Friday 17 July 2020

ಲೇಖನ ಕೆಲವೊಂದ್ ಆಚರಣೆಗ್ ತರ್ಕಾತ್.. ಕುಂದಾಪ್ರಕನ್ನಡ




ಕಿರುಲೇಖನ : ಕೆಲವೊಂದ್ ಆಚರಣೆಗೆ ತರ್ಕಾತ್








ಎಂತ ಗೊತಿತಾ.. "ಇದೆಂತ ಮಿಡ್ಕಾಣಿಯಪ್ಪಾ... ನಮ್ ಭಾಷಿ ನಮ್ ಬದ್ಕ್, ನಿನ್ನೆ ಹುಟ್ಟಿದ್, ನಾಳಿ ಸಾಯುದ್ ಎಲ್ಲ ಇಲ್ಲಿಯೇ.. ಅದನ್ನ ಎತ್ತಿ ಹೇಳುಕೋ, ಖುಷಿಲ್ ಕೊಣುಕೋ ಎಂತ ಇತ್.?? ಅಂದ್ ಮೊನ್ನೆ ಹಳ್ಯರ್ ಒಬ್ರ್ ಹೇಳಿರ್.  ನಾವೆಲ್ಲ ಅದೇ ಭಾಷಿನ್ ಮಾತಾಡ್ತೆ ಇತ್ತಲೇ.. ಇಲ್ಲೇ ಬದ್ಕತಾ ಇತ್ತಲೇ ಅಂದ್ ಅವ್ರಿಗೆಲ್ಲ ಅನ್ಸುದ್ ಸುಳ್ಳಲ್ಲ. ತಪ್ಪೂ ಅಲ್ಲ.
ಈ "ವಿಶ್ವ ಕುಂದಾಪ್ರ ಕನ್ನಡ ದಿನ ಆಚರಣೆ" ಗೆ ಬಂದದ್ದೇ ಊರ್ ಮನಿಯಲ್ ಇಪ್ಪೋರಿಗಂತಲ್ಲ, ಊರ್ ಬಿಟ್ ಪರೂರಲ್ ಇಪ್ಪೋರಿಗೆ. ಓದ್ ಮುಗ್ಸಿ ಪರೂರಲ್ ಕೆಲ್ಸ ಹುಡ್ಕಂಡ್ ಹೋಯ್ ಬಾಡಿಗಿ ಮನಿ ಮಾಡಿರೇ ಕತಿ ಕೇಂತ್ರ್ಯಾ...??!
ಈ ಬೆಂಗ್ಳೂರೇ ತಕ್ಕಣಿ,
ಶಾಲೀಲ್ ಇಂಗ್ಲಿಷ್, ಓನರ್ ತೆಲ್ಗೀನವರ್, ಫಸ್ಟ್ ಫ್ಲೋರ್ ತಮಿಳಿನರ್, ಮೇಲ್ ಮನಿಯರ್ ಮಾರ್ವಾಡಿಗಳ್, (ಮರಾಠಿ, ಹಿಂದಿ) ಇದ್ರ್ ಮಧ್ಯ ನಾವ್ ಹೋಯ್ ಸೇರ್ಕಂಡ್ರೆ  ಕನ್ನಡ ಮಾತಾಡುದೇ ಕಷ್ಟದಲ್ ಇನ್ ಕುಂದಾಪ್ರ ಕನ್ನಡ ಮಾತಾಡುಕ್ ಆತ್ತಾ... ನಮ್ ಮಕ್ಕಳ ಹತ್ರ ಮಾತಾಡ್ಲಕ್.  ಆರೆ ಅವ್ ಹೆಚ್ಚಿಗಿ ಹೊರ್ಗೇ ಇಪ್ಪುಕೋಯ್  ನಮ್ಮ ಕನ್ನಡದ ಪದಗಳ್ ಒಂದೋ ಎರಡೋ ನೆನ್ಪಿರತ್ ಬಿಟ್ರೆ ಅವ್ ಮಾತಾಡು ಭಾಷಿ ದಾಟಿಯೇ ಬದ್ಲಾಯ್ ಇರತ್. ಹೀಂಗಿಪ್ಪತಿಗೆ ವರ್ಷ ಕಳ್ಹಾಂಗೂ " ನಮ್ ಭಾಷಿ ಉಳ್ಸಿ.. ಕುಂದಾಪ್ರ ಕನ್ನಡ ಎಲ್ಲರಿಗೂ ಗೊತ್ತಾಯ್ಲಿ, ನಿಮ್ ಮೊಮ್ಮಕ್ಕಳಿಗೇ ಮೊದ್ಲ್ ನಮ್ ಭಾಷಿ ಕಲ್ಸಿ.. ಅಂಬು ಕಾಲ ಬಂದ್ಬಿಡ್ತ್..." ಹೀಂಗ್ ಆತ್ ಅಂದ್ ಯಾರಾರು ಎಣ್ಸಿರ್ಯಾ.....??
ಒಂದ್ ಹಬ್ಬ ಬಪ್ಪುಕಿಲ್ಲೆ ಪರೂರಲ್ ಇಪ್ಪು ಅಬ್ಬಿ, ಅಪ್ಪಂಗೆ ತಮ್ ತೌರ್ಮನಿ, ಊರು ದೋಸ್ತಿಗಳ್ ನೆನಪ್ ಆಯ್ತ್.  "ನಾವ್ ಹುಡಗ್ರ್ ಮಕ್ಕಳ್ ಎಷ್ಟ್ ಗಮ್ಮತ್ ಮಾಡ್ತಾ ಇದ್ದಿತ್. ಆ ಶಿವರಾತ್ರಿ ಹಬ್ಬ ಬಂದ್ರಂತೂ ಒಂದ್ ಹಿಂಡ್ ದೋಸ್ತಿಗಳ್ ಎಲ್ಲ ಸೇರಿ ನಡುರಾತ್ರಿ ರಸ್ತಿಲ್ ಹೋಪುದ್. ಸಿಕ್ಕೂ ಮನಿಗೆಲ್ಲ ಶೆಟ್ಟಿಕಲ್ ಹೊಡಿಯುದ್. ಮೇವ್ಹರಿ ರಸ್ತಿಮಧ್ಯೆ ಇಟ್ ಬಿಸ್ನೀರ್ ಕಾಯ್ಸುದ್. ಬೆಚ್ಚಪ್ಪ‌ನ್ ನಿಲ್ಸುದ್, ದಿವಾಳಿ ಹಬ್ಬಕ್ಕೆ ಗಂಟಿಗಳನ್ ಮೀಸಿ ಮೈಗೆಲ್ಲ ಬಿಳಿಸೇಡಿ ಬಣ್ಣ ಹಚ್ಚಿ ಕಿಸ್ಕರ್, ದಾಸನ್  ಹೂವಿನ್ ಹಾರ ಹಾಕುದ್, ಅವುಗಳಿಗೆ ಪೂಜೆ ಮಾಡುದ್ , ವಸ್ವಂತ, ತುಳ್ಸೀ ಪೂಜೆ, ಬಲೀಂದ್ರ ಪೂಜಿಗ್ ರಾತ್ರಿಗಟ್ ಗದ್ದಿಗ್ ಹೋಯ್ ಕೂವ್...ಕೂವ್... ಹೊಡಿಯುದ್.. ಪಟಾಕಿ ಹೊಡ್ಸುದ್, ಇನ್ ಆ ಹೊಸ್ತ್ ಹಬ್ಬ ಮರಿಯುಕ್ ಆತ್ತಾ... ಗೆದ್ದಿ ತೆನೆ ಕೊಯ್ಕಂಡ್ ಬಂದ್ ಪೂಜೆ, ಚೌಂತಿಕಾಯ್ ಕೊಚ್ಲ್, ಹೊಸ್ತ್ ಊಂಟ ಅಮ್ಮಂಗ್ ಅಡ್ಗೀಗ್ ಸಹಾಯ ಮಾಡುದ್, ಮನಿ ಎಲ್ಲ ಚಂದ ಮಾಡುದ್, ಅಂಗ್ಳದಲ್ ರಂಗೋಲಿ ಬಿಡ್ಸಿ ಚಂದ ಕಾಂಬುದ್, ಅಣ್ಣ ತಂಗಿ ತಮ್ಮ ಅಕ್ಕ ಅಜ್ಜ ಅಜ್ಜಿ , ಸೋದರತ್ತಿ , ಮಾವ ಚಿಕ್ಕಪ್ಪ ಚಿಕ್ಕಮ್ಮ , ನೆಂಟರ್ ಮನಿ, ಪತ್ರೊಡೆ, ಅರ್ಸಿನ್ ಎಲೆ ಕಾಯ್ ಕಡ್ಬು, ನಾಗರಪಂಚಮಿ, ಸೋಣಿತಿಂಗಳ ಸೋಣಿ ಆರ್ತಿ, ದೇವಸ್ಥಾನದಲ್ ಸಂಕ್ರಾಂತಿ, ಹೆಣ್ಮಕ್ಕಳ ಇಷ್ಟದ್ ಗಣೇಶನ್ ಸಂಕಷ್ಟಿ , ಗಣ್ಪತಿ ಹಬ್ಬ, ಗುಡ್ಡಟ್ , ಆಣಿಗುಡ್ಡಿ, ಮಾರಣಕಟ್ಟೆ, ಪಂಚಲಿಂಗೇಶ್ವರ ದೇವಾಸ್ಥಾನ, ದುರ್ಗಾ ಪರಮೇಶ್ವರಿ ದೇವಸ್ಥಾನ, ಮಾರಿ ಹಬ್ಬ, ಕಂಬ್ಳ, ಕೊಡಿಹಬ್ಬ, ಕೋಲ, ಭೂತ, ದರ್ಶಿನ, ಸಂತಿ, ಜಾತ್ರೆ, ಕೋಳಿಪಡಿ, ಮರವಂತೆ ಕಡ್ಲ್ , ಅಲ್ದೇ ಕಡ್ಲಿ ಪಂಚಕಜ್ಜಾಯ, ಉಂಡಿ, ಹಸಿ ಗ್ವಾಯ್ಬೀಜ ಹಾಕಿ ಮಾಡು ಹೆಸರ್ ಬ್ಯಾಳಿ ಪಾಯ್ಸ , ಅಷ್ಟೇ ಅಲ್ದೇ ಬಸ್ ಸ್ಟಾಂಡ್ ಲಿ ಕೂತ್ ಕಂಡ್  ಜವಾನ್ರ್ ಆಡೋ ಆಟ, ಮಾಡೋ ಗಮ್ಮತ್, ಹೆಣ್ಗಳಿಗ್ ಹಿಲಾಲ್ ಹಾಕುದ್, ಲೈನ್ ಹೊಡ್ಯುದ್  ಒಂದಾ ಎರಡಾ‌.." ಎಷ್ಟೆಷ್ಟೋ... ಹಳಿ‌ನೆನಪ್.... ಅದನ್ ಎಣ್ಸಕಂಡ್ ಕೂಡ್ಲೇ ಬ್ಯಾಡ ಅಂದ್ರೂ ಕಣ್ ಒದ್ದಿ ಆತ್. 😢 ಹೆಣ್ಮಕ್ಕಳ್ ಕೋಣಿಯಲ್ ಕೂತ್ ಮರ್ಕುದೇ ಸಯ್.. "ಅಮ್ಮ.. ಎಂತ ಆಯ್ತಾ.. ಮರ್ಕಬ್ಯಾಡಾ.. ಅಂದ್ ಅವರ್ ಮಕ್ಕಳ್ ಬಂದೇ ಸಮಾಧಾನ ಮಾಡ್ಕ್.." ಗಂಡ್ ಮಕ್ಕಳಿಗ್ ಮರ್ಕೂಕ್ ಆತ್ತಾ.. "ಶೇ!! ಈ ಸಲಿ ದಿಪಾಳಿಗ್ ಊರಿಗ್ ಹೋಪುಕೆ ಆಯ್ಲಾ.." ಅಂದ್ ಮನ್ಸಲ್ಲೇ ಬೇಜಾರ್ ಮಾಡ್ಕಂತ್ರ್..
ಹಾಂಗಂತ ಒಂದ್ಸಲಿ ಊರ್ ಬಿಟ್ಮೇಲ್ ಎಲ್ಲ ಹಬ್ಬಕ್ಕೂ ,‌ಕೆಲ್ಸಕ್ ರಜಿ ಹಾಕಿ ಬಪ್ಪುಕಾತ್.. ಹೆಚ್ಚಂದ್ರ್ ಒಂದ್ವರ್ಷ ಬರ್ಲಕ್ , ಎರಡ್ ವರ್ಷ..ಮತ್ತೆ ಜೀವ್ನ ಬ್ಯಾಡ ಅಂದರೂ ನಮ್ಮನ್ ಕಟ್ಟಿ ಹಾಕತ್. ಊರಿಗ್ ಹೋಪುಕೇ ಕಷ್ಟ ಆತ್.ಮಕ್ಕಳ್ ಶಾಲಿ, ಗಂಡನ್ ಕೆಲ್ಸ, ಈಗ‌ಹೆಣ್ಮಕ್ಕಳೂ ಕೆಲ್ಸಕ್ ಹೋತ್ರ್ ಬಿಡಿ.  ತಳ್ಕಟ್ ಹಾಕಿ ಅರ್ಧಕ್ ನಿಲ್ಸಿದ್ ಮನಿ ಕಟ್ಟುಕೆ ಇದೇ ಪರೂರ್ ದುಡ್ ಕೊಟ್ಟದ್, ಬಾಮಿ‌ತೋಡುಕೂ ಇದೇ ಸಹಾಯ ಮಾಡಿದ್. ತಂಗಿ ಮದಿಗೆ ಚಿನ್ನ , ಅಳಿಯಂಗ್ ಮರ್ತಾದಿ ಕ್ರಮ ಮಾಡುಕೂ ಇದೇ ಪರೂರ್ ದುಡ್ ಕೊಟ್ಟದ್, ಇಷ್ಟೆಲ್ಲ ಜವಾಬ್ದಾರಿ ಮುಗ್ಸಿ 30 ವರ್ಷ ಆಪುವತಿಗ್ ಒಂದ್ ಮದಿ , ತನ್ ಜೀವನ ಅಂದ್ ಕನ್ಸ್ ಕಟ್ಕಂಡದ್ದೂ ಇದೇ ಪರೂರಲ್. ಕೆಲವರಿಗೆ ಶ್ರೀಮಂತರ್ ಆಯ್ಕ್ ಅಂದ್ ಶೋಕಿ.‌ ಕೆಲವರಿಗೆ ಊರ್ ಬಿಡುದು ಅನಿವಾರ್ಯ. ಹಾಂಗಾಂಯ್  ಹೊಟ್ಟೆಗ್ ಊಟ, ಇಪ್ಪುಕ್ ಜಾಗ , ದುಡ್ ಕೊಟ್ಟ ಪರೂರನ್ನು ದೂರುಕ್ ಆತಿಲ್ಲೆ. ಈ ಪರೂರ್ ಅಂದ್ರೆ ಬರೀ ಬೆಂಗ್ಳೂರ್ ಮಾತ್ರ ಅಲ್ಲ, ಮುಂಬೈ, ಕಲ್ಕತ್ತಾ, ಬೆಳ್ಗಾಂ , ಧಾರವಾಡ, ದಾವಣಗೆರೆ, ರಾಜ್ಯದ್ ಎಲ್ಲ ಜಿಲ್ಲೆಯಲ್ಲೂ ಇದ್ರ್ ನಮ್ಮವ್ರ್. ಅಷ್ಟೇ ಅಲ್ದೇ ವಿದೇಶದಲ್ಲೂ ಇದ್ರ್.
ಈ ತರದ್ ಆಚರಣೆ ಮಾಡಿದ್ರೆ ಅದೆಲ್ಲ ನೆನ್ಪ್ ಮಾಡ್ಕಂಡ್ ಒಂದ್ ಸಲ ಆರೂ ಖುಷಿ ಪಡ್ಲಕ್ . ಮತ್ತೆ ನಮ್ ಬಾಲ್ಯಕ್ ಹೋಯ್ ಬರ್ಲಕ್. ಅದನ್ನೆಲ್ಲ ಮರು ಸೃಷ್ಟಿ ಮಾಡ್ಲಕ್. ಆ ಗಮ್ಮತ್ತೇ ಬ್ಯಾರೆ. ಈ ಒತ್ತಡದ್ ಬದ್ಕಿಗ್ ಒಂದ್ ಸ್ಪೂರ್ತಿ, ಶಕ್ತಿ ಬತತ್. ನಾವ್ ಇದ್ರಲ್ಲೇ ಖುಷಿ ಪಡತ್‌ . ನೀವ್ ಅಡ್ಡ ಬರ್ಬೇಡಿ. ಪ್ಲೀಸ್.. 


(ಸಂಗ್ರಹ ಚಿತ್ರಗಳು)
ಬರಹಗಾರ್ತಿ :  ಸಿಂಧು ಭಾರ್ಗವ್ - ಬೆಂಗಳೂರು-೨೧

No comments:

Post a Comment