Sunday, 24 July 2022

ಕುಡಿಯರ ಕೂಸು ಕಾದಂಬರಿ ವಿಮರ್ಶಾ ಲೇಖನ

ಡಾ॥  ಕೆ. ಶಿವರಾಮ ಕಾರಂತರ ‘ ಕುಡಿಯರ ಕೂಸು ‘





ಡಾ॥ ಕೆ. ಶಿವರಾಮ ಕಾರಂತರು ಪಕ್ಕಾ ವಾಸ್ತವಿಕ ಬರಹಗಾರ. ಅವರ ಕೃತಿಗಳೆಲ್ಲವೂ ಸ್ವಾನುಭವದ ರಸಪಾಕ. ತಮ್ಮ ಎಲ್ಲಾ ಕೃತಿಗಳಲ್ಲಿನ  ಪಾತ್ರಗಳ ಮೂಲಕ ತಮ್ಮನ್ನು ತಾವೇ ವಿಸ್ತರಿಸಿಕೊಳ್ಳುತ್ತಾ ಹೋಗುತ್ತಾರೆ ಕಾರಂತರು. ಗಾಢವಾದ ವಾಸ್ತವಿಕ ಪ್ರಜ್ಞೆ,  ಮಾನವೀಯ ಅನುಕಂಪಗಳನ್ನಿಟ್ಟುಕೊಂಡು ಬರೆಯುವ ಕಾರಂತರು , ವಾಸ್ತವ ಪಂಥದ ಕಾದಂಬರಿಗೆ ತಮ್ಮ ಕಾಣಿಕೆಯನ್ನು ಅರ್ಥಪೂರ್ಣವಾಗಿ ಸಲ್ಲಿಸಿದ್ದಾರೆ. ಅವರ ಕಾದಂಬರಿಯಲ್ಲಿನ ವಿವರಗಳು ಕೇವಲ ದಾಖಲೆಯಾಗಿ ಪರಿಣಮಿಸದೆ, ಸಾಮಾನ್ಯ ಜನಜೀವನದ ಸುಖದುಃಖಗಳ ಪರಾಮರ್ಶೆಯ ಜೊತೆಗೇ ಒಂದು ಜೀವನ ವಿನ್ಯಾಸವನ್ನೇ ಕಟ್ಟಿಕೊಡುವ ಸಾಮರ್ಥ್ಯ ಇರುವಂತಹವು. ಈ ನೆಲದ ಮಣ್ಣಿನಲ್ಲಿಯೇ ಹುಟ್ಟಿ, ತಳವೂರಿ, ಗ್ರಾಮೀಣ ಜೀವನದ ಸರಳತೆ, ಮುಗ್ಧತೆ, ಶ್ರಮ ಜೀವನಕ್ಕೆ ಮನಸೋತವರಾದರೂ, ಬದಲಾವಣೆಗಳನ್ನು ನಿಷ್ಠುರವಾಗಿ ದಾಖಲು ಮಾಡಿ, ಅದರ ಅಗತ್ಯ ಇದೆ ಎಂಬುದನ್ನೂ ಪ್ರತಿಪಾದಿಸುತ್ತಾರೆ ಕಾರಂತರು. ಹಳ್ಳಿಗಾಡಿನ ಮಾತುಗಳ ಕಿರು ಪ್ರಯೋಗದಿಂದ ಕಾವ್ಯವನ್ನು ಚಿಮ್ಮಿಸುವ, ಕಥೆ ಹೇಳುವ ಪರಿಕ್ರಮದಲ್ಲಿ ಸಾಮಾಜಿಕ ಬದಲಾವಣೆಗಳನ್ನು ಧ್ವನಿಸುವ ಕಾರಂತರು ಜೀವನೋತ್ಸಾಹದಲ್ಲಿ ಅನಂತ ನಂಬಿಕೆಯನ್ನು ಇಟ್ಟುಕೊಂಡಿದ್ದರು ಎಂಬುದು ಅವರ ಬರಹಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.  ಅವರಲ್ಲಿ ಘೋಷಿತ ಕ್ರಾಂತಿಕಾರತೆ, ತೋರಿಕೆಯ ನಂಬಿಕೆ ಇಲ್ಲ. ಅವರ ಬದುಕು-ಬರಹ ಭಿನ್ನವಾಗಿರಲಿಲ್ಲ. ಆದ್ದರಿಂದಲೇ ಅವರ ಬರಹಗಳ ಘನತೆ ಹೆಚ್ಚು. ದಟ್ಟವಾದ ಅನುಭವವೇ ಅವರ ಬರಹಗಳ ಜೀವಾಳ. ಅವರ ಉತ್ಕೃಷ್ಟ ಕೃತಿಗಳಲ್ಲಿ  ಪ್ರಸ್ತುತ ‘ಕುಡಿಯರ ಕೂಸು’ ಸಹ ಒಂದು. 1978ರ ಸುಮಾರಿಗೆೇ  ನಾಲ್ಕನೆಯ  ಆವೃತ್ತಿ ಕಂಡ ಈ ಕೃತಿ ರಾಜಲಕ್ಷ್ಮಿ ಪ್ರಕಾಶನದಿಂದ ಹೊರಬಂದಿದೆ. ಈ ಕಾದಂಬರಿ ‘ಮಲೆಯ ಮಕ್ಕಳು’  ಎಂಬ ಹೆಸರಿನಲ್ಲಿ ಚಲನಚಿತ್ರವೂ ಆಗಿದೆ.


ಶ್ರೀಯುತರು ಈ ಕೃತಿಯಲ್ಲಿ ಪ್ರಧಾನವಾಗಿ ಮಲೆಗಳಲ್ಲಿ ವಾಸಿಸುವ,  ನಿಸರ್ಗದ ಮಕ್ಕಳಾದ ಮಲೆಕುಡಿಯರ ಜೀವನಕ್ರಮದ ಮೇಲೆ ಕ್ಷ-ಕಿರಣ ಬೀರಿದ್ದಾರೆ. ಮಲೆಕುಡಿಯರ ಜೀವನದಲ್ಲಿ ಇರುವ ಕಟ್ಟಳೆ,ಆಚಾರ-ವಿಚಾರ, ನಂಬಿಕೆ ಹೇಗಿವೆ ಎಂಬುದರ ಸ್ಥೂಲಪರಿಚಯ ಈ ಕೃತಿಯಲ್ಲಿ ನಮಗೆ ಸಿಗುತ್ತದೆ. ಕುಡಿಯರ ಹಾಗೂ ನಿಸರ್ಗದ ನಡುವಿನ ಸಂಬಂಧ, ಅವರಲ್ಲಿ ಕಾಣಬಹುದಾದ ಆರ್ಥಿಕ ಬದಲಾವಣೆಗಳು, ನಂಬಿಕೆಗಳ ಪ್ರಭಾವ...ಹೀಗೆ ಎಲ್ಲದರ ಸಮಗ್ರ ಚಿತ್ರಣ ನಮಗೆ ಒದಗಿಸುತ್ತಾರೆ. ಒಂದು ಹಳ್ಳಿಯ ಕುಡಿಯರ ಸಾಮಾಜಿಕ ಬದುಕಿನ ಏಳು-ಬೀಳುಗಳನ್ನು ಸಮರ್ಥವಾಗಿ ದಾಖಲು ಮಾಡುವ ಈ ಕಾದಂಬರಿಯು,  ಒಂದು ಪ್ರಾದೇಶಿಕ ಕಾದಂಬರಿಯ ಎಲ್ಲ ಗುಣಗಳನ್ನು ಮೈಗೂಡಿಸಿಕೊಂಡಿದೆ.  ಅಲ್ಲದೆ ಜೀವನವನ್ನು ಮುಗ್ಧ ಹಾಗೂ ಕಷ್ಟ ಸಹಿಷ್ಣುಗಳಾದ ಮಲೆಕುಡಿಯರ ದೃಷ್ಟಿಕೋನದಿಂದ ಲೇಖಕರು ನೋಡಿರುವುದರಿಂದ,  ಜೀವನದ ಸ್ವರೂಪ, ಸಾಧ್ಯತೆಗಳ ಬಗ್ಗೆ  ಕಾದಂಬರಿ ಮಾಡುವ ಹೇಳಿಕೆಗೆ ಪ್ರಾತಿನಿಧಿಕ ಮಹತ್ವವಿದೆ. ಕುಡಿಯರ ಜೀವನದ ಸಂಕಟಗಳು,  ನೋವುಗಳು ಹಾಗೂ ಮೂಲಭೂತ ಸಮಸ್ಯೆಗಳ ನಡುವೆಯೂ ಬತ್ತಿ ಹೋಗದ ಅವರ ಮಾನವೀಯ ಗುಣಗಳು ಅನಾವರಣಗೊಳ್ಳುವಾಗ ಬದುಕಿನ ಮೂಲ ಸೆಲೆ ಇದೇ ಅನ್ನಿಸದಿರದು. 

ಕಾರಂತರು ಹಳ್ಳಿಗರ ಕಾರ್ಪಣ್ಯದ ಬದುಕನ್ನು ಸಹ್ಯವಾಗಿಸುತ್ತಿರುವ,  ನಿರಂತರವಾಗಿ ಮುಂದುವರಿಸುತ್ತಿರುವ ಪ್ರೇರಣೆಗಳನ್ನೂ  ಶೋಧಿಸಿ ತೋರಿಸುತ್ತಾರೆ ನಮಗೆ.  ಹಣ - ಅಧಿಕಾರ ಉಳ್ಳವರ ಆಸ್ತಿಯಾದರೆ,  ಬಡಜನರ ಆಸ್ತಿ -ಅವರ ದೈಹಿಕ ಶ್ರಮ, ದುಡಿಮೆ, ಹೇಗಾದರೂ ಬದುಕಬೇಕು ಎಂಬ ಅವರ ಅಚಲ ಛಲ, ಎನ್ನುವುದು ಕಾರಂತರ ಅಂಬೋಣ. ಈ ಕಾದಂಬರಿಯಲ್ಲಿ ನಾವು ಮನುಷ್ಯರನ್ನು ಅವರ ಎಲ್ಲಾ ಅವಸ್ಥೆಗಳಲ್ಲಿಯೂ ನೋಡಬಹುದಾಗಿದೆ. ಈ ಉತ್ಪ್ರೇಕ್ಷೆಯಿಲ್ಲದ ಸಹಜ ಬರವಣಿಗೆಯೇ ಕಾರಂತರ ಬರಹಗಳ ಪ್ರಬಲ ಆಕರ್ಷಣೆ.  


ಕಾದಂಬರಿಯ ಮುಖ್ಯವಸ್ತು ಮಲೆಕುಡಿಯರ ಜೀವನಕ್ರಮ.  ಅವರು ನಂಬುವ ಕಲ್ಕುಡ ದೈವ , ಸಂಕ್ರಾಂತಿಗೆ ನಡೆಯುವ ಕೋಲದ ವಿವರಣೆ,  ಅವರು ನಡೆಸುವ ಶಿಕಾರಿಯ ವಿವರಣೆ, ಅವರ ಕುಮರಿ  ಬೇಸಾಯ ಮತ್ತು  ತನ್ನಿಂತಾನೆ ಬೆಳೆಯುವ ಏಲಕ್ಕಿ ಬೇಸಾಯ ಮತ್ತು ಅದರ  ಲಾಭದ ವಿಶ್ಲೇಷಣೆ, ಅವರ ಆಹಾರ- ವಸತಿ,  ಉಡುಗೆ-ತೊಡುಗೆ , ಅವರು ತಮ್ಮ ಗುರಿಕಾರನನ್ನು ಆರಿಸುವ ಕ್ರಮ….ಹೀಗೆ ಎಲ್ಲಾ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಾರೆ ಕಾರಂತರು. ಈ ವಿಸ್ತ್ರುತ ವಿವರಣೆಯ  ಹಿಂದಿನ ಕಾರಂತರ ಅಧ್ಯಯನ ನಮ್ಮ ಊಹೆಗೂ ನಿಲುಕದ್ದು. ಮಲೆಕುಡಿಯರ ಆರ್ಥಿಕ ಬದಲಾವಣೆಗಳ ಬಗ್ಗೆಯೂ   ತಿಳಿಸುತ್ತಾ , ಅವರು ಜಾತ್ರೆ ನಡೆಸುವ ರೀತಿ , ಅವರು ಬಯಸುವ ಕನ್ನಡಿ, ಬಣ್ಣದ ಬಟ್ಟೆ, ಗಾಜು,  ಕಬ್ಬಿಣದ  ಬಳೆ, ಕಬ್ಬಿಣದ ಪಿಕಾಸಿ, ಬೆಂಕಿಪೊಟ್ಟಣ...ಇವುಗಳನ್ನು ವಿವರಿಸುತ್ತಾ  ಅವರು ನಿಧಾನವಾಗಿ ಬದಲಾವಣೆಗೊಳ್ಳುತ್ತಿರುವುದನ್ನೂ,  ಅದರ ಅನಿವಾರ್ಯತೆಯನ್ನೂ ನಮ್ಮೆದುರಿಗೆ ಇಡುತ್ತಾ ಹೋಗುತ್ತಾರೆ ಕಾರಂತರು. ಆದರೆ ಅಂಕೆಸಂಖ್ಯೆಗಳನ್ನು ತಿಳಿಯದ ಕುಡಿಯರು  ಎಂದೇ ಹೇಳುತ್ತಾ ಕಾರಂತರು, ಪಾತ್ರಗಳ ವಯಸ್ಸನ್ನು ಅಂಕಿಗಳ ಮೂಲಕ ಮತ್ತೆ ಮತ್ತೆ ಉಲ್ಲೇಖಿಸುತ್ತಾ ಸ್ವಲ್ಪ ಕಸಿವಿಸಿ ಉಂಟು ಮಾಡುತ್ತಾರೆ. 

 

ಭಯದ ನೆರಳಲ್ಲೇ ಆರಂಭವಾಗುವ ಕಥೆ ಉದ್ದಕ್ಕೂ ಮೂಢನಂಬಿಕೆಗಳ ಆಚರಣೆಯನ್ನೇ ಹೇಳುತ್ತಾ ಹೋದರೂ, ಕಾರಂತರ ವ್ಯಂಗ್ಯದಿಂದ ಹೊರತಾಗಿ ಉಳಿಯುವುದಿಲ್ಲ.  ಯಾರಿಗೂ ತಿಳಿಯದಂತೆ ತನ್ನ ಒಡಲು ತಣಿಯಲು ಸುಬ್ರಹ್ಮಣ್ಯಕ್ಕೆ ಹೋಗಿ ಬರುವ ಕೆಂಚ,  ಅಳುಕಿನಿಂದಲೇ ದೇವರ ಪಾತ್ರಿಯ  ಎದುರು ನಿಂತಾಗ ಲೇಖಕರು ಈ ರೀತಿ ಹೇಳಿಕೆ ನೀಡುತ್ತಾರೆ ‘ ಬೂದನೊಬ್ಬನಿಗೆ ಗೊತ್ತಿದ್ದ ವಿಷಯವಾದ್ದರಿಂದ, ಅದನ್ನು ಪೂಜಾರಿಯೂ ತಿಳಿದಿರಲಿಲ್ಲ. ಆದಕಾರಣ ಕಲ್ಕುಡ ದೈವವೂ ತಿಳಿಯಲಿಲ್ಲ’ ಎಂದು. ದೈವ ಪಾತ್ರಿಗಳ ಸೋಗಲಾಡಿತನದ ಬಗಗಿನ ಅವರ ಅಸಹನೆ ಇಲ್ಲಿ ಸ್ಪಷ್ಟವಾಗಿ ಪ್ರಕಟಗೊಳ್ಳುತ್ತದೆ. ಜನ ಕಲ್ಕುಡ ನಲ್ಲಿ ಇಟ್ಟ ಅಪರಿಮಿತ ಮೂಢಭಕ್ತಿ ಕಾರಂತರ ಟೀಕೆಗೆ ಈಡಾಗುವುದನ್ನು ಕಾದಂಬರಿಯುದ್ದಕ್ಕೂ ನಾವು ಗಮನಿಸಬಹುದು. ಹಿರಿಮಲೆಯ ಚೋಮನ ಮಗಳಾದ ಗಿಡ್ಡಿ,  ಕ್ರೈಸ್ತಮತಕ್ಕೆ ಬ್ರಗಾಂಜಾನ ದೆಸೆಯಿಂದ ಮತಾಂತರವಾದುದನ್ನು ಕಲ್ಕುಡ ಸೂಕ್ಷ್ಮವಾಗಿ ಪ್ರಸ್ತಾಪಿಸುವ ಬಗ್ಗೆ ಲೇಖಕರು ನೀಡುವ ವಿಶ್ಲೇಷಣೆ ಏನೆಂದರೆ ‘ಈ ವಿಷಯವನ್ನು ಹೆಂಡತಿಯ ಮೂಲಕ ಪೂಜಾರಿ ತಿಳಿದಿದ್ದರಿಂದ ಅದು ಕಲ್ಕುಡ ದೈವಕ್ಕೂ ತಿಳಿಯಿತು’ ಎಂದು.  ಒಂದು ಅಂದಾಜಿನ ಭವಿಷ್ಯ ಹೇಳುವ ಕವಡೆ ಸನ್ಯಾಸಿಯೂ  ಅವರ ಟೀಕೆಗೆ ಗುರಿಯಾಗುತ್ತಾನೆ.



ಕಾದಂಬರಿಯ ಮುಖ್ಯಪಾತ್ರವಾಗಿ ಕರಿಯ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಾನೆ.   

ಬದಲಾವಣೆಗಳಿಗೆ ಒಗ್ಗದ, ಬಗ್ಗದ ಕರಿಯ , ತನ್ನ ವಂಶದ ಕುಡಿಯನ್ನು ರಕ್ಷಿಸುವ ಸಲುವಾಗಿ ತನ್ನ ನೆಚ್ಚಿನ ದೈವವನ್ನೂ ಎದುರಿಸುವ ಧೈರ್ಯ ತೋರುವಾಗ ಕಾರಂತರ ಆಶಯದ ಪ್ರತೀಕವೆಂಬಂತೆ ತೋರುತ್ತಾನೆ.  ಕರಿಯ ಒಂದು ರೀತಿಯಲ್ಲಿ ತಬ್ಬಲಿಯಾದರೂ ನಿಸರ್ಗದ ಕೈಗೂಸಾಗಿ ಮಾತೃಪ್ರೇಮವನ್ನು ಪಡೆಯುತ್ತಾನೆ. ಬಾಲ್ಯದಲ್ಲಿ ತನ್ನ ಒಡನಾಡಿ ಕಾಳನೊಂದಿದಗೆ ಇಡೀ ಕಾಡನ್ನೇ ಅಲೆಯುವ ಆತನ ಪ್ರಕೃತಿ ಪ್ರೇಮವನ್ನು ವರ್ಣಿಸುವಾಗ ಕಾರಂತರ ವರ್ಣನಾ ಸಾಮರ್ಥ್ಯದ ಬಗ್ಗೆ ಹೆಮ್ಮೆ ಎನಿಸುತ್ತದೆ.  ಕರಿಯ ಅನಾಥನಾದರೂ ಕಾಡು ಮನುಷ್ಯರ ನಡುವಿನ ನಿಜ ಮನುಷ್ಯನಾಗಿ ಬೆಳೆಯುವುದು ತೃಪ್ತಿಕರ ಎನಿಸುವುದು. ಆತನ ಹಾಗೂ ಕಾಟು ನಾಯಿಯ ಸಂಬಂಧ, ಅತ್ಯುನ್ನತ ‘ಗುರಿಕಾರ’ ಪದವಿಯನ್ನು ಅಲಕ್ಷಿಸುವ ಮಟ್ಟಿಗೆ ಬೆಳೆಯುವ ಆತನ ‘ಕೆಂಚ’ ಆನೆಯ  ಬಗೆಗಿನ  ಮಮತೆ, ಕುಡಿಯರ  ನೀತಿಗೆ ವಿರೋಧವಾಗಿಯೂ ಬೇರೊಬ್ಬರ ಉರುಳಲ್ಲಿದ್ದ ಹರಿಣವನ್ನು ರಕ್ಷಿಸುವ ಅವನ ಸಹಾನುಭೂತಿ,  ಗಿಡ್ಡಿಯು ಕ್ರೈಸ್ತ ಮತಕ್ಕೆ ಮತಾಂತರಳಾಗಿ  ಹಿರಿಮಲೆಗೆ ಹಿಂದಿರುಗಿದ್ದೆೇ  ಆದರೂ ಅವಳನ್ನು ಮದುವೆಯಾಗುವ ತಿಮ್ಮನಿಗೆ ಪ್ರೋತ್ಸಾಹ ನೀಡುವ ಅತನ ಹೃದಯ ವೈಶಾಲ್ಯತೆ, ಇಡೀ ಕುಡಿಯರ ಸಮುದಾಯದ ಕೋಪಕ್ಕೆ ತುತ್ತಾಗಿಯೂ ತಿಮ್ಮ ಗಿಡ್ಡಿಯರ ಬದುಕು ಕಟ್ಟಲು  ನೆರವಾಗುವ ಆತನ ಮಾನವೀಯತೆ,  ಕರಿಯನನ್ನು ಮರೆಲಾರದ ಪಾತ್ರವನ್ನಾಗಿಸುತ್ತದೆ. ಕಾರಂತರು ಅವರ ನಿಲುವುಗಳನ್ನೆಲ್ಲಾ ಕರಿಯನ ಪಾತ್ರದ ಮೂಲಕ ಸಮರ್ಥಿಸಿಕೊಂಡಂತೆ ಭಾಸವಾಗುತ್ತದೆ.


ಕೆಂಚ ವಯೋವೃದ್ಧನಾಗಿಯೂ ಎಲ್ಲರನ್ನೂ ಸಾಧ್ಯವಾದಷ್ಟು ಸಂಭಾಳಿಸುವ ವ್ಯಕ್ತಿಯಾಗಿ ಸ್ವಲ್ಪಮಟ್ಟಿಗೆ ಚಿಂತನಯೋಗ್ಯವಾದ ಮನಸ್ಸುಳ್ಳವನಾಗಿ ಕಾಣಿಸಿಕೊಂಡು, ವಾತ್ಸಲ್ಯಮೂರ್ತಿಯಾಗಿ ನಿಲ್ಲುತ್ತಾನೆ. ಆದುದರಿಂದಲೇ ಆತನ ಸಾವು ಕರಿಯನಿಗೆೇ ಅಲ್ಲದೆ ನಮಗೂ ತಬ್ಬಲಿತನ ಮೂಡಿಸುತ್ತದೆ. ಆದರೆ

ಕುರುಡು ನಂಬಿಕೆಗೆ ಜೋತು ಬಿದ್ದು ತನ್ನ ಸೊಸೆಯ ಸಾವಿಗೆ ಅಪ್ರತ್ಯಕ್ಷವಾಗಿ ಕಾರಣನಾಗುವ ಕೆಂಚನ ಬಗ್ಗೆ ಮರುಕ ಹುಟ್ಟುತ್ತದೆ. ಈ ಸಂದರ್ಭದಲ್ಲಿ, ನಮಗೆ ಕುರುಡು ನಂಬಿಕೆಗಳಿಂದಾಗುವ ಅವಘಡ, ಅನಾಹುತದ ಬಗ್ಗೆ ಖೇದವೆನಿಸಿದರೂ, ಆ ಭಯದ ಕಾರಣದಿಂದಲಾದರೂ ಅವರ ನೈತಿಕ ಚೌಕಟ್ಟು ಬಿಗಿಯಾಗಿ ಉಳಿಯುವುದರ ಬಗ್ಗೆ  ಹಾಗೂ ಹಿಂಸೆ, ಅಧರ್ಮಗಳ ಬಗ್ಗೆ ಅವರಲ್ಲಿ ಉಂಟಾಗುವ ಭಯ ಮತ್ತು ಒಳ್ಳೆಯದರತ್ತ ಅವರ ಆಸಕ್ತಿಯನ್ನು ಹೊರಳಿಸುವ ಆ ಮೂಢನಂಬಿಕೆಯ ತಾಕತ್ತನ್ನು ಒಪ್ಪದೇ ಇರಲಾಗುವುದಿಲ್ಲ. ಇದನ್ನು ತನ್ನ ಚಿಕ್ಕಿಯ ಅನೈತಿಕ ಸಂಬಂಧದಿಂದಲೇ ಆಕೆಯ ಸಾವು ಸಂಭವಿಸಿತು ಎಂದು ಪಶ್ಚಾತ್ತಾಪಪಡುವ ತುಕ್ರನ ಪಾತ್ರದಲ್ಲಿ ನಾವು ಗಮನಿಸಬಹುದು. ಅಂಕೆಶಂಕೆಯಲ್ಲಿಡಲೆಂದೇ ಪ್ರಾರಂಭವಾಗುವ ನಂಬಿಕೆಯ ಆಚರಣೆಗಳು,  ಮೂಢನಂಬಿಕೆಯ ಹಂತಕ್ಕೆ ಹೋಗಿ ನಿಲ್ಲುವುದು ದುರಂತವಷ್ಚೇ.


ತಿಮ್ಮ ಖಂಡಿತವಾಗಿಯೂ ಒಬ್ಬ ನಿಷ್ಟುರ ಹಾಗೂ ಸಹೃದಯದ ಮನುಷ್ಯನಾಗಿ ಚಿತ್ರಿಸಲ್ಪಟ್ಟಿದ್ದಾನೆ.  ಕಾರಂತರು, ಶೋಷಿತ ವರ್ಗದವರ ಒಂದು ಪ್ರತಿಭಟನೆಯ ಕೂಗಿನಂತೆ ಈ ಪಾತ್ರ ಪೋಷಣೆ ಮಾಡಿದ್ದಾರೆ.  ಅನ್ಯಾಯ ಸಹಿಸದ ಕೆಳಗಿನ ವರ್ಗದ ಮನುಷ್ಯನಾಗಿ ನಮ್ಮಿಂದ ಭೇಷ್ ಅನ್ನಿಸಿಕೊಳ್ಳುತ್ತಾನೆ ತಿಮ್ಮ . ಗುರಿಕಾಕರಿಕೆಯ ವಿಷಯದಲ್ಲಿ ಧಣಿಯನ್ನೇ  ಎದುರಿಸುವ ತಿಮ್ಮ, ಅನ್ಯಾಯವನ್ನು ಪ್ರತಿಭಟಿಸುತ್ತಾ ಮುಂದುವರೆದು ಕೊನೆಗೂ ಅನಾಮಿಕನಂತೆ  ಬದುಕು ನಡೆಸಬೇಕಾಗಿ ಬರುವುದು ಉನ್ನತವರ್ಗದ ದಬ್ಬಾಳಿಕೆಯಿಂದ. ಆದರೂ ನೈತಿಕ ಅಧಃಪತನ ಒಪ್ಪದ ಆತ,  ಕೂಳಿನ ಎಂಜಲು ಆಳಾಗುವುದನ್ನು ಧಿಕ್ಕರಿಸಿ,  ತನ್ನ ಮಲೆಯನ್ನೇ ಬಿಟ್ಟು ಬಿಡುವ ಸಂದರ್ಭದಲ್ಲಿ,  ಖಂಡಿತವಾಗಿಯೂ ನಮ್ಮಲ್ಲಿರುವ ಬಡವ-ಬಲ್ಲಿದರ ನಡುವಿನ ಅನಾಹುತಕಾರಿ ಅಂತರದ ಬಗ್ಗೆ ತಿರಸ್ಕಾರ ಹುಟ್ಟುತ್ತದೆ.  ಶೋಷಿತವರ್ಗ ಎಷ್ಟೇ  ಪ್ರತಿಭಟಿಸಿದರೂ ಅವರಿಗೆೇ ಮಾರಕವಾಗುವ ಪರಿಸ್ಥಿತಿ  ಸಲ್ಲದು ಎಂಬ ಕಾರಂತರ ಯಾವತ್ತೂ ಪ್ರತಿಪಾದನೆ ಇಲ್ಲಿ ಧ್ವನಿಸುತ್ತದೆ.


ಇನ್ನು ತಿರುಮಲ ಭಟ್ಟರ ಬಗ್ಗೆ ಎರಡು ಮಾತು ಅತ್ಯಗತ್ಯ. ಆತ ಒಂದು ಪ್ರಬಲ ವರ್ಗದ,  ದಾರ್ಷ್ಟ್ಯ ಪ್ರವೃತ್ತಿಯಿಂದ ಹಾಗು ವಿಲಾಸೀತನದಿಂದ ಹಳ್ಳಿ ಜನರನ್ನು ದುರುಪಯೋಗಪಡಿಸಿಕೊಳ್ಳುವ ಧೂರ್ತನಾಗಿ    ಕಾಣಿಸಿಕೊಳ್ಳುತ್ತಾನೆ.  ಆತನ ಸರ್ವಾಧಿಕಾರಿ ನರಿಬುದ್ಧಿ,  ನಿಷ್ಪಾಪಿ ಜನರಲ್ಲಿ ಆತ ಕೆರಳಿಸುವ ವಿಷಯ ಲೋಲುಪತೆ ಹಾಗೂ ಒಳಜಗಳ ಇವುಗಳಿಂದ ಆತ ಖಳನಾಯಕನ ಪಟ್ಟವನ್ನೇ ಪಡೆಯುತ್ತಾನೆ.  ಕಾರಂತರು ಆತನನ್ನು ಒಂದು ಸಾಮಾಜಿಕ ವರ್ಗಗಳಲ್ಲಿ ಉನ್ನತ ವರ್ಗವೊಂದರ ಪ್ರತಿನಿಧಿಯಾಗಿ ಚಿತ್ರಿಸಿ, ನಮ್ಮಲ್ಲಿ ಆ ವರ್ಗದವರ ದಬ್ಬಾಳಿಕೆ, ಸರ್ವಾಧಿಕಾರಿ ಪ್ರವೃತ್ತಿಯ ಬಗ್ಗೆ ರೋಷ ಉಕ್ಕಿಸುವುದರಲ್ಲಿ ಸಫಲರಾಗುತ್ತಾರೆ.   


ಇನ್ನು ಕೆಂಪಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದನ್ನು ತಾನೆೇ ನಿದರ್ಶನವಾಗಿ ಪ್ರತಿಪಾದಿಸುವಂತೆ ಕಂಡುಬರುತ್ತಾಳೆ. ತನ್ನ ಸೌಂದರ್ಯಕ್ಕೆ ತಾನೇ ಮರುಳಾಗುವ ಕೆಂಪಿ, ಅಸೂಯೆಯಿಂದ ಗಿಡ್ಡಿಗೆ  ವಿಷವಿಕ್ಕುವ ಸಂಕುಚಿತ ಪಾತ್ರವಾಗಿ ಹೇವರಿಕೆ ಹುಟ್ಟಿಸುತ್ತಾಳೆ.  ಆದರೆ ಗಿಡ್ಡಿಯ ಪಾತ್ರ ತನ್ನದೇ ಆದ ರೀತಿಯಲ್ಲಿ ನಮ್ಮ ಅನುಕಂಪ ಗಿಟ್ಟಿಸುವಲ್ಲಿ ಸಫಲವಾಗುತ್ತದೆ.  ಆಕೆಯು  ಕ್ರೈಸ್ತ ಮತಕ್ಕೆ ಮತಾಂತರ ಹೊಂದುವ ಸಂದರ್ಭದಲ್ಲಿ ಬರುವ ವಲ್ಲಿ ಬ್ರಗಾಂಜ, ಚಿನುವಾ ಅಚಿಬೆಯ ‘ Things Fall Apart’ ನ ಕ್ರೈಸ್ತ ಪಾದ್ರಿಯ  ಹೋಲಿಕೆ ಪಡೆದರೆ ಗಿಡ್ಡಿ ಅಲ್ಲಿಯ  ‘ನೋಯಿ’ಯನ್ನು ಹೋಲುತ್ತಾಳೆ. ಆದ್ದರಿಂದಲೇ  ಆಕೆ ಮಲೆಗೆ  ಹಿಂತಿರುಗಿದಾಗ ತನ್ನ ಸಮಾಜದ ಕುಂದುಕೊರತೆಗಳೇ ಅವಳಿಗೆ  ದೊಡ್ಡದಾಗಿ ಕಾಣಿಸುತ್ತದೆ. ಆಕೆಯ ದೈರ್ಯ, ಮಮತೆ ಒಳ್ಳೆಯತನ ಅವಳ ಕೆಡುಕನ್ನು ಮರೆಮಾಚುವಲ್ಲಿ  ಸಫಲವಾಗಿದೆ.  ಕೆಂಪಿಯ ಸಾವು ನಮ್ಮನ್ನು ಚಿಂತನೆಗೆ ಗುರಿಮಾಡುತ್ತದೆ.  ಕಾಳನ ಪಾತ್ರ ಕಾದಂಬರಿಯಲ್ಲಿ ಸ್ವಲ್ಪ ಸೊರಗಿದಂತೆ  ಕಂಡರೂ ಕೊನೆಯಲ್ಲಿ ಪುಷ್ಟಿಗೊಳ್ಳುತ್ತದೆ.  ಒಟ್ಟಿನಲ್ಲಿ ಎಲ್ಲಾ ಪಾತ್ರಗಳೂ  ಅವುಗಳ ಇತಿಮಿತಿಯಲ್ಲಿ ಪರಿಪೂರ್ಣವಾಗಿ ನಿಂತಿವೆ.ನಿಸರ್ಗದ ಕ್ರೌರ್ಯವನ್ನೇ  ಆಗಲಿ ಸಮಾಜದ ಕ್ರೌರ್ಯವನ್ನೇ ಆಗಲಿ ತಿಮ್ಮ, ಗಿಡ್ಡಿ , ಕರಿಯನಂತಹ ಸಾತ್ವಿಕರೂ  ದೇವರ ಅವಲಂಬನೆಯಲ್ಲಿ ಎದುರಿಸುವುದಿಲ್ಲ ಎಂಬ ಅಂಶ ಇಲ್ಲಿ ಮುಖ್ಯವಾಗುತ್ತದೆ. ತನ್ನನ್ನು ಆವರಿಸಿದ ಎಲ್ಲಾ ತೊಂದರೆ ತೊಡಕುಗಳ ನಡುವೆಯೂ ನಿಜವಾದ ಅರ್ಥದಲ್ಲಿ ಮನುಷ್ಯನಾಗಿ ಕಾಣಿಸುವ, ಮಲೆಯ ಮಕ್ಕಳಲ್ಲಿ ಒಬ್ಬನಾದ ಕುಡಿಯ- ಕರಿಯನಿಂದಾಗಿ ‘ಕುಡಿಯರ ಕೂಸು’ ಅನ್ವರ್ಥ ವಾಗುತ್ತದೆ.


ಕುಗ್ಗದ ನಿಷ್ಠುರತೆ , ತೀಕ್ಷ್ಣವಿಚಾರಮಂಥನ ಕಾರಂತರ ಕೃತಿಗಳ ಹೆಗ್ಗುರುತು. ಕಾರಂತರು ಈ ಕಾದಂಬರಿಯಲ್ಲಿ, ಕೇವಲ ಒಂದು ನಿರ್ದಿಷ್ಟ ಸಮುದಾಯದ ನೋವು-ನಲಿವುಗಳ ಕಥೆಯನ್ನಷ್ಟೇ ಅಲ್ಲ , ಒಟ್ಟೂ ಮನುಷ್ಯನ ಅದಮ್ಯ  ಜೀವನೋತ್ಸಾಹದ ಸ್ವರೂಪವನ್ನು ಧ್ವನಿಸುತ್ತಾ, ಸುಧಾರಣೆ ಎಲ್ಲಿ ಆದರೆ ಬದುಕು ಸುಖಮುಖವಾಗಬಹುದು ಎಂಬುದನ್ನೂ ಅಲ್ಲಲ್ಲೇ ಸೂಕ್ಷ್ಮ ಜನವಾಗಿ ತಿಳಿಸುತ್ತಾ ನಮ್ಮನ್ನು ಚಿಂತನೆಗೆ ಹಚ್ಚುತ್ತಾರೆ.  


ಆರ್. ಸುಮ

ಕೆನರಾ ಬ್ಯಾಂಕ್

ರಾಜರಾಜೇಶ್ವರಿನಗರ ಶಾಖೆ

ಬೆಂಗಳೂರು-೫೬೦೦೯೮.

Friday, 29 October 2021

ಲೇಖನ : ಸಿಹಿತಿನಿಸುಗಳ ಸವಿಯುವಾಗ ಗಮನಹರಿಸಿರಿ

 

Source Images




ಲೇಖನ : ಸಿಹಿತಿನಿಸುಗಳ ಸವಿಯುವಾಗ ಗಮನಹರಿಸಿರಿ

ಲೇಖಕಿ ಸಿಂಧು ಭಾರ್ಗವ ಬೆಂಗಳೂರು.

ಸಿಹಿ ಹಾಗು ಸಿಹಿತಿಂಡಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಕ್ಕಳಂತೂ ಚಾಕಲೇಟ್, ಡೈರಿಮಿಲ್ಕ್ ಗಳನ್ನು ಕೈತುಂಬಾ ತುಂಬಿಸಿಕೊಂಡು ತಿನ್ನುತ್ತಾರೆ. ಜಾಮೂನು ಕಂಡರೆ ಮೂರ್ನಾಲ್ಕು ಒಂದೇ ಉಸಿರಿಗೆ "ಗುಳುಂ" ಮಾಡುವವರೂ ಇದ್ದಾರೆ. ಹಬ್ಬ ಹರಿದಿನಗಳಲ್ಲಿ ಸಿಹಿಖಾದ್ಯಗಳ ಗಮ್ಮತ್ತೇ ಬೇರೆ. ಮದುವೆ ಸಮಾರಂಭದಲ್ಲಿ,  ಹಬ್ಬದ ಸಂದರ್ಭಗಳಲ್ಲಿ ತನ್ನತ್ತ ಸೆಳೆಯುತ ಬಾಣಸಿಗರನ್ನು ಹೊಗಳಲು ಮೊದಲ ಸ್ಥಾನ ಪಡೆಯುವುದು ಈ ಸಿಹಿ ಖಾದ್ಯಗಳು.

ಅದರಲ್ಲಿ ಮೊದಲನೆಯದಾಗಿ ವಿವಿಧ ರೀತಿಯ ಪಾಯಸಗಳು. ಮನೆಯಲ್ಲಿ ಹಬ್ಬ ಹರಿದಿನಗಳಲ್ಲಿ ತಾಯಿ ಹತ್ತಾರು ಬಗೆಯ ಅಡುಗೆ ಮಾಡುವಾಗ ಪಾಯಸವನ್ನು ಮಾಡಿಯೇ ಮಾಡುತ್ತಾರೆ. ಸುಲಭವಾಗಿ ಹೆಸರುಬೇಳೆ ಪಾಯಸ, ಶಾವಿಗೆ ಪಾಯಸ(ಕೀರು) ಮಾಡಬಹುದು. ದ್ರಾಕ್ಷಿ ಗೋಡಂಬಿ ಬಾದಾಮಿ, ದಪ್ಪ ಹಾಲು ಬೆರೆಸಿ ಪಾಯಸ ಮಾಡಿದರೆ ಆಹಾ!! ಎಂತ ರುಚಿ. ಮನೆಮಂದಿಯೆಲ್ಲರೂ ಬಾಯಿ ಚಪ್ಪರಿಸಿ ಸವಿಯುತ್ತಾರೆ. ಆದರೆ ಮಕ್ಕಳು "ಬೇಡ" ಎಂದು ಹೇಳುವುದೇ ಜಾಸ್ತಿ. ಮುದ್ದು ಮಾಡಿ ಒಂದು ಸೌಟು ಪಾಯಸ ಹಾಕಿಕೊಳ್ಳುವಂತೆ ಒತ್ತಾಯ ಮಾಡುತ್ತಾರೆ. ಕಷ್ಟದಲ್ಲಿ ಮುಖ ಸಿಂಡರಿಸಿಕೊಂಡು ಹೇಗೋ ತಿಂದು ಮುಗಿಸುತ್ತಾರೆ ಬಿಡಿ.

ಕೆಲವರಿಗೆ ಸಿಹಿ ಎಂದರೆ ತುಂಬಾ ಇಷ್ಟ. ಹಾಲು ಪರಮ್ಮಾನ್ನ, ಗೋದಿಕಡಿ ಪಾಯಸ, ಅವಲಕ್ಕಿ ಪಾಯಸ, ಕಡಲೆಬೇಳೆ ಪಾಯಸ ಎಂದರೆ ಅಚ್ಚುಮೆಚ್ಚು. ಅದಕ್ಕೆ ಒಣಹಣ್ಣುಗಳ ಬೆರೆಸಿದಾಗ ಬಿಸಿ ಬಿಸಿಯ ಜೊತೆಗೆ ಘಮವೂ ಮೂಗಿಗೆ ಬಡಿಯುತ್ತದೆ. ಹಾಗೆಯೇ ಬೆಲ್ಲ, ಕಾಯಿಹಾಲು ಬೆರೆಸಿ ಚೆನ್ನಾಗಿ ಕುದಿಸಿ ಮಾಡುವ ಪಾಯಸ ಬಾಯಲ್ಲಿ ನೀರೂರುವಂತೆ ಮಾಡುವುದು. ಎರಡು ಮೂರ ಸಲಿ ಹಾರಿಸಿಕೊಂಡು ಹೊಟ್ಟೆ ತುಂಬಾ ಸವಿಯುತ್ತಾರೆ. ಕಾಯಿಹಾಲು, ಬೆಲ್ಲದಿಂದ ಮಾಡಿದ ಪಾಯಸ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿರುತ್ತದೆ. ಹಾಗಾಗಿ ಆಗಾಗ್ಗೆ ಮಕ್ಕಳಿಗೆ ಮನೆಯಲ್ಲಿ ವಿಶೇಷ ಸಂದರ್ಭವಿಲ್ಲದಿದ್ದರೂ ವಾರಕ್ಕೊಮ್ಮೆ ಪಾಯಸ ಮಾಡಿ ಬಡಿಸಬೇಕು.

ಇನ್ನು ಪಾಯಸ ಮಾತ್ರವಲ್ಲದೇ ಕ್ಯಾರೆಟ್ ಹಲ್ವಾ, ಲಡ್ಡು, ಬರ್ಫಿ, ಅಕ್ಕಿ ಅಥವಾ ಗೋದಿ ಹಾಲುಬಾಯಿ, ಅಪ್ಪ, ಸಿಹಿಗುಂಬಳ ಕಡುಬು, ಮೈಸೂರು ಪಾಕ್, ಪೇಡ, ಡ್ರೈ ಜಾಮೂನು, ಅತಿರಸ, ಹೋಳಿಗೆ, ಚಿರೋಟಿ ಹೀಗೆ ಲಘು ಸಿಹಿ ಹೊಂದಿದ ಸಿಹಿಖಾದ್ಯಗಳನ್ನು ತಯಾರಿಸಿ ಸವಿಯಬಹುದು.

ಸಕ್ಕರೆ ಸೇವಿಸುವಾಗ ಎಚ್ಚರ ವಹಿಸಬೇಕು:

೧)ಬೆಲ್ಲದಿಂದ ತಯಾರಿಸಿದ ಸಿಹಿಖಾದ್ಯ ಆರೋಗ್ಯಕರ.
೨) ಸಕ್ಕರೆಯಿಂದ ತಯಾರಿಸಿದ ಸಿಹಿಖಾದ್ಯಗಳಿಂದ ಕೊಲೆಸ್ಟರಾಲ್‌ ಬರಬಹುದು. ಉದರದಲ್ಲಿ ಸಕ್ಕರೆ ಬೇಗನೆ ಕರಗುವುದಿಲ್ಲ.
೩) ಸಕ್ಕರೆ, ಉಪ್ಪು, ರವೆ, ಬಿಳಿಅಕ್ಕಿ, ಮೈದಾ ಬಿಳಿವಿಷ (ವೈಟ್ ಪಾಯಿಸನ್) ವಿಭಾಗಕ್ಕೆ ಸೇರುತ್ತದೆ.
೪) ಮುಂಜಾನೆಯ ಚಹಾಗೆ ಕೂಡ ಕಡಿಮೆ ಸಕ್ಕರೆ ಬಳಸಿ ಅಥವಾ ಸಕ್ಕರೆ ಇಲ್ಲದೆ ಸೇವಿಸಿದರೂ ಆರೋಗ್ಯಕ್ಕೆ ಒಳ್ಳೆಯದು.
೫) ದಿನದಲ್ಲಿ ಸಕ್ಕರೆ ಬಳಸುವ ಪ್ರಮಾಣ ಕಡಿಮೆಮಾಡಬೇಕು. ಶುಗರ್ (ಮಧುಮೇಹ) ಬಂದರೇನೆ ಸಕ್ಕರೆ ತಿನ್ನುವುದು ಬಿಡಬೇಕೆಂದಿಲ್ಲ. ಪೂರ್ವದಿಂದಲೇ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.
೬) ಸಕ್ಕರೆಗಿಂತ ಕಲ್ಲುಸಕ್ಕರೆ, ಕೆಂಪು ಕಲ್ಲು ಸಕ್ಕರೆ ತುಂಬಾ ಒಳ್ಳೆಯದು.
೭) ಮಕ್ಕಳಿಗೆ ಕಲ್ಲುಸಕ್ಕರೆ ವಿಳ್ಯದೆಲೆ ಜೊತೆಗೆ ಜಜ್ಜಿ ತಿನ್ನಿಸಿದರೆ ಕಫ ಕಡಿಮೆಯಾಗುವುದು.
೮) ಕಲ್ಲುಸಕ್ಕರೆಯನ್ನು ಸಿಹಿ ತಿಂಡಿ ತಯಾರಿಸುವಲ್ಲಿ ಬಳಸಬಹುದು.
೯) ಮದುಮೇಹಿಗಳು ಸಕ್ಕರೆ ಸೇವಿಸುವುದನ್ನು ನಿಲ್ಲಿಸಿ ಮುಂಜಾನೆ ಸಪ್ಪೆ ಚಹಾ ಸವಿಯುವಾಗ ಒಣ ಖರ್ಜೂರವನ್ನು ತಿನ್ನಬಹುದು.
೧೦) ಮಕ್ಕಳಿಗೆ ಚಾಕಲೇಟ್, ಕ್ಯಾಂಡಿ ಕೊಡಲೇಬಾರದು. ಹಲ್ಲುಗಳ ಸಂದಿಯಲ್ಲಿ ಸಿಕ್ಕಿ ಹುಳುಕು ಹಲ್ಲು ಸಮಸ್ಯೆ ಬರುತ್ತದೆ. ಸರಿಯಾಗಿ ಹಲ್ಲು ಉಜ್ಜಲು ಹೇಳಬೇಕು.
೧೧) ಸಕ್ಕರೆ ಬದಲಿಗೆ ಜೇನುತುಪ್ಪ, ಹಣ್ಣಿನ ರಸಗಳನ್ನು ಬಳಸಬಹುದು. ಅವು ನೈಸರ್ಗಿಕ ಸಿಹಿಯನ್ನು ಹೊಂದಿರುತ್ತವೆ.
೧೨) ಇನ್ನೊಂದು ಗಮನಿಸಲೇ ಬೇಕಾದ ಅಂಶವೇನೆಂದರೆ, ಸಿಹಿತಿಂಡಿಗಳ ತಂದು ಫ್ರಿಡ್ಜ್  ನಲ್ಲಿ ಇಡಬಾರದು.
೧೩) ಇನ್ನು ಐಸ್ ಕ್ರೀಂ ನಲ್ಲಿ ಸಕ್ಕರೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಅದು ಕೂಡ ಆರೋಗ್ಯಕ್ಕೆ ಹಾನಿಕಾರಕ.
೧೪) ಅಯ್ಯೋ!! ಸಿಹಿತಿಂಡಿ, ಯಾರೂ ತಿನ್ನದೇ ಉಳಿಯಿತಲ್ಲ, ಎಂದು ಮನೆಯಲ್ಲಿ ತಾಯಿ ಅಥವಾ ಮಕ್ಕಳಿಗೆ ನೀಡಿ ಹತ್ತು ಹದಿನೈದು ದಿನಗಳ ಹಳೆಯ ಸಿಹಿತಿಂಡಿಗಳ ತಿನ್ನುವವರೂ ಇದ್ದಾರೆ. ಹಾಗೆ ಮಾಡಿದರೆ ತಾಜಾ ರಹಿತ, ಗಟ್ಟಿಯಾದ, ಹೆರೆ ಕಟ್ಟಿದ ಸಕ್ಕರೆ, ಹಳೆಯ ರಿಫೈಂಡ್ ಆಯಿಲ್, ನಿಮ್ಮ ಉದರವನ್ನು ಸೇರಿದರೆ ಜೀರ್ಣವಾಗದೇ ಅಜೀರ್ಣವಾಗಬಹುದು. ಕಫ ಉಂಟಾಗುತ್ತದೆ.
೧೫) ಬೇಕರಿಗಳಲ್ಲಿ‌ ಗಾಜಿನ ಡಬ್ಬಗಳಲ್ಲಿ ಸಂಗ್ರಹಿಸಿಟ್ಟ ಸಿಹಿತಿಂಡಿಗಳನ್ನು ಖರೀದಿಸುವಾಗಲೂ ಎಚ್ಚರಿಕೆವಹಿಸಿರಿ.

ಹೀಗೆ ಹೆಚ್ಚಾಗಿ ಸಕ್ಕರೆಯಿಂದಲೇ ತಯಾರಿಸುವ ಸಿಹಿತಿಂಡಿಗಳಿಂದ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಪರಿಣಾಮ ಬೀರುತ್ತದೆ. ಬಾಯಿಗೆ ರುಚಿ ನೀಡಿದರೂ ಬಹಳ ಎಚ್ಚರವಹಿಸಿ ಸೇವಿಸಬೇಕು.



Monday, 25 October 2021

Sindhu Bhargava October month of articles

ಅಕ್ಟೋಬರ್ ಮಾಸದ ಎಲ್ಲ ಪತ್ರಿಕಾ ಲೇಖನಗಳು... ಆಯ್ಕೆ ಮಾಡಿ ಪ್ರಕಟಿಸಿದ ಪತ್ರಿಕಾ ಸಂಪಾದಕರಿಗೆ ವಂದನೆಗಳು🌹

ಕೊಂಕಣವಾಹಿನಿ ದಿನಪತ್ರಿಕೆ

ಜನಮಿಡಿತ ದಿನಪತ್ರಿಕೆ

ಹರ್ಷವಾಣಿ ಮಾಸಪತ್ರಿಕೆ

ಯುಗಪುರುಷ ಮಾಸಪತ್ರಿಕೆ

ಕರ್ಮವೀರ ವಾರಪತ್ರಿಕೆ

ಸ್ತ್ರೀ ಜಾಗೃತಿ ಮಾಸಪತ್ರಿಕೆ
















Wednesday, 6 October 2021

ಲೇಖನ: ಹರೆಯದ ಮಕ್ಕಳ ಸಮಸ್ಯೆಯನ್ನು ಹೆತ್ತವರು ಕೂತು ಪರಿಹರಿಸಬೇಕು

 

Google source images

ಲೇಖ‌ನ  : ಈಸಬೇಕು ಇದ್ದು ಜೈಸಬೇಕು

ನಿತ್ಯಶ್ರೀ ಎಂಬ ಮುದ್ದಾದ ಹುಡುಗಿ ಹರೆಯಕ್ಕೆ ಕಾಲಿಟ್ಟು ಒಂದೆರಡು ಮಾಸವಾಯಿತಷ್ಟೆ. ಮಗಳು ಮೈನೆರೆದಳು ಎಂದು ಅಕ್ಕ ಪಕ್ಕದವರನ್ನೆಲ್ಲ ಕರೆದು ವಿಶೇಷವಾದ ಕಾರ್ಯಕ್ರಮವನ್ನು ನಡೆಸಿ ಆರತಿ ಎತ್ತಿ ಜರಿಸೀರೆ ಉಡಿಸಿ ಹೂವಮುಡಿಸಿ ಮದುಮಗಳಂತೆ ಸಿಂಗರಿಸಿದ್ದಳು. ಮಾವ ಬಂದು ಚಿನ್ನದ ಸರ, ಅಜ್ಜಿ ಚಿನ್ನದ ಬಳೆಯನ್ನು ಉಡುಗೊರೆ ನೀಡಿದರು. ತಾಯಿ ಮನೆಯಿಂದ ಸಂಭ್ರಮವೋ ಸಂಭ್ರಮ. ಎಲ್ಲವೂ ಮುಗಿದು ಒಂದೆರಡು ತಿಂಗಳು ಕಳೆಯುತಲೇ ನಿತ್ಯನ ನಡವಳಿಕೆಯಲ್ಲಿ ಬದಲಾವಣೆಗಳು ಕಾಣಿಸತೊಡಗಿದವು. ಅಕ್ಕ ಪಕ್ಕದ ಗೆಳತಿಯೊಂದಿಗೆ  ಹೆಚ್ಚೆಚ್ಚು ಮಾತನಾಡುವುದು, ನಗುವುದು ಅಲ್ಲೇ ಸಮಯ ಕಳೆಯುವುದು. ಓದುವುದರಲ್ಲಿ ಆಸಕ್ತಿ ಕಡಿಮೆಯಾಗುತ್ತ ಬಂದಿತು. ಯಾವಾಗಲೂ ತನ್ನ ಸೌಂದರ್ಯದ ಬಗ್ಗೆ ಚಿಂತಿಸುವುದು. ಗೆಳತಿಯರು ಹೊಗಳಲಿ ಎಂದು ಏನೇನೋ ಪ್ರಯತ್ನಪಡುವುದು, ಅರೆಬರೆ ಮೈತೋರಿಸುವ ಬಟ್ಟೆ ಹಾಕುವುದು, ಮೊಬೈಲ್ ನಲ್ಲೇ ಮುಳುಗಿದ್ದು ಸೆಲ್ಫೀ ತೆಗೆದುಕೊಳ್ಳುವುದು. ತಾಯಿಗೆ ಇದೆಲ್ಲವೂ ವಿಚಿತ್ರ ಅನಿಸಿದರೂ ವಯಸ್ಸಿನ ಮಗಳು ಎಂದು ಸುಮ್ಮನಾಗುತ್ತಿದ್ದರು. ಆದರೆ ದಿನೇದಿನೇ ಇದು ಹೆಚ್ಚಾಗತೊಡಗಿತು. ಒಮ್ಮೆ ಮೊಬೈಲ್ ನಲ್ಲಿ ಮಧ್ಯರಾತ್ರಿ ತನಕ ಸಂದೇಶ ಕಳುಹಿಸುತ್ತ ಯಾರೊಂದಿಗೋ ಸಂವಹನ ನಡೆಸುತ್ತಿದ್ದಳು. ಮಗಳಿನ್ನೂ ಎಚ್ಚರದಿಂದಿರುವುದನ್ನು ತಾಯಿ ಗಮನಿಸಿದರು‌. ಯಾರೊಂದಿಗೆ ಮಾತನಾಡುತ್ತಿದ್ದೀ ಎಂದು ಕೇಳಿದರೆ ಉತ್ತರ ಕೊಡದೇ ಮಲಗಿದ್ದಳು.

ಇದಾದ ಮೇಲೆ ಮರುದಿನ ಕೂಡ ಹಾಗೆಯೇ ಮೊಬೈಲ್ ನಲ್ಲಿ ಮಾತನಾಡುತ್ತ  ಮೇಲಿನ ಮಹಡಿಗೆ ಹೋಗಿದ್ದಳು. ತಾಯಿಯು ಹಿಂಬಾಲಿಸಿ ಹೋದಾಗ ಹುಡುಗನ ದನಿ ಕೇಳಿಸಿತ್ತು. ಮೊಬೈಲ್ ಕಸಿದುಕೊಂಡು "ಯಾರವನು? ನಮ್ಮ ಮರ್ಯಾದೆ ಕಳೆಯುವೆಯಾ? ತಂದೆಗೆ ಗೊತ್ತಾದರೆ ನಿನ್ನ ಕೊಂದೇ ಬಿಡುವರು.. ಇದನ್ನೆಲ್ಲ ಇಂದಿಗೆ ನಿಲ್ಲಿಸು .." ಎಂದು ಕೇಳಿಕೊಂಡರು. ದೊಡ್ಡ ಜಗಳವಾಗಿ ಮಗಳಿಗೆ ಹೊಡೆದರು. ಅತ್ತರು. ಎಲ್ಲವೂ ಒಂದೇ ಸಮನೆ ಜೋರಾಗಿತ್ತು.
ಒಮ್ಮೆ ಬಿಗಿಯಾದ ಜೀನ್ಸ್ ಪ್ಯಾಂಟ್ ಟೀ ಶರ್ಟ್ ಹಾಕಿಕೊಂಡು ಸೆಲ್ಪೀ ತೆಗೆದರೆ ಇನ್ನೊಮ್ಮೆ ಮೇಕಪ್ ಮಾಡಿಕೊಂಡು ಕೂದಲನ್ನು ಹಾರಲು ಬಿಟ್ಟು ಸೆಲ್ಫೀ ತೆಗೆದುಕೊಳ್ಳುತ್ತಿದ್ದಳು. ಮೊದಮೊದಲು ತಾಯಿಗೆ ಹೆದರುತ್ತಿದ್ದರೆ ನಂತರದಲ್ಲಿ ತಾಯಿಯ ಎದುರೇ ಹುಡುಗನ ಜೊತೆ ಮಾತನಾಡುತ್ತಿದ್ದಳು. ನೇರವಾಗಿ ತನ್ನ ಫೋಟೋ ತೆಗೆದು ಕಳುಹಿಸುತ್ತಿದ್ದಳು. ತಾಯಿಗೆ ಇದೇನು ಅರಿವಾಗುತ್ತಿರಲಿಲ್ಲ. ಮಗಳ ಮೇಲಿನ ವ್ಯಾಮೋಹವೋ, ಅತಿಯಾದ ನಂಬಿಕೆಯೋ ಅಥವಾ ಈಗಿನ ತಂತ್ರಜ್ಞಾನದ ಸಾಮಾಜಿಕ ಜಾಲತಾಣಗಳ ಪ್ರಭಾವದ ಅರಿವು ಅವರಿಗೆ ಇಲ್ಲದ ಕಾರಣ ಮಗಳು ಎಂತಹ ಅಪಾಯದಲ್ಲಿ ಸಿಲುಕಿದ್ದಾಳೆ ಎಂದೂ ಕೂಡ ಗೊತ್ತಿರದ ಪರಿಸ್ಥಿತಿಯಲ್ಲಿ ಅವರಿದ್ದರು. ಆದರೆ ಯಾವಾಗಲೂ ಬೈಯುವುದು, ಓದು ಎಂದು ಹೇಳುವುದು ಆಗಾಗ್ಗೆ ಜಗಳ ಸಾಮಾನ್ಯವಾಗಿ ನಡೆಯುತ್ತಿತ್ತು. ಎಷ್ಟು ಹೇಳಿದರೂ ಮಗಳು ಮಾತ್ರ ಹರೆಯದ ಹುಚ್ಚುತನಕ್ಕೆ ತನ್ನತನವನ್ನು ಯಾವುದೋ ಪುಂಡ ಹುಡುಗರ ಕೈಗೆ ಒಪ್ಪಿಸಿದ್ದಳು. ಆಚೆಕಡೆಯಿಂದ ಆ ಹುಡುಗ ವಿಧವಿಧವಾಗಿ ಹೊಗಳುತ ಅರೆಬರೆ ಬಟ್ಟೆಹಾಕಿಕೊ ಎಂದು ಹೇಳುವುದು, ಅವಳನ್ನು ಒಬ್ಬಳೇ ರೂಮಿಗೆ ಹೋಗಿ ಅರೆನಗ್ನ ಫೋಟೋ ಕಳುಹಿಸು ಎಂದು ಒತ್ತಾಯಿಸುವುದು, ಪ್ರೀತಿಯ ಹೆಸರಿನಲ್ಲಿ ಇವಳನ್ನು ಸಂಪೂರ್ಣವಾಗಿ ಮುಳುಗಿಸಿದ್ದ. ಅಲ್ಲದೇ ತಾನೊಬ್ಬನೆ ಇರುವೆ ಎಂದು ಸುಳ್ಳು ಹೇಳಿ ತನ್ನ ಸುತ್ತ ಒಂದಷ್ಟು ಹುಡುಗರ ಗುಂಪನ್ನೇ ಕೂಡಿಕೊಂಡು ಅವಳು ಕಳುಹಿಸುತ್ತಿದ್ದ ಫೋಟೋಗಳನ್ನು ನೋಡಿ ಮಜ ಮಾಡುತ್ತಿದ್ದ. ಗೆಳೆಯರ ಮೊಬೈಲ್ ಗಳಿಗೂ ಕಳುಹಿಸುತ್ತಿದ್ದ. ಅವನ ಕಣ್ಣಿಗೆ ಅವಳೊಂದು ಕುರಿಯಂತೆ ಕಾಣಿಸುತ್ತಿದ್ದಳು. ತನ್ನ ವಿಕೃತ ಮನಸ್ಸಿಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದ್ದ‌. ಇತ್ತಲಿಂದ ಇದೇನು ಗೊತ್ತೇ ಇರದ ಅವನ ನೀಚಬುದ್ದಿಗೆ ಅಮಾಯಕಿಯು ಬಲಿಯಾಗುತ್ತಿದ್ದಳು. ಯಾವ ಅಪಾಯದ ಕರೆಗಂಟೆ ಕೂಡ ಕೇಳಿಸಿಕೊಳ್ಳದ ಕೊಂಚವೂ ಅನುಮಾನವನ್ನು ಪಡದೇ ಅವನು ಹೇಳಿದ ಹಾಗೆ ನಡೆದುಕೊಳ್ಳುತ್ತಿದ್ದಳು. ಅದಕ್ಕೆ ಮೇಲಿನ ಮನೆ ಗೆಳತಿ ಕೂಡ ದಿನವೊಂದರಂತೆ ಪುಂಕಾನುಪುಂಕ ಹುಡುಗರ ಬಗ್ಗೆ ವಿಷಯ ತಿಳಿಸುತ್ತಿದ್ದಳು. ಹುಡುಗರ ಮೇಲೆ ಆಸಕ್ತಿ ಬರುವ ಹಾಗೆ ಮಾಡಿ, ನೀನು ಇನ್ನು ಚಂದ ಕಾಣಿಸಿಕೊಳ್ಳಬೇಕು. ಹಳ್ಳಿಗುಗ್ಗು ಎನ್ನಬಾರದು ಅಂತೆಲ್ಲ ಕಿವಿ ಊದಿ ಉಬ್ಬಿಸುತ್ತಿದ್ದಳು. ಅದರಂತೆ ನಿತ್ಯಶ್ರೀ ಪ್ರತಿದಿನ ತಾಯಿಯ ಹತ್ತಿರ ಹಣ ಕೇಳುವುದು , ಬಟ್ಟೆ ಖರೀಸುವುದು, ಮೇಕಪ್ ಗೆ ಬೇಕಾದ ಸಾಮಾಗ್ರಿಗಳ ಖರೀಸುವುದು, ಹೀಗೇ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದಳು. ತಾಯಿಗೆ ಇದುವೇ ದೊಡ್ಡ ತಲೆಬಿಸಿಯಾಯಿತು. ಒಮ್ಮೆ ಹುಡುಗ " ಬಾಯ್ ಕಟ್ ಮಾಡಿಸಿಕೋ ನಿನಗೆ ಚಂದ ಕಾಣಿಸುತ್ತದೆ. ಎಂದು ಯಾವುದೋ ಸಿನೆಮಾದ, ನಟಿಯ ಫೋಟೋ ಕಳುಹಿಸಿ ಹೀಗೆ ಡ್ರೆಸ್, ಹೇರ್ ಸ್ಟೈಲ್ ಮಾಡಿಕೋ.." ಎಂದಿದ್ದ.  ಆಗ  ತಾಯಿಯ ಹತ್ತಿರ "ನನಗೆ ಬಾಯ್ ಕಟ್ ಮಾಡಿಸಬೇಕು. ಬ್ಯೂಟಿ ಪಾರ್ಲರ್ ಗೆ ಹೋಗುವೆ, ಹಣ ಕೊಡು..." ಎಂದು ದುಂಬಾಲು  ಬಿದ್ದಳು. ಹತ್ತನೇ ತರಗತಿಗೆ ಹೋಗಲು ಅಡ್ಮಿಶನ್ ಕೂಡ ಮಾಡಿಸಿಕೊಳ್ಳಲು ಇಷ್ಟ ಪಡದೇ ಮನೆಯಲ್ಲೇ ಇದ್ದಳು. ಆನ್ಲೈನ್ ಕ್ಲಾಸ್ ಇದೆ ಎಂದು ಸುಳ್ಳು ಹೇಳಿ ಒಬ್ಬ ಬೀದಿ ಹುಡುಗನ ಸೆಳೆತಕ್ಕೆ ಸಿಲುಕಿದ್ದಳು. ತಾಯಿ ಎಷ್ಟು ಅತ್ತರು ಗೋಗರೆದರು ಕೇಳಿಸಿಕೊಳ್ಳುತ್ತಲೇ ಇರಲಿಲ್ಲ.

" ಇದ್ದಕ್ಕಿದ್ದಂತೆ ಇವಳಿಗೆ ಈ ಆಲೋಚನೆ ಏಕೆ ಬಂದಿತು‌ ಅದೂ ಇಷ್ಟ ಉದ್ದ ಕೂದಲನ್ನು ಕತ್ತರಿಸುವುದಾದರೂ ಏಕೆ? ನಾನು ಹಣ ಕೊಡುವುದಿಲ್ಲ. ನಿನಗೆ ಹುಚ್ಚು ಹಿಡಿದಿದೆಯಾ? ಯಾವಾಗ ನೋಡಿದರೂ ಸೌಂದರ್ಯದ ಬಗೆಗೆ ಆಸಕ್ತಿ ಜಾಸ್ತಿ. ಮೇಕಪ್ ,ಬಟ್ಟೆ, ನೈಲ್ ಪಾಲಿಶ್, ಇಯರ್ ರಿಂಗ್ಸ್, ಮ್ಯಾಚಿಂಗ್ಸ್ ಎಂದೆಲ್ಲ ಹಣ ಕೇಳುವೆ. ಎಲ್ಲಿಂದ ಬರುತ್ತದೆ? ಟ್ಯೂಷನ್ ಫೀಸ್ ಜೊತೆಗೆ  ಆನ್ಲೈನ್ ಕ್ಲಾಸ್ ಫೀಸ್ ಕೂಡ ಕೊಡಬೇಕು. ಕರೋನಾದಿಂದ ತಂದೆಗೆ ಕೆಲಸ ಇಲ್ಲ. ಹಣ ಎಲ್ಲಿಂದ ಬರುತ್ತದೆ ಹೇಳು..." ಎಂದು ಬೈಯ ತೊಡಗಿದರು. ಜಗಳ ಮಾಡಿದರು. ಹೊಡೆದರು."ಕಾಯಿ ಕದ್ದವರ ಬಾಯಿ ಮೇಲು" ಎಂಬಂತೆ ನಿತ್ಯಶ್ರೀ ತಾಯಿಗೆ ಬೈಯತೊಡಗಿದಳು. ಬೊಬ್ಬೆಹಾಕುವುದು, ಅಳುವುದು ಹೆಚ್ಚಾಯಿತು. ಇವರಿಬ್ಬರ ಜೋರುದನಿ ಅಕ್ಕಪಕ್ಕದ ಮನೆಗಳಿಗೂ ಕೇಳಿಸಿತು. "ಮರ್ಯಾದೆ ಕಳೆಯುವೆಯಾ?" ಎಂದು ಹೊಡೆದರು. ನಿತ್ಯಶ್ರೀ ಕಿರುಚುತ್ತ ಒಳ ಓಡಿದಳು. ಆದರೆ ತನ್ನ ಹಟ ಬಿಡಲಿಲ್ಲ ‌. ದಿನಗಳು ಉರುಳಿದವು ಅಮ್ಮ ಹಣ ಕೊಡಲಿಲ್ಲ. ಆಚೆಯಿಂದ ಹುಡುಗ ಒತ್ತಾಯ ಮಾಡುವುದು ಹೆಚ್ಚಾಯಿತು. ನಿತ್ಯಶ್ರೀಗೆ ಒತ್ತಡ ಹೆಚ್ಚಾಯಿತು. ಒಂದು ರೀತಿಯಲ್ಲಿ ಅವನ ವಶಕ್ಕೊಳಗಾದವಳಂತೆ ನಡೆದುಕೊಳ್ಳುತ್ತಿದ್ದಳು. ನಾನು ಸೋಲುತ್ತಿದ್ದೇನೆ ಎಂದು ಅವಳಿಗೆ ಅನಿಸತೊಡಗಿತು. ಅವನು ಹೇಳಿದ ಒಂದು ಕೆಲಸ ನನಗೆ ಮಾಡಲು ಆಗುತ್ತಿಲ್ಲವಲ್ಲ. ಎಂದು ಅನಿಸತೊಡಗಿತು‌. ಅವನು ಕೂಡ "ನನ್ನ ಪ್ರೀತಿಸುತ್ತೀಯಾ ತಾನೆ?! ನನ್ನ ಆಸೆಗೆ ಇಲ್ಲ ಎನ್ನುವುದಿಲ್ಲ ತಾನೆ??.." ಎಂದೆಲ್ಲ ಬ್ಲಾಕ್ ಮೇಲ್ ಮಾಡುತ್ತಿದ್ದ. ಆಗಾಗ್ಗೆ ಪೀಡಿಸುತ್ತಿದ್ದ.

Google source Images


ಇವಳಿಗೆ ಏನಾಯಿತೋ ಏನೋ? ಮತ್ತೆ ತಾಯಿಯ ಬಳಿ ಕೇಳಿದಳು. "ನನಗೆ ಬಾಯ್ ಕಟ್ ಮಾಡಿಸಿಕೊಳ್ಳಲೇಬೇಕು. ಹಣ ಕೊಡು" ಎಂದು. "ಅದಕ್ಕೆ ಮುನ್ನೂರು-ನಾನೂರು ರೂಪಾಯಿ ಖರ್ಚಾಗುತ್ತದೆ ನಾನು ಕೊಡುವುದಿಲ್ಲ" ಎಂದರು. ಕೂಡಲೇ ಸಿಟ್ಟು ಮಾಡಿಕೊಂಡು ರೂಮುಗೆ ಹೋಗಿ ಜೋರಾಗಿ ಬಾಗಿಲು ಹಾಕಿಕೊಂಡು ಆ ಹುಡುಗನಿಗೆ ವೀಡಿಯೋ ಕರೆಮಾಡಿ ಫ್ಯಾನಿಗೆ ಸೀರೆ ಬಿಗಿದು "IAm Sorry.. ನಾನು ಸೋತುಹೋದೆ.. ನಿನ್ನ ಒಂದು ಸಣ್ಣ ಆಸೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ನೀನೆಷ್ಟು ಪ್ರೀತಿಸುತ್ತೀಯಾ.. ನನಗಾಗಿ ಏನೆಲ್ಲ ಮಾಡಿದಿ. ಆದರೆ ನನ್ನ ಕೈಲಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ ಬಿಡು. ನನ್ನ ತಾಯಿ, ತುಂಬಾ ಜೋರು ಕೆಟ್ಟವಳು, ನನ್ನ ಆಸೆಗೆ, ಕನಸುಗಳಿಗೆ ಬೆಲೆ‌ ಕೊಡೋದಿಲ್ಲ. ನಾನಿಲ್ಲಿ ಒಂಟಿ, ನನಗ್ಯಾರು ಇಲ್ಲ... ಎಂದೆಲ್ಲ ಹೇಳಿ ನೇಣು ಬಿಗಿದುಕೊಂಡಳು. ಒದ್ದಾಡತೊಡಗಿದಳು. ಅವಳ ದನಿ ತಾಯಿಗೆ ಕೇಳಿಸಿತು‌ ಕಿಟಕಿಯಿಂದ ನೋಡಿದಾಗ ಆಘಾತವಾಯಿತು. ಒಮ್ಮೆಗೆ ಬಾಗಿಲನ್ನು ಒಡೆದು ಒಳ ಹೋದರು. ಅತ್ತಲಿಂದ ಆ ಹುಡುಗನಿಗೆ ಶಾಕ್ ಆಗಿ ನಂಬರ್ ಡಿಲೀಟ್ ಮಾಡಿದ್ದ. ಕೂಡಲೇ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ.

ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ,
೧) ನಿತ್ಯಶ್ರೀ, ಆ ಹುಡುಗ ಯಾರು ಏನು ಎಂದು ಕೂಡ ಅರಿಯದೇ ಪ್ರೀತಿ ಎಂಬ ಹೆಸರಿನಲ್ಲಿ ಮೋಸದ ಜಾಲಕ್ಕೆ ಬಿದ್ದವಳು. ತರಗತಿಯ ಹುಡುಗನಲ್ಲದಿದ್ದರೂ ಅಪರಿಚಿತ ಹುಡುಗನ ಸ್ನೇಹ ಬೆಳೆಸಿದ್ದಳು.
೨) ಹೆತ್ತವರಿಗೆ ಸುಳ್ಳು ಹೇಳಿ ಹಾಡುಹಗಲೇ ಮೋಸ ಮಾಡುತ್ತಿದ್ದಳು. ತಾನೇ ಬುದ್ಧಿವಂತೆ , ತಾಯಿಯನ್ನು ಹೇಗೆ ಬೇಕಾದರೂ ಮೋಸ ಮಾಡಬಹುದು ಎಂದು ಬಗೆದ ನಿತ್ಯಶ್ರೀ ತಾನೇ ಮೋಸ ಹೋದಳು.
೩) ಹರೆಯದ ಹುಚ್ಚು ಆಸೆಗಳಿಗೆ ರೆಕ್ಕೆ ಕಟ್ಟಲು ಹೋಗಿ, ನನಗೂ ಒಬ್ಬ ಗೆಳೆಯ ಬೇಕು... ಎಂದು ಬಯಸಿ ರೆಕ್ಕೆ ಮುರಿದುಕೊಂಡು ನೆಲಕ್ಕುರುಳಿ ಬಿದ್ದವಳು.
೪) ಅಲ್ಲದೇ ಹರೆಯದ ಮಕ್ಕಳ ಜವಾಬ್ದಾರಿಯನ್ನು ತಂದೆಯಾದವರು ತೆಗೆದುಕೊಳ್ಳದೇ ತನಗೆ ಉದ್ಯೋಗವೇ ಮೊದಲು ಎಂಬಂತೆ ಮನೆ ಮತ್ತು ಮಕ್ಕಳ ಜವಾಬ್ದಾರಿಯನ್ನು ಹೆಂಡತಿಗೆ ವಹಿಸುವುದು.
೫) ಹರೆಯಕ್ಕೆ ಕಾಲಿಟ್ಟಾಗ ಆ ಮಕ್ಕಳಿಗೆ ಮನೆ, ಹೆತ್ತವರ ಮಾತುಗಳು ಉಸಿರು ಕಟ್ಟಿದಂತಾಗಿ , ಹೊರಗಿನವರ ಮೇಲೆ ನಂಬಿಕೆ ಅತಿಯಾಗುವುದು.
೬) ಹೆತ್ತವರನ್ನೇ ಶತ್ರುಗಳ ಹಾಗೆ ನೋಡಿ, ಹೊರಗಿನ ಸೆಳೆತಕ್ಕೆ ಬಲಿಯಾಗುವುದು.
೭) ಒಂದೇ ಮಗಳು ಯಾ ಮಗನೆಂದು ಅತಿಯಾಗಿ ಮುದ್ದು ಮಾಡಿ ಸಾಕಿ, ಅವರ ಬೇಡಿಕೆಗಳನ್ನೆಲ್ಲ ಇಡೇರಿಸುತ್ತ ಬಂದರೆ ಹರೆಯಕ್ಕೆ ಬಂದಾಗ ಕೈಗೆ ಸಿಗುವುದಿಲ್ಲ.
೮) ಮಕ್ಕಳು ಹರೆಯಕ್ಕೆ ಬಂದಾಗ ಎಚ್ಚರವಹಿಸುವ ಬದಲು ಮೊದಲಿನಿಂದಲೇ ಅವರ ಜೊತೆಗಿದ್ದು ಕಷ್ಟನಷ್ಟಗಳ ಬಗ್ಗೆ ಆಗಾಗ್ಗೆ ತಿಳುವಳಿಕೆ ನೀಡುತ್ತಿರಬೇಕು. ಜೀವನದ ಮೌಲ್ಯಗಳನ್ನು ತಿಳಿಸಿಕೊಡಬೇಕು. ಓದು, ವಿದ್ಯಾಭ್ಯಾಸದ ಮಹತ್ವ, ಉದ್ಯೋಗ , ಹಣದ ಮಹತ್ವ, ಕಷ್ಟ ನಷ್ಟಗಳ ಅರಿವು ಮೂಡಿಸುತ್ತಿರಬೇಕು.
೯) ತಮ್ಮ ತಾಯಿ ಈಗಿನ ತಂತ್ರಜ್ಞಾನದ ಅರಿವು ಇಲ್ಲದೇ ಇರಬಹುದು ,ಆದರೆ ಹೆತ್ತ ಕರುಳಿಗೆ ಮಗ/ಮಗಳು ಅಡ್ಡದಾರಿ ಹಿಡಿಯುತ್ತಿದ್ಸಾಗ ಮುಂದೇನೋ ಅನಾಹುತವಾಗುತ್ತದೆ ಎಂಬ ಸುಳಿವು ಬರುವುದು ಸುಳ್ಳಲ್ಲ.
೧೦) ಮಕ್ಕಳ ಕೈಗೆ ಮೊಬೈಲ್ ಸಿಕ್ಕಿದಾಗ ಅತಿಯಾಗಿ ಬಳಸುತ್ತ, ಪ್ರಪಂಚವೇ ತನ್ನ ಮುಷ್ಠಿಯಲ್ಲಿದೆ ಎಂದು ಭಾವಿಸುವುದೇ , ಯಾರದೋ ಕಾಣದ ಕೈಗೆ ಸಿಕ್ಕಿಹಾಕಿಕೊಳ್ಳಲು ಕಾರಣ. ಅತಿಯಾದ ಆಕರ್ಷಣೆ, ಕುತೂಹಲಗಳೇ ಅನಾಹುತಗಳನ್ನು ಆಹ್ವಾನಿಸುತ್ತವೆ.

- ಸಿಂಧು ಭಾರ್ಗವ ಬೆಂಗಳೂರು (ಲೇಖಕಿ)

Wednesday, 29 September 2021

Mom She is Always Great ತಾಯಿಯಾದ ಮೇಲೆ ಆಗುವ ಬದಲಾವಣೆಗಳು


ಲೇಖನ : ತಾಯಿಯಾದ ಮೇಲೆ ಆಗುವ ಬದಲಾವಣೆಗಳು

ಹೆಚ್ಚಿನ ಕಡೆಯಲ್ಲಿ ನೀವು ಗಮನಿಸಿದಂತೆ ೨೦-೨೪ ವರುಷದೊಳಗೆ ಹೆಣ್ಮಕ್ಕಳಿಗೆ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸುವುದನ್ನು. ಕೆಲವರಿಗೆ ಮದುವೆಯ ಬಗ್ಗೆ  ಆಸಕ್ತಿ ಇಲ್ಲದಿದ್ದರೂ ಕೂಡ ಮನೆಯವರ ಒತ್ತಾಯದ ಮೇರೆಗೆ ಮದುವೆಯಾಗುತ್ತಾರೆ. ಕೆಲವರು ಮನೆಯವರ ಜವಾಬ್ದಾರಿ ಕಡಿಮೆ ಮಾಡಲು ಒಪ್ಪುತ್ತಾರೆ. ಕೆಲವರಿಗೆ ಮದುವೆ ಬಗ್ಗೆ ಏನೂ ಯೋಚನೆಯೂ ಇಲ್ಲದಿದ್ದರೂ ಮದುವೆಯಾಗಿರುತ್ತದೆ. ಕೆಲವರಿಗೆ ಒತ್ತಾಯದ ಮದುವೆಯಾಗುತ್ತದೆ. ಇನ್ನು ಮದುವೆ ಎಂದರೆ ಬಂಧನ /ಜೈಲು ಎಂದೆಲ್ಲ ಯೋಚಿಸುವವರೂ ಇದ್ದಾರೆ. ಮದುವೆ ಎಂಬುದು ಎರಡು ಮನೆ ಮನಸ್ಸುಗಳ ಬೆಸೆಯುವ ಕೊಂಡಿ. ಹೊಸತನಕ್ಕೆ ಮನಃಪೂರ್ವಕವಾಗಿ ಒಗ್ಗಿಕೊಳ್ಳಲೇಬೇಕು.
ಸಂಭ್ರಮಿಸಬೇಕು. ಖುಷಿಪಡಬೇಕು.

ಅದಕ್ಕೆ ಹೇಳುವುದು ಆಯಾಯ ಸಮಯದಲ್ಲಿ ಏನೇನು ಆಗಬೇಕೋ ಹಾಗೆ ನಡೆದರೆ ಒಳ್ಳೆಯದೆಂದು.  ಹೆಣ್ಮಕ್ಕಳಿಗೆ ಉದ್ಯೋಗ, ಮದುವೆ, ಗಂಡನ ಜೊತೆಗಿನ ಹೊಸ ಜೀವನ ಎಲ್ಲವನ್ನೂ ನಿಭಾಯಿಸುವುದು ಕಷ್ಟ. ಹಾಗೆಯೇ ಇವೆಲ್ಲವನ್ನೂ ನಿಭಾಯಿಸಲು ಶಕ್ತರಾಗುವ ಹೊತ್ತಿಗೆ ವರುಷ ೨೬+ ಆಗಿರುತ್ತದೆ. ಆಗ ಎದುರಾಗುವ ಸಮಸ್ಯೆಗಳು ಬೇರೆಯೇ ಇರುತ್ತದೆ.

ಕೆಲವರಿಗೆ ಅನಿಸುವುದಿದೆ, "ಈಗಿನ ಕಾಲದಲ್ಲೂ ಇಷ್ಟು ಬೇಗ ಮದುವೆ ಮಾಡಿಸೋದಾ..?? ಜಾಬ್ ಗೆ ಹೋಗೋದಿಲ್ವಾ ನಿಮ್ಮ ಸೊಸೆ?!??  ಮನೆಯಲ್ಲೇ ಮಕ್ಕಳ ಸಾಕೊಂಡು ಇದ್ದಾಳಾ?!? " ಎಂದು ಬಾಯಿ ಅಗಲಿಸಿ ಗುಂಡು ಕಣ್ಣು ಮಾಡಿಕೊಂಡು ಕೇಳುತ್ತಾರೆ. ಏನೋ ಅಪರಾಧ ಮಾಡುತ್ತಿರುವಂತೆ, ಅಥವಾ ಅವರಿಗೆ ಮೂರ್ಖರಂತೆ ಕಾಣಿಸುವುದು ಹಾಸ್ಯಾಸ್ಪದ. ತಮ್ಮ ಮೂಲವನ್ನು ಮರೆತು ಈಗಿನ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವವರು ಮಾತ್ರವೇ ಈ ರೀತಿ ಕೇಳುವುದು.

ಬೇಗ ಮದುವೆಯಾದರೆ ಹೆಣ್ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ವೈದ್ಯಕೀಯ ವಲಯವೇ ಹೇಳುತ್ತದೆ. ಒಂದೆರಡು ವರುಷದೊಳಗೆ ಮಗುವಾದರೆ ಮತ್ತೆ ಅವುಗಳ ಲಾಲನೆ ಪಾಲನೆಯಲ್ಲಿ ೧೦ ಹತ್ತು ವರ್ಷಗಳನ್ನು ವ್ಯಯಿಸಬೇಕಾಗುತ್ತದೆ. ನಮ್ಮ ಜೀವಿತದ ಹತ್ತು ವರುಷ ಏನೂ ಅರಿಯದ ಮುಗ್ಧ ಮಕ್ಕಳನ್ನು ಬೆಳೆಸಲು ತ್ಯಾಗ ಮಾಡಬೇಕಾಗುತ್ತದೆ. ಅದೊಂದು ಗ್ರೇಟ್ ಅನುಭವ. ಮಹತ್ವದ ಸಾಧನೆ. ಈಗಿನ ಕಾಲದಲ್ಲಿ ಒಂದು ಸುಸಂಸ್ಕೃತ ವಾತಾವರಣದಲ್ಲಿ ಮಕ್ಕಳ ಬೆಳೆಸುವುದೂ ಅಗತ್ಯವಾಗಿದೆ.

ನಂತರ ೩೪ ವರ್ಷದ ಮೇಲೆ ಕೆಲಸಕ್ಕೆ ಸೇರಬಹುದು. ನಿಮ್ಮ ಜೀವನ ನಿಮಗಾಗಿ ಬದುಕಬಹುದು. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸುತ್ತಾರೆ. ಓದುವುದು ಬರೆಯುವುದು, ಗಂಡ ಆಫೀಸಿಗೆ ಹೋದರೆ ಮಕ್ಕಳು ಶಾಲೆಗೆ ಹೋದರೆ ಮನೆ ಖಾಲಿ ಇರುತ್ತದೆ. ಬೇಸರ ಕಳೆಯಲು ನೀವೂ ಉದ್ಯೋಗಕ್ಕೆ ಸೇರಬಹುದು.. ಒಂದು ೫೫-೬೦ ವರುಷಗಳ ಕಾಲ ದುಡಿಯಬಹುದು.

ಹಾಗಾಗಿ ತಾಳ್ಮೆ ಅಗತ್ಯ. ಎಲ್ಲದಕ್ಕೂ ಅತಿಯಾಗಿ ಯೋಚಿಸದೆ ಮಕ್ಕಳಿಗಾಗಿ ಒಂದಷ್ಟು ವರುಷಗಳು ತ್ಯಾಗ ಮಾಡಬೇಕಾಗುತ್ತದೆ.

ಇನ್ನು ತಾಯಿಯಾದ ಮೇಲೆ ಕಂಡ ಬದಲಾವಣೆಗಳು :
*****************************************
ಪ್ರಥಮವಾಗಿ ಸಮಯದ ಅಭಾವ. ನಮಗೆ ಅಂತ ಸಮಯ ಸಿಗುವುದಿಲ್ಲ. ಅತಿಯಾದ ಕೆಲಸ. ಪುಟ್ಟ ಮಕ್ಕಳು ಅವರಾಗೇ ಏನೂ ಮಾಡುವುದಿಲ್ಲವೆಂದಾಗ ಬೆಳಿಗ್ಗೆ ಏಳಿಸಿ ಹಲ್ಲು ಉಜ್ಜಿಸುವುದರಿಂದ ರಾತ್ರಿ ನೀತಿಕತೆ ಹೇಳಿ ಮಲಗಿಸುವ ತನಕ ಎಲ್ಲವೂ ತಾಯಿಯೇ ಮಾಡಬೇಕು. ಹಗಲು - ರಾತ್ರಿ‌ ನಿದಿರೆ ಬಿಡಬೇಕು. ನಮಗಾಗಿ ಕುಳಿತು ತಿನ್ನುವಷ್ಟು ಸಮಯ ಇರುವುದಿಲ್ಲ. ಗಬಗಬ ತಿಂದು, ಅರೆಬರೆ ತಿಂದು ಮಕ್ಕಳ ನೋಡುವುದಾಗುತ್ತದೆ. ಮಗುವಿಗೆ ತಿನಿಸಿದ ಮೇಲೆ ನಮ್ಮ ಹಸಿವು ಇಂಗಿರುತ್ತದೆ. ಸಮಯ ಕಳೆದು ಹೋಗುವುದೇ ತಿಳಿಯುವುದಿಲ್ಲ. ದಪ್ಪ ಆಗುತ್ತಾರೆ. ವ್ಯಾಯಾಮ ಮಾಡಲು ಸಮಯವಿರುವುದಿಲ್ಲ. ಹಾಡು ಸಿನೆಮಾ ಓದುವುದು ಯಾವುದಕ್ಕೂ ವೈಯಕ್ತಿಕ ಸಮಯ ಸಿಗುವುದಿಲ್ಲ. ಮಕ್ಕಳ ಆರೋಗ್ಯ ಕೆಟ್ಟಾಗ ವೈದ್ಯರ ಬಳಿ ಓಡಿ ಹೋಗಿ ಕಾದು ಔಷಧಿ ಕೊಡಿಸಬೇಕು. ರಾತ್ರಿ ನಿದಿರೆ ಬಿಟ್ಟು ಅವರ ಆರೈಕೆ ಮಾಡಬೇಕು.

ಗಂಡನ ಜೊತೆ ಏಕಾಂತವಾಗಿ ಸಮಯ ಕಳೆಯಲು ಆಗುವುದಿಲ್ಲ. ಅವನಿಗೆ ಬೇಸರವಾದರೆ ನಮಗೂ ಬೇಸರ. ಕೆಲವು ಗಂಡಸರು ಕೊಂಚಕೊಂಚವೇ ಬದಲಾಗುತ್ತ ಹೋಗುತ್ತಾರೆ. ಉದ್ಯೋಗಕ್ಕೆ ಹೋಗುವವರು ಕೆಲವೊಮ್ಮೆ ತಮ್ಮ ವೃತ್ತಿಯನ್ನು ನಿಲ್ಲಿಸಿ ಮಗುವಿನ ಪಾಲನೆಯಲ್ಲಿ ತೊಡಗಬೇಕಾಗುತ್ತದೆ. ಕಾರಣ ಸಹಾಯಕ್ಕೆ ಆಯಾ, ಅಥವಾ ಬೇರೆ ಯಾರೂ ಇರದಿದ್ದಾಗ ಈ ಸಮಸ್ಯೆ ಎದುರಾಗುತ್ತದೆ.

ಮಕ್ಕಳ ಎದುರು ಅಳುವ ಹಾಗಿಲ್ಲ. ಬೇಸರವಾದರೆ ತೋಡಿಕೊಳ್ಳುವ ಹಾಗಿಲ್ಲ. ಓಡೋಡಿ ಬಂದು "ಯಾಕಮ್ಮ ಅಳುವೆ " ಎಂದು ಕೇಳುವರು. ಸದಾ ನಗುತ್ತ ಇರಬೇಕು. ನಮ್ಮ ಮನಸ್ಸಿನ ನೋವನ್ನು ನಾವೇ ಯಾವುದೋ ಮೂಲೆಯಲ್ಲಿ ಮಕ್ಕಳಿಗೆ ಗೊತ್ತಾಗದ ಹಾಗೆ ಅಳಬೇಕು. ಅವರೆದು ಹೇಳುವ ಹಾಗಿಲ್ಲ. ನಕಾರಾತ್ಮಕವಾಗಿ ಯೋಚಿಸುವ ಹಾಗಿಲ್ಲ,ಮಾತನಾಡುವ ಹಾಗಿಲ್ಲ. ಸಮಾಧಾನ ಮಾಡಿಕೊಳ್ಳಬೇಕು. ಹೊಂದಿಕೊಂಡು ಹೋಗಬೇಕು. ಸಹಿಸಿಕೊಳ್ಳಬೇಕು. ಕೆಲವರಿಗೆ ಗಂಡ ಸರಿಯಿಲ್ಲದಿದ್ದರೆ ಕೂಡ ಮಕ್ಕಳ ಎದುರು ದೂರು ಹೇಳಬಾರದು. ಮಕ್ಕಳ ಎದುರೇ ಗಂಡನೊಂದಿಗೆ ಜಗಳ ಮಾಡಬಾರದು. ಗಂಡನ ಬಗ್ಗೆ ಕೇವಲ ವಾಗಿ ಮಾತನಾಡಬಾರದು.  ಅವರಿಗೆ ಕೂಡ ತಂದೆಯ ಬಗ್ಗೆ ಕೆಟ್ಟ ಅಭಿಪ್ರಾಯ ಬೆಳೆಯಲು ಕಾರಣವಾದೀತು. ಅವರು ಕೂಡ ತಂದೆಗೆ  ಗೌರವ ಕೊಡದಿರಬಹುದು.

ಬದುಕು ಏನೆಲ್ಲ ಕಲಿಸಿಕೊಡುತ್ತದೆ. ಮೊದಲಿಗೆ ಸಹನೆ ತ್ಯಾಗ ಒಂದೇ ನಾಣ್ಯದ ಎರಡು ಮುಖಗಳಂತೆ. ಹೆಣ್ಣಿಗೆ ಅದೇ ಭೂಷಣ. ತಾಯಿಯಾಗಿ ಮಕ್ಕಳಿಗೆ ಓದಿಸುವುದು ಬರೆಯಲು ಕಲಿಸಿಕೊಡಬೇಕು. ಸ್ನೇಹಿತರ ಜೊತೆಗೆ ಹೇಗೆ ಸ್ನೇಹದಿಂದ ಇರಬೇಕು ಎಂಬುದೂ ತಿಳಿಸಿಕೊಡಬೇಕು. ಹೆದರದೇ ಧೈರ್ಯದಿಂದ ಇರಲು , ಮಾತನಾಡಲು ಕಲಿಸಿಕೊಡಬೇಕು. ನೀತಿ ಕತೆಗಳನ್ನು ಹೇಳಿಕೊಡಬೇಕು.

ಅಮ್ಮ - ಹೇಗೆ ಗ್ರೇಟ್ ಎಲ್ಲರಿಗಿಂತ ಒಂದು ಹಂತ ಮೇಲೆಯೇ ಇರುವುದು ಎಂದು ಯೋಚಿಸುವುದಕ್ಕಿಂತ ಹಾಗೆಯೇ ಬಾಳಿ ತೋರಿಸಬೇಕು. ಮಕ್ಕಳಿಗೆ ಅಮ್ಮನೇ ಸರ್ವಸ್ವ. ಅವಳನ್ನು ನೋಡುತ್ತಲೇ ಅವಳ ಒಡನಾಟದಲ್ಲೇ ಬೆಳೆಯುತ್ತಾರೆ. "ಅಮ್ಮ... ಅಮ್ಮಾ..." ಎಂದು ಕಾಲಿಗೆ ಸುತ್ತು ಹಾಕಿಕೊಂಡಿರುತ್ತಾರೆ. ಪ್ರತಿಯೊಂದಕ್ಕೂ ಅಮ್ಮನನ್ನೇ ಅವಲಂಭಿಸಿಕೊಂಡಿರುತ್ತಾರೆ. ಅಮ್ಮನಿಲ್ಲದ ಮನೆಯೇ ಶೂನ್ಯ ವಾತಾವರಣ.

ಅತಿಯಾಗಿ ನಗಲೂ ಹಾಸ್ಯ ಮಾಡಿಕೊಂಡು ಚಿಲ್ ಔಟ್ ಮಾಡಲೂ ಸಾಧ್ಯವಾಗದು. ಅಮ್ಮ ಯಾವಾಗಲೂ ಎಲ್ಲವನ್ನೂ ತ್ಯಜಿಸುವವಳು.  ಮಮತೆಯ ಸ್ಥಾನವನ್ನು ತುಂಬಿಸುವವಳು. ಆತ್ಮಬಲ, ಶಕ್ತಿ , ಧೈರ್ಯ ನೀಡುವವಳು. ಅಮ್ಮನ ಸ್ಥಾನ ಪಡೆದ ಮೇಲೆ ಏನೆಲ್ಲ ಅನುಭವವಾಗುವುದು. ಇದು ನಿಜಕ್ಕೂ ಗ್ರೇಟ್.

ಧನ್ಯವಾದಗಳು
ಸಿಂಧು ಭಾರ್ಗವ ಬೆಂಗಳೂರು

(ಲೇಖಕಿ)

Tuesday, 28 September 2021

ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು??

 

Source images stop abused save girls

ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು??

ಹೆಣ್ಣು ಮನೆ ಬೆಳಗುವ ದೀಪ. ಸದಾ ತನ್ನವರ ಒಳಿತನ್ನೇ ಬಯಸುವವಳು. ತನ್ನ ವಯೋಸಹಜ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಬದುಕುವ ತ್ಯಾಗಮಯಿ. ಆದರೆ ಹೆಣ್ಣಾಗಿ ಹುಟ್ಟಿದಿ ನೀ ಹುಣ್ಣಿನಂತ ಬಾಳು ಬದುಕು, ಮಣ್ಣಾಗುವ ವರೆಗೂ ನೀ ಎಲ್ಲವನ್ನೂ ಸಹಿಸು ಎಂಬರ್ಥದ ಹಿರಿಯ ಜನಪದ ಹಾಡನ್ನು ಕೂಡ ನಾವು ಕೇಳಿರುತ್ತೇವೆ.  ಹೆಣ್ಣಾಗಿ ಹುಟ್ಟಿದುದಕ್ಕೆ ಎಲ್ಲವನ್ನೂ ಸಹಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮನೆಯಲ್ಲಿ ಮಾತ್ರವಲ್ಲದೇ ಈ ಸಮಾಜದಲ್ಲಿ, ವೃತ್ತಿಜೀವನದಲ್ಲಿ ಅದೆಷ್ಟೋ ಮಹಿಳೆಯರು ಕಿರುಕುಳ, ಒತ್ತಡದ , ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಕೆಲವರು ಮೂಕವೇದನೆ ಅನುಭವಿಸುತ್ತಾರೆ. ಕೆಲವರು ಅಂತಹ ಸ್ಥಳದಿಂದ ಹೊರನಡೆಯುತ್ತಾರೆ. ಇನ್ನೂ ಕೆಲವರು ಇಹಲೋಕ ತ್ಯಜಿಸುವುದೂ ಉಂಟು.

ಹಾಗಾಗಿ ಹೆಣ್ಣಿನ ಶೋಷಣೆಗೆ ಕೊನೆ ಇಲ್ಲ ಎಂದೇ ಹೇಳಬಹುದು.  ಕೆಲವರಿಗೆ ಹೆಣ್ಣು ಮಗು ಹುಟ್ಟಿತೆಂದು ಸಸಾರ. ಇನ್ನು ಕೆಲವರಿಗೆ ಕೆಲಸದ ಆಳು, ಮನೆಯಲ್ಲಿಯೇ ಬಿದ್ದಿರಬೇಕು. ವರದಕ್ಷಿಣೆ ಕಿರುಕುಳದಿಂದ ಅಮಾನವೀಯ ಕೃತ್ಯ ಎಸಗುವುದು ಸರ್ವೇಸಾಮಾನ್ಯವಾದ ಸಂಗತಿ. ಯಾರೊಂದಿಗೂ ಹೇಳಿಕೊಳ್ಳುವ ಹಾಗಿಲ್ಲ. ಹೇಳಿದರೂ ಸಾಂತ್ವಾನದ ಮಾತುಗಳು ಕೇಳಿ ಬರುವ ಬದಲು "ಎಲ್ಲರ ಮನೆಯ ದೋಸೆ ತೂತೆ...ಹೊಂದಿಕೊಂಡು ಹೋಗು .." ಎಂಬ ಮಾತು ತೇಲಿಸಿಬಿಡುತ್ತಾರೆ. ಆಕೆಯ ಮನಸ್ಸಿನ ಮೇಲಾಗುವ ಪರಿಣಾಮಗಳನ್ನು ಯಾರೂ ಅರ್ಥಮಾಡಿಕೊಳ್ಳಲು ಹೋಗುವುದಿಲ್ಲ. ಇಷ್ಟೇ ಅಲ್ಲದೇ ಇನ್ನೊಂದು ಮುಖವಾಗಿ ತಮ್ಮ ಯವ್ವನದ ಕಾಮಕೇಳಿಗೆ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಳ್ಳುವ ಹೆಣ್ಮಕ್ಕಳು, ಅಥವಾ ಹೆತ್ತು ತೊಟ್ಟಿಯಲ್ಲಿ ಶಿಶುವನ್ನು ಎಸೆದು ಹೋಗುವವರು ಇದ್ದಾರೆ. ಮಾದಕ ದ್ರವ್ಯಗಳ ಸೇವನೆಗೆ ಬಲಿಯಾಗಿ ಹೆಣ್ಮಕ್ಕಳು ತಮ್ಮ ಸುಂದರ ಬದುಕನ್ನು ನಾಶಮಾಡಿಕೊಳ್ಳುವವರೂ ಇದ್ದಾರೆ. ಇನ್ನು ಹಣದ ಆಸೆಗೆ ವೇಶ್ಯಾವಾಟಿಕೆ  ದಂಧೆಗೆ ನೂಕುವ ಕ್ರೂರಿಗಳು, ಎಳೆ ಮಗುವಿನಿಂದಾದಿಯಾಗಿ ವೃದ್ಧ ಹೆಂಗಸು, ಬಿಕ್ಷುಕಿಯನ್ನೂ ಬಿಡದೇ ನಡೆಯುವ ಅತ್ಯಾಚಾರಗಳು, ಕೊನೆಗೆ ವಿಷಯ ಹೊರಬರಬಾರೆಂದು ಕೊಲೆಯಲ್ಲಿ ಅಂತ್ಯ. ತಮ್ಮ ಕೈಗೆ ಸಿಗದಿದ್ದರೆ ಶೀಲಗೆಟ್ಟವಳೆಂಬ ಪಟ್ಟ ಕಟ್ಟುವುದು ಇಲ್ಲ ಕೆಲ ಗಂಡಸರು ತಮ್ಮ ಹೆಂಡತಿಯ ಮೇಲೆಯೇ ಶಂಕೆ ಪಡುವುದು... ಒಂದೇ ಎರಡೇ...

            ಇದೆಲ್ಲವೂ ಸಮಾಜದಲ್ಲಿ ನಡೆದಾಗ ಉಳಿದ ಹೆಣ್ಮಕ್ಕಳ ರಕ್ತ ಕುದಿಯುತ್ತದೆ. ಅದೇ ತನಗೇ ಹಾಗೆ ಆದಾಗ ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳುತ್ತಾರೆ. ಕೆಲವರು ಮುಂದೆ ಬಂದು ದನಿ ಎತ್ತಿದರೂ ಕಾಣದ ಬಲಿಷ್ಠ ಕೈಗಳು ಅಲ್ಲಿಯೇ ಕ್ಷೀಣಿಸುವ ಹಾಗೆ ಮಾಡಿ ಬಿಡುತ್ತಾರೆ. ಕೆಲವರಿಗೆ ಮಾತ್ರವೇ ನ್ಯಾಯ ಸಿಗುತ್ತದೆ.

Source images: save girls, stop abused


ಅತ್ಯಾಚಾರ, ಆಸಿಡ್ ದಾಳಿ, ಕೊಲೆಯತ್ನ, ಹಲ್ಲೆ ಇವೆಲ್ಲದಕ್ಕೂ ಅವಳ ಮೇಲಿನ ದ್ವೇಷಕ್ಕೆ ಇರಬಹುದು. ಪ್ರೀತಿಯ ವಿಚಾರಕ್ಕಿರಬಹುದು. ಹಣಕ್ಕಾಗಿ ಕೂಡ ಕೃತ್ಯವೆಸಗಬಹುದು. ಅಥವಾ ಅಚಾನಕ್ ಆಗಿ ಯಾರು ಅಪರಿಚಿತನಿಂದಲೂ  ಅತ್ಯಾಚಾರಕ್ಕೊಳಗಾಗಬಹುದು. ಆಸಿಡ್ ದಾಳಿಗಳಾಗಬಹುದು. ಮಹಿಳೆಯರು ಮತ್ತು ಮಕ್ಕಳ ಮೇಲೆ ಆಗುವ ಇಂತಹ ದೌರ್ಜನ್ಯಕ್ಕೆ ತಕ್ಕ ಶಿಕ್ಷೆಯನ್ನು ನಮ್ಮ ಕಾನೂನು ಜಾರಿಗೊಳಿಸಿದರೆ ಅದರ ಭಯ ಅಪರಾಧಿಗಳಿಗೆ ಮೂಡುವುದು ಸುಳ್ಳಲ್ಲ. ಅತ್ಯಾಚಾರಕ್ಕೆ ಒಳಗಾದ ಸಂತೃಸ್ತೆಯ ಹೇಳಿಕೆ ಪಡೆದು ಅಪರಾಧಿಗಳ ಹುಡುಕಿ, ಅಪರಾಧವೆಸಗಿದ್ದು ಸಾಬೀತಾದರೆ ನೇರವಾಗಿ ಗುಂಡಿಕ್ಕಿ ಸಾಯಿಸುವ ಶಿಕ್ಷೆ ನೀಡಬೇಕು. ಕೆಲವು ಸಂತೃಸ್ತರು ದೂರನ್ನು ದಾಖಲಿಸಲು ಮುಂದೆ ಬರುವುದೇ ಇಲ್ಲ. ಮತ್ತೊಂದಿಷ್ಟು ಪ್ರಶ್ನೆಗಳ ಕೇಳಿ ಮನಸ್ಸನ್ನು ಘಾಸಿಗೊಳಿಸುತ್ತಾರೆ ಎಂಬ ಭಯ. ಅಥವಾ ಆಕೆಗೂ ಹಾಗು ಮನೆಯವರಿಗೂ ಅವಮಾನದ ಮೇಲೆ ಅವಮಾನ ಎದುರಿಸುವ ಆತ್ಮಸ್ಥೈರ್ಯ ಕುಂದಿರುವುದು ಇದಕ್ಕೆ ಕಾರಣ ಎನ್ನಬಹುದು.

ಕೆಲವೊಮ್ಮೆ ಆಕೆಯ‌ ಮನೆಯವರಿಗೆ ಒಂದಷ್ಟು ಹಣ ನೀಡಿಯೋ, ಇಲ್ಲ ಮದುವೆ ಮಾಡಿಕೊಂಡೋ ವಿಷಯವನ್ನು ಅಲ್ಲೇ ಮುಚ್ಚಿಹಾಕುತ್ತಾರೆ. ಕಾರಣ, ಕೆಲವೊಮ್ಮೆ ಅತ್ಯಾಚಾರವು ಪರಿಚಿತರಿಂದಲೇ ನಡೆಯುವುದು. ಮಹಿಳೆಯ ಮೇಲಾಗುವ ದೌರ್ಜನ್ಯ ,ಹಿಂಸೆಯು ಕೂಡ ಹಿರಿಯರ ಸಮ್ಮುಖದಲ್ಲಿ ಮಾತುಕತೆ ಸಂಧಾನದ ಮೇಲೆ ವಿಷಯವು ಅಲ್ಲೇ ತಣ್ಣಗಾಗುವುದು. ಹಾಗಾಗಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸರ್ಕಾರವಾಗಲಿ ,ಕಾನೂನಾಗಲಿ ಕಠಿಣ ಶಿಕ್ಷೆಯನ್ನು ವಿಧಿಸಿದರೆ ಮಾತ್ರವೇ ಇಂತಹ ಘಟನೆಗಳು ಮರುಕಳಿಸದಂತೆ ಇರಲು ಸಾಧ್ಯ. ಅಲ್ಲದೇ ತಮಗಾದ ಅನ್ಯಾಯದ ವಿರುದ್ಧ ದನಿ ಎತ್ತಲು ಮಹಿಳೆಯರಿಗೆ ಧೈರ್ಯಬರುವುದು. ಅಂತಹ ಕೂಪದಲ್ಲಿ ಬಿದ್ದು ಸಾಯುವುದಕ್ಕಿಂತ ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದು.

ಮಹಿಳೆಯರಾಗಿ ಇಂತಹ ವಿಷಮ ಸ್ಥಿತಿಯಲ್ಲಿ ಧೈರ್ಯಗೆಡಬಾರದು. ಬದುಕು ಕಟ್ಟಿಕೊಳ್ಳಬೇಕು. ಈ ಸಮಾಜ ಆಡುವ ಚುಚ್ಚು ಮಾತಿಗೆ ಧೃತಿಗೆಡದೆ ತಲೆ ಎತ್ತಿ ಬಾಳಬೇಕು. ನ್ಯಾಯಕ್ಕಾಗಿ ಹೋರಾಡಬೇಕು. ಇಲ್ಲ ಅಂತಹ ಕೆಟ್ಟ ಪರಿಸರದಿಂದ ಹೊರಬಂದು ಹೊಸ ಜೀವನ ಪ್ರಾರಂಭಿಸಬೇಕು. ಬದಲಾಗಿ ಸಾವಿಗೆ ಶರಣಾಗಬಾರದು. ಈ ಜಗತ್ತಿನಲ್ಲಿ ಸಾಂತ್ವಾನ ಹೇಳುವ ಕೈಗಳು ಕೂಡ ಇವೆ‌. ನೆನಪಿರಲಿ. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ, ಹೆರುವ ಯಂತ್ರವಾಗಿ, ವರದಕ್ಷಿಣೆ ತಂದು ಕೊಡುವ ATM ಯಂತ್ರವಾಗಿ ನೋಡುವ ಬದಲು, ನಾನಾ ಕಾರಣ ಒಡ್ಡಿ ಪೀಡಿಸುವ ಬದಲು ಅವಳಿಗೂ ಮನಸ್ಸಿದೆ. ನೋಯಿಸದಿರಿ. ಬದುಕಲು ಬಿಡಿ ಎಂಬುದ ಅರ್ಥ ಮಾಡಿಕೊಳ್ಳಿರಿ.

ಸಿಂಧು ಭಾರ್ಗವ್ | ಬೆಂಗಳೂರು-೨೧
ಬರಹಗಾರ್ತಿ

Uses of Amla Custurd Apple and Gauva ಸೀಬೆಹಣ್ಣು, ಸೀತಾಫಲ ಹಾಗು ನೆಲ್ಲಿಕಾಯಿಯ ಉಪಯೋಗ

ಕನ್ನಡ ಲೇಖನ


ಮಾರುಕಟ್ಟೆಯ ಆವರಿಸಿದ ಸೀತಾಫಲ ಹಾಗೂ ಸೀಬೆಹಣ್ಣುಗಳು

ಕಾಲಕ್ಕೆ ತಕ್ಕಂತೆ ಕೋಲ ಕಟ್ಟು ಎಂಬ ಹಿರಿಯರ ನಾಣ್ನುಡಿಯಂತೆ ಆಯಾಯ ಕಾಲಕ್ಕೆ ತಕ್ಕಂತೆ ನಾವು ಹೊಂದಿಕೊಂಡು ಬದುಕಬೇಕು. ನಮ್ಮ ಆಹಾರಕ್ರಮದಲ್ಲಿ ಋತುಗಳಿಗೆ ಅನುಗುಣವಾಗಿ ಕೂಡ ಬದಲಾವಣೆ ಮಾಡಿಕೊಳ್ಳಬೇಕು. ಈಗ ಲ್ಲಿ ಗಲ್ಲಿಯಲ್ಲಿ, ತಳ್ಳೋ ಗಾಡಿಯಲ್ಲಿ, ತರಕಾರಿ ಸಂತೆಗಳಲ್ಲಿ ಕಾಣ ಸಿಗುವ ಹಣ್ಣುಗಳೆಂದರೆ ಸೀಬೆಹಣ್ಣು ಹಾಗೂ ಸೀತಾಫಲ ಹಣ್ಣುಗಳ ರಾಶಿ. ಜೊತೆಗೆ ನೆಲ್ಲಿಕಾಯಿಯು ತನ್ನ ಸ್ಥಾನವನ್ನು ಪಡೆದಿದೆ. ಒಮ್ಮೆ ಗಮನಿಸಿದರೆ ವಿಟಮಿನ್ ಸಿ ಅಂಶ ಹೇರಳವಾಗಿರುವ ಈ ಹಣ್ಣುಗಳು ಈಗಿನ ಮಾಸಕ್ಕೆ ನಮ್ಮ ದಿನನಿತ್ಯದ ಬಳಕೆಯಾಗಬೇಕು. ಇವುಗಳ ಉಪಯೋಗ, ಏಕೆ ಬಳಸಬೇಕು ಎಂದು ನೋಡೋಣ.

ಮೊದಲಿಗೆ ಸೀಬೆಹಣ್ಣು : 

Uses of Gauva Fruits



ನಮ್ಮ ದೇಶದಲ್ಲಿ ಅದರಲ್ಲೂ ಕರ್ನಾಟಕಲ್ಲಿ ಅಗಸ್ಟ್ ಮಾಸದಲ್ಲಿಯೇ ಸೀಬೆಹಣ್ಣುಗಳು ಕಟಾವಿಗೆ ಬರುವುದು. ಒಂದಷ್ಟು ಜನರು ನೇರವಾಗಿ ತೋಟಕ್ಕೆ ಹೋಗಿ ಹಣ್ಣುಗಳ ಖರೀದಿಸಿದರೆ, ಹೆಚ್ಚಿನವರು ಮಾರುಕಟ್ಟೆಯಲ್ಲಿ ಬರುವ ಈ ಸೀಬೆಹಣ್ಣನ್ನು ಖರೀದಿಸುವರು. ಕೆ.ಜಿಗೆ 40-50  ರೂಪಾಯಿ ದರವನ್ನು ನಿಗದಿ ಮಾಡಲಾಗಿರುತ್ತದೆ. ಬಿಳಿ ಬಣ್ಣದ, ಕಡುಗುಲಾಬಿ, ಕೆಂಪು ಬಣ್ಣದ ತುಂಬಾ ಸಿಹಿಯಾದ, ಸ್ಪಲ್ಪ ಸಿಹಿಯಾದ ಹಣ್ಣುಗಳ ನಾವು ಕಾಣಬಹುದಾಗಿದೆ. ಅದರಲ್ಲಿಯೂ ಅತ್ಯಂತ ದೊಡ್ಡ ಗಾತ್ರದ ಥೈಲ್ಯಾಂಡ್ ನ ಸೀಬೆಹಣ್ಣುಗಳು ಕೂಡ ನಮ್ಮ ರಾಜ್ಯಕ್ಕೆ ಲಗ್ಗೆ ಇಟ್ಟಿವೆ ಎನ್ನಬಹುದು. ಒಂದು ಹಣ್ಣು ಸುಮಾರು ೭೦೦-೭೫೦ ಗ್ರಾಂ ತೂಕ ತೂಗುತ್ತದೆ.
ಸೀಬೆಹಣ್ಣು ಎಲ್ಲ ಕಾಲದಲ್ಲೂ ಬೆಳೆಯುವ ಬೆಳೆಯಾಗಿದೆ. ಇದರ ಎಲೆಗಳು ಕೂಡ ಉಪಯೋಗಕಾರಿ. ವಿಟಮಿನ್ ಸಿ ಅಂಶ ಹೇರಳವಾಗಿ ಈ ಹಣ್ಣಿನಲ್ಲಿರುತ್ತದೆ. ಅಲ್ಲದೇ ಐರನ್,ಕ್ಯಾಲ್ಸಿಯಂ, ವಿಟಮಿನ್ ಎ ಅಂಶವೂ ಒಳಗೊಂಡಿದೆ. ಕೊಬ್ಬಿನಂಶ ಅತ್ಯಂತ ಕಡಿಮೆಯಿರುವ ಈ ಹಣ್ಣನ್ನು ಎಲ್ಲರೂ ಸೇವಿಸಬಹುದು. ಬಡವರ ಸೇಬು ಎಂದೇ ಹೆಸರುವಾಸಿಯಾದ ಈ ಹಣ್ಣನ್ನು ಪ್ರತಿದಿನ ಒಂದೊಂದು ಹಣ್ಣನ್ನು ತಿಂದರೆ ಜೀರ್ಣಕ್ರಿಯೆ ವೃದ್ಧಿಸುತ್ತದೆ. ಕಿತ್ತಳೆ ಹಣ್ಣಿಗಿಂತ ಅತಿ ಹೆಚ್ಚು ವಿಟಮಿನ್‌ ಸಿ ಅಂಶ ಹೊಂದಿರುವ ಈ ಹಣ್ಣು ಸೇವಿಸುವುದರಿಂದ ಅಲ್ಜೈಮರ್‌, ಅರ್ಥರೈಟಿಸ್‌ ಹಾಗೂ ಕಣ್ಣಿನ ಪೂರೆಯುಂಟಾಗುವಂತಹ ಕಾಯಿಲೆಗಳನ್ನು ದೂರಾಗಿಸುತ್ತದಂತೆ. ಅಷ್ಟೇ ಅಲ್ಲದೆ ಕ್ಯಾನ್ಸರ್‌ ಹಾಗೂ ಹೃದಯ ಕಾಯಿಲೆಗಳನ್ನು ದೂರವಿಡುತ್ತದಂತೆ.
ಹಣ್ಣಿಗೆ ಸ್ವಲ್ಪ ಪುಡಿ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಬೆರೆಸಿ ತಿಂದರೆ ಇನ್ನೂ ರುಚಿಯಾಗಿರುತ್ತದೆ.

ಸೀತಾಫಲ ಹಣ್ಣು :

Uses of Custerd Apple


 ಮಳೆಗಾಲದಲ್ಲಿ ಹೇರಳವಾಗಿ ಕಾಣಸಿಗುವ ಹಣ್ಣುಗಳಲ್ಲಿ ಇದು ಕೂಡ ಒಂದು. ಇದರಲ್ಲಿ ಕೂಡ ವಿಟಮಿನ್ ಸಿ ಹಾಗೂ ವಿಟಮಿನ್ ಎ ಯಥೇಚ್ಛವಾಗಿ ಸಿಗುತ್ತದೆ. ಇದು ವಿಪರೀತ ಸಿಹಿಯಾದ ಹಣ್ಣಾಗಿದೆ.  ಕಣ್ಣಿನ ದೃಷ್ಟಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಸೀತಾಫಲ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಈ ಮೇಲಿನ ವಿಟಮಿನ್ ಅಂಶಗಳು ಇದರಲ್ಲಿ ಇರುವುದರ ಜೊತೆಗೆ ರಿಬೋಫ್ಲಾವಿನ್, ವಿಟಮಿನ್ ಬಿ2 ಅಂಶಗಳು ಕೂಡ ಆಗಿರುವುದರಿಂದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ರೂಪಗಳು ನಿಸರ್ಗದತ್ತವಾಗಿ ಈ ಹಣ್ಣುಗಳಲ್ಲಿ ಸಿಗುತ್ತವೆ. ನಿಮ್ಮ ಕಣ್ಣಿನ ಹಲವಾರು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವಲ್ಲಿ ಇವುಗಳ ಪಾತ್ರ ತುಂಬಾ ದೊಡ್ಡದು. ನಾರಿನ ಅಂಶ ಹಾಗೂ ಮ್ಯಾಗ್ನೀಶಿಯಂ ಇದರಲ್ಲಿ ಇರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ಮಲಬದ್ಧತೆ ಸಮಸ್ಯೆ ದೂರವಾಗಿಸುತ್ತದೆ. ಬಾಯಿಯ ಹುಣ್ಣಿಗೆ ಕೂಡ ರಾಮಬಾಣ. ಸೀತಾಫಲ ಹಣ್ಣುಗಳಲ್ಲಿ ಮೆಗ್ನೀಷಿಯಂ ಮತ್ತು ಪೊಟ್ಯಾಷಿಯಂ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಹೃದಯದ ಕಾಯಿಲೆಗಳನ್ನು ದೂರ ಇರಿಸುವ ಮತ್ತು ಮಾಂಸಖಂಡಗಳ ಅಭಿವೃದ್ಧಿಯಲ್ಲಿ ನೆರವಾಗುವ ಜೊತೆಗೆ ರಕ್ತದ ಒತ್ತಡವನ್ನು ಕೂಡ ನಿಯಂತ್ರಣ ಮಾಡಿಕೊಳ್ಳುವ ನಿಟ್ಟಿನಲ್ಲಿ ಸೀತಾಫಲ ಹಣ್ಣುಗಳನ್ನು ಸೇವನೆ ಮಾಡಬಹುದು. ಅಲ್ಲದೆ ಕೊಲೆಸ್ಟರಾಲ್‌ ಪ್ರಮಾಣ ಕಡಿಮೆ ಮಾಡಲು ಸಹಕಾರಿಯಾಗಿದೆ.

ನೆಲ್ಲಿಕಾಯಿ : 



ಬೆಟ್ಟದ ನೆಲ್ಲಿ ಎಂದೇ ಖ್ಯಾತಿಪಡೆದ ನೆಲ್ಲಿಕಾಯಿಯಲ್ಲಿ ಕೂಡ ವಿಟಮಿನ್ ಸಿ ಅಂಶ ಅತ್ಯಧಿಕವಾಗಿರುತ್ತದೆ. ಈಗ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ನೆಲ್ಲಿಕಾಯಿಯನ್ನು ತಂದು ಕತ್ತರಿಸಿ ಪುಡಿ ಉಪ್ಪು ಬೆರೆಸಿ ಸೇವಿಸಬಹುದು. ಇದು ಹುಳಿ, ಒಗರು, ಸಿಹಿ ಅಂಶವನ್ನು ಒಳಗೊಂಡಿದೆ. ಇಲ್ಲವೇ ಉಪ್ಪಿನ ಕಾಯಿ ಮಾಡಿಟ್ಟು ಶೇಕರಿಸಿಡಬಹುದು. ಹಾಗೆಯೇ ಕತ್ತರಿಸಿ ಒಣಗಿಸಿ ಡಬ್ಬಿಯಲ್ಲಿ ಸಂರಕ್ಷಿಸಿಡಬಹುದು. ಪ್ರತಿದಿನ ಒಂದೆರಡು ನೆಲ್ಲಿ ಎಸಳು ತಿಂದು ನೀರು ಕುಡಿದರೆ ಕ್ಯಾಲ್ಸಿಯಂ ಅಂಶ ವೃದ್ಧಿಸುತ್ತದೆ. ಸಂಪೂರ್ಣ ದೇಹದ ಆರೋಗ್ಯ ಹೆಚ್ಚಿಸಲು ಸಹಕಾರಿಯಾಗಿದೆ. ಆಯುರ್ವೇದ ಔಷಧದಲ್ಲಿ ಮಹತ್ವದ ಪಾತ್ರ ವಹಿಸುವ ನೆಲ್ಲಿಕಾಯಿ, ಅದರ ಬೇರು, ಎಲೆಗಳು, ಚಕ್ಕೆಗಳನ್ನು ಯಾವಾಗ ಬೇಕಾದರು ನಾವು ಉಪಯೋಗಿಸಬಹುದು. ಇದರಿಂದ ಮಧುಮೇಹವು ನಿಯಂತ್ರಣದಲ್ಲಿರುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳ ಹೊರಹಾಕಲು ಸಹಕಾರಿತಾಗಿದೆ.  ದೇಹದ ತೂಕದ ನಿರ್ವಹಣೆಗೆ ಹಾಗೂ ಕೂದಲಿನ ಪೋಷಣೆ, ಚರ್ಮದ ಆರೈಕೆಯಲ್ಲಿ ಈ ನೆಲ್ಲಿಕಾಯಿ ಮಹಥವದ ಪಾತ್ರ ವಹಿಸುತ್ತದೆ. ಶಾಂಪೂ ರೂಪದಲ್ಲಿ , ನೆಲ್ಲಿಪುಡಿಯ ಬಳಕೆ ಮಾಡಬಹುದಾಗಿದೆ.

ಹಾಗಾಗಿ ಸ್ನೇಹಿತರೇ ಋತುಗಳಿಗನುಸಾರವಾಗಿ ನೈಸರ್ಗಿಕವಾಗಿ ಬೆಳೆಯುವ ಮಾರುಕಟ್ಟೆಯಲ್ಲಿ ಬರುವ ಹಣ್ಣು ತರಕಾರಿಗಳನ್ನು ಮನೆಗೆ ಕೊಂಡೊಯ್ದು ಆಹಾರವಾಗಿ ಸೇವಿಸೋಣ. ಆರೋಗ್ಯವನ್ನು ಕಾಪಾಡಿಕೊಳ್ಳುವ ಕಡೆಗೆ ಗಮನಹರಿಸೋಣ.

- ಸಿಂಧು ಭಾರ್ಗವ ಬೆಂಗಳೂರು (ಲೇಖಕಿ)

Breast cancer ಹೆಣ್ಮಕ್ಕಳ ಕಾಡುವ ಸ್ತನ ಕ್ಯಾನ್ಸರ್

 ಲೇಖನ : ಮಹಿಳೆಯರ ಕಾಡುವ ಸ್ತನ ಕ್ಯಾನ್ಸರ್


ಸ್ತನ ಕ್ಯಾನ್ಸರ್ Breast cancer


ಈಗೀನ ಜೀವನ ಕ್ರಮಕ್ಕೆ, ಬದಲಾಗುವ ಹಾರ್ಮೋನ್‌ಗಳಿಂದ ಒಂದಿಲ್ಲ ಒಂದು ತರಹದ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂಬುದೇ  ಆಶ್ಚರ್ಯಕರ. ಅದರಲ್ಲಿಯೂ ಮಹಿಳೆಯರ ಕಾಡುವ "ಸ್ತನ ಕ್ಯಾನ್ಸರ್". ಹಲವು ಲಕ್ಷಣಗಳು ಕಾಣಿಸಿಕೊಂಡರು ಕೂಡ  ಕೆಲವೊಮ್ಮೆ ಹೇಳಲು ಮುಜುರುಗ ಎನಿಸುವ ಮನಸ್ಥಿತಿಯಲ್ಲಿ  ಮಹಿಳೆಯರು ಇರುತ್ತಾರೆ. ಗೌಪ್ಯವಾಗಿಡಲು ಪ್ರಯತ್ನಿಸುತ್ತಾರೆ. ಇದರಿಂದ ಮುಖ್ಯವಾಗಿ ಇಂತದ್ದೇ ಸಮಸ್ಯೆ ಮುಂದೆ ಭಾದಿಸಬಹುದು ಎಂಬ ಸುಳಿವು ಕೂಡ ಅವರಿಗಿರುವುದಿಲ್ಲ. ಪ್ರತೀ ವರ್ಷವೂ ಸರಿಸುಮಾರು 1.5 ಲಕ್ಷದಷ್ಟು ಸ್ತ್ರೀಯರಲ್ಲಿ ಈ ರೋಗವು ಪತ್ತೆಯಾಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆ ಉಲ್ಬಣಗೊಂಡ ಮೇಲೆಯೇ ಮಹಿಳೆಯರಿಗೆ ಇದರ ಅರಿವಾಗುವುದು. 


ಸ್ತನ ಕ್ಯಾನ್ಸರ್ ನ ಲಕ್ಷಣಗಳು ಮತ್ತು ಕಾರಣಗಳನ್ನು ತಿಳಿಯೋಣ : 

ಮೊದಲನೆಯದಾಗಿ ಸ್ತನ ಕ್ಯಾನ್ಸರ್ ಎಂದರೆ ಸ್ತನದ ಸುತ್ತಲೂ ರೂಪುಗೊಳ್ಳುವ ಗಡ್ಡೆ. ಕ್ಯಾನ್ಸರ್ ಜೀವಕೋಶಗಳು ಸ್ತನದ ಜೀವಕೋಶಗಳನ್ನು ಆವರಿಸಿ ಈ ರೋಗವು ಕಾಣಿಸಿಕೊಳ್ಳುತ್ತದೆ. ಪ್ರತಿಯೊಂದು ಸ್ತನವು ಹಾಲನ್ನು ಉತ್ಪಾದಿಸುವ ಲೋಬ್ಸ್ ಎಂದು ಕರೆಯಲ್ಪಡುವ 15-20 ಗ್ರಂಥಿಗಳನ್ನು ಹೊಂದಿರುತ್ತದೆ. ಸ್ತನ ಕ್ಯಾನ್ಸರ್ ಸಾಮಾನ್ಯವಾಗಿ ಈ ಲೋಬ್ಸ್‌ನಲ್ಲಿ ಪ್ರಾರಂಭವಾಗುತ್ತದೆ. ಇದು ತೊಟ್ಟುಗಳ ಪ್ರದೇಶದ ಕೆಳಗಿರುವ ಒಂದು ಗಟ್ಟಿ ಗಡ್ಡೆಯಾಗಿ ಕಂಡುಬರುತ್ತದೆ. ಈ ಮಾರಣಾಂತಿಕ ರೋಗಕ್ಕೆ ವಿವಿಧ ಹಂತಗಳಿವೆ. ಮೊದಲ ಹಂತದಲ್ಲಿದ್ದರೆ, ಕ್ಯಾನ್ಸರ್ ಸ್ತನ ನಾಳಕ್ಕೆ (ಹಾಲು ಉತ್ಪಾದಿಸುವ ಸ್ಥಳ) ಸೀಮಿತವಾಗಿದೆ ಎಂದರ್ಥ, ಇದು ಮೊದಲಿನ ಹಂತವಾಗಿದೆ. ಅಲ್ಲದೇ ಸ್ತನ ಕ್ಯಾನ್ಸರ್ಗೆ ಕಾರಣವಾಗುವ ಕೆಲವು ಅಪಾಯಕಾರಿ ಅಂಶಗಳೆಂದರೆ ಸ್ತ್ರೀ ಲೈಂಗಿಕ ಸಂಬಂಧ, ಬೊಜ್ಜು, ದೈಹಿಕ ವ್ಯಾಯಾಮದ ಕೊರತೆ, ಮದ್ಯ ಹಾಗೂ ಧೂಮಪಾನ ಸೇವನೆ, ಋತುಬಂಧದ ಸಮಯದಲ್ಲಿ ಹಾರ್ಮೋನು ಬದಲಿ ಚಿಕಿತ್ಸೆ, ಆಲಸ್ಯವಾಗಿ ಮಕ್ಕಳಾಗುವುದು ಅಥವ ಮಕ್ಕಳು ಆಗದೇನೇ ಇರುವುದು, ಮುದಿ ವಯಸ್ಸಿನಲ್ಲಿ ಕೂಡ ಬರಬಹುದು. 

ಮಹಿಳೆಯರು ಸ್ತನದಲ್ಲಿ ಗಡ್ಡೆಯಾಗಿದೆಯಾ ಎಂದು ಸ್ವತಃ ಪರೀಕ್ಷಿಸಬಹುದು. ಅಥವಾ ತೋಳುಗಳ ವ್ಯಾಯಾಮ ಮಾಡುವಾಗ ನೋವು ಬರುವುದೇ ಎಂದು ಗಮನಿಸಬಹುದು. ಅನುಮಾನ ಬಂದರೆ ಅಲ್ಟ್ರಾಸೌಂಡ್ ಸ್ಕ್ಯಾನ್, ಸ್ತನದ ಎಮ್.ಆರ್.ಐ ಸ್ಕ್ಯಾನ್ ಮಾಡಿಸಬಹುದು. 

ಮುಖ್ಯವಾಗಿ ಇನ್ನೊಂದು ಗಮನಿಸಬೇಕಾದ ಅಂಶವೇನೆಂದರೆ ಮಹಿಳೆಯರಲ್ಲಿ "ಹಾರ್ಮೋನಿನ ಅಸಮತೋಲನ" ಉಂಟಾದಾಗಲು ಈ ತರಹ ಸಮಸ್ಯೆ ಬರಲುಬಹುದು. ಗರ್ಭಾಶಯ, ಅಂಡಾಶಯದ ಕ್ಯಾನ್ಸರ್ ಬಂದಿದ್ದರೆ ನಂತರದಲ್ಲಿ ಸ್ತನದ ಕಡೆಗೂ ವಿಸ್ತರಿಸಬಹುದು. ಹೆರಿಗೆ ಬಾಣಂತಿಯ ಸಮಯದಲ್ಲಿ ಹಾಲೂಡಿಸುವಾಗ ಗಡ್ಡೆ ರಚನೆಯಾಗಿದ್ದರೆ ಇದು ಮುಂದೆ ಕ್ಯಾನ್ಸರ್ ಗಡ್ಡೆಯಾಗುವ ಸಾಧ್ಯತೆಗಳೂ ಇವೆ.  

ಕ್ಯಾನ್ಸರ್ ನಿಂದ ರಕ್ಷಿಸುವ ಬಿಆರ್‌ಸಿಎ1 ಮತ್ತು ಬಿಆರ್‌ಸಿಎ2 ಜೀನ್ಸ್‌ಗಳು ಪ್ರೊಟೀನುಗಳನ್ನು ಉತ್ಪತ್ತಿ ಮಾಡುತ್ತದೆ. ಒಂದು ವೇಳೆ ಅವುಗಳು ದೋಷಪೂರಿತವಾಗಿದ್ದರೆ ೪೦ ವರ್ಷದ ಮೇಲ್ಪಟ್ಟ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 80ರಷ್ಟಿರುತ್ತದೆ. ಖುತುಚಕ್ರದಲ್ಲಿ ಆಗಾಗ್ಗೆ ಏರುಪೇರಾಗುವುದು, ಮಾನಸಿಕ ಆರೋಗ್ಯ ಕೆಡುವುದು, ಅತಿ ಬೇಗ ಭಾವುಕರಾಗುವುದು, ಸಿಡುಕುವುದು, ಕೊರಗುವುದು ಇವೆಲ್ಲವೂ ಹಾರ್ಮೋನುಗಳ ಅಸಮತೋಲನದಿಂದ ಬಳಲುವ ಲಕ್ಷಣಗಳು.  ಸ್ಥೂಲಕಾಯದಿಂದ ಈಸ್ಟ್ರೋಜನ್ ಹಾರ್ಮೋನ್ ಹೆಚ್ಚು ಬಿಡುಗಡೆಯಾಗುತ್ತದೆ. ಇದರಿಂದ ಬ್ರೆಸ್ಟ್ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸ್ತನದ ತೊಟ್ಟಿನಲ್ಲಿ ಊತ, ತೊಟ್ಟು ಒಳಕ್ಕೆ ಹೋಗಿರುವುದು, ಅಥವಾ ಬಿಳಿ / ಹಳದಿ ಬಣ್ಣದ ಹಾಲು ಜಿನುಗುವುದು, ಮುಟ್ಟಿದಾಗ ಗಡ್ಡೆಯಂತೆ ಭಾಸವಾಗುವುದು, ನೋವು ಕಾಣಿಸಿಕೊಳ್ಳುವುದು, ಕಂಕುಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಚರ್ಮ ಕೆಂಪಾಗುವುದು ಇವೆಲ್ಲವೂ ಲಕ್ಷಣಗಳಾಗಿವೆ.


ಚಿಕಿತ್ಸಾಕ್ರಮ : 

ಓಂಕೋಟೈಪ್ ಡಿಎಕ್ಸ್ ಮತ್ತು ಮಾಮ್ಮಪ್ರಿಂಟ್ ಗಳಂತಹ ಕೆಲವು ವರ್ಣತಂತು ಪರೀಕ್ಷೆಗಳ ಜೊತೆಗೆ ಕೆಲ ನಿರ್ಧಿಷ್ಟ ವರ್ಣತಂತು ಪರೀಕ್ಷೆಗಳೂ ಮಾಡಿಸಬೇಕಾಗುತ್ತದೆ.  ಒಂದೇ ಗುಂಪಿಗೆ ಸೇರಿರೋ ರೋಗಿಗಳು ಹಾರ್ಮೋನ್ ಚಿಕಿತ್ಸೆಯಿಂದ ಪ್ರಯೋಜನ ಪಡೆಯುವರೋ ಅಥವಾ ಕಿಮೋಥೆರಪಿಯಿಂದ ಪ್ರಯೋಜನ ಪಡೆಯುವರೋ ಎಂಬುದನ್ನ ನಿರ್ಧರಿಸಲು ಈ ವರ್ಣತಂತು ಪರೀಕ್ಷೆಗಳು ನೆರವಾಗುತ್ತವೆ. ಅದನ್ನು ಚಿಕಿತ್ಸೆ ನೀಡುವ ವೈದ್ಯರು ಸಲಹೆ ನೀಡುತ್ತಾರೆ. ಆಗಾಗ್ಗೆ ಚಿಕೊತ್ಸೆಗೆ ಒಳಗಾಗುತ್ತಿರಬೇಕು. ಪ್ರಮುಖವಾಗಿ ಧೂಮಪಾನ ಮದ್ಯಪಾನದಿಂದ ದೂರವಿರಬೇಕು.   ಅದರ ಜೊತೆಗೆ ಬೇಳೆಕಾಳು, ಪೌಷ್ಟಿಕಾಂಶ ಆಹಾರ, ಸೊಪ್ಪು ತರಕಾರಿ ಮೊಳಕೆ ಕಾಳುಗಳ ಸೇವನೆ ಅತ್ಯಗತ್ಯ. ಜೊತೆಗೆ ನಿಯಮಿತ ವ್ಯಾಯಾಮ. ಮನಸ್ಸಿಗೆ ಘಾಸಿ ಮಾಡುವ ವಿಷಯದ ಕುರಿತು ಯೋಚಿಸದೇ ಇರುವುದು ಉತ್ತಮ. ನಕಾರಾತ್ಮಕವಾಗಿ ಯೋಚಿಸದೇ ಸದಾ ಧನಾತ್ಮಕ ಚಿಂತನೆ ಮಾಡುತ್ತಿರಬೇಕು. ಆಧಾತ್ಮದ ಕಡೆಗೆ ಮನವನ್ನು ಕೇಂದ್ರೀಕರಿಸಬಹುದು. ಪ್ರಕೃತಿ ಆರಾಧನೆ ಕೂಡ ಬೇಗದಲ್ಲಿ ಚೇತರಿಸಿಕೊಳ್ಳಲು ಸಹಕಾರಿಯಾಗುವುದು. ರೋಗಿಗೆ ಆತ್ಮಸ್ಥೈರ್ಯ ನೀಡುವ ಮಾತುಗಳನ್ನಾಡಬೇಕು. ಜೊತೆಗೆ, ವರ್ಷಕ್ಕೊಂದು ಬಾರಿ ಸ್ತನಗಳ ಎಂ.ಆರ್.ಐ. ಮಾಡಿಸ್ಕೊಳ್ಳೋದು ಮತ್ತು ಹಾರ್ಮೋನಿನ ಚಿಕಿತ್ಸೆಗೊಳಗಾಗೋದು ಸೂಕ್ತ.


- ಸಿಂಧು ಭಾರ್ಗವ ಬೆಂಗಳೂರು ( ಲೇಖಕಿ )




Monday, 27 September 2021

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳ ಸಪ್ತಾಹ ಕಾರ್ಯಕ್ರಮ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳ ಸಪ್ತಾಹ ಕಾರ್ಯಕ್ರಮ..



✍🏻ಲೇಖನ, ಪ್ರಬಂಧ, ಪ್ರವಾಸ ಕಥನ, ಮಕ್ಕಳ ನಾಟಕ ರಚನೆ, ಕವನ ವಾಚನ ಹಾಗೂ ಇನ್ನಿತರ ಸ್ಪರ್ದೆಗಳು..

"ಬತ್ತದ ತೊರೆ ಸ್ನೇಹ ಬಳಗ" - ಕಾರಂತಜ್ಜನ ನೆರಳಿನಡಿಯಲ್ಲಿ.. ಎಂಬ ಅಡಿಬರಹದೊಂದಿಗೆ ಹುಟ್ಟಿಕೊಂಡ ಹೊಸ ಸಾಹಿತ್ಯ ಬಳಗವು ಅಕ್ಟೋಬರ್ ಮೊದಲ ವಾರದಲ್ಲಿ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳನ್ನು ನಡೆಸಲು ಮುಂದಾಗಿದೆ. 

(೧) ದಿನಾಂಕ : ೦೪/೧೦/೨೦೨೧ ಸೋಮವಾರ ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆ

(ವಿ.ಸೂ : ವಿಷಯ ನಿಮ್ಮ ಆಯ್ಕೆ. ಸಾಲುಗಳ ಮಿತಿ : ೨೦-೨೪ ಸಾಲುಗಳು. ಮೊಬೈಲ್ ಅಡ್ಡ ಹಿಡಿದು ವೀಡಿಯೋ ಮಾಡಿರಿ. ಸುಮಾರು ಮೂರು ನಿಮಿಷಗಳ ಕಾಲ)

(೨) ದಿನಾಂಕ : ೦೫/೧೦/೨೦೨೧ ಮಂಗಳವಾರ

"ನಾ ಓದಿದ ಕಾರಂತರ ಕಾದಂಬರಿ.. ವಿಮರ್ಶಾ ಲೇಖನ ಸ್ಪರ್ಧೆ" 

(ವಿ.ಸೂ : ಪದಗಳ ಮಿತಿ ೧೦೦೦ ಪದಗಳು ಸುಮಾರು ಎರಡು ಪುಟಗಳಷ್ಟು)

(೩) ದಿನಾಂಕ : ೦೬/೧೦/೨೦೨೧ ಬುಧವಾರ

"ಲಲಿತ ಪ್ರಬಂಧಾ ಸ್ಪರ್ಧೆ" 

(ವಿ.ಸೂ : ವಿಷಯ ನಿಮ್ಮದೇ ಇರಲಿ. ಪದಗಳ ಮಿತಿ ೧೦೦೦- ೧೫೦೦  (ಸುಮಾರು ಎರಡರಿಂದ ಮೂರು ಪುಟಗಳಷ್ಟು)

(೪) ದಿನಾಂಕ : ೦೭/೧೦/೨೦೨೧ ಗುರುವಾರ

ನೀವು ಭೇಟಿ ಮಾಡಿದ ಕುತೂಹಲಭರಿತ ಸ್ಥಳದ ಕುರಿತಾದ "ಪ್ರವಾಸ ಕಥನ"

(ವಿ.ಸೂ : ಪದಗಳ ಮಿತಿ ೧೦೦೦, ಸುಮಾರು ಎರಡು ಪುಟಗಳಷ್ಟು)

(೫) ದಿನಾಂಕ : ೦೮/೧೦/೨೦೨೧ ಶುಕ್ರವಾರ

"ಮಕ್ಕಳ ನಾಟಕ ರಚನೆ" 

(ವಿ.ಸೂ : ವಿಷಯ ನಿಮ್ಮದೇ ಇರಲಿ. ಸುಮಾರು ಎರಡರಿಂದ ಮೂರು ಪುಟಗಳು, ಪಾತ್ರಗಳ ಸಂಖ್ಯೆ ೫-೭)

(೬) ದಿನಾಂಕ : ೦೯/೧೦/೨೦೨೧ ಶನಿವಾರ

ಚಟುವಟಿಕೆ ವಿಭಾಗದಲ್ಲಿ ಕಾರಂತರ ಭಾವಚಿತ್ರ ಅಥವಾ ಅವರ ಕಾದಂಬರಿಯ ಮುಖಪುಟದ ಚಿತ್ರವನ್ನು ಬಿಡಿಸುವುದು.


ನಿಯಮಗಳು :

೧) ಹಿರಿಯರು , ಕಿರಿಯರು, ವಿದ್ಯಾರ್ಥಿಗಳು ಕೂಡ ಭಾಗವಹಿಸಬಹುದಾಗಿದೆ. 

೨) ಇಮೇಜ್ ಗಳನ್ನು ಸ್ವೀಕರಿಸುವುದಿಲ್ಲ.

೩) ಬರಹಗಳಿಗೆ ಸೂಕ್ತ ಶೀರ್ಷಿಕೆ ನೀಡಬೇಕಾಗಿ ಕೋರಿಕೆ. 

೪) ಕೊನೆಯಲ್ಲಿ ನಿಮ್ಮ ಹೆಸರು, ಊರು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಿರಬೇಕು. 


ಭಾಗವಹಿಸಿದ ಪ್ರತಿಯೊಬ್ಬರಿಗೂ ಇ-ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು. ಹಾಗೂ ಮೊದಲ‌ ಮೂವರು ವಿಜೇತರಿಗೆ ಪುಸ್ತಕ ಬಹುಮಾನದ ಜೊತೆಗೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು.


ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಂಖ್ಯೆ : +91 7795743862


"ಕಾರಂತರ ಜನ್ಮದಿನದ ಅಂಗವಾಗಿ ಸ್ಪರ್ಧೆಗಾಗಿ" ಎಂದು ನಮೂದಿಸಿರಿ.


ನಿಮ್ಮ ಬರಹಗಳನ್ನು ಕಳುಹಿಸಬೇಕಾದ ಇ-ಮೇಲ್  ಐಡಿ :  battadatore@gmail.com


ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿಕೆ. 


ನಿರ್ವಾಹಕರು ಮತ್ತು ತೀರ್ಪುಗಾರರು

ಬತ್ತದ ತೊರೆ ಸ್ನೇಹ ಬಳಗ, ಬೆಂಗಳೂರು 




Friday, 24 September 2021

September month of articles..

 Paper cuttings.. September month of articles..

1) ಸಂಪದ ಸಾಲು ಮಾಸಪತ್ರಿಕೆ - ಮಕ್ಕಳ ಸಾಹಿತ್ಯ ಪದ್ಯ ನೀತಿ ಕತೆ

೨) ಕೊಂಕಣವಾಹಿನಿ ದಿನಪತ್ರಿಕೆ - ಭಕ್ತಿಗೀತೆಗಳು, ಲೇಖನ ಆರೋಗ್ಯ ಮಾಹಿತಿ

೩) ಜನಮಿಡಿತ ದಿನಪತ್ರಿಕೆ.  ಕವನಗಳು, ಪತ್ರಿಕಾ ವರದ

೪) ಹರ್ಷವಾಣಿ ಮಾಸಪತ್ರಿಕೆ ಮಕ್ಕಳ ಸಾಹಿತ್ಯ ಕತೆ


ಆಯ್ಕೆ ಮಾಡಿ ಪ್ರಕಟಿಸಿದ ಸಂಪಾದಕ ಬಳಗಕ್ಕೆ ವಂದನೆಗಳು🌹










ಸ್ತನ ಕ್ಯಾನ್ಸರ್ ಲಕ್ಷಣಗಳು & ಚಿಕಿತ್ಸಾ ಕ್ರಮಗಳು