Tuesday, 28 March 2023

ಎರಡು ತಲೆಮಾರು ಕವನ

ಎರಡು ತಲೆಮಾರು

Pinterest image




ಅಪ್ಪನಿಗೆ ಅರವತ್ತಾದರೆ. ಮಗನಿಗಿನ್ನೂ ಮೂವತ್ತು.

ಅಪ್ಪನಿಗೆ ಬಿಸಿ ರಕ್ತ ತಣ್ಣಗಾಗುತ್ತ ಬಂದರೆ

ಮಗನಿಗೆ ಕುದಿಯುವ ಬಿಸಿಹುಮ್ಮಸ್ಸು...

•••

ಆಗೆಲ್ಲ, ಅಪ್ಪನ ಕೋಣೆ ತುಂಬಾ‌ ಫರ್ಫ್ಯೂಮು ಸುವಾಸನೆ

ಈಗ ಬಿಪಿ ಶುಗರು, ಮಂಡಿನೋವಿನ ಎಣ್ಣೆಯ ವಾಸನೆ

ಮಗನ ಮೈತುಂಬಾ ಬೆವರ ಹನಿಗಳ ಘಮ

ಅವನ ಬಳಿಯಿರುವ ಸುಗಂಧದ್ರವ್ಯಕ್ಕೂ ಬೆಲೆ ಜಾಸ್ತಿ..

•••

ಅಪ್ಪನ ಅನುಭವದ ಮಾತುಗಳು ಮಗನಿಗೆ ಬೇಡವೀಗ.

ಮಗನು ತನ್ನ ಮೇಲೇ ತಾ ಪ್ರಯೋಗಗಳ ಮಾಡಿಕೊಳ್ಳುತ್ತಾ

ಜೀವನವೇ ಒಂದು ಚಾಲೆಂಜ್ ಎಂದು ತೋರಿಸಿಕೊಡಲು ಹೊರಟವ..

•••

ಅಪ್ಪನಿಗೆ ಆಗಾಗ್ಗೆ ಕಾಡುವ ಆರೋಗ್ಯ ಸಮಸ್ಯೆಗೆ

ಸರಿಯಾಗಿ ಮಾತ್ರೆ ತಿನ್ನದೇ ಇರುವುದೇ ಕಾರಣ

ಎಂಬ ತರ್ಕ ಮಗನದ್ದು.

ಆಗಾಗ್ಗೆ ಏರುಪೇರಾಗುವ ತಂದೆಯ ಮನೋಬಲ, ಆತಂಕ, ಒಳಗೊಳಗೆ ಪುಕಪುಕ, ಟೊಳ್ಳಾಗುತ್ತಿರುವ ದೇಹ, ಮೂಳೆ ಮಾಂಸ ಮಜ್ಜೆಗಳು ಎಂದು ಒಪ್ಪುವ ಮನಸಿಲ್ಲ..

ಮಗನಿಗೋ ಕಲ್ಲು ಬಂಡೆಯನ್ನೂ ಒಡೆದುಹಾಕುವಷ್ಟು ಧೈರ್ಯ, ತಾಕತ್ತಿರುವ ರೆಟ್ಟೆಗಳು.

•••

ಅಪ್ಪನಿಗೆ ರಾತ್ರಿ ಕಣ್ಣಿಗೆ ನಿದ್ದೆ ಹತ್ತುವುದಿಲ್ಲ, ಪದೇ‌ಪದೇ ಮೂತ್ರಕ್ಕೆ ಹೋಗಬೇಕು.. ಶುಗರ್ ಎಂದರೆ ಹಾಗೆ ತಾನೆ?!

ಈ ಮಗನೋ ಒಮ್ಮೆ ದುಡಿದು ಮನೆಗೆ ಬಂದರೆ ಬುಸ್ಸಪ್ಪನ ತರಹ ಬಿದ್ದುಬಿಡುವ. ಬೆಳಿಗ್ಗೆಯೇ ಎಚ್ಚರವಾಗುವುದು.. ನಿದ್ದೆಗೆ ಇನ್ನೂ ಸಮಯಬೇಕು ಎಂದು ಹಪಹಪಿಸುವ.

•••

ಆಗ ಅಪ್ಪನ ಪರ್ಸ್ ತುಂಬಾ ನೋಟಿನ ಕಂತೆಗಳಿದ್ದವು.

ಪದೇ ಪದೇ ಎಣಿಸುತ್ತಾ ನಸುನಗುತ್ತಿದ್ದರು‌. ಮಗನಿಗೆ ತೋರಿಸಿ ಹೇಳಿ "ತಾನು ಹಣವಂತ" ಎಂದು ಒಳಗೊಳಗೆ ಬೀಗುತ್ತಿದ್ದರು. ಮಗನ ಕಣ್ಣಲ್ಲೂ ಕನಸುಗಳನ್ನು ತುಂಬಿಸಿದ್ದರು.

ಈಗ ಅಂತದ್ದೇ ಸೇಫ್ಟಿಪರ್ಸ್ ನಲ್ಲಿ ಮಾತ್ರೆಗಳ ಸ್ಟ್ರಿಪ್ಸ್ ನ ತುಂಬಿಸಿಕೊಂಡಿದ್ದಾರೆ. ಅದಕ್ಕೂ ರಬ್ಬರ್ ಬ್ಯಾಂಡ್ ಬೇರೆ..

ಮೂರು ಹೊತ್ತು ಅದನ್ನು ತೆರೆದು ಮಾತ್ರೆಗಳ ಸೇವಿಸುತ್ತಾರೆ. ತಿಂಗಳು ಮುಗಿದರೆ ಮಾತ್ರೆಯೂ ಮುಗಿದಂತೆ.

•••

ಅಪ್ಪ ಆಗೆಲ್ಲ ದುಡಿಮೆಗೆ ಹೋಗುತ್ತಿದ್ದಾಗ ಪೆನ್ನು ಪೇಪರು ಹಿಡಿದು ಅದೇನೋ ಲೆಕ್ಕಚಾರ ಮಾಡುತ್ತಲೆ ಇರುತ್ತಿದ್ದರು. ಕೆಲವೊಮ್ಮೆ ಮಂಡೆಬಿಸಿ ಮಾಡಿಕೊಳ್ಳುತ್ತಿದ್ದರು.

ಈಗ ಪೆನ್ನು ಎಲ್ಲಿದೆಯೋ ?? ಖಾಲಿ ಹಾಳೆಗಳ ಕಂಡಾಗೆಲ್ಲ ಏನಾದರು ಗೀಚುವ ಅನಿಸುವುದು..

ಮಗನದೋ ಫೋನ್ ಪೇ_ಯಲ್ಲೇ ವ್ಯವಹಾರ. ಮೊಬೈಲ್ ನಲ್ಲೇ ನೋಟ್ಸ್ ಮಾಡಿಕೊಳ್ಳುವ ಬಿಡಿ.

•••÷•••

ಹೀಗೆ ಅಪ್ಪ ಮಗನೆಂದರೆ ಹಣ್ಣೆಲ್ಲೆ- ಚಿಗುರೆಲೆಯಿದ್ದಂತೆ. ಅಪ್ಪ ಮಾಡಿದ್ದನ್ನೇ ಮಗನು ಮಾಡುತ್ತಿರುವ.

ಅವಕಾಶ, ಪರಿಸ್ಥಿತಿ, ಸೌಲಭ್ಯಗಳು ಬೇರೆಯಾಗಿವೆ ಎಂಬುದು ಅಷ್ಟೆ ವ್ಯತ್ಯಾಸ.

ಅವನು ಕೂಡ ನಾಳೆ ಸೇಫ್ಟೀ ಪರ್ಸ್ ಮೊರೆ ಹೋಗುವ ಎಂಬುದೇ ಸತ್ಯ. 


✒ ಸಿಂಧು ಭಾರ್ಗವ, ಬೆಂಗಳೂರು

ಲೇಖಕಿ.

Tuesday, 7 March 2023

Holi festival celebration at Udupi

 



ಬಾಲ್ಯದ ನೆನಪು : ಲೇಖಕಿ ಸಿಂಧು ಭಾರ್ಗವ ಬೆಂಗಳೂರು


          ಹೋಳಿ ಹಬ್ಬ ಎಂದರೆ ಬಾಲ್ಯದ ನೆನಪುಗಳಿಗೆ ಮನಸ್ಸು ಜಾರುವುದು. ಗುಮ್ಟಿ (ಗುಮ್ಮಟೆ) ವಾದ್ಯದ ಸದ್ದು ಆ ಪುಟ್ಟ ಮಕ್ಕಳ ನೃತ್ಯ ಎಂದೂ ಮರೆಯಲು ಸಾಧ್ಯವಿಲ್ಲ. ಕೊನೆಯ ವಾರ್ಷಿಕ ಪರೀಕ್ಷಾ ಸಮಯದಲ್ಲೇ ಪ್ರತಿವರ್ಷ ಹೋಳಿ ಹಬ್ಬ ಬರುವಾಗ ನಮ್ಮ ಸ್ನೇಹಿತರಿಗೆ ಓದಲು ಶಾಲೆಗೆ ಬರಲು ಕಷ್ಟವಾಗುತ್ತಿತ್ತು. ಹಾಗೆಯೇ ಹೋಳಿ ಹಬ್ಬದ ಆಚರಣೆಯಲ್ಲಿ ತಪ್ಪಿಸಿಕೊಂಡರೆ ಅವರು ಮನೆಯವರಿಂದ ಬೈಗುಳ ತಿನ್ನಬೇಕಿತ್ತು. ಶಾಲೆಯಲ್ಲಿ ಸ್ವಲ್ಪ ವಿನಾಯಿತಿ ಪಡೆದು  ಖುಷಿಖುಷಿಯಾಗಿ ಜೊತೆಗೆ ಸೇರಿ ಹಬ್ಬವನ್ನು ಆಚರಿಸುತ್ತಿದ್ದರು. ನಮ್ಮ ಊರಲ್ಲಿ (ಹಳ್ಳಿಯಲ್ಲಿ) ಶೇಕಡಾ ೮೦%  ಮರಾಠರು, ಕುಡುಬಿ ಹಾಲಕ್ಕಿ ಜನಾಂಗದವರೇ ಇರುವುದು. ಉಳಿದಂತೆ ಬೇರೆ ಜಾತಿಯವರು ವಾಸವಾಗಿದ್ದಾರೆ. ಎಲ್ಲರೂ ಒಬ್ಬರಿಗೊಬ್ಬರು ಸಹಾಯಮಾಡಿಕೊಂಡು ಸ್ನೇಹದಿಂದ ಬದುಕ ಕಟ್ಟಿಕೊಂಡಿದ್ದಾರೆ.

ಇದರ ಮೂಲ: ಮೊದಲೆಲ್ಲ ಮರಾಠರು, ಕುಡುಬಿ (ಹಾಲಕ್ಕಿ ಜನಾಂಗದ ಜನರು) ಜನಾಂಗದವರಲ್ಲಿ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ) ಶಿಕ್ಷಿತರು, ಶಾಲೆಗೆ ಹೋಗುವುದು ತೀರಾ ಕಡಿಮೆ. ಏಳನೇ ತರಗತಿ ತನಕ‌ ಓದಿದರೆ ಅದೇ ಹೆಚ್ಚು. ಅವರು ಹೆಚ್ಚಾಗಿ ತಾಂಡ ಕಾಮನದಲ್ಲಿ ವಾಸಿಸುತ್ತಿದ್ದರು. ತಗ್ಗಾದ ಗುಡಿಸಲು ಮನೆ ಕಟ್ಟಿಕೊಂಡು ವಾಸವಿರುತ್ತಿದ್ದರು. ಗುಂಪು ಗುಂಪಾಗಿ ವಾಸಿಸುತ್ತಿದ್ದರು. ಆಗೆಲ್ಲ ಶಿಕ್ಷಣ, ಮೂಲ ಸೌಕರ್ಯಗಳ ಕೊರತೆ ಎದುರಾಗುತ್ತಿತ್ತು. ತೋಟದ ಕೆಲಸ, ಬುಟ್ಟಿ ಹೆಣೆಯುವುದು, ಹಸುಸಾಕಾಣಿಕೆ, ತರಕಾರಿ ಬೆಳೆಸುವುದು, ಕಾಡು ಜೇನು ಸಂಗ್ರಹಿಸಿ ಮಾರುವುದು, ಸೊಪ್ಪು, ತರಕಾರಿ ಬೆಳೆಸುವುದು, ಹೂವು, ಗಡ್ಡೆ ಗೆಣಸು ಬೆಳೆಸುವುದು ಅದನ್ನು ಸಂತೆಗೆ ಮನೆಮನೆಗೆ ಮಾರುವುದು ಅವರ ಜೀವನೋಪಾಯದ ದಾರಿಯಾಗಿದೆ. ಕೆಲವು ಔಷಧೀಯ ಗಿಡಮೂಲಿಕೆಗಳ ಪರಿಚಯ ಅವರಿಗೆ ಚೆನ್ನಾಗಿದೆ. ನಾಟಿ ವೈದ್ಯರಂತೆ ಕೆಲಸಮಾಡುತ್ತಾರೆ. ಬಹಳ ಚುರುಕುತನ, ಸೂಕ್ಷ್ಮವಾಗಿ ಕಿವಿ ದೃಷ್ಟಿ ಅವರದು.

ಆದರೆ ಈಗ ಆ ಸಮಸ್ಯೆಗಳಿಲ್ಲ. ಸರ್ಕಾರದಿಂದ ಅನೇಕ ಯೋಜನೆಗಳು ಅವರಿಗಾಗಿ ಬಂದಿವೆ. ಸಾಲ ಪಡೆಯಬಹುದು, ಮೀಸಲಾತಿ, ಅವರು ಕೂಡ ಓದಿನಲ್ಲಿ ಆಸಕ್ತಿ ತೋರಿಸುವ ಕಾರಣ ಅತ್ಯಂತ ಹೆಚ್ಚು ಅಂಕ ಗಳಿಸಿ ಸರ್ಕಾರಿ ಉದ್ಯೋಗ ಪಡೆದವರು ತುಂಬಾ ಜನರಿದ್ದಾರೆ. ಅಲ್ಲದೇ ಕೃಷಿ ತರಕಾರಿ ಕೂಡ ಬೆಳೆಸುವುದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮರೆತಿಲ್ಲ.


ಇದರ ಹಿನ್ನೆಲೆ: ಕೆಲವರು ಅನಾರೋಗ್ಯ ಸಮಸ್ಯೆ ಎದುರಾದರೆ ಮಕ್ಕಳು (ಸರಿಯಾಗಿ ನಡೆದುಕೊಳ್ಳದೇ ಇದ್ದರೆ) ಮೊಂಡು, ಹಟಮಾರಿತನವಿದ್ದರೆ ಮುಂದಿನ ಹೋಳಿಗೆ ಮಗನ ಕಾಲಿಗೆ ಗೆಜ್ಜೆ ಕಟ್ಟುವೆ ಎಂದು ತಾಯಂದಿರು ಹರಕೆ ಹೊರುತ್ತಾರೆ. ಹೀಗೆ ಚಿಕ್ಕವರಿಂದಲೇ ಹೋಳಿ ಕುಣಿತಕ್ಕೆ (ನೃತ್ಯಕ್ಕೆ) ಪದಾರ್ಪಣೆ ಮಾಡುವರು. ನಂತರ ಗುರಿಕಾರರ ಸಲಹೆ ಸೂಚನೆ ಮೇರೆಗೆ ಗುಮ್ಟಿ ವಾದ್ಯವನ್ನು ನುಡಿಸುತ್ತಾ ಹಾಡು ಹೇಳುತ್ತ ಮೊದಲು ದೇವಿಯ ಎದುರು ನೃತ್ಯಮಾಡಿ ನಂತರ ಆ ಊರಿನ ಮನೆಮನೆಗೆ ಬರುತ್ತಾರೆ.

ಗದ್ದುಗೆ ಅಮ್ಮನವರಿಗೆ (ವನದುರ್ಗೆ) ಪೂಜೆ ಸಲ್ಲಿಸಿ ಐದು ದಿನಗಳ ಮೊದಲೇ ಕುಡಿತವನ್ನು ಬಿಟ್ಟು ದೇವಿಯ ಆರಾಧನೆಯಲ್ಲಿ ತೊಡಗುತ್ತಾರೆ. ಅವರಲ್ಲಿ ಗುರಿಕಾರರ ಮಾತೇ ಅಂತಿಮ. ಯಾರು ಯಾವ ಊರಲ್ಲಿ ಇದ್ದರು ಕೂಡ ಹೋಳಿ ಹಬ್ಬಕ್ಕೆ ಊರಿಗೆ ಬರಲೇಬೇಕು. ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಮಕ್ಕಳು ಸಹ ಹಾಡುಗಳನ್ನು, ಹೆಜ್ಜೆಹಾಕುವುದನ್ನು ಕಲಿತಿರಬೇಕು. ಅವರ ವರ್ಣಮಯ ವೇಷವನ್ನು ನೋಡುವುದೇ ಚಂದ. ತಲೆಯಲ್ಲಿ ಮುಂಡಾಸು ಕಟ್ಟಿಕೊಂಡು ಅದಕ್ಕೆ ಅಬ್ಬಲಿಗೆ ಹೂವಿನ, ಚೆಂಡು ಹೂವಿನ ಮಾಲೆಯನ್ನು ಸುತ್ತಿ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಕಿರೀಟದಂತೆ ಹಕ್ಕಿಯ ಗರಿಯನ್ನು ಸಿಕ್ಕಿಸಿಕೊಂಡಿರುತ್ತಾರೆ. ಉದ್ದ ಕೈ ನಿಲುವಂಗಿ, ವಿವಿಧ ಬಣ್ಣದ ನೆರಿಗೆ ಕಟ್ಟಿದ ಪಟ್ಟಿ, ನೀಟಾಗಿ ಸೀರೆ ಸುತ್ತಿಕೊಂಡು, ಸೊಂಟಕ್ಕೆ ಬಿಗಿಯಾಗಿ ಇನ್ನೊಂದು ಪಟ್ಟಿ ಕಟ್ಟಿಕೊಳ್ಳುತ್ತಾರೆ. ಮಧ್ಯಾಹ್ನದ ಮೇಲೆ ಮನೆಮನೆ ತೆರಳಲು ಸಿದ್ಧರಾಗುವರು.




ಅವರನ್ನು ಸ್ವಾಗತಿಸಲೆಂದೇ ನಾವು ಮನೆಯ ಅಂಗಳವನ್ನು ಸಗಣಿಯಿಂದ ಅಂದವಾಗಿ ಸಾರಿಸುತ್ತೇವೆ. ಅವರು ಬರುವವರೆಗೆ ಕಾಯುತ್ತ ಕುಳಿತಿರುತ್ತೇವೆ. ಕೆಲವೊಮ್ಮೆ ಮಧ್ಯಾಹ್ನ, ಕೆಲವೊಮ್ಮೆ ಸಂಜೆ ರಾತ್ರಿ ೧೦ ಗಂಟೆ ಸಹ ಆಗಬಹುದು. ಮನೆಗೆ ಬಂದ ಕೂಡಲೇ ಅವರೇ ನೀರು ಕೇಳಿ ಪಡೆದು ಕೈಕಾಲು ತೊಳೆದುಕೊಂಡು ನೃತ್ಯ ಪ್ರಾರಂಭಿಸುತ್ತಾರೆ. ಹದಿನೈದು ಜನ ಗುಂಮ್ಟಿ ಹಿಡಿದು ಬಡಿಯುತ್ತಾ ವೃತ್ತಾಕಾರವಾಗಿ ಕುಣಿಯುತ್ತಾ ಬರುತ್ತಾರೆ. ಗುಂಮ್ಟಿಯ ಜೊತೆಗೆ ತಟ್ಟೆಯಾಕಾರದ ತಾಳ ಬಡಿಯುತ್ತಾ ಕುಣಿಯುತ್ತಾ ಸುತ್ತು ಬರುತ್ತಾರೆ. ಬಣ್ಣ ಬಣ್ಣದ ಹೂವ ತಾಂಬೆ ಎಂದು ಹಾಡುತ್ತಾ ಕುಣಿಯುತ್ತಾರೆ. ಕುಣಿತ ವೇಗ ಪಡೆದಂತೆ ತಮ್ಮಲ್ಲಿರುವ ಕೋಲಾಟದ ನೃತ್ಯ ಪ್ರಾರಂಭವಾಗುತ್ತದೆ. ಎಗರಿ ಎಗರಿ ಕುಣಿವ ಚೆಂದ ಅದಕ್ಕೆ ಅವರದೇ ಆದ ಮರಾಠಿ ಭಾಷೆಯ ಹಾಡು ಒಂದಕ್ಕೊಂದು ಮಿಳಿತಗೊಂಡು ವಿಶೇಷವಾದ ಭಕ್ತಿ ಸನ್ನಿವೇಶ ಮೂಡಿಬರುತ್ತದೆ. ಜನಪದ ಸೊಗಡನ್ನು ಹೊಂದಿದ ಅವರ ನೃತ್ಯ ಬಾಯಿಯಿಂದ ಬಾಯಿಗೆ ಬಂದಿರುವ ಪದ ಕಟ್ಟಿ ಹಾಡುವ ಹಾಡು ಕೇಳಲು ಕಿವಿಗೆ ತಂಪಾಗಿರುತ್ತದೆ. ಕೈಲಾಸವಾಸಿ ಶಿವನ ಕತೆ, ಕಾಮದಹನ , ಕೃಷ್ಣನ ಬಾಲಲೀಲೆ ಹೀಗೆ ಅನೇಕ ಘಟನೆಗಳು ಪದ್ಯದಲ್ಲಿರುತ್ತದೆ.

ಅವರು ಹೋಗುವ ಮನೆಯಲ್ಲಿ ಪುಟ್ಟ ಮಗುವಿದ್ದರೆ ಅದನ್ನು ಭುಜದ ಮೇಲೆ ಕೂರಿಸಿಕೊಂಡು ನೃತ್ಯಮಾಡುತ್ತಾರೆ. ಭಯವನ್ನು ಓಡಿಸಲು ಹೀಗೆ ಮಾಡುವರು ಎಂಬ ನಂಬಿಕೆ. ನಂತರ ಕೋಲಾಟ, ಮಕ್ಕಳ ನೃತ್ಯ ಗುಮ್ಟಿ ನೃತ್ಯ ಹೀಗೆ ಮೂರು ಹಂತದಲ್ಲಿ ಇದೆ. ಕೊನೆಗೆ ಮನೆಯ ಯಜಮಾನ ಒಂದು ಸೇರು ಅಕ್ಕಿ, ಎಲೆ ಅಡಿಕೆ, ತೆಂಗಿನ ಕಾಯಿ, ಹಣ ಶಕ್ತಿಗನುಸಾರವಾಗಿ ನೀಡಿ ನಮಸ್ಕರಿಸುತ್ತಾರೆ. ಲೋಕರೂಢಿ ಮಾತು , ಕಷ್ಟ ನಷ್ಟದ ಬಗ್ಗೆ ಮಾತಿಗಿಳಿಯುತ್ತಾರೆ. ಅವರ ಜಾತಿಯವರ ಮನೆಯಲ್ಲಿ ರಾತ್ರಿ ಊಟದ ವ್ಯವಸ್ಥೆ ಇರುತ್ತದೆ. ಒಂದು ೩೦ರಿಂದ ೪೦ ಜನರ ಮೇಲೆ ಸೇರುತ್ತಾರೆ.ಪ್ರತಿರಾತ್ರಿ ಒಬ್ಬೊಬ್ಬರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಬೇಕು.


ನಂತರ ಮತ್ತದೇ ದೇವಸ್ಥಾನಕ್ಕೆ ಹೋಗಿ ಮನೆಮನೆಯಲ್ಲಿ ಕೊಟ್ಟ ಪಡಿಯನ್ನು ಇರಿಸಿ ನಮಸ್ಕರಿಸಿ ಅದನ್ನು ಒಟ್ಟಾಗಿ ಉಪಯೋಗಿಸುತ್ತಾರೆ. ಕಷ್ಟದಲ್ಲಿರುವವರ ಅಭಿವೃದ್ಧಿಗೆ ವಿನಿಯೋಗಿಸುತ್ತಾರೆ. ಈ ಆಚರಣೆಯನ್ನು ಇಂದಿಗೂ ಚಾಚೂತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ ಎಂಬುವುದೇ ವಿಶೇಷ.

ಕೊನೆಯ ದಿನ ಅಂದರೆ ಫಾಲ್ಗುಣ ಶುದ್ಧ ಹುಣ್ಣಿಮೆಯ ರಾತ್ರಿ ನಡುವಿನಲ್ಲಿ ಕಟ್ಟಿಗೆಯ ಬೆಂಕಿ ಹಾಕಿ ಅದರ ಸುತ್ತ‌ ನರ್ತಿಸಿ ಕೊಳದಲ್ಲಿ ಓಕುಳಿಯ ನೀರಿನಿಂದ ಸ್ನಾನ ಮಾಡುವರು. ನೀರಾಟವಾಡುತ್ತ ಸಂಭ್ರಮಿಸುವರು.



(ಹೇರಾಡಿ ಗ್ರಾಮ ಬಾರಕೂರು ಉಡುಪಿ ಜಿಲ್ಲೆ ...)
(ಕೆಲ ಸಂಗ್ರಹಿತ ಚಿತ್ರ ಮಾಹಿತಿ ಅಂತರ್ಜಾಲ ಕೃಪೆ)
.
.
..

Wednesday, 1 March 2023

ನನ್ನ ಬಿಂಬ

 


ಶೀರ್ಷಿಕೆ : ಮನಸಾರೆ ಅಳುವಾಸೆ


ನೋವಿನ ಮನದ ಭಾರವ ಇಳಿಸಲು

ಮನಸಾರೆ ಅತ್ತು ಬಿಡುವಾಸೆ

ಆದರೆ

ನಾನೀಗ ಎರಡು ಮಕ್ಕಳ ತಾಯಿ

ಹಾಗೆಲ್ಲ ಮಕ್ಕಳೆದುರು ಅಳುವ ಹಾಗಿಲ್ಲ..

ಗಂಡನ ಎದುರು ಅತ್ತರೆ

ಒಮ್ಮೆ ಸಮಾಧಾನ ಮಾಡಬಹುದು

ಮತ್ತೆ ನಾಟಕ ಎಂದು ಕೊಳ್ಳುವರು..

ಮಕ್ಕಳ ಎದುರು ಅತ್ತರೆ?!

ಏನಾಯ್ತಮ್ಮಾ ?? ಎಂದು ಕೇಳುವರು

ಅದರ‌ ಕಾರಣ, ತಂದೆ ಎಂದು ತಿಳಿದರೆ

ಅಪ್ಪನನ್ನೇ ದ್ವೇಷಿಸಲು ಮುಂದಾಗುವರು..

ಬೇಡವೇ ಬೇಡ...

ಹುಟ್ಟಿಸಿದ ತಂದೆಯನ್ನು

ಕಡೆಗಣಿಸುವುದು ಬೇಡ..

ನನ್ನ ನೋವು ನನಗಿರಲಿ

ಹೆಚ್ಚೇನಿಲ್ಲ, ನನ್ನ ಆಸೆ ಕನಸುಗಳಿಗೆ

ಇಲ್ಲಿ‌ ಜಾಗವೇ ಇಲ್ಲ.

ಹಣವೆಂಬ ಮಾರಿ ಎಲ್ಲವ

ನುಂಗಿ ಹಾಕುವಾಗ

ಎಷ್ಟು ಲಕ್ಷ್ಮೀ ಪೂಜೆ ಮಾಡಿದರೂ ಫಲವಿಲ್ಲ.


ಹೆಚ್ಚೇನಿಲ್ಲ..

ನಾನು ಅಳಬೇಕು ಎಂದುಕೊಂಡರೂ

ಪಕ್ವವಾಗುತ್ತಿರುವ ಬುದ್ಧಿ

ದಪ್ಪವಾಗುತ್ತಿರುವ ಚರ್ಮ

ಗಟ್ಟಿಗೊಳ್ಳುವ ಮನಸ್ಸು

ಅಳಲೂ ಬಿಡುತ್ತಿಲ್ಲ.

ಎಲ್ಲವನ್ನೂ ನುಂಗುಕೊಂಡು

ಇದೆಲ್ಲ ಮಾಮೂಲು ಎಂದುಕೊಂಡು

ಹೆಜ್ಜೆ  ಹಾಕುವುದೇ ಜೀವನ..



ಮಕ್ಕಳ ಕನಸುಗಳಿಗೆ ರೆಕ್ಕೆ ಕಟ್ಟಲು ಹೆತ್ತವರು ಶಕ್ತರು

ಅದೇ ಮಡದಿಯ ಕನಸುಳಿಗೆ ಇಲ್ಲಿ ಕಿವಿಗಳಿಲ್ಲ..

ಗೃಹಿಣಿಯ ಪಾಡು ಕೇಳುವವರಿಲ್ಲ..

ನಾನೂ ಕೆಲಸಕ್ಕೆ ಹೋಗುವೆ ಎಂದರೆ ಒಪ್ಪಿಗೆ ಇಲ್ಲ

ಬದುಕು ಬಂದಂತೆ ಸ್ವೀಕರಿಸುತ್ತ

ಹೆಜ್ಜೆ ಹಾಕುವಾಗಲೇ ಕಲ್ಲು ಮುಳ್ಳುಗಳು

ಕಾಲಿಗೆ ಚುಚ್ಚುವುದು‌..

ನಾನು ಅಳುವ ಹಾಗಿಲ್ಲ..

ಮಕ್ಕಳೇ ಬಂದು ಸಮಾಧಾನ ಪಡಿಸುವರು

ಧೈರ್ಯ ತುಂಬುವರು..

ಅವರ ಮುಂದೆ ನಾನು ಚಿಕ್ಕವಳಾಗಿ ಬಿಡುವುದೇ?!


ಇಲ್ಲ ಇಲ್ಲ.... ನಾನು ಅಮ್ಮ,

ಎಲ್ಲವನ್ನೂ ಇಂಗಿಸಿಕೊಂಡು

ಬಲೂನಿನಂತೆ ಗಾಳಿ ತುಂಬಿಸಿಕೊಂಡು

ಉಬ್ಬಿಕೊಂಡು ಬಳ್ಳಿಯಂತೆ ಹಬ್ಬಿಕೊಂಡು

ಬದುಕ ಕಟ್ಟಿಕೊಳ್ಳಬೇಕು..

ಇದೇ ವಾಸ್ತವ..


ಸತ್ಯದ ದರ್ಪಣದಲ್ಲಿ

ನನ್ನ ಮುಖ ಚಂದವೇ ಕಾಣುತ್ತದೆ.

ಕೊಂಚ ನಗು ಎನ್ನುತ್ತದೆ..

ನಾನು ನಗುವೆ,‌ ನನ್ನ ಬಿಂಬವಾದ ಅದು ಕೂಡ ನಗುತ್ತದೆ.


ರಚನೆ ::  ಸಿಂಧು ಭಾರ್ಗವ ,ಬೆಂಗಳೂರು.


ಬರಹ 01 Mar 2023 (ಮೊಬೈಲ್ ಚಿತ್ರ)

Monday, 27 February 2023

ಹನಿಗವನಗಳು ವಿಮಾನವೇರಿ

 

(ಗೂಗಲ್‌ ಚಿತ್ರ)

ವಿಷಯ: ವಿಮಾನವೇರಿ

ಹನಿಗವನಗಳು
ಸಿಂಧು ಭಾರ್ಗವ, ಬೆಂಗಳೂರು

(೧) ವಿಮಾನವೇರಿ

ವಿಮಾನವೇರಿ ಹಾರುವ ಆಸೆ
ಮೋಡದ ನಡುವಲಿ ಚಲಿಸುವ ಆಸೆ
ಬುವಿಯನು ಒಮ್ಮೆ ಇಣುಕುವ ಆಸೆ
ಕಣ್ಣಿಗೆ ಸಣ್ಣಗೆ ಕಾಣುವುದೆಲ್ಲವ
ಒಂದೊಂದಾಗಿ ಎಣಿಸುವ ಆಸೆ

(೨) ಗುರಿಯೆಡೆ ಪಯಣ

ಸಪ್ತಸಾಗರವ ದಾಟಬಹುದು
ವಿದೇಶಕೆ ಪ್ರಯಾಣ ಬೆಳೆಸಬಹುದು
ಹೊಸಹೊಸ ಯಶಸ್ಸಿನ ಕದವ ತೆರೆಯಲು
ಗುರಿಯತ್ತ ನಾವು ಸಾಗಬಹುದು

(೩) ಮರೆಯಬಾರದು

ಮರೆಯಬಾರದು ನಮ್ಮ ಹುಟ್ಟೂರ
ಉಸಿರು ನೀಡಿದ ತಾಯ್ನಾಡ
ಬದುಕು ಕಟ್ಟಿಕೊಳ್ಳಲು ಹೋಗಿ
ತೊರೆಯಬಾರದು ನಮ್ಮ ಸಂಸ್ಕಾರ...

ಬದುಕಿದು ನರ್ತನ ಶಾಲೆ





ಬದುಕಿದು ನರ್ತನ ಶಾಲೆ

ಕುಣಿಸುವವರದ್ದೇ ಒಂದು ಲೀಲೆ..


ವಿಧಿಯಾಟ, ದೇವರ ಪಾಠ

ಬದುಕಿನಲ್ಲಿ ಕಲಿಯಲಿದೆ ಅಪಾರ...

ಅಹಮಿಕೆಯ ತೊರೆದರೆ ಇಲ್ಲ ಭವಭಾರ..


ಹೊಸಹೊಸದು ಕನಸುಗಳಿಗೆ ಗೆಜ್ಜೆಕಟ್ಟಿರಿ

ನಿಂದಿಸುವವರ ಕಂಡು ನಕ್ಕು ಸುಮ್ಮನಾಗಿರಿ..


ಇಂತಹ ನರ್ತನ ಶಾಲೆಗೆ

ಗುರುಗಳು ಯಾರು ಬಲ್ಲಿರೇನೋ?!

ಅದೇ ನಿಮ್ಮ ಹಿತಶತ್ರುಗಳು, 

ನಿಮ್ಮ ಜೊತೆಗೆ ಇರುವ ನೆಂಟರು ಬಂಟರು.. 

ನಿಮ್ಮ ಯಶಸ್ಸನ್ನು ಕಂಡು ಸಹಿಸದೇ

ಕೊಂಕು ನುಡಿಯುವವರು, 

ಹುಳುಕು ಹುಡುಕುವವರು 😀

ನರ್ತಿಸಿ ಸುಸ್ತಾಗಿ ಒಂದೆಡೆ ಕುಳಿತರೆ

ಬಂದು ಬೆನ್ನು ತಟ್ಟಿ ಮತ್ತೆ ಪ್ರೋತ್ಸಾಹ ನೀಡುವವರು..


ಸಿಂಧು ಭಾರ್ಗವ ಬೆಂಗಳೂರು.

Google image source

Tuesday, 21 February 2023

ಆದಿಪ್ರಾಸದಲ್ಲಿ ಕನ್ನಡ ಕವಿತೆ ಸುಂದರ ಸ್ವಪ್ನ


(ಗೂಗಲ್ ಚಿತ್ರ)


ಶೀರ್ಷಿಕೆ : ಸುಂದರ ಸ್ವಪ್ನವ ಕಂಡೆ

ಸಿಂಧು ಭಾರ್ಗವ ಬೆಂಗಳೂರು


ಸುಂದರ ಸ್ವಪ್ನವ ಕಂಡೆನು ನಾನು

ಇಂದೇ ಹೇಳಿ ಬಿಡುವೆನು

ಎಂದು ಕೂಡ ಕಂಡಿರಲಿಲ್ಲ‌ ಇದನು

ಮುಂದೆಯೂ ನಾ ಕಾಣೆನು..


ಇಂದಿರೇಶನ ಬೇಡಿಕೊಂಡವಳು ನಾ

ಇಂದು ಫಲಿಸಿತು ಪೂಜಾ ಫಲ,

ಬಂದು ಹೇಳುವೆ ಆ ಕನಸನು..

ಒಂದು ನಿಮಿಷ ಇತ್ತ ಕೇಳಿರಿ..


ಕುಂದಿರದ ನಗುಮೊಗದಲ್ಲಿ

ನಿಂತಿಹನು ಎದುರು ನವತರುಣನು

ಸುಂದರ ಮುಖಾರವಿಂದ ನೋಡುತಲೇ

ಚಂದದ ಮಗುವಂತೆ ನಾ ಕುಣಿದೆನು..


ವಂದಿಸುತಾ ಮನ ಹೇಳಿತು; ಇವನೇ

ಮುಂದಿನ ವರನು ನಿನ್ನ ವರಿಸುವನು...

ಎಂದಾದರು ಬಂದೇ ಬರುವ

-ನೆಂದು ನಾ ಕಾಯುತಲಿರುವೆನು...


(ಗೂಗಲ್‌ ಚಿತ್ರಕೃಪೆ)

(ದಿನಾಂಕ ೨೧/೦೨/೨೦೨೩)


Saturday, 18 February 2023

ಕವನ : ನೀನೇನೆ ಎಲ್ಲೆಡೆ

 

ಶೀರ್ಷಿಕೆ: ನೀನೇನೆ ಎಲ್ಲೆಡೆ
ಸಿಂಧು ಭಾರ್ಗವ ಬೆಂಗಳೂರು

        (ಗೂಗಲ್ ಇಮೇಜ್)


ನೀನೇ ನನಗೆಲ್ಲಾ

ನೀನಿಲ್ಲದೇ ಬಾಳಿಲ್ಲ

ಎಂಬಂತಹ ಭಾವನೆ ನನಗಿಲ್ಲ..

ನಿನ್ನ ನೆನಪುಗಳು

ಆಡಿದ ಮಾತುಗಳು

ಜೊತೆಯಾಗಿ ಬೆಂಬಲಕ್ಕೆ‌ ನಿಂತಿವೆಯಲ್ಲ...


ನೀನಿಲ್ಲದಿದ್ದರೂ,

ದೂರಾಗಿ ನಿಂತರೂ

ಬದುಕುವೆ ನಾನು, ನಿನ್ನನ್ನೇ ಸ್ಪೂರ್ತಿಯಾಗಿಸಿ..

ಹಗಲು ಕಳೆದರೂ

ಇರುಳು ಸರಿದರೂ

ಖುಷಿಪಡುವೆ ನಮ್ಮಯ ಪ್ರೀತಿಯ ಒಪ್ಪವಾಗಿಸಿ..


ಹೊಸ ಚಿಗುರು ಬಂದು

ಹಳೆ ಬೇರು ನಳಿಸಿ

ಲತೆಯೊಂದು ಕಳೆಕಟ್ಟಲೇಬೇಕು

ಮಳೆಗಾಲಕೆ ಮಿಂದು

ಚಳಿಗಾಲಕೆ ನಡುಗಿ

ವೈಶಾಖದ ಬಿಸಿಗೆ ಮೈಯೊಡ್ಡಲೇಬೇಕು...


ಗಡಿಯಾರದ ಮುಳ್ಳು

ತಿರುಗುವ ಓಟಕೆ

ಸಮಯವೇ ನಾಚಿ ತಲೆಬಾಗಲೇಬೇಕು..

ಬಿಡುವಿರದ ಕಾಯಕ

ಸುರಿಯುತಿರುವ ಬೆವರಿಗೆ

ವಿಶ್ರಾಂತಿಗೆ ನಿಶೆಯ ಆತುಕೊಳ್ಳಲೇಬೇಕು..


*****


(ದಿನಾಂಕ: 18 Feb 2023)

(ಗೂಗಲ್ ಚಿತ್ರಕೃಪೆ)

Wednesday, 15 February 2023

ನನ್ನೊಡನೆ ನೀನಿರಲು ಹನಿಗವನಗಳು

 

ನನ್ನೊಡನೆ ನೀನಿರಲು

ಗೂಗಲ್ ಚಿತ್ರ


ಪ್ರಿಯ ಜೀವಾತ್ಮ

ನನ್ನೊಡನೆ ನೀನಿರಲು

ಗರ್ವದಲಿ ಉಬ್ಬುವೆ

ಹೊಟ್ಟೆ ಬಿರಿಯೆ ತಿನ್ನುವೆ

ಹೊಸಹೊಸ ಸಾಧನೆಗೈಯುವೆ

ಕಣ್ತುಂಬಾ ನಿದ್ರಿಸುವೆ

ನೀ ಇಲ್ಲವಾದರೆ,

ಜನ ಹೆಣ ಎನ್ನುವರು

ಚಟ್ಟದಲ್ಲಿ ಹೊತ್ತು‌

ಮಸಣದ ಕಡೆ ಸಾಗುವರು

ಒಳ್ಳೆಯ ಕೆಲಸ ಮಾಡಿದ್ದರೆ

ಹೊಗಳಿ ನಾಲ್ಕು ಹನಿ

ಕಣ್ಣೀರು ಸುರಿಸುವರು...

(೨)

ಪ್ರಿಯ ಸಂಗಾತಿ

ನನ್ನೊಡನೆ ನೀನಿರಲು

ಜೀವನದ ಅರ್ಧಾಂಶವೇ ನೀನು

ನಿನ್ನೊಂದಿಗೆ ಕಳೆವ ಕ್ಷಣಗಳೇ ಹಾಲುಜೇನು..

ಅರಿತು ಬೆರೆತು ಬಾಳುವಾಗ ಬೇಕು ಇನ್ನೇನು?!

ಸಂಗಾತಿ ನೀ ದೂರವಾಡೊದೆ,

ಕಣ್ಣೀರಲ್ಲಿ ಕೈತೊಳೆಯುವಂತೆ

ಒಂಟಿತನವು ಕಾಡಿದಾಗ ಮನ ಬೇಯುವಂತೆ..

ನೆನಪುಗಳ ಸಿಹಿಪಾಕವೂ ಕಹಿಯಾದಂತೆ..

(೩)

ಪ್ರಿಯ ಕನ್ನಡಕ

ನನ್ನೊಡನೆ ನೀನಿರಲು

ಹೊರಗಿನ ಚಿತ್ರಣಗಳೆಲ್ಲವೂ ಸುಸ್ಪಷ್ಟ

ಓದಲು ಬರೆಯಲು ಬಲು ಇಷ್ಟ..

ದಿನವನು ಕಳೆಯಲು ಇಲ್ಲ ಕಷ್ಟ..

ಅದೇ ಮರೆತೆನೆಂದರೆ,

ಇಟ್ಟ ಕನ್ನಡಕ ಎಲ್ಲಿ ಹೋಯ್ತು

ಅಕ್ಷರಗಳೆಲ್ಲ ಮಂಜು ಮಂಜಾಯ್ತು

ಸರಿಯಾಗಿ ಏನೂ ಕಾಣಿಸದು

ಕೂಡಲೇ ಚಿಂತೆ ಶುರುವಾಗುವುದು

(೪)

ಉತ್ತಮ ಮನಸ್ಸು

ನನ್ನೊಡನೆ ನೀನಿರಲು

ಎಲ್ಲರನು ಸಮಾನವಾಗಿ ಕಾಣುವೆನು

ಜಾತ್ಯಾತೀತ ಬದುಕಿಗೆ ನಾಂದಿ ಹಾಡುವೆನು

ಕಷ್ಟ ಸುಖಗಳಿಗೆ ಅಂಜದೆ ಮುನ್ನಡೆಯುವೆನು

ಇತರರ ಕಷ್ಟಕ್ಕೆ ಮರುಗುವೆನು

ಅದೇ ಸ್ವಾರ್ಥಿಯಾದರೆ,

ನಾನೇ ಎಲ್ಲ ಎನ್ನುವೆನು

ಪರರ ಚಿಂತೆ ಮಾಡೆನು

ಬೇಕು ಬೇಡಗಳ ಖರೀದಿಸುತ

ಹಣವನು ಪೋಲು ಮಾಡುವೆನು

(೫)

ಓದು - ವಿದ್ಯೆ

ನನ್ನೊಡನೆ ನೀನಿರಲು

ಧೈರ್ಯ ಮೂಡುವುದು

ಆತ್ಮವಿಶ್ವಾಸದಿ ಹೆಜ್ಜೆ ಹಾಕಬಹುದು

ಗುರಿಯ ತಲುಪಲು ಸಹಾಯವಾಗುವೆ

ಬುದ್ಧಿ ವಿಕಸನ ಹೊಂದುವುದು

ವಿದ್ಯೆ ಇಲ್ಲದಿರೆ,

ವಿಶಾಲ ಮನೋಭಾವ ಮೂಡದು

ಮನ, ಸಂಕುಚಿತವಾಗಿ ಅಂಜುವುದು

ಸರಿಯಾದ ಉದ್ಯೋಗ ಸಿಗದೇ ಒದ್ದಾಡಬೇಕಾದೀತು

ಕಂಡ ಕನಸುಗಳು ಕಮರಿಹೋಗುವವು..

(೬)

ಕೈತುಂಬಾ ಸಂಪಾದನೆ

ನನ್ನ ಬಳಿ ಹಣವಿದ್ದರೆ

ನಾನೇ ರಾಜನಂತೆ

ಮೆರೆಯುವ ಬದಲು

ಸಹಾಯ ಮಾಡುವೆ

ಕಷ್ಟದಲ್ಲಿರುವವರಿಗೆ

ಕನಸುಗಳ ಸಾಕಾರಗೊಳಿಸಲು

ಹೆಜ್ಜೆ ಹಾಕುವೆ ಗುರಿಯೆಡೆಗೆ..

ಹಣವೇ ಇಲ್ಲ

ಕಿಸೆಯಲ್ಲಿ ಕಾಸಿಲ್ಲ

ಕನಸುಗಳಿಗೆ ಜಾಗವಿಲ್ಲ

ಒಂದು ಸಿಕ್ಕರೆ ಇನ್ನೊಂದಿಲ್ಲ

ಬಯಕೆಗಳ ಕೈ ಚೆಲ್ಲಬೇಕಲ್ಲ...


- ಸಿಂಧು ಭಾರ್ಗವ ಬೆಂಗಳೂರು

(ಬರಹ ದಿನಾಂಕ: 15 Feb 2023)

(ಗೂಗಲ್ ಚಿತ್ರಕೃಪೆ)


ನಡಿಗೆ ಉತ್ತಮ ಅಭ್ಯಾಸ walk daily

 ನಡಿಗೆ ಉತ್ತಮ ಅಭ್ಯಾಸ- ವೈಚಾರಿಕ ಲೇಖನ


ಗೂಗಲ್ ಚಿತ್ರಕೃಪೆ.

      ನಡಿಗೆ ಎನ್ನುವುದು ಒಂದು ಉತ್ತಮ ವ್ಯಾಯಾಮ. ಮಳೆ‌ಚಳಿ ಬೇಸಿಗೆ ಎಂಬ ಕಾಲದ ಹಂಗಿಲ್ಲದೇ ಸಂಜೆ ಅಥವಾ ಮುಂಜಾನೆ ನಡೆಯಬಹುದು. ಶುದ್ಧ ಗಾಳಿ, ಸೂರ್ಯನ ಬೆಳಕು, ವಿಟಮಿನ್ ಡಿ ಹೇರಳವಾಗಿ ಮುಂಜಾನೆ ಸಿಗುವ ಕಾರಣ ಅದುವೇ ಸೂಕ್ತವೆನಿಸಿದೆ. ಇನ್ನು ಚಳಿಗಾಲದಲ್ಲಿ ಬೆಳಿಗ್ಗೆ ನಡೆಯುವುದು ಎಂದರೆ ಎಲ್ಲಿಲ್ಲದ ಕೆಲವರಿಗೆ ಆಸಕ್ತಿ. ವಾಕಿಂಗ್ ಗೆ ಹೋಗುವವರು, ಜಾಗಿಂಗ್ ಗೆ ಹೋಗುವವರು ಕಿವಿಯನ್ನು ಹಾಡನ್ನು ಕೇಳಿಸಿಕೊಳ್ಳುತ್ತಾ ಅದರ ತಾಳಕ್ಕೆ ತಕ್ಕಂತೆ ಜಾಗಿಂಗ್ ಮಾಡುವಾಗ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಮುಂಜಾನೆಯ ಶುದ್ಧ ಗಾಳಿ ಆಮ್ಲಜನಕವನ್ನು ಉಸಿರಾಡುವಾಗ ಶ್ವಾಸಕೋಶವೂ ಅರಳುತ್ತದೆ. ಹೆಪ್ಪುಗಟ್ಟಿದ ರಕ್ತವೂ ಬಿಸಿಯಾಗೀ ಸರಾಗವಾಗಿ ನಾಳದಲ್ಲಿ ಸಂಚರಿಸುವಂತಾಗುತ್ತದೆ. ಹೃದಯವೂ ಸುರಕ್ಷಿತವಾಗಿರುತ್ತದೆ.


ಮುಂಜಾನೆಯ ಸುಪ್ರಭಾತದ ಜೊತೆಗೆ ಆ ಹಕ್ಕಿಗಳ ಕಲರವ, ಕಾಳು ಕಸ ಕಡ್ಡಿಗಳ ಹೆಕ್ಕಿ ತಿನ್ನುವುದನ್ನು ನೋಡುವುದೇ ಚಂದ. ಅವುಗಳ‌ ಜಗಳ‌ ಚಲ್ಲಾಟ ಮುದ್ದಾಟ ಮನಸ್ಸಿಗೂ ಮುದ ನೀಡುತ್ತದೆ. ಇನ್ನು ನಾಯಿ ಅಳಿಲು ಹಸುಕರುಗಳನ್ನು ನಾವು ಕಾಣಬಹುದಾಗಿದೆ. ಸೂರ್ಯನ ಎಳೆಬಿಸಿಲಿಗೆ ಮೈ ಅರಳಿಸಿ ನಿಲ್ಲುವ ಬಗೆಬಗೆಯ ಸುಮಗಳ ರಾಶಿ ಮಧುವ ಹೀರಲು ಬರುವ ದುಂಬಿಗಳ ಗೋಗರೆಯುವಿಕೆ... ನೋಡಲೂ ಅಕ್ಷಿಗಳಿಗೊಂದು ಹಬ್ಬ.


ಇನ್ನು ಘಮಘಮಿಸುವ ಮಲ್ಲಿಗೆ ಮಾಲೆ, ದೇವಾಲಯದ ಪಚ್ಚ ಕರ್ಪೂರ, ಗೋಪಿ ಚಂದನ, ಊದುಬತ್ತಿ, ಸಂಪಿಗೆ ಸೇವಂತಿಗೆ ಪರಿಮಳ ಭಕ್ತಿಪರವಶರಾಗಿ ದೇವರು ಇದ್ದಾನೆ ಎಂಬ ನಂಬಿಕೆಯನ್ನು  ಇಮ್ಮಡಿಗೊಳಿಸುತ್ತದೆ. ಸಾತ್ವಿಕ ಆಧ್ಯಾತ್ಮಿಕ ಭಾವಕ್ಕೆ ಬೆಲೆಕಟ್ಟಲಾದೀತೆ?? ಮನೆಯಂಗಳ, ರಸ್ತೆ ದೇವಾಲಯದ ಮುಂಬಾಗ ನೀರು ಚೆಲ್ಲಿ ಗುಡಿಸಿ ಸ್ವಚ್ಛ ಮಾಡಿ ರಂಗೋಲಿ ಬಿಡಿಸುವ ಮಹಿಳೆಯರ ಕಂಡರೆ ಹೆಮ್ಮೆ  ಎನಿಸುವುದು. ನಮ್ಮ ಸಂಸ್ಕೃತಿಯ ಮರೆಯಲಾದೀತೆ??


ಅದರ ಜೊತೆಜೊತೆಗೆ ವಾಕಿಂಗ್ ಹೋಗುವಾಗ ಮೂಗಿಗೆ ಬಡಿಯುವ ತಮ್ಮತ್ತ ಸೆಳೆಯುವ ಇಡ್ಲಿ ವಡಾ ಸಾಂಬಾರ್ ಮಸಾಲ ದೋಸೆ ಟೋಮಾಟೋ ರೈಸ್ ಘಮಘಮ ಅಲ್ಲೇ ನಿಂತು ಬೆಳಿಗ್ಗೆ ತಾಜಾ ಉಪಹಾರವನ್ನು ಇಲ್ಲೇ ಸವಿದು ಬಿಡೋಣ ಎಂದೆನಿಸಿ ಕಾಲಿಗೆ ಬ್ರೇಕ್ ಹಾಕಿಬಿಡುತ್ತದೆ. ಮುಂಜಾನೆಯ ಉಪಾಹಾರವನ್ನು ಅದೂ ಕೂಡ ಲಘು ಉಪಹಾರವನ್ನು ಹೊತ್ತಿಗೆ ಸರಿಯಾಗಿ ಸವಿಯದೇ ಇರಲಾದೀತೆ?? ಆರೋಗ್ಯವೇ ಭಾಗ್ಯ ಎಂಬುದು ಸತ್ಯತಾನೆ.?? ಮುಂಜಾನೆಯ ಉಪಹಾರವನ್ನು ಎಂದಿಗೂ ಹೊತ್ತು ಮೀರಿ ಸೇವಿಸಬಾರದು.


ಇನ್ನು ಸ್ನೇಹಿತರ ಬಳಗ:: ಬೆಳಿಗ್ಗೆ ಪ್ರತಿದಿನ ವಾಕಿಂಗ್ ಗೆ ಬರುವ ಅಪರಿಚಿತರು ಒಂದು ನಗುವಿನ ವಿನಿಮಯದ ಮೂಲಕ  ದಿನಗಳು ಕಳೆದಂತೆ ಸ್ನೇಹಿತರಾಗಿ ಬಿಡುತ್ತಾರೆ. ಅವರ ಬಗೆಗೆ ಕಷ್ಟ ನಷ್ಟು ಓದು ಉದ್ಯೋಗ ರಾಜಕೀಯ ಕ್ರೀಡಾ ಮಾಹಿತಿಗಳ ವಿನಿಮಯ ಮಾಡಿಕೊಂಡು ತಾವೂ ವಿಷಯಗಳ ಸಂಗ್ರಹಿಸಿ ಇತರರಿಗೂ ಹಂಚಿ ಬುದ್ಧಿಯನ್ನು ಚುರುಕಾಗಿಸಿಕೊಳ್ಳುತ್ತಾರೆ. ಚಿಂತನೆಗೆ ಹಚ್ಚುವ ವಿಚಾರಗಳು ಬೇಡವೆಂದರೆ ಆದೀತೆ??


ಆರೋಗ್ಯದ ಹಿತ ದೃಷ್ಟಿಯಿಂದ::: ಈ ನಡಿಗೆ ಜಾಗಿಂಗ್ ಪ್ರತಿದಿನ ಇಪ್ಪತ್ತು ನಿಮಿಷವಾದರು ಮಾಡಲೇಬೇಕು.  ಜಿಮ್ ಗೆ ಹೋಗಿ ವರ್ಕೌಟ್ ಮಾಡಿ ಬೆವರು ಇಳಿಸುವುದು ಎಲ್ಲರಿಗೂ ಸಾಧ್ಯವಾಗದು. ಅಂತವರು ನಡಿಗೆಯಲ್ಲಿ ತೊಡಗಿಸಿಕೊಳ್ಳಿ. ಚೆನ್ನಾಗಿ ನೀರು ಸೇವಿಸಿ. ಪ್ರತಿದಿನ ಮುಂಜಾನೆ ಮತ್ತು  ಸಂಜೆ ನಡೆಯಿರಿ. ರಕ್ತ ಸಂಚಾರ ಸುಗಮವಾಗಿ ಸಾಗಿ ಹೃದಯವನ್ನು ಕಾಪಾಡಿಕೊಳ್ಳಬಹುದು. 


- ಸಿಂಧು ಭಾರ್ಗವ ಬೆಂಗಳೂರು.

ವೈಚಾರಿಕ ಲೇಖನ.

Tuesday, 14 February 2023

ಬಸ್ಸಿನಲ್ಲಿ ಸಂಚರಿಸುವಾಗ ಆಗುವ ಅನುಭವಗಳು

 



Google image

ಬೆಳಿಗ್ಗೆ ಆರು ಗಂಟೆಗೆಲ್ಲ ಎದ್ದು ಮನೆ ಗುಡಿಸಿ ಸ್ವಚ್ಛ ಮಾಡಿ ತಿಂಡಿ ಕಾಫಿ ಎಂದು ಅದನ್ನು ರೆಡಿ ಮಾಡಿ ಗಂಡ ಮಕ್ಕಳ ‌ಏಳಿಸಿ ಅವರಿಗೆ ತಿಂಡಿ ಕೊಟ್ಟು ಶಾಲೆ ಆಫೀಸಿಗೆ ಕಳುಹಿಸುವಾಗ ಸೀಮಾಳ ದಿನಚರಿಯಲ್ಲಿ ಒಂದಷ್ಟು ಮುಗಿದಂತೆ. ನಂತರ?

ನಂತರ ತಾನು ತಿಂಡಿಯ ಡಬ್ಬಕ್ಕೆ ತುಂಬಿಸಿಕೊಂಡು ಜೊತೆಗೆ ಯಾವುದಾದರು ಹಣ್ಣನ್ನು ಕತ್ತರಿಸಿ ಅದನ್ನು ಇಟ್ಟುಕೊಂಡು ನೀರಿನ ಬಾಟಲಿ ರೆಡಿ‌ ಮಾಡಿಕೊಂಡು ಮನೆ ಬಾಗಿಲಿಗೆ ಬೀಗ ಹಾಕುವಾಗಲೇ ಅವಳ ಆಫೀಸಿನ ಬಸ್ಸು ಹಾರ್ನ್ ಹಾಕುತ್ತದೆ.

"ಬಂದೇ..." ಎಂದು ಡ್ರೈವರ್ ಅಣ್ಣನ ಕೂಗಿ ಕರೆದು ಅವಸರದಲ್ಲಿ ಬಸ್ ಹತ್ತುವಾಗ ಎಲ್ಲರಿಗೂ ಗುಡ್ ಮಾರ್ನಿಂಗ್ ಹೇಳಿ ನಗುಮುಖದಿಂದ ಸ್ವಾಗತಿಸಿ ಆ ದಿನವನ್ನು ಕಳೆಯಲು ಮನಸ್ಸು ಸಿದ್ದಗೊಳ್ಳುತ್ತದೆ. ಆಫೀಸಿನ ಒತ್ತಡದ ಎಲ್ಲಾ ಕೆಲಸಗಳನ್ನು ಮುಗಿಸಿ ಮಧ್ಯಾಹ್ನ ಕಟ್ಟಿ ತಂದಿದ್ದ ತಿಂಡಿ ಸವಿದು ಸಂಜೆಯವರೆಗೆ ಕೆಲಸ ಮುಗಿಸಿ ಮತ್ತದೇ ಬಸ್ಸು ಏರುವಾಗ ದಣಿವಾಗಿ ದೇಹವು ಕಿಟಕಿಯ ತಂಪು ಗಾಳಿಗೆ ಮುಖ ಒಡ್ಡಲು ಹೇಳುತ್ತದೆ.

ಹಾಗೆಂದು ಪ್ರತಿ ಸಂಜೆ ಮನೆಗೆ ಬರುವಾಗ ನಿದ್ದೆ ಮಾಡಿದರೆ ಹೇಗೆ? ಹೊರಗೆ ಏನು ನಡೆಯುತ್ತಿದೆ ಎಂದು ತಿಳಿಯುವ ಕುತೂಹಲ ಬೇಡವೇ.?? ಹೋಗಲಿ ಬಸ್ಸಿನೊಳಗೆ ಏನೆಲ್ಲ ನಡೆಯುತ್ತದೆ ಎಂಬ ಕುತೂಹಲ ಇಲ್ಲವೇ??

ಸೀಮಾಳು ಕೂಡ ಮಾತು ಕಡಿಮೆ. ಎಲ್ಲರನ್ನು ಒಮ್ಮೆ ಮಾತನಾಡಿಸಿ ಕೈ ತೊಳೆದುಕೊಳ್ಳುವವಳು. ಮತ್ತೆ ಯಾರ ವೈಯಕ್ತಿಕ ಜೀವನದ ಬಗ್ಗೆಯಾಗಲಿ, ಆಫೀಸಿನಲ್ಲಿ ನಡೆದ ಕತೆಯನ್ನಾಗಲಿ ಚರ್ಚಿಸುವ ಗೋಜಿಗೆ ಹೋಗುವುದಿಲ್ಲ. ಮೊದಲೆಲ್ಲ ಆಫೀಸು ಮುಗಿದಾಗ ವಿಪರೀತ ತಲೆನೋವು ಕಾಣಿಸಿಕೊಂಡು ಅಲ್ಲೇ ಕಿಟಕಿಗೆ ಒರಗಿ ನಿದ್ದೆಗೆ ಜಾರುತ್ತಿದ್ದಳು. ಸುಮಾರು ನಲವತ್ತು ನಿಮಿಷಗಳ ಪ್ರಯಾಣವಾದ ಕಾರಣ ಆ ನಿದ್ದೆ ಸಹಾಯಮಾಡುತ್ತಿತ್ತು.


ನಂತರ ಅದೇ ಅಭ್ಯಾಸವಾಗಿ ಹೋದ ಕಾರಣ ತಲೆನೋವು ಕಡಿಮೆಯಾಯಿತು. ತನ್ನ ಸೀಟಿನಲ್ಲಿ ಕುಳಿತವಳು ಮೆಲ್ಲಗೆ ಮೊಬೈಲ್ ನಲ್ಲಿ ಎಫ್. ಎಂ. ಹಾಡು ಕೇಳುವ ಅಭ್ಯಾಸ ಬೆಳೆಸಿಕೊಂಡಳು. ಆ ಹಾಡಿಗೆ ಗುನುಗುತ್ತ ತಲೆ ಅಲ್ಲಾಡಿಸುತ್ತಾ ಚಿಟಕಿ ಹೊಡೆಯುತ್ತಾ  ಅವಳದೇ ಲೋಕವನ್ನು ಸೃಷ್ಟಿಸಿಕೊಂಡು ಖುಷಿಪಡುತ್ತಿದ್ದಳು. ನಂತರ ಪಕ್ಕದಲ್ಲೇ ಕುಳಿತ ಸಹೋದ್ಯೋಗಿಯ ಮಾತನಾಡಿಸುವ ಮನಸ್ಸು ಮಾಡಿದಳು. ಅವಳ ಮನೆ ಮದುವೆ ಸಂಸಾರದ ವಿಷಯ ಎಲ್ಲ ಕೇಳಿ ತಿಳಿದುಕೊಂಡು ಸ್ನೇಹಿತೆಯರಾದರು.

ನಂತರದಲ್ಲಿ ಪ್ರತಿಸಂಜೆ ಇಬ್ಬರೂ ಜೊತೆಗೆ ಕೂರುವುದು ಅಭ್ಯಾಸ ಮಾಡಿಕೊಂಡರು. ಅವಳಿಗೂ ಎಫ್.ಎಂ. ಗೀಳು ಹತ್ತಿಸಿದಳು‌.


ಸೀಮಾಳಿಗೆ ಒಳ್ಳೆಯ ಗುಣ ಇದ್ದ ಕಾರಣ ಯಾರ ಜೊತೆಗೂ ತಕರಾರು ಮಾಡಿಕೊಳ್ಳುವುದಾಗಲಿ, ತಂದಿಡುವ ಕೆಲಸವಾಗಲಿ ಮಾಡುತ್ತಿರಲಿಲ್ಲ. ಹಾಗಾಗಿ ಜಗಳವಾಗುವ ಪ್ರಶ್ನೆಯೇ ಇಲ್ಲ. ಒಮ್ಮೆ ಹಾಗೆ ಸೀಮಾಳು ‌ಕುಳಿತ ಹಿಂದಿನ ಸೀಟಿನಲ್ಲಿ ನಗುತ್ತಾ , ಪರಸ್ಪರ ಕಾಲೆಳೆದುಕೊಂಡು  ಮಾತನಾಡುತ್ತಿದ್ದವರು ಒಂದೇ ಸಮನೆ ಮಾತಿಗೆ ಮಾತು ಬೆಳೆಸಿ ಜಗಳ ಮಾಡಿಕೊಂಡರು. ಕಾಲರ್ ಪಟ್ಟಿ ಹಿಡಿದೆಳೆದು ಬೈಸಿಕೊಳ್ಳುತ್ತಿದ್ದರು. ನಂತರ ಬಸ್ಸಿನ ಚಾಲಕ ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿ ಚೆನ್ನಾಗಿ ಉಗಿದು "ಏನು ನಾನೀಗ ಗಾಡಿ ಓಡಿಸಬೇಕಾ? ಇಲ್ಲಾ ಪೋಲೀಸ್ ಠಾಣೆಗೆ ತೆಗೆದುಕೊಂಡು ಹೋಗಬೇಕಾ? ಎಂದು ಕೇಳಿದ.
ಉಳಿದವರು. "ಏನ್ರೀ ನಿಮ್ಮ ಜಗಳ.... ಸುಮ್ಮನಿರಿ. ಸಮಾಧಾನ ಮಾಡಿಕೊಳ್ಳಿ..." ಎಂದು ಹೇಳಿದರು. ಅಲ್ಲೇ ವಿಷಯ ನಿಂತಿತು. ಸೀಮಾ ಬೆಚ್ಚಿ ಬಿದ್ದರು.

ಸೀಮಾಳ ಗೆಳತಿಗೆ ಒಬ್ಬ ಪ್ರೇಮಿಯಿದ್ದ. ಪ್ರತಿಸಂಜೆ ಕೆಲಸ ಮುಗಿಸಿ ಮನೆಗೆ ಹೊರಡುವಾಗಲೇ ಕರೆ ಮಾಡುತ್ತಿದ್ದ. ಪಿಸುಗುಟ್ಟಲು ಶುರುಮಾಡಿದರೆ ಸೀಮಾಳ ಮನೆ ಬಂದರೂ ನಿಲ್ಲಿಸುತ್ತಲೇ ಇರಲಿಲ್ಲ. ಅದೆಂತ ಮಾತನಾಡುವುದೋ? ಅದೇನು ವಿಷಯ ಇರುವುದೋ? ಸೀಮಾಳಿಗೆ ಅಚ್ಚರಿ.
"ನೀವಿಬ್ಬರೂ ಏನು ಮಾತನಾಡುವುದು? ಎಂದು ಕೇಳಿದರೆ "ಏನೂ ಇಲ್ಲ... ಸುಮ್ನೆ.. ಹೀಗೆ....??"  ಎನ್ನಬೇಕೆ😃

ಸೀಮಾಳಿಗೆ ಸಂಜೆಯ ತಂಗಾಳಿ ಆ ಟ್ರಾಫಿಕ್ ಜಾಮ್ ಗು ಪುಷ್ಟಿ ನೀಡುವುದು. ಅವಳಿಗೆ ಬೋರ್ ಎನಿಸುವುದೇ ಇಲ್ಲ. ಆ ಟ್ರಾಫಿಕ್ ನ ಸಂಧಿಯಲ್ಲಿ ಬೈಕ್ ನವನು ನುಸುಳಿ ಹೋಗುವುದ ನೋಡುವುದೆ ಚಂದ. ಹುರಿಗಡಲೆ ಹುರಿಯುತ್ತ ತನ್ನ ಕಬ್ಬಿಣದ ಬಾಣಾಲೆ‌ ಕುಟ್ಟಿ ಕರೆಯುವ ದನಿ ಚಂದ.. ಕಾಲೇಜು ಹುಡುಗರ ಗುಂಪುಗಳು‌ ನಡೆದುಕೊಂಡು ಹೋಗುವುದ‌ ನೋಡುವಾಗ ತನ್ನ ಕಾಲೇಜು ದಿನಗಳ‌ ಮೆಲುಕು ಹಾಕಿಕೊಳ್ಳುವುದಿದೆ.

ಕೆಲವೊಮ್ಮೆ ಅಪಘಾತ ಸಂಭವಿಸಿ ಚದುರಿ ಬೀಳುವ ಗಾಜಿನ ಚೂರುಗಳು, ಗುಂಪು ಸೇರುವ ಜನರು, ಅಪಾಯ ಸೂಚಬೆ ನೀಡುತ್ತ ಕೂಗುತ್ತ ಬರುವ ಅಂಬ್ಯುಲೆನ್ಸ್ ನೋಡಿ ಎದೆ ನಡುಗಿ ದೇವರ ಬೇಡುವುದು... ಆ ಸಂಜೆ ಹಕ್ಕಿಗಳು ಮನೆ ಕಡೆಗೆ ಸಾಗುವ ಸಾಲುಗಳ‌ನೋಡಲು ಕಣ್ಣಿಗೆ ಹಬ್ಬ. ಆ ಸಂಜೆಯ ಸೂರ್ಯಾಸ್ತಮಾನದ ಬಣ್ಣಬಣ್ಣದ ಆಗಸವನ್ನು ನೋಡುವುದೇ‌‌ ಕಣ್ಣಿಗೆ ಹಬ್ಬ..



ಹೀಗೆ ಸೀಮಾಳು ಬಸ್ಸಿನಲ್ಲಿ ಸಂಚರಿಸುವಾಗ ಮನಸಾರೆ ಆಸ್ವಾದಿಸುವಳು.‌

- ಸಿಂಧು ಭಾರ್ಗವ ಬೆಂಗಳೂರು
ಲೇಖಕಿ



.....