ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು??
ಪ್ರತಿನಿಧಿ ದಿನಪತ್ರಿಕೆ ಯಲ್ಲಿ ಪ್ರಕಟವಾಗಿದೆ. |
ಹೆಣ್ಣಿನ ಶೋಷಣೆಗೆ ಕೊನೆ ಇಲ್ಲ ಎಂದೇ ಹೇಳಬಹುದು. ಕೆಲವರಿಗೆ ಹೆಣ್ಣು ಮಗು ಹುಟ್ಟಿತೆಂದು ಸಸಾರ. ಇನ್ನು ಕೆಲವರಿಗೆ ಕೆಲಸದ ಆಳು, ಮನೆಯಲ್ಲಿಯೇ ಬಿದ್ದಿರಬೇಕು. ಕೆಲ ಅತ್ತೆಗೆ, ನಾದಿನಿಯರಿಗೆ ಬಂದ ಸೊಸೆ ಮಗನನ್ನು/ಸಹೋದರನನ್ನು ಕೈವಶ ಮಾಡಿಕೊಳ್ಳುತ್ತಾಳೋ ಎಂಬ ಭಯ. ಮಗನ ಮೇಲಿನ ಅತಿಯಾದ ಮೋಹದಿಂದ ಸ್ವಾರ್ಥಿಗಳಾಗಿ ಬಂದ ಸೊಸೆಗೆ ಕಣ್ಣೀರು ಹಾಕಿಸುವುದು, ವರದಕ್ಷಿಣೆ ಕಿರುಕುಳದಿಂದ ಅಮಾನವೀಯ ಕೃತ್ಯ ಎಸಗುವುದು. ತಮ್ಮ ಯವ್ವನದ ಕಾಮಕೇಳಿಗೆ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಳ್ಳುವ ಹೆಣ್ಮಕ್ಕಳು, ಅಥವಾ ಹೆತ್ತು ತೊಟ್ಟಿಯಲ್ಲಿ ಶಿಶುವನ್ನು ಎಸೆದು ಹೋಗುವವರು. ಇನ್ನೊಂದು ಮುಖವಾಗಿ, ಮಾದಕ ವಸ್ತುಗಳ ಸೇವನೆಗೆ ಬಲಿಯಾಗಿಸಿ ಹೆಣ್ಮಕ್ಕಳನ್ನು ದುಡ್ಡಿನ ಆಸೆಗೆ ದೇಹಮಾರಿಕೊಳ್ಳುವ ದಂದೆಗೆ ನೂಕುವ ಕ್ರೂರಿಗಳು, ಎಳೆ ಮಗುವಿನಿಂದಾದಿಯಾಗಿ ವೃದ್ಧ ಹೆಂಗಸು, ಬಿಕ್ಷುಕಿಯನ್ನೂ ಬಿಡದೇ ಮಾಡುತ ಅತ್ಯಾಚಾರಗಳು, ಕೊನೆಗೆ ವಿಷಯ ಹೊರಬರಬಾರೆಂದು ಕೊಲೆಯಲ್ಲಿ ಅಂತ್ಯ. ತಮ್ಮ ಕೈಗೆ ಸಿಗದಿದ್ದರೆ ಶೀಲಗೆಟ್ಟವಳೆಂಬ ಪಟ್ಟ ಕಟ್ಟುವುದು ಇಲ್ಲ ಕೆಲ ಗಂಡಸರು ತಮ್ಮ ಹೆಂಡತಿಯ ಮೇಲೆಯೇ ಶಂಕೆ ಪಡುವುದು....
ಇದೆಲ್ಲವೂ ಸಮಾಜದಲ್ಲಿ ನಡೆದಾಗ ಉಳಿದ ಹೆಣ್ಮಕ್ಕಳ ರಕ್ತ ಕುದಿಯುತ್ತದೆ. ಅದೇ ತನಗೇ ಹಾಗೆ ಆದಾಗ ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳುತ್ತಾರೆ. ಕೆಲವರು ಮುಂದೆ ಬಂದು ದನಿ ಎತ್ತಿದರೂ ಅಲ್ಲಿಯೇ ಕ್ಷೀಣಿಸುವ ಹಾಗೆ ಮಾಡಿ ಬಿಡುತ್ತಾರೆ. ಕೆಲವರಿಗೆ ನ್ಯಾಯ ಸಿಗುತ್ತದೆ.
ಹೆಣ್ಣು ಸಹನೆ,ತಾಳ್ಮೆ ,ಸಯ್ಯಮ, ಸ್ನೇಹ-ಪ್ರೀತಿ, ವಾತ್ಸಲ್ಯ, ಮಮಕಾರದ ಸಾಕಾರ ಮೂರ್ತಿ. ಸಲಹೆಗಾರ್ತಿ,ಶಿಕ್ಷಕಿ, ರಕ್ಷಕಿ ಕೂಡ. ಅವಳು ಎಷ್ಟು ಸಾಧ್ಯವೋ ಅಷ್ಟು ಸಹಿಸಿಕೊಂಡು ಬದುಕುತ್ತಾಳೆ. ಎಷ್ಟು ತಿದ್ದಬೇಕು ಅಷ್ಟು ತಿಳಿ ಹೇಳಿ ತಿದ್ದಲು ಪ್ರಯತ್ನಿಸುತ್ತಾಳೆ. ಅಲ್ಲದೇ ಮನಸ್ಸು ಮಾಡಿದರೆ ಅದರ ದುಪ್ಪಟ್ಟು ಕೋಪ, ಆಕ್ರೋಶ, ಧೈರ್ಯ ಸಾಹಸ ಪ್ರವೃತ್ತಿ ಆಕೆಗಿರುತ್ತದೆ. ಆಕ್ರೋಶವನ್ನು ಹೊರಹಾಕುತ್ತಾಳೆ. ಸಿಡಿದೆದ್ದ ಜ್ವಾಲಾಮುಖಿಯಾಗುತ್ತಾಳೆ. ಎಂಬುವುದನ್ನು ಮರೆಯದಿರಿ.
ತಾಯಿ ಇಲ್ಲದ ಮನೆ, ಮನೆಯೇ ಅಲ್ಲ. ಹಾಗಾಗಿ ಗಂಡ ಅತ್ತೆ ಮಾವ, ನಾದಿನಿಯರು ಕೊಡುವ ಕಷ್ಟಗಳ ಸಹಿಸಿಕೊಂಡು, ತನ್ನ ಮಕ್ಕಳಿಗಾಗಿ ಬದುಕುತ್ತ ಬರುತ್ತಾಳೆ. ಹಾಗೆಯೇ ಹೆಣ್ಣು ಹೆತ್ತವರಿಗೆ ಮದುವೆ ಮಾಡಿ ಕಳುಹಿಸುವುದೇ ಕಷ್ಟಕರವಾದ ಪರಿಸ್ಥಿತಿಯಲ್ಲಿ, ಗಂಡನ ಮನೆಯ ಪರಿಸ್ಥಿತಿ, ಅವರು ಕೊಡುವ ಕಷ್ಟ- ನೋವನ್ನು ಹಂಚಿಕೊಳ್ಳುವುದು ಸರಿ ಕಾಣದೇ ಸಹಿಸಿಕೊಂಡು ಗಂಡನ ಮನೆಯಲ್ಲಿ ಬದುಕುತ್ತಿರುತ್ತಾಳೆ. ಅಲ್ಲದೇ ತನ್ನ ನೋವು ಕಣ್ಣೀರು ಮಕ್ಕಳಿಗೆ ಅರಿವಾಗದ ಹಾಗೆ ಬೆಳೆಸುತ್ತಾಳೆ. ಕಾರಣ "ಮನೆ"ಯ ಸ್ವರೂಪ ಕೆಡಿಸಬಾರದು ಎಂದು. ಅವಳ ತಾಳ್ಮೆಗೂ ಒಂದು ಮಿತಿಯಿರುವುದು, ನೆನಪಿರಲಿ.
ಇನ್ನು ಅತ್ಯಾಚಾರ, ಆಸಿಡ್ ದಾಳಿ ಅವಳ ಮೇಲಿನ ದ್ವೇಷಕ್ಕೆ ಇರಬಹುದು. ಒತ್ತಾಯಪೂರ್ವಕವಾಗಿ ಪ್ರೀತಿಸಲು ಹೇಳಿದರೆ ಯಾರು ಒಪ್ಪುವುದಿಲ್ಲ. ಪ್ರೀತಿ ಮೂಡಬೇಕಾದದ್ದು ವಿನಃ ಒತ್ತಾಯಿಸಿ ಬಲತ್ಕಾರದಿಂದ ಪಡೆಯಲು ಸಾಧ್ಯವಿಲ್ಲ. ಅಥವಾ ಅಚಾನಕ್ ಆಗಿ ಯಾರು ಅಪರಿಚಿತನಿಂದಲೂ ಅತ್ಯಾಚಾರಕ್ಕೊಳಗಾಗಬಹುದು. ಆಸಿಡ್ ದಾಳಿಯಾಗಬಹುದು. ಹಾಗೆಂದು ಧೈರ್ಯಗೆಡಬಾರದು. ಬದುಕು ಕಟ್ಟಿಕೊಳ್ಳಬೇಕು. ಈ ಸಮಾಜ ಆಡುವ ಚುಚ್ಚು ಮಾತಿಗೆ ಧೃತಿಗೆಡದೆ ತಲೆ ಎತ್ತಿ ಬಾಳಬೇಕು. ನ್ಯಾಯಕ್ಕಾಗಿ ಹೋರಾಡಬೇಕು. ಇಲ್ಲ ಅಂತಹ ಕೆಟ್ಟ ಪರಿಸರದಿಂದ ಹೊರಬಂದು ಹೊಸ ಜೀವನ ಪ್ರಾರಂಭಿಸಬೇಕು. ಬದಲಾಗಿ ಸಾವಿಗೆ ಶರಣಾಗಬಾರದು. ಈ ಜಗತ್ತಿನಲ್ಲಿ ಸಾಂತ್ವಾನ ಹೇಳುವ ಕೈಗಳು ಕೂಡ ಇವೆ. ನೆನಪಿರಲಿ. ಇದು ಎಲ್ಲ ಗಂಡಸರಿಗೆ ಆರೋಪ ಮಾಡಲು ಬರೆದ ಲೇಖನವಲ್ಲ. ಬದಲಾಗಿ ವರದಕ್ಷಿಗೆ ಕಿರುಕುಳ, ಅನುಮಾನ , ಅತ್ಯಾಚಾರ ಹಿಂಸೆ ನಿಲ್ಲಿಸಲಿ ಎಂದು ಹೇಳಿದ್ದು. ನಮಗೂ ಮನಸ್ಸಿದೆ. ಬದುಕಲು ಬಿಡಿ.
ಸಿಂಧು ಭಾರ್ಗವ್ | ಬೆಂಗಳೂರು-೨೧
ಬರಹಗಾರ್ತಿ
ಬರಹಗಾರ್ತಿ
No comments:
Post a Comment