಣೆದುರು ಹೊತ್ತು ಒಯ್ಯುತ್ತಿದ್ದಾರೆ ಎ೦ಬ ಭಾವ.. ಕುಸಿದು ಕೂತು ನೋಡುತ್ತಿದ್ದ ನತದೃಷ್ಟೆ ಆಕೆ.. ಅವಳ ದೇಹವನ್ನಲ್ಲ, ಭಾವನೆಗಳು ಸತ್ತಿವೆ. ಭಾವನಾ ಶವದ ಮೆರವಣಿಗೆ ಅದು.. ಯಾರು ಆ ನಾಲ್ವರು ಹೆಗಲು ಕೊಟ್ಟವರು? ಹೆತ್ತವರು, ಗ೦ಡ, ಮೋಹ-ಮಾಯೆ... ((ಕರ್ತವ್ಯದಿ೦ದ ಕಳಚಿಕೊ೦ಡ ಹೆತ್ತವರು, ಕರ್ತವ್ಯವೇ ದೇವರೆ೦ಬ ಗ೦ಡ, ವಯೋ ಸಹಯ ಆಸೆ, ಮೋಹಮಾಯೆ..)) ಅವಳ ಆ ಗಾಢ ಮೌನವೇ ಉತ್ತರಿಸಿತು ಎಲ್ಲವನ್ನೂ.... ತಿರುತಿರುಗಿ ಹಾಡಿದರೂ ಕೇಳದ ಆ ಹಾಡಿನ ಸಾಲಿನಲ್ಲಿಯೂ ಅದೇ ಅರ್ಥವಿತ್ತು... ಒಮ್ಮೆಗೆ ಎಚ್ಚೆತ್ತಳು. ಸುತ್ತ ನೋಡಿದರೇ ಯಾರೂ ಇಲ್ಲ.. ಆ ಸು೦ದರ ಸ೦ಜೆ ಕಳೆದೇ ಹೋಗಿತ್ತು. ಅದೆಷ್ಟೊ ವರುಶಗಳ ನವಿರಾದ ಸ೦ಜೆಯನ್ನು ಏಕಾ೦ಗಿಯಾಗಿಯೇ ಕಳೆದುಕೊ೦ಡಿದ್ದನ್ನು ಮತ್ತೆ ನೆನಪಿಸಿಕೊ೦ಡಳು. ಅಳಲು ಕಣ್ಣೀರು ಹೆಪ್ಪುಗಟ್ಟಿತ್ತು. ಮನೆಯೊಳಗೆ ನಡೆದು ದೇವರಿಗೆ ದೀಪ ಹಚ್ಚಿ ಬೇಡಿಕೊ೦ಡಳು.. 
"ನನಗೆ ನೋವುಕೊಟ್ಟ ಮನಸಿಗೆ ನಗುವ ನೀಡು...!!"


> ಸಿ೦ಧು.ಭಾರ್ಗವ್.ಬೆ೦ಗಳೂರು.


Tuesday 15 December 2015

ಜೀವನದ ಸ೦ತೆಯಲಿ - ‪#‎ಹ೦ಸ_ಕ್ಷೀರ_ನ್ಯಾಯ‬



ಜೀವನದ ಸ೦ತೆಯಲಿ - ‪#‎ಹ೦ಸ_ಕ್ಷೀರ_ನ್ಯಾಯ‬ 



**
ರಾಮಕೃಷ್ಣ ಪರಮಹ೦ಸರು ಒ೦ದು ಕತೆ ಹೇಳುತ್ತಾರೆ..
ಹ೦ಸಕ್ಕೆ ನೀರು ಮಿಶ್ರಿತ ಹಾಲು ಪಾತ್ರೆಯಲಿ ಹಾಕಿ ಕೊಟ್ಟಾಗ ಅದು ಕೇವಲ ಹಾಲನ್ನು ಮಾತ್ರ ಕುಡಿದು ನೀರನ್ನು ಹಾಗೇ ಬಿಟ್ಟಿತ೦ತೆ..
ಇದು ಸಾಧ್ಯವೇ..?

ನಮ್ಮ ಜೀವನದ ಜೊತೆಗೆ ಹೋಲಿಕೆ ಮಾಡಿಕೊ೦ಡರೆ....
ನಮ್ಮ ಸುತ್ತ ಮುತ್ತ ಒಳ್ಳೆಯವರೂ, ಕೆಟ್ಟವರೂ ಇರುತ್ತಾರೆ. ನಾವು ಹೇಗೆ ಗುರುತಿಸುವುದು? ನಮಗೆ ಹೇಗೆ ತಿಳಿಯುತ್ತದೆ..?
ಅಥವಾ ಕೆಲವೊಮ್ಮೆ ಕೆಟ್ಟವರ ಜೊತೆಗೆ ದಿನ ಕಳೆಯ ಬೇಕಾಗಿ ಬ೦ದಾಗ ಏನು ಮಾಡಬೇಕು..?
ನಿಜ..
ನಾವು ಇನ್ನೊಬ್ಬರು "ನಮ್ಮ ಜೊತೆ ನಡೆದುಕೊಳ್ಳುವ ರೀತಿಯ ಮೇಲೆ, ನಾವು ಅವರನ್ನು ವ್ಯಾಖ್ಯಾನಿಸುತ್ತೇವೆ.." ಹೊರತು ಅವರ ಬಗ್ಗೆ ನಮಗೆ ಪೂರ್ತಿಯಾಗಿ ತಿಳಿದಿರುವುದಿಲ್ಲ..
ಒ೦ದೇ ದಿನದಲ್ಲಿ ಒಬ್ಬರನ್ನು ಅಳತೆ ಮಾಡಲೂ ಬರುವುದಿಲ್ಲ. ಎಲ್ಲರಲ್ಲಿಯೂ ಸದ್ಗುಣ/ದುರ್ಗುಣ ಎ೦ದು ಇದ್ದೇ ಇರುತ್ತದೆ. ಆಗ ನಾವು ಅವರಲ್ಲಿನ ಸದ್ಗುಣಗಳನ್ನೇ ನೋಡಬೇಕು ವಿನಃ ಕೆಟ್ಟಗುಣಗಳನ್ನಲ್ಲ..
‪#‎ಉದಾ‬: 1. ಹೆಚ್ಚಿನ ಮನೆಯಲ್ಲಿ ಕುಡಿತದ, ಧೂಮಪಾನ ಮಾಡುವ ಗ೦ಡ, ಮಗ ಇರುತ್ತಾರೆ. ಆಗ ಅವರನ್ನು ಆ ಮನೆಯವರು ದ್ವೇಶಿಸುತ್ತಾರೆಯೇ..? ಇಲ್ಲ ತಾನೆ.. ಅದೇ ಬೇರೆ ಮನೆಯವರಾದರೆ ನಿ೦ದಿಸಲು ಶುರು ಮಾಡುತ್ತೇವೆ..
2. ನಮ್ಮ ಮನೆಯಲಿ ಮಕ್ಕಳು ಹೇಗಿದ್ದರೂ ಮುದ್ದು.. ಅದೇ ಬೇರೆಯವರ ಮಕ್ಕಳು ಸಣ್ಣ ತಪ್ಪು ಮಾಡಿದರೂ ವಿಪರೀತವಾಗಿ ಅವಹೇಳನೆತ್ತಾರೆ..


***
ಎಲ್ಲೋ ಒ೦ದು ಮಾತು ಕೆಟ್ಟದ್ದಾಗಿ ಆಡಿದಾಗ ನಾವು ಅವರನ್ನು "ಸರಿ ಇಲ್ಲ ಅ೦ತಲೋ, ಇವರ ಬುದ್ಧಿ ಹೀಗೆಯೇ" ಅ೦ತಲೋ ಹೇಳಲು ಬರದು.
ಒ೦ದು ವೇಳೆ ಒಬ್ಬರಿ೦ದ ಕೆಟ್ಟ ಅನುಭವ ಆಯಿತು ಆ೦ದಿಟ್ಟುಕೊಳ್ಳಿ, ಆಗ ಅದು ಜೀವನಕ್ಕೆ ಪಾಠವಾಯಿತು. ಒಳ್ಳೆಯದು ಆಯಿತು ಎ೦ದಿಟ್ಟುಕೊಳ್ಳಿ ಸಿಹಿ ನೆನಪಿನ ಹೊತ್ತಿಗೆ ಸೇರಿತು.
ಅಷ್ಟೆ ವ್ಯತ್ಯಾಸ ತಾನೆ.. ನಮ್ಮನ್ನು ನಾವು ಪಕ್ವ ಮಾಡಿಕೊಳ್ಳಲು ಪ್ರೌಢರಾಗಲು ಎಲ್ಲರಿ೦ದಲೂ ಎಲ್ಲ ಅನುಭವವೂ ಆಗಬೇಕು. ಅದನ್ನು ನಾವು ಸ್ವೀಕರಿಸಬೇಕು.
ಎಲ್ಲರಲ್ಲಿರುವ ಒಳ್ಳೆಯ ಗುಣಗಳನ್ನು ಹುಡುಕಿ, ಹಾಗೆ ಒಳ್ಳೆತನವನ್ನು ಹೊರತೆಗೆಯುವ ಪ್ರಯತ್ನ ಮಾಡಬೇಕು...
**



Saturday 12 December 2015

ಜೀವನದ ಸ೦ತೆಯಲಿ - #ಭರವಸೆಯ_ಕೈಗೂಡಿ


ಜೀವನದ ಸ೦ತೆಯಲಿ - ಭರವಸೆಯ ಕೈಗೂಡಿ

ಹರಿದ ಬಟ್ಟೆಯ
ಹೊಲಿದ ದಾರದ ನೆನಪಿಲ್ಲ ಈಗ.

ಮಣ್ಣಿನ ಮನೆಯ
ಹ೦ಚಿನ ಹೊದಿಕೆಯ ನೆನಪಿಲ್ಲ ಈಗ,

ಸಣ್ಣ ಕನಸನು
ಸೆರಗಲಿ ಗ೦ಟುಕಟ್ಟಿ,
ನೀರಲಿ ತೊಳೆದು ಒಣ ಹಾಕಿದ ಅವ್ವ,

ಆಸೆ ತು೦ಬಿದ
ಪುಟ್ಟ ಮಗುವಿನ ಕ೦ಗಳ ನೋಡಿ
ಕಣ್ಣೀರನ್ನು ಒರೆಸಿಕೊ೦ಡ ಅಪ್ಪ,

ಪ್ರೀತಿಯೊ೦ದೇ ಉಸಿರು ಎ೦ದು
ಬದುಕು ಸಾಗಿಸಿದ ಆ ದಿನಗಳು,

ಕಾಲಚಕ್ರದ ಜೊತೆ ಸಾಗಿ,
ನಡೆದು ಬ೦ದಿದೆ ಬಾಳು....!!

ಸಿ೦ಧು ಭಾರ್ಗವ್. ಬೆ೦ಗಳೂರು.



Thursday 10 December 2015

ಜೀವನದ ಸ೦ತೆಯಲಿ - #ಹೆಣ್ಣು_ಕೆಸರ_ಕಮಲದ೦ತೆ


ಜೀವನದ ಸ೦ತೆಯಲಿ -  #ಹೆಣ್ಣು_ಕೆಸರ_ಕಮಲದ೦ತೆ

ಕೆಸರಿನಲಿ ಅರಳಿದರೂ ಲಕುಮಿಯ ಪಾದ ಸೇರುವ ಹೂವು. ಮು೦ಜಾನೆ ರವಿಯ ಕಿರಣಕೆ ಅರಳಿ ನಗು ಬೀರುತ್ತಿರುತ್ತದೆ.
ದು೦ಬಿಗಳು ನೂನಾರು ಬ೦ದು ಮಧುವ ಹೀರಿ ಹೋಗುತ್ತವೆ. ಎಲ್ಲವಕ್ಕೂ ಮುಕ್ತ ಅವಕಾಶ ನೈದಿಲೆ ನೀಡುವಳು. ಆದರೆ ಅವಳಿಗೆ ಯಾವೂದೂ ಸ್ವ೦ತವಲ್ಲ...
ಸ೦ಜೆ ಸೂರ್ಯನ ಮುಳುಗುವಿಕೆಯೊ೦ದಿಗೆ ದಿನವ ಮುಗಿಸುತ್ತಾಳೆ... ಅವಳ ಪ್ರೀತಿ ಆದಿತ್ಯನ ಜೊತೆಗೆ ಮಾತ್ರ.. ಹಾಗಾದರೆ ಈ ದು೦ಬಿಗಳು...?? ಯಾರು? ಯಾವ ಬ೦ಧವಿದು..?
ನೀರಿನಲ್ಲಿರುವ ಎಲೆಗೂ ಅದೇ ಭಾವ.. ನೀರ ಬಿಟ್ಟೇ ತೇಲುತ್ತಿರುತ್ತದೆ.. ಏನಿದರ ಅರ್ಥ..
ಜೀವನದೊ೦ದಿಗೆ ಹೊ೦ದಿಸಿ ನೋಡಿದರೆ..?
ಏನು ಉತ್ತರ ಸಿಗುವುದು.?
ಯಾರನ್ನೂ ಹಚ್ಚಿಕೊಳ್ಳುವ೦ತಿಲ್ಲ... ಪ್ರೀತಿ-ಸ್ನೇಹವೆ೦ದು  ಜನ ಬ೦ಧಿಸುವರು..
ನಮ್ಮ ಕರ್ತವ್ಯ , ನಾವು ಏಕೆ ಬ೦ದಿದ್ದೇವೆ ಅನ್ನುವುದು ಅರಿತು ಬಾಳಿದರೆ ಒಳಿತು..
ಯಾವ ಹೂವು ಯಾರ ಮುಡಿಗೋ ಸೇರುವ೦ತೆ...
ಒ೦ದಗಳು ಅನ್ನದಲ್ಲೂ ಉಣ್ಣುವವರ ಹೆಸರು ಬರೆದಿದೆ ಅ೦ತೆ...
ಕಾಡು ಮಲ್ಲಿ ಘಮವ, ಗಾಳಿ ಊರಿಗೆ ಹೊತ್ತು ತ೦ದಿತ೦ತೆ...
ಇಲ್ಲಿ ಎಲ್ಲರೂ/ ಎಲ್ಲವೂ ನೆಪ ಮಾತ್ರ...
ಬ೦ದ ಹಾಗೆ ಹೋಗುವೆವು ಒ೦ಟಿಯಾಗಿ.. 

  ?Sindhu Bhargav .Bangalore

ಜೀವನದ ಸ೦ತೆಯಲಿ - ಅ೦ಧತ್ವ



ಜೀವನದ ಸ೦ತೆಯಲಿ - ಅ೦ಧತ್ವ

ಹಾಸ್ಪಿಟಲ್ ಗೆ ಹೋದಾಗ ನಮಗೆ ಜೀವನ / ಮನುಷ್ಯ ಜನ್ಮದ ಪರಿಪೂರ್ಣ ಅರ್ಥ ಸಿಗುತ್ತದೆ..

ನಾ ಒಮ್ಮೆ ಸಡನ್ ಆಗಿ ಆಸ್ಪತ್ರೆಗೆ ಹೋಗಬೇಕಾಗಿ ಬ೦ತು...ಎಮರ್ಜೆನ್ಸಿ ವಾರ್ಡ್ ಗೆ ಹೋಗಿ ನೋಡಿದರೆ ಅಕ್ಕ ಆಕ್ಸಿಡೆಂಟ್ ಆಗಿ ಅಡ್ಮಿಟ್ ಆಗಿದ್ದಳು.. ಅವಳ ಮುಖ ನೋಡಿ ಗುರುತಿಸಲೇ ಆಗಲಿಲ್ಲ ನನಗೆ, ಅಷ್ಟೂ ಬದಲಾವಣೆ ಆಗಿತ್ತು .. ಆ ಹಸಿ ರಕ್ತ ಹಣೆದಿ೦ದ ಇಳಿಯುತ್ತಿತ್ತು.. ಒಮ್ಮೆ ನೋಡಿ ತಲೆತಿರುಗಿದಾಗೆ ಆಯ್ತು.ಮನಸಿನಲ್ಲೇ ಕುಸಿದು ಬಿದ್ದೆ... ನಿಜ.. ಬಾವ-ಅಣ್ಣ ಜೊತೆಗೇ ಇದ್ದರು. ನನಗೆ ಅಲ್ಲಿ ನಿಲ್ಲಲೂ ಆಗದು ಎ೦ದು ಹೊರನಡೆದೆ. ಮತ್ತೆ ಸ್ವಲ್ಪ ಸಮಯದ ನ೦ತರ ಡಾಕ್ಟರ್ ಕರೆದರು. ಹೋದೆ. ಆಗ ಅಲ್ಲೇ ಪಕ್ಕದ ಬೆಡ್ ಗೆ ಇನ್ನೊಬ್ಬ ಆಕ್ಸಿಡೆಂಟ್ ಆದ ವ್ಯಕ್ತಿ ಬ೦ದಿದ್ದರು.. ಅವರು ಸ್ಕೂಟಿಲಿ ಹೋಗುವಾಗ ತಲೆತಿರುಗಿ ಬಿದ್ದರ೦ತೆ. ಟ್ರಾಫಿಕ್ ಪೋಲಿಸ್ ತ೦ದು ಬಿಟ್ಟಿದ್ದಾರೆ. ಅವರು "ನಾ ಎಲ್ಲಿದ್ದೇನೆ? ಇದು ಯಾವ ಹಾಸ್ಪಿಟಲ್ ? "ಎ೦ದೆಲ್ಲ ಕೇಳುತ್ತಿದ್ದರು.. ಅವರ ತಲೆಗೆ ಬಲವಾಗಿ ಪೆಟ್ಟು ಬಿದ್ದು ರಕ್ತ ಬರುತ್ತಿತ್ತು.
ಅದನ್ನೊಮ್ಮೆ ನೋಡಿ ಮತ್ತೆ ತಲೆಸುತ್ತಲು ಶುರು ವಾಯ್ತು. ಸುಧಾರಿಕೊ೦ಡು ಅಲ್ಲೇ ಕೂತೆ.
ಆಚೆ ಬೇಡ್ ಲಿ ಡಯಾಬಿಟಿಕ್ ರೋಗಿ ಮಹಿಳೆ ಜೋರಾಗಿ ಅಳುತ್ತಾ ಇದ್ದರು.. ಇನ್ನೊ೦ದು ರೂಮಲ್ಲಿ ಇನ್ನು ಎರಡು ಗ೦ಟೆ ಬಿಟ್ಟರೆ ಹೆರಿಗೆ ಯಾಗುವ ಸ್ಠಿತಿಯಲ್ಲಿರುವ ತು೦ಬು ಬಸುರಿ, ಆಚೆ ಕಾಲು ಮುರಿದುಕೊ೦ಡು ಮಲಗಿದ್ದ ಚಿಕ್ಕ ಪ್ರಾಯದ ಹುಡುಗ.. ಇನ್ನೊ೦ದು ಕಡೆ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲವಾಗಿ ಮೇಲುಸಿರು ಬಿಡುತ್ತಾ ಮಲಗಿದ್ದ ಗ೦ಡಸು... ಎದುರು ನೋಡಿದರೆ ಇನ್ನೇನು ೨ ದಿನದಲ್ಲಿ ಇಹ ಲೋಕ ತ್ಯಜಿಸುವ ಸ್ಥಿತಿಯಲ್ಲಿದ್ದ ಅಜ್ಜಿ... ಮತ್ತೊ೦ದು ಅ೦ಬುಲೆನ್ಸ್ ಲಿ ಹೆಣವ ಹೊತ್ತೊಯ್ಯುವ ಮನೆಯವರು... ಒ೦ದೆ ಗ೦ಟೆಯಲ್ಲಿ ಹುಟ್ಟು-ಸಾವು ಎರಡನ್ನೂ ನೋಡಿದ ನನಗೆ
ಅಬ್ಬಾ ಒಮ್ಮೆ ಮನಸಿಗೆ ಕತ್ತಲು ಆವರಿಸಿತು. ಎಲ್ಲವೂ ನಶ್ವರ ಎ೦ಬ೦ತಃ ಭಾವ ಬ೦ದು ಬಿಟ್ಟಿತು..ಕ೦ಬದ೦ತೆ ನಿ೦ತು ಬಿಟ್ಟೆ.... ಹೊಟ್ಟೆಯಲಿ ಅದೆ೦ತದೋ ಹೇಳಿಕೊಳ್ಳಲೂ ಆಗದ ಸ೦ಕಟ. ಬಾಯಿ ಒಣಗಿ ಬರುತ್ತಿತ್ತು.. ನಿ೦ತಲ್ಲಿ ನಿಲ್ಲಲೂ ಆಗುತ್ತಿರಲಿಲ್ಲ..
ಎ೦ತಃ ಜನುಮ ನಮ್ಮದು... ಒ೦ದು ಅಪಘಾತ ಆದರೆ ನೋಡಲೂ ಯಾರೂ ಇಲ್ಲ, ಯಾರೋ ಪುಣ್ಯಾತ್ಮ ತ೦ದು ಆಸ್ಪತ್ರೆಗೆ ಸೇರಿಸುತ್ತಾನೆ.. ಇಲ್ಲ ಬೀದಿ ನಾಯಿ ಹೆಣವಾದ೦ತೆ ಸಾಯುವವರೆಶ್ಟು ಜನ..? ಇಲ್ಲ ಹೇಳಿ. ನಮ್ಮ ಮನಸಿಗೆ ತೋಚಿದ್ದನ್ನು ಮಾಡುವ "ನಾನು, ನನ್ನದು, ಅಹ೦, ಮೋಹ, ವ್ಯಾಮೋಹ, ತಪ್ಪು-ಸರಿಯ ಪರಿವಿಲ್ಲದೇ ನಡೆದುಕೊಳ್ಳುವ ರೀತಿ ನಮ್ಮನೇ ಅಸಯ್ಯ ಹುಟ್ಟಿಸುವ೦ತದ್ದು...
ಯಾಕೇ ಈ ಹಾರಾಟ, ಅ೦ಧತ್ವ, ಇ೦ದಲ್ಲ ನಾಳೆ ಮಣ್ಣಾಗುವ ಈ ದೇಹಕ್ಕೆ...? ಮನಸಿಗೆ ?  ಬುದ್ಧಿಗೆ ?
ಯಾವ ಪುಸ್ತಕದ ಅವಶ್ಯಕತೆಯೂ ಇಲ್ಲ ನಮ್ಮ ಜೀವನದಲ್ಲಿ ನಡೆಯುವ ಕೆಲ ಘಟನೆಗಳೇ ನಮ್ಮ ಮನಸನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.. ಪಕ್ವವಾಗುತ್ತಾ ಹೋಗುತ್ತೇವೆ.. ಹಾಗೆ ವೈರಾಗಿತನವೂ ನಿಧಾನವಾಗಿ ಬರತೊಡುಗುತ್ತದೆ.. ಆಸೆ-ಮೋಹಗಳ ಪೊರೆ ಕಳಚ ತೊಡಗುತ್ತದೆ...
ನಿಜ ತಾನೆ..?

> ಸಿ೦ಧು ಭಾರ್ಗವ್ .ಬೆ೦ಗಳೂರು

ಜೀವನದ ಸ೦ತೆಯಲಿ - #ಭೂಮಿ_ತೂಕದ_ತಾಯಿ

ಜೀವನದ ಸ೦ತೆಯಲಿ - #ಭೂಮಿ_ತೂಕದ_ತಾಯಿ

>> ದೋಸೆ ಮಾಡುವಾಗ ಎಲ್ಲವೂ ಸರಿ ಯಾಗುವುದಿಲ್ಲ. ಆದರೆ ಅದರಲ್ಲಿ ಚೆನ್ನಾಗಿ ಮಾಡಿದ ದೋಸೆಯನ್ನು, ರುಚಿಯಾದ ಚಟ್ನಿ ಜೊತೆಗೆ ಗ೦ಡನಿಗೆ, ಮಕ್ಕಳಿಗೆ ಬಡಿಸಿ
ತಾನು ಕರಟಿದ (ಸೀದುಹೋದ) ಅರೆ ಹಸಿಬಿಸಿ ದೋಸೆ ತಿನ್ನುವಾಗ "#ಅಮ್ಮನ" ನೆನಪಾಯಿತು..
ಆ ರುಚಿಯಾದ ಚಟ್ನಿ ಕಾಲಿಯಾಗಿ ಒ೦ದು ಚಮಚವೂ ಉಳಿದಿಲ್ಲದಾಗ ಅರ್ಧ ಕಾಲಲ್ಲೇ ನಿ೦ತು ನಾನೂ ತಿ೦ಡಿ ತಿನ್ನುವಾಗ ನಿಜವಾಗಿ "#ಅಮ್ಮನ" ನೆನಪಾಯಿತು..

>> "ಬಿಡಮ್ಮ ಬರ್ತಾರೆ ಅಪ್ಪ, ನಿನಗ್ಯಾಕೆ ಅಷ್ಟು ಭಯ?", ಅ೦ತಾನೋ, "ನಾನೇನು ಓಡಿ ಹೋಗ್ತೇನಾ.. ಸ್ವಲ್ಪ ಲೇಟ್ ಆದ್ರೆ ಅಷ್ಟ್ ಯಾಕ್ ಯೋಚನೆ ಮಾಡ್ತಿ? ನಾನೇನ್ ಚಿಕ್ ಮಗುವಾ ?"
ಎ೦ದು ಅಮ್ಮನಿಗೆ ಹೇಳಿದ ಮಾತು ನೆನಪಾಯಿತು.. ತಡವಾಗಿ ಬರುವ ಗ೦ಡ, ಮಗನಿಗೆ ಬಾಗಿಲಲ್ಲೇ ನಿ೦ತು ನಾನೂ ಕಾಯುತ್ತಿರುವಾಗ ನಿಜವಾಗಿ "#ಅಮ್ಮನ" ನೆನಪಾಯಿತು...

>> ರಾತ್ರಿ ಊಟ ಬಡಿಸಿ ಎಲ್ಲಾ ಊಟ ಮಾಡಿದರೂ ಅಮ್ಮ ಮಲಗಲು ಬರದೇ ಇದ್ದಾಗ, "ಏನಮ್ಮಾ ಅಷ್ಟು ಕೆಲ್ಸ ನಿ೦ಗೆ ನಾಳೆ ಮಾಡಿದ್ರಾಯ್ತು , ಬಾ ಮಲ್ಕೋ, ಅ೦ತಲೋ, ಇಲ್ಲ
ಏನು ಮಾಡುತ್ತ ಇದ್ದಾಳೆ ಎ೦ದು ಒಮ್ಮೆಯೂ ನೋಡಲು ಹೋಗದ ಆ ದಿನಗಳು, ಎಚ್ಚರ ಇದ್ದೂ ಟಿ.ವಿ ನೋಡಿಯೇ ಸಮಯ ಕಳೆದ ಆ ದಿನಗಳು ನೆನಪಾದವು.
ಈಗ ಅಡುಗೆ ಮನೆಯಲಿ ಎಲ್ಲಾ ಕೆಲಸ ಮಾಡಿ ಮಲಗುವಾಗ ಗ೦ಡ ಹೇಳುವ ಮಾತು ಕೇಳಿ ನನಗೆ ನಿಜವಾಗಿ " #ಅಮ್ಮನ" ನೆನಪಾಯಿತು...


>> ಅಮ್ಮ ಹಣ ಹೊ೦ದಿಸಿಟ್ಟು ಹಬ್ಬದ ಸಮಯಕ್ಕೆ ನಮಗೆಲ್ಲ ಬಟ್ಟೆ ತ೦ದುಕೊಡುತ್ತಿದ್ದರು... ದೀಪಾವಳಿಗೆ ಗ೦ಡನಿಗೆ, ಮಕ್ಕಳಿಗೆ ಹೊಸ ಬಟ್ಟೆ ತ೦ದುಕೊಟ್ಟು ಅವರ ಮುಖದಲ್ಲಿ ಖುಷಿ ಕಾಣುವಾಗ ನಿಜವಾಗಿಯೂ "#ಅಮ್ಮನ" ನೆನಪಾಯಿತು..

ಹಾಗೇ ನಾನು ಅಮ್ಮ ಆದದ್ದು ಅರಿವಾಯಿತು..
***
ಅಮ್ಮ ಇದು ಒ೦ದು ಸಣ್ಣ ಪದವಲ್ಲ. ಅದರ ತೂಕ ಅರಿತುಕೊಳ್ಳಲು ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಅನ್ನಿಸುತ್ತದೆ..
" #ಉದ್ಯೋಗ೦_ಪುರುಷ_ಲಕ್ಷಣ೦ " ಎನ್ನುತ್ತಾರೆ. ತ೦ದೆ ಹೊರಹೋಗಿ ಕೆಲಸ ಮಾಡಿ ದುಡಿದು ಹಣ ಸ೦ಪಾದನೆ ಮಾಡುತ್ತಾರೆ ಆದರೆ ತಾಯಿ?
ಅದನ್ನು ನಿಭಾಯಿಸಿಕೊ೦ಡು ಹೋಗಲು ಎಷ್ಟು ಕಷ್ಟ ಪಡುತ್ತಾಳೆ. ಅವಳು ಮಾಡುವ ಸಣ್ಣ ಸಣ್ಣ ಕೆಲಸವನ್ನು ಸೂಕ್ಷ್ಮವಾಗಿ ನೋಡುವವರಿಲ್ಲ..
ಅರ್ಥ ಮಾಡಿಕೊಳ್ಳಲು ನಮಗೆ ದೇವರು ಸಾಕಷ್ಟು ಸಮಯ ಕೊಡುತ್ತಾನೆ. ಆದರೆ ಅ೦ಧರ೦ತಿದ್ದು ಸಣ್ಣ ವಿಶಯವನ್ನೂ ಅರಿಯದೇ ಹೋಗುತ್ತೇವೆ..
ಒಮ್ಮೆ ಹಿ೦ತಿರುಗಿ ನೋಡಿ.. ನಮ್ಮ #ಹೆತ್ತವರು ನಮಗೆ ಏನೆಲ್ಲಾ #ಮಾಡಿದ್ದಾರೆ ಎ೦ದು. ಅವರಿಗೆ ನಾನು ಏನು #ನೀಡಿದ್ದೇವೆ ಎ೦ದು..

> #ಸಿ೦ಧು_ಭಾರ್ಗವ್ .ಬೆ೦ಗಳೂರು.