ಲೇಖನ : ಈಸಬೇಕು ಇದ್ದು ಜೈಸಬೇಕು
ನಿತ್ಯಶ್ರೀ ಎಂಬ ಮುದ್ದಾದ ಹುಡುಗಿ ಹರೆಯಕ್ಕೆ ಕಾಲಿಟ್ಟು ಒಂದೆರಡು ಮಾಸವಾಯಿತಷ್ಟೆ. ಮಗಳು ಮೈನೆರೆದಳು ಎಂದು ಅಕ್ಕ ಪಕ್ಕದವರನ್ನೆಲ್ಲ ಕರೆದು ವಿಶೇಷವಾದ ಕಾರ್ಯಕ್ರಮವನ್ನು ನಡೆಸಿ ಆರತಿ ಎತ್ತಿ ಜರಿಸೀರೆ ಉಡಿಸಿ ಹೂವಮುಡಿಸಿ ಮದುಮಗಳಂತೆ ಸಿಂಗರಿಸಿದ್ದಳು. ಮಾವ ಬಂದು ಚಿನ್ನದ ಸರ, ಅಜ್ಜಿ ಚಿನ್ನದ ಬಳೆಯನ್ನು ಉಡುಗೊರೆ ನೀಡಿದರು. ತಾಯಿ ಮನೆಯಿಂದ ಸಂಭ್ರಮವೋ ಸಂಭ್ರಮ. ಎಲ್ಲವೂ ಮುಗಿದು ಒಂದೆರಡು ತಿಂಗಳು ಕಳೆಯುತಲೇ ನಿತ್ಯನ ನಡವಳಿಕೆಯಲ್ಲಿ ಬದಲಾವಣೆಗಳು ಕಾಣಿಸತೊಡಗಿದವು. ಅಕ್ಕ ಪಕ್ಕದ ಗೆಳತಿಯೊಂದಿಗೆ ಹೆಚ್ಚೆಚ್ಚು ಮಾತನಾಡುವುದು, ನಗುವುದು ಅಲ್ಲೇ ಸಮಯ ಕಳೆಯುವುದು. ಓದುವುದರಲ್ಲಿ ಆಸಕ್ತಿ ಕಡಿಮೆಯಾಗುತ್ತ ಬಂದಿತು. ಯಾವಾಗಲೂ ತನ್ನ ಸೌಂದರ್ಯದ ಬಗ್ಗೆ ಚಿಂತಿಸುವುದು. ಗೆಳತಿಯರು ಹೊಗಳಲಿ ಎಂದು ಏನೇನೋ ಪ್ರಯತ್ನಪಡುವುದು, ಅರೆಬರೆ ಮೈತೋರಿಸುವ ಬಟ್ಟೆ ಹಾಕುವುದು, ಮೊಬೈಲ್ ನಲ್ಲೇ ಮುಳುಗಿದ್ದು ಸೆಲ್ಫೀ ತೆಗೆದುಕೊಳ್ಳುವುದು. ತಾಯಿಗೆ ಇದೆಲ್ಲವೂ ವಿಚಿತ್ರ ಅನಿಸಿದರೂ ವಯಸ್ಸಿನ ಮಗಳು ಎಂದು ಸುಮ್ಮನಾಗುತ್ತಿದ್ದರು. ಆದರೆ ದಿನೇದಿನೇ ಇದು ಹೆಚ್ಚಾಗತೊಡಗಿತು. ಒಮ್ಮೆ ಮೊಬೈಲ್ ನಲ್ಲಿ ಮಧ್ಯರಾತ್ರಿ ತನಕ ಸಂದೇಶ ಕಳುಹಿಸುತ್ತ ಯಾರೊಂದಿಗೋ ಸಂವಹನ ನಡೆಸುತ್ತಿದ್ದಳು. ಮಗಳಿನ್ನೂ ಎಚ್ಚರದಿಂದಿರುವುದನ್ನು ತಾಯಿ ಗಮನಿಸಿದರು. ಯಾರೊಂದಿಗೆ ಮಾತನಾಡುತ್ತಿದ್ದೀ ಎಂದು ಕೇಳಿದರೆ ಉತ್ತರ ಕೊಡದೇ ಮಲಗಿದ್ದಳು.
ಇದಾದ ಮೇಲೆ ಮರುದಿನ ಕೂಡ ಹಾಗೆಯೇ ಮೊಬೈಲ್ ನಲ್ಲಿ ಮಾತನಾಡುತ್ತ ಮೇಲಿನ ಮಹಡಿಗೆ ಹೋಗಿದ್ದಳು. ತಾಯಿಯು ಹಿಂಬಾಲಿಸಿ ಹೋದಾಗ ಹುಡುಗನ ದನಿ ಕೇಳಿಸಿತ್ತು. ಮೊಬೈಲ್ ಕಸಿದುಕೊಂಡು "ಯಾರವನು? ನಮ್ಮ ಮರ್ಯಾದೆ ಕಳೆಯುವೆಯಾ? ತಂದೆಗೆ ಗೊತ್ತಾದರೆ ನಿನ್ನ ಕೊಂದೇ ಬಿಡುವರು.. ಇದನ್ನೆಲ್ಲ ಇಂದಿಗೆ ನಿಲ್ಲಿಸು .." ಎಂದು ಕೇಳಿಕೊಂಡರು. ದೊಡ್ಡ ಜಗಳವಾಗಿ ಮಗಳಿಗೆ ಹೊಡೆದರು. ಅತ್ತರು. ಎಲ್ಲವೂ ಒಂದೇ ಸಮನೆ ಜೋರಾಗಿತ್ತು.
ಒಮ್ಮೆ ಬಿಗಿಯಾದ ಜೀನ್ಸ್ ಪ್ಯಾಂಟ್ ಟೀ ಶರ್ಟ್ ಹಾಕಿಕೊಂಡು ಸೆಲ್ಪೀ ತೆಗೆದರೆ ಇನ್ನೊಮ್ಮೆ ಮೇಕಪ್ ಮಾಡಿಕೊಂಡು ಕೂದಲನ್ನು ಹಾರಲು ಬಿಟ್ಟು ಸೆಲ್ಫೀ ತೆಗೆದುಕೊಳ್ಳುತ್ತಿದ್ದಳು. ಮೊದಮೊದಲು ತಾಯಿಗೆ ಹೆದರುತ್ತಿದ್ದರೆ ನಂತರದಲ್ಲಿ ತಾಯಿಯ ಎದುರೇ ಹುಡುಗನ ಜೊತೆ ಮಾತನಾಡುತ್ತಿದ್ದಳು. ನೇರವಾಗಿ ತನ್ನ ಫೋಟೋ ತೆಗೆದು ಕಳುಹಿಸುತ್ತಿದ್ದಳು. ತಾಯಿಗೆ ಇದೇನು ಅರಿವಾಗುತ್ತಿರಲಿಲ್ಲ. ಮಗಳ ಮೇಲಿನ ವ್ಯಾಮೋಹವೋ, ಅತಿಯಾದ ನಂಬಿಕೆಯೋ ಅಥವಾ ಈಗಿನ ತಂತ್ರಜ್ಞಾನದ ಸಾಮಾಜಿಕ ಜಾಲತಾಣಗಳ ಪ್ರಭಾವದ ಅರಿವು ಅವರಿಗೆ ಇಲ್ಲದ ಕಾರಣ ಮಗಳು ಎಂತಹ ಅಪಾಯದಲ್ಲಿ ಸಿಲುಕಿದ್ದಾಳೆ ಎಂದೂ ಕೂಡ ಗೊತ್ತಿರದ ಪರಿಸ್ಥಿತಿಯಲ್ಲಿ ಅವರಿದ್ದರು. ಆದರೆ ಯಾವಾಗಲೂ ಬೈಯುವುದು, ಓದು ಎಂದು ಹೇಳುವುದು ಆಗಾಗ್ಗೆ ಜಗಳ ಸಾಮಾನ್ಯವಾಗಿ ನಡೆಯುತ್ತಿತ್ತು. ಎಷ್ಟು ಹೇಳಿದರೂ ಮಗಳು ಮಾತ್ರ ಹರೆಯದ ಹುಚ್ಚುತನಕ್ಕೆ ತನ್ನತನವನ್ನು ಯಾವುದೋ ಪುಂಡ ಹುಡುಗರ ಕೈಗೆ ಒಪ್ಪಿಸಿದ್ದಳು. ಆಚೆಕಡೆಯಿಂದ ಆ ಹುಡುಗ ವಿಧವಿಧವಾಗಿ ಹೊಗಳುತ ಅರೆಬರೆ ಬಟ್ಟೆಹಾಕಿಕೊ ಎಂದು ಹೇಳುವುದು, ಅವಳನ್ನು ಒಬ್ಬಳೇ ರೂಮಿಗೆ ಹೋಗಿ ಅರೆನಗ್ನ ಫೋಟೋ ಕಳುಹಿಸು ಎಂದು ಒತ್ತಾಯಿಸುವುದು, ಪ್ರೀತಿಯ ಹೆಸರಿನಲ್ಲಿ ಇವಳನ್ನು ಸಂಪೂರ್ಣವಾಗಿ ಮುಳುಗಿಸಿದ್ದ. ಅಲ್ಲದೇ ತಾನೊಬ್ಬನೆ ಇರುವೆ ಎಂದು ಸುಳ್ಳು ಹೇಳಿ ತನ್ನ ಸುತ್ತ ಒಂದಷ್ಟು ಹುಡುಗರ ಗುಂಪನ್ನೇ ಕೂಡಿಕೊಂಡು ಅವಳು ಕಳುಹಿಸುತ್ತಿದ್ದ ಫೋಟೋಗಳನ್ನು ನೋಡಿ ಮಜ ಮಾಡುತ್ತಿದ್ದ. ಗೆಳೆಯರ ಮೊಬೈಲ್ ಗಳಿಗೂ ಕಳುಹಿಸುತ್ತಿದ್ದ. ಅವನ ಕಣ್ಣಿಗೆ ಅವಳೊಂದು ಕುರಿಯಂತೆ ಕಾಣಿಸುತ್ತಿದ್ದಳು. ತನ್ನ ವಿಕೃತ ಮನಸ್ಸಿಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದ್ದ. ಇತ್ತಲಿಂದ ಇದೇನು ಗೊತ್ತೇ ಇರದ ಅವನ ನೀಚಬುದ್ದಿಗೆ ಅಮಾಯಕಿಯು ಬಲಿಯಾಗುತ್ತಿದ್ದಳು. ಯಾವ ಅಪಾಯದ ಕರೆಗಂಟೆ ಕೂಡ ಕೇಳಿಸಿಕೊಳ್ಳದ ಕೊಂಚವೂ ಅನುಮಾನವನ್ನು ಪಡದೇ ಅವನು ಹೇಳಿದ ಹಾಗೆ ನಡೆದುಕೊಳ್ಳುತ್ತಿದ್ದಳು. ಅದಕ್ಕೆ ಮೇಲಿನ ಮನೆ ಗೆಳತಿ ಕೂಡ ದಿನವೊಂದರಂತೆ ಪುಂಕಾನುಪುಂಕ ಹುಡುಗರ ಬಗ್ಗೆ ವಿಷಯ ತಿಳಿಸುತ್ತಿದ್ದಳು. ಹುಡುಗರ ಮೇಲೆ ಆಸಕ್ತಿ ಬರುವ ಹಾಗೆ ಮಾಡಿ, ನೀನು ಇನ್ನು ಚಂದ ಕಾಣಿಸಿಕೊಳ್ಳಬೇಕು. ಹಳ್ಳಿಗುಗ್ಗು ಎನ್ನಬಾರದು ಅಂತೆಲ್ಲ ಕಿವಿ ಊದಿ ಉಬ್ಬಿಸುತ್ತಿದ್ದಳು. ಅದರಂತೆ ನಿತ್ಯಶ್ರೀ ಪ್ರತಿದಿನ ತಾಯಿಯ ಹತ್ತಿರ ಹಣ ಕೇಳುವುದು , ಬಟ್ಟೆ ಖರೀಸುವುದು, ಮೇಕಪ್ ಗೆ ಬೇಕಾದ ಸಾಮಾಗ್ರಿಗಳ ಖರೀಸುವುದು, ಹೀಗೇ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದಳು. ತಾಯಿಗೆ ಇದುವೇ ದೊಡ್ಡ ತಲೆಬಿಸಿಯಾಯಿತು. ಒಮ್ಮೆ ಆ ಹುಡುಗ " ಬಾಯ್ ಕಟ್ ಮಾಡಿಸಿಕೋ ನಿನಗೆ ಚಂದ ಕಾಣಿಸುತ್ತದೆ. ಎಂದು ಯಾವುದೋ ಸಿನೆಮಾದ, ನಟಿಯ ಫೋಟೋ ಕಳುಹಿಸಿ ಹೀಗೆ ಡ್ರೆಸ್, ಹೇರ್ ಸ್ಟೈಲ್ ಮಾಡಿಕೋ.." ಎಂದಿದ್ದ. ಆಗ ತಾಯಿಯ ಹತ್ತಿರ "ನನಗೆ ಬಾಯ್ ಕಟ್ ಮಾಡಿಸಬೇಕು. ಬ್ಯೂಟಿ ಪಾರ್ಲರ್ ಗೆ ಹೋಗುವೆ, ಹಣ ಕೊಡು..." ಎಂದು ದುಂಬಾಲು ಬಿದ್ದಳು. ಹತ್ತನೇ ತರಗತಿಗೆ ಹೋಗಲು ಅಡ್ಮಿಶನ್ ಕೂಡ ಮಾಡಿಸಿಕೊಳ್ಳಲು ಇಷ್ಟ ಪಡದೇ ಮನೆಯಲ್ಲೇ ಇದ್ದಳು. ಆನ್ಲೈನ್ ಕ್ಲಾಸ್ ಇದೆ ಎಂದು ಸುಳ್ಳು ಹೇಳಿ ಒಬ್ಬ ಬೀದಿ ಹುಡುಗನ ಸೆಳೆತಕ್ಕೆ ಸಿಲುಕಿದ್ದಳು. ತಾಯಿ ಎಷ್ಟು ಅತ್ತರು ಗೋಗರೆದರು ಕೇಳಿಸಿಕೊಳ್ಳುತ್ತಲೇ ಇರಲಿಲ್ಲ.
" ಇದ್ದಕ್ಕಿದ್ದಂತೆ ಇವಳಿಗೆ ಈ ಆಲೋಚನೆ ಏಕೆ ಬಂದಿತು ಅದೂ ಇಷ್ಟ ಉದ್ದ ಕೂದಲನ್ನು ಕತ್ತರಿಸುವುದಾದರೂ ಏಕೆ? ನಾನು ಹಣ ಕೊಡುವುದಿಲ್ಲ. ನಿನಗೆ ಹುಚ್ಚು ಹಿಡಿದಿದೆಯಾ? ಯಾವಾಗ ನೋಡಿದರೂ ಸೌಂದರ್ಯದ ಬಗೆಗೆ ಆಸಕ್ತಿ ಜಾಸ್ತಿ. ಮೇಕಪ್ ,ಬಟ್ಟೆ, ನೈಲ್ ಪಾಲಿಶ್, ಇಯರ್ ರಿಂಗ್ಸ್, ಮ್ಯಾಚಿಂಗ್ಸ್ ಎಂದೆಲ್ಲ ಹಣ ಕೇಳುವೆ. ಎಲ್ಲಿಂದ ಬರುತ್ತದೆ? ಟ್ಯೂಷನ್ ಫೀಸ್ ಜೊತೆಗೆ ಆನ್ಲೈನ್ ಕ್ಲಾಸ್ ಫೀಸ್ ಕೂಡ ಕೊಡಬೇಕು. ಕರೋನಾದಿಂದ ತಂದೆಗೆ ಕೆಲಸ ಇಲ್ಲ. ಹಣ ಎಲ್ಲಿಂದ ಬರುತ್ತದೆ ಹೇಳು..." ಎಂದು ಬೈಯ ತೊಡಗಿದರು. ಜಗಳ ಮಾಡಿದರು. ಹೊಡೆದರು."ಕಾಯಿ ಕದ್ದವರ ಬಾಯಿ ಮೇಲು" ಎಂಬಂತೆ ನಿತ್ಯಶ್ರೀ ತಾಯಿಗೆ ಬೈಯತೊಡಗಿದಳು. ಬೊಬ್ಬೆಹಾಕುವುದು, ಅಳುವುದು ಹೆಚ್ಚಾಯಿತು. ಇವರಿಬ್ಬರ ಜೋರುದನಿ ಅಕ್ಕಪಕ್ಕದ ಮನೆಗಳಿಗೂ ಕೇಳಿಸಿತು. "ಮರ್ಯಾದೆ ಕಳೆಯುವೆಯಾ?" ಎಂದು ಹೊಡೆದರು. ನಿತ್ಯಶ್ರೀ ಕಿರುಚುತ್ತ ಒಳ ಓಡಿದಳು. ಆದರೆ ತನ್ನ ಹಟ ಬಿಡಲಿಲ್ಲ . ದಿನಗಳು ಉರುಳಿದವು ಅಮ್ಮ ಹಣ ಕೊಡಲಿಲ್ಲ. ಆಚೆಯಿಂದ ಹುಡುಗ ಒತ್ತಾಯ ಮಾಡುವುದು ಹೆಚ್ಚಾಯಿತು. ನಿತ್ಯಶ್ರೀಗೆ ಒತ್ತಡ ಹೆಚ್ಚಾಯಿತು. ಒಂದು ರೀತಿಯಲ್ಲಿ ಅವನ ವಶಕ್ಕೊಳಗಾದವಳಂತೆ ನಡೆದುಕೊಳ್ಳುತ್ತಿದ್ದಳು. ನಾನು ಸೋಲುತ್ತಿದ್ದೇನೆ ಎಂದು ಅವಳಿಗೆ ಅನಿಸತೊಡಗಿತು. ಅವನು ಹೇಳಿದ ಒಂದು ಕೆಲಸ ನನಗೆ ಮಾಡಲು ಆಗುತ್ತಿಲ್ಲವಲ್ಲ. ಎಂದು ಅನಿಸತೊಡಗಿತು. ಅವನು ಕೂಡ "ನನ್ನ ಪ್ರೀತಿಸುತ್ತೀಯಾ ತಾನೆ?! ನನ್ನ ಆಸೆಗೆ ಇಲ್ಲ ಎನ್ನುವುದಿಲ್ಲ ತಾನೆ??.." ಎಂದೆಲ್ಲ ಬ್ಲಾಕ್ ಮೇಲ್ ಮಾಡುತ್ತಿದ್ದ. ಆಗಾಗ್ಗೆ ಪೀಡಿಸುತ್ತಿದ್ದ.
ಇವಳಿಗೆ ಏನಾಯಿತೋ ಏನೋ? ಮತ್ತೆ ತಾಯಿಯ ಬಳಿ ಕೇಳಿದಳು. "ನನಗೆ ಬಾಯ್ ಕಟ್ ಮಾಡಿಸಿಕೊಳ್ಳಲೇಬೇಕು. ಹಣ ಕೊಡು" ಎಂದು. "ಅದಕ್ಕೆ ಮುನ್ನೂರು-ನಾನೂರು ರೂಪಾಯಿ ಖರ್ಚಾಗುತ್ತದೆ ನಾನು ಕೊಡುವುದಿಲ್ಲ" ಎಂದರು. ಕೂಡಲೇ ಸಿಟ್ಟು ಮಾಡಿಕೊಂಡು ರೂಮುಗೆ ಹೋಗಿ ಜೋರಾಗಿ ಬಾಗಿಲು ಹಾಕಿಕೊಂಡು ಆ ಹುಡುಗನಿಗೆ ವೀಡಿಯೋ ಕರೆಮಾಡಿ ಫ್ಯಾನಿಗೆ ಸೀರೆ ಬಿಗಿದು "IAm Sorry.. ನಾನು ಸೋತುಹೋದೆ.. ನಿನ್ನ ಒಂದು ಸಣ್ಣ ಆಸೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ನೀನೆಷ್ಟು ಪ್ರೀತಿಸುತ್ತೀಯಾ.. ನನಗಾಗಿ ಏನೆಲ್ಲ ಮಾಡಿದಿ. ಆದರೆ ನನ್ನ ಕೈಲಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ ಬಿಡು. ನನ್ನ ತಾಯಿ, ತುಂಬಾ ಜೋರು ಕೆಟ್ಟವಳು, ನನ್ನ ಆಸೆಗೆ, ಕನಸುಗಳಿಗೆ ಬೆಲೆ ಕೊಡೋದಿಲ್ಲ. ನಾನಿಲ್ಲಿ ಒಂಟಿ, ನನಗ್ಯಾರು ಇಲ್ಲ... ಎಂದೆಲ್ಲ ಹೇಳಿ ನೇಣು ಬಿಗಿದುಕೊಂಡಳು. ಒದ್ದಾಡತೊಡಗಿದಳು. ಅವಳ ದನಿ ತಾಯಿಗೆ ಕೇಳಿಸಿತು ಕಿಟಕಿಯಿಂದ ನೋಡಿದಾಗ ಆಘಾತವಾಯಿತು. ಒಮ್ಮೆಗೆ ಬಾಗಿಲನ್ನು ಒಡೆದು ಒಳ ಹೋದರು. ಅತ್ತಲಿಂದ ಆ ಹುಡುಗನಿಗೆ ಶಾಕ್ ಆಗಿ ನಂಬರ್ ಡಿಲೀಟ್ ಮಾಡಿದ್ದ. ಕೂಡಲೇ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ.
ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ,
೧) ನಿತ್ಯಶ್ರೀ, ಆ ಹುಡುಗ ಯಾರು ಏನು ಎಂದು ಕೂಡ ಅರಿಯದೇ ಪ್ರೀತಿ ಎಂಬ ಹೆಸರಿನಲ್ಲಿ ಮೋಸದ ಜಾಲಕ್ಕೆ ಬಿದ್ದವಳು. ತರಗತಿಯ ಹುಡುಗನಲ್ಲದಿದ್ದರೂ ಅಪರಿಚಿತ ಹುಡುಗನ ಸ್ನೇಹ ಬೆಳೆಸಿದ್ದಳು.
೨) ಹೆತ್ತವರಿಗೆ ಸುಳ್ಳು ಹೇಳಿ ಹಾಡುಹಗಲೇ ಮೋಸ ಮಾಡುತ್ತಿದ್ದಳು. ತಾನೇ ಬುದ್ಧಿವಂತೆ , ತಾಯಿಯನ್ನು ಹೇಗೆ ಬೇಕಾದರೂ ಮೋಸ ಮಾಡಬಹುದು ಎಂದು ಬಗೆದ ನಿತ್ಯಶ್ರೀ ತಾನೇ ಮೋಸ ಹೋದಳು.
೩) ಹರೆಯದ ಹುಚ್ಚು ಆಸೆಗಳಿಗೆ ರೆಕ್ಕೆ ಕಟ್ಟಲು ಹೋಗಿ, ನನಗೂ ಒಬ್ಬ ಗೆಳೆಯ ಬೇಕು... ಎಂದು ಬಯಸಿ ರೆಕ್ಕೆ ಮುರಿದುಕೊಂಡು ನೆಲಕ್ಕುರುಳಿ ಬಿದ್ದವಳು.
೪) ಅಲ್ಲದೇ ಹರೆಯದ ಮಕ್ಕಳ ಜವಾಬ್ದಾರಿಯನ್ನು ತಂದೆಯಾದವರು ತೆಗೆದುಕೊಳ್ಳದೇ ತನಗೆ ಉದ್ಯೋಗವೇ ಮೊದಲು ಎಂಬಂತೆ ಮನೆ ಮತ್ತು ಮಕ್ಕಳ ಜವಾಬ್ದಾರಿಯನ್ನು ಹೆಂಡತಿಗೆ ವಹಿಸುವುದು.
೫) ಹರೆಯಕ್ಕೆ ಕಾಲಿಟ್ಟಾಗ ಆ ಮಕ್ಕಳಿಗೆ ಮನೆ, ಹೆತ್ತವರ ಮಾತುಗಳು ಉಸಿರು ಕಟ್ಟಿದಂತಾಗಿ , ಹೊರಗಿನವರ ಮೇಲೆ ನಂಬಿಕೆ ಅತಿಯಾಗುವುದು.
೬) ಹೆತ್ತವರನ್ನೇ ಶತ್ರುಗಳ ಹಾಗೆ ನೋಡಿ, ಹೊರಗಿನ ಸೆಳೆತಕ್ಕೆ ಬಲಿಯಾಗುವುದು.
೭) ಒಂದೇ ಮಗಳು ಯಾ ಮಗನೆಂದು ಅತಿಯಾಗಿ ಮುದ್ದು ಮಾಡಿ ಸಾಕಿ, ಅವರ ಬೇಡಿಕೆಗಳನ್ನೆಲ್ಲ ಇಡೇರಿಸುತ್ತ ಬಂದರೆ ಹರೆಯಕ್ಕೆ ಬಂದಾಗ ಕೈಗೆ ಸಿಗುವುದಿಲ್ಲ.
೮) ಮಕ್ಕಳು ಹರೆಯಕ್ಕೆ ಬಂದಾಗ ಎಚ್ಚರವಹಿಸುವ ಬದಲು ಮೊದಲಿನಿಂದಲೇ ಅವರ ಜೊತೆಗಿದ್ದು ಕಷ್ಟನಷ್ಟಗಳ ಬಗ್ಗೆ ಆಗಾಗ್ಗೆ ತಿಳುವಳಿಕೆ ನೀಡುತ್ತಿರಬೇಕು. ಜೀವನದ ಮೌಲ್ಯಗಳನ್ನು ತಿಳಿಸಿಕೊಡಬೇಕು. ಓದು, ವಿದ್ಯಾಭ್ಯಾಸದ ಮಹತ್ವ, ಉದ್ಯೋಗ , ಹಣದ ಮಹತ್ವ, ಕಷ್ಟ ನಷ್ಟಗಳ ಅರಿವು ಮೂಡಿಸುತ್ತಿರಬೇಕು.
೯) ತಮ್ಮ ತಾಯಿ ಈಗಿನ ತಂತ್ರಜ್ಞಾನದ ಅರಿವು ಇಲ್ಲದೇ ಇರಬಹುದು ,ಆದರೆ ಹೆತ್ತ ಕರುಳಿಗೆ ಮಗ/ಮಗಳು ಅಡ್ಡದಾರಿ ಹಿಡಿಯುತ್ತಿದ್ಸಾಗ ಮುಂದೇನೋ ಅನಾಹುತವಾಗುತ್ತದೆ ಎಂಬ ಸುಳಿವು ಬರುವುದು ಸುಳ್ಳಲ್ಲ.
೧೦) ಮಕ್ಕಳ ಕೈಗೆ ಮೊಬೈಲ್ ಸಿಕ್ಕಿದಾಗ ಅತಿಯಾಗಿ ಬಳಸುತ್ತ, ಪ್ರಪಂಚವೇ ತನ್ನ ಮುಷ್ಠಿಯಲ್ಲಿದೆ ಎಂದು ಭಾವಿಸುವುದೇ , ಯಾರದೋ ಕಾಣದ ಕೈಗೆ ಸಿಕ್ಕಿಹಾಕಿಕೊಳ್ಳಲು ಕಾರಣ. ಅತಿಯಾದ ಆಕರ್ಷಣೆ, ಕುತೂಹಲಗಳೇ ಅನಾಹುತಗಳನ್ನು ಆಹ್ವಾನಿಸುತ್ತವೆ.
- ಸಿಂಧು ಭಾರ್ಗವ ಬೆಂಗಳೂರು (ಲೇಖಕಿ)
Stainless steel razor case for sale | Titsanium Art
ReplyDeleteStainless steel razor nano titanium flat iron case welding titanium for infiniti pro rainbow titanium flat iron sale. ridge wallet titanium Find the best deals for Stainless Steel razor case in our Сustomers shops. Best titanium pans deals?
see this wolf dildo,sex chair,horse dildo,dildos,cheap sex toys,wholesale sex toys,dog dildo,vibrators,dildos view
ReplyDelete