Sunday, 18 December 2016

ಕಥೆ: ರಾಧಾ ನೆನಪಾದಳು

)(@)(@)(@)(@)(
ಕಥೆ: ಯಾಕೋ ರಾಧಾ ನೆನಪಾದಳು..
ಹಳ್ಳಿ ಜೀವನವೆಂದರೇ ಹಾಗೆ. ಹಸಿರು ಹೊದ್ದು ಮಲಗಿರುವ ಗದ್ದೆತೋಟಗಳು, ಅಡಿಕೆ ತೆಂಗು ಮರಗಳ ನಡುವೆ ಸುಳಿದಾಡೋ ತಂಗಾಳಿ, ನವಿಲಿನ ನರ್ತನ, ಹಿಮ. ಮಂಜು ಮುಸುಕಿದರೆ ಸಾಕು ಏನೋ‌ ಕೇಡು ಸಂಭವಿಸಬಹುದು ಎಂಬ ಮುನ್ಸೂಚನೆ, ನಡು ರಾತ್ರಿಯಲಿ ಗೀಳಿಡುವ ನರಿಗಳ ದನಿಕೇಳಿದರೆ ಸಾಕು ಭಯಕ್ಕೆ ಅಮ್ಮನ ತಬ್ಬಿಕೊಳ್ಳುವುದು, ಗಂಟೆ ಕಟ್ಟಿದ ಅಂಬಾ ಕರು, ಮುಂಜಾನೆ ಕರೆದ ಹಾಲನು ಡೈರಿಗೆ  ಕೊಟ್ಟು ಮತ್ತೆ ಸ್ಕೂಲಿಗೆ ಹೋಗುವುದು, ಸತ್ಯವೆಂದರೆ ಸತ್ಯ, ಮುಗ್ಧರೆಂದರೆ ಮುಗ್ಧರೇ. ಕೆಲವರು ಮೋಸ ವಂಚನೆ ಮಾಡಿಯೇ ಜೀವನ ನಡೆಸುವವರು, ಕೆಲವರು ಬ್ರೋಕರ್ಗಳು. ಕೆಲವರು ಸ್ವಾಭಿಮಾನಿಗಳು, ಛಲವಂತರು, ಕಷ್ಟಪಟ್ಟು ದುಡಿಯುವವರು. ಕೆಲವರು ಮೈಗಳ್ಳರು. ನಮ್ಮ ಮನೆಕೆಲಸಕ್ಕೆ ತೋಟದ ಕೆಲಸಕ್ಕೆ ಹತ್ತಾರು ಜನ ಗಂಡಾಳು, ಹೆಣ್ಣಾಳುಗಳು ಬರುತ್ತಿದ್ದರು. ಬಾಯಿತುಂಬಾ "ಅಮ್ಮಾ" ಎಂದು ಕರೆಯಿಸಿಕೊಳ್ಳುವ ಗತ್ತು-ಗಮ್ಮತ್ತೇ ಬೇರೆಯದಾಗಿತ್ತು. ಅವರಲ್ಲಿ ರಾಧಾ ಅಜ್ಜಿ ಕೂಡ ಒಬ್ಬಳು. ಸುರಸುಂದರಿ, ಬೆಳ್ಳಗಿನ ತಿಳಿ ಮಜ್ಜಿಗೆ, ಸಪೂರ ಮೈಕಟ್ಟು, ಆಗಿನ ಕಾಲದ ಹೀರೋಯಿನ್ ತರಹ, ಅಲ್ಲದೇ ಛಲವಂತೆ,ಪರಿಶ್ರಮಿ, ಎಲ್ಲರನ್ನೂ ನಕ್ಕು ನಗಿಸುವ ವಿದೂಷಕಿ, ಮಿಮಿಕ್ರೀ ಮಾಡುವಳು, ಸುಗ್ಗೀ ಹಾಡು ಹಾಡುವಳು, ಅಬ್ಬಾ...!! ಅವಳು ಸಕಲಕಲಾ ವಲ್ಲಭೇ.
***
ಅದು 1940 ರ ಕಾಲ. ವಯಸ್ಸಿನ್ನು ಹನ್ನೆರಡಾಗಿರಲಿಲ್ಲ ರಾಧಾಳನ್ನು ಮದುವೆ ಶಾಸ್ತ್ರ ಮುಗಿಸಿ ಗಂಡನ ಮನೆಗೆ ಕಳುಹಿಸಿದರು. ಮದುವೆ ಆದ ಮೇಲೆಯೇ ಗಂಡನ ಮುಖನೋಡಿದ್ದು. ಘಟ್ಟ ಅಂದರೆ ಗೊತ್ತಲ್ಲ, ತೀರ್ಥಹಳ್ಳಿಯಲ್ಲಿ ಗಂಡನ ಮನೆ. ಅವನು ಚಿಕ್ಕ ಹುಡುಗನಾಗಿದ್ದಾಗಿನಿಂದ ಭಟ್ಟರ ಮನೆಯ ಅಡಿಕೆ ತೋಟಕ್ಕೆ ಬೆಚ್ಚಪ್ಪನಾಗಿದ್ದ. ಅಂದರೆ ಅವನ ತಂದೆ ತಾಯಿ ಒಡಹುಟ್ಟಿದವರು ಎಲ್ಲರೂ ಅಲ್ಲೇ ಇರುವುದು.. ಇವಳೋ ಮುದ್ದಾಗಿ ಸಾಕಿದ್ದ ಹೆಣ್ಮಗಳಾದರೂ ಗಂಡನ ಜೊತೆ ಹೆಜ್ಜೆ ಹಾಕಿದ ಮೇಲೆ ಅಲ್ಲಿಗೆ ಸರಿಯಾಗಿ ಇರಲೇ ಬೇಕಲ್ಲ ಎಂದು ಅಡಿಕೆ ಸುಲಿಯುವುದು, ಬೇಯಿಸುವುದು ಎಲ್ಲಾ ಕೆಲಸವನ್ನು ಬಲುಬೇಗನೇ ಕಲಿತುಕೊಂಡಳು. ನಗುಮೊಗದಿಂದ ಎಲ್ಲರ ಮನಗೆದ್ದಳು. ಆದರೆ ಗಂಡ ಕುಡುಕ, ಬೇಡವೆಂದರೂ ರಾತ್ರಿ ಯಕ್ಷಗಾನ ನಡೆಯುವಲ್ಲಿ ಹೋಗುತ್ತಿದ್ದ. ಅಲ್ಲಿ ಏನಾದರೂ ಸಹಾಯ ಮಾಡಿ ನಾಲ್ಕು ಪುಡಿಕಾಸು ಜೇಬಿಗಿಳಿಸುತ್ತಿದ್ದ. ವರುಷದೊಳಗೆ ಮೊದಲ ಮಗುವಿನ ತಾಯಿಯಾದಳು. ಮಗುವನ್ನು ಸಾಕಲು ಭಟ್ಟರ ಮನೆಯವರೇ ಸಹಾಯ ಮಾಡಿದ್ದರು. ಎರಡು ವರುಷಗಳು ಅಂತರದಲ್ಲಿ ಇನ್ನೊಂದು ಗಂಡುಮಗುವಾಯಿತು. ಇವಳಿಗೆ ಗಂಡನ ಪ್ರೀತಿ ಸಿಗುವುದು ಕಡಿಮೆಯಾಯಿತು. ತಾನೇ ದುಡಿದು ಮಕ್ಕಳನ್ನು ಸಾಕಿದಳು. ಆಗೆಲ್ಲಾ ಶಾಲೆಗೆ ಹೋಗುವುದು ಕಡ್ಡಾಯವಾಗಿರಲಿಲ್ಲ. ಹಾಗಾಗಿ ಮಕ್ಕಳಿಬ್ಬರೂ ಓದಿನ ಕಡೆ ಗಮನಕೊಡಲಿಲ್ಲ. ಅಷ್ಟರ ನಡುವೆ ಗಂಡ ಯಕ್ಷಗಾನ ಮೇಳದವರ ಜೊತೆ ಹೋದವನು ಮತ್ತೆ ವಾಪಾಸಾಗಲೇ ಇಲ್ಲ.
***
ಗಂಡ ಇಲ್ಲದ ಹೆಂಗಸನ್ನ ನೋಡುವ ದೃಷ್ಟಿ ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತು. ಅವಳ ಯವ್ವನೇ ಸುಡುವ ಕೆಂಡವಾಯಿತು. ರಾತ್ರಿ ಕಳೆಯುವುದು ಕಷ್ಟವಾಗುತ್ತಿತ್ತು.  ಕುಡಿದ ನಾಯಿಗಳು ಬೇಕಂತಲೇನೆ ಅವಳ ಮನೆ ಬಾಗಿಲ ಬಡಿದು ಮಾನಸಿಕ ಹಿಂಸೆ ನೀಡುತ್ತಿದ್ದವು. ಆದರೂ ಗಟ್ಟಿಗಿತ್ತಿ. ಹತ್ತಿರ ಬರಲು ಯಾರಿಗೂ ಬಿಡುತ್ತಿರಲಿಲ್ಲ. ಅಲ್ಲದೇ ಸೋಂಟೆ ಹಿಡಿದು ಅತೀಯಾಗಿ ವರ್ತಿದುವವರಿಗೆ ಮೈಕೈ ಮುರಿಯುವಷ್ಟು ,ಬಾಸುಂಡೆ ಬರುವಷ್ಟು ಹೊಡೆದಿದ್ದಳು. ಹಗಲು ರಾತ್ರಿ ಅರೆಬರೆ ನಿದ್ದೆ ಕಣ್ಣಿನಲ್ಲಿಯೇ ಕಳೆಯುತ್ತಿದ್ದಳು. ಅದನ್ನು ಗಮನಿಸಿದ ಭಟ್ಟರ ಅಮ್ಮ ತನ್ನ ಮನೆಯ ಪಕ್ಕದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿರಲು ಹೇಳಿದರು.ಆಗ  ಜೀವಕ್ಕೆ ಸ್ವಲ್ಪ ಧೈರ್ಯ ನೆಮ್ಮದಿ ಬಂತು. ಗಂಡಬೇಗ ವಾಪಾಸಾಗಲಿ ಎಂದು ಕಂಡಕಂಡ ದೇವರಲ್ಲಿ ಪ್ರಾರ್ಥಿಸುವುದೇ ಆಯಿತು. ಕೊನೆಗೂ ಆರು ವರುಷದ ನಂತರ ಗಂಡ ಬಂದ. ಕುಡಿತದಲ್ಲಿ ಸ್ನಾನ ಮಾಡುತಲಿದ್ದ. ಮಕ್ಕಳಿಗೆ ಮಾತನಾಡಿಸಲೂ ಇಷ್ಟವಾಗಿರಲಿಲ್ಲ. ರಾಧಾಗೆ ಅವನನ್ನು ನೋಡಿ ಅಳುವೇ ಬಂದಿತು. ಬಿಸಿಬಿಸಿ ಅಡುಗೆ ಮಾಡಿ ಬಡಿಸಿದಳು ಕರ್ತವ್ಯವೆಂಬಂತೆ ಮಾಡಿ ಮುಗಿಸಿದಳು. ಆ ರಾತ್ರಿ ಏನಾಯಿತೋ ಗೊತ್ತಿಲ್ಲ. ಮತ್ತೆ ಒಂದು ವಾರ ಹೆಂಡತಿಯ ಸೆರಗಿನಲ್ಲೇ ಅಂಟಿಕೊಂಡಿದ್ದ. ಆದರೂ ಅವಳಿಗೆ ಇಷ್ಟವಾಗುತ್ತಿರಲಿಲ್ಲ. ಮತ್ತೆ ಮೇಳದವರು ಕರೆದರೆಂದು ಹೊರಟೇ ಬಿಟ್ಟ. ಇವಳು ಬೇಡವೆಂದು ಗೋಗರೆದರೂ ಕೇಳಿಸಿಕೊಳ್ಳಲೇ ಇಲ್ಲ. "ಅಮ್ಮಾವ್ರೆ.. ಅವನು ಇನ್ನು ಬಂದರೂ ನಾನು ಸೇರಿಸಿಕೊಳ್ಳುವುದಿಲ್ಲ.. ಬೇಜವಾಬ್ದಾರಿ ಮನುಷ್ಯ ಅವ. ಮಕ್ಕಳನ್ನು ನಾನೇ ದುಡಿದು ಸಾಕ್ತೇನೆ.." ಎಂದು  ತನ್ನ ನೋವನ್ನು ಹೊರಹಾಕಿದಳು. ಅಷ್ಟರಲ್ಲಿ ಮತ್ತೆ ವಾಂತಿ ಮಾಡಿದಳು. ಬೇಡವೀ ಪಿಂಡವೆಂದು ತೆಗೆಸಿಕೊಳ್ಳು ಯಾವುದೋ ಮರದ ಕೆತ್ತೆ ಕಡಿದು ಕುಡಿದಳು. ಉ.ಹುಂ ಗಟ್ಟಿಪಿಂಡ ಸಾಯಲಿಲ್ಲ. ಅಂತೂ ಹೇರಿಗೆ ನೋವು ಕಾಣಿಸಿಕೊಂಡಿತು. ಮುದ್ದಾದ ಹೆಣ್ಣುಮಗು ಹಡೆದಳು. ಆ ಮಗುವು ರಾಧಾಳನ್ನೇ ಹೋಲುತ್ತಿತ್ತು. ಕೆಂಪು-ಕೆಂಪು ಮುಖದ ಗೊಂಬೆಯ ರೀತಿ ಮುದ್ದಾಗಿತ್ತು. ನೋಡಿ ಖುಷಿಯಾಯಿತು. ಹೇಳಬೇಕೆಂದರೆ ರಾಧಾಳಿಗೆ ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರು ಹಾಗೆ ನಾಲ್ಕು ಜನ ಸಮವಾಗಿ ತಮ್ಮ, ತಂಗಿ ಇದ್ದ ದೊಡ್ಡ ಕುಟುಂಬವಾಗಿತ್ತು. ಅವಳ ಕಷ್ಟ ಅಣ್ಣನಿಗೆ ನೋಡಲಾಗಲಿಲ್ಲ. "ಮನೆತುಂಬಾ ಮಕ್ಕಳಿದ್ದಾರೆ. ನೀನು ಊರಿಗೆ ತಿರುಗಿ ಬಂದುಬಿಡು, ಇಲ್ಲೆ ಒಂದು ಕೆಲಸನೋಡಿದರಾಯಿತು. ಪಾಲಿನ ಜಾಗದಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸು.." ಎಂದ.
***
ಮತ್ತೆ ಹೊಸ ಜೀವನ ಪ್ರಾರಂಭ. ಆಗ ನಾವೆಲ್ಲ ಐದಾರು ವರುಷದ ಪುಟ್ಟಮಕ್ಕಳಷ್ಟೆ. ಅವಳ ಮಕ್ಕಳು ದೊಡ್ಡವರಾಗಿದ್ದರು ಮದುವೆ ಆಗುವ ವಯಸ್ಸಾಗಿತ್ತು. ಗಾರೆ ಕೆಲಸ ಮಾಡಿಕೊಂಡು ಎರಡನೇ ಮಗ ನ್ಯಾಯಯುವ ಜೀವನ ನಡೆಸುತ್ತಿದ್ದ. ಮೊದಲನೇ ಮಗ ತಂದೆಯ ರಕ್ತವೇ ಹರಿಯುವುದನ್ನು ತೋರಿಸಿಕೊಟ್ಟ. ಯಕ್ಷಗಾನ ಬಯಲಾಟದ ಮೇಳಕ್ಕೆ ಸೇರಿದ್ದ. ಹಗಲು ನಿದಿರೆ,ರಾತ್ರೆ ಕುಣಿತ ಅದೇ ಜೀವನವಾಗಿತ್ತು. ಮಗಳಿಗೆ ಯೋಗ್ಯವಾದ ವರನ ನೋಡಿ ಮದುವೆ ಮಾಡಿಸಿದರು. ಆದರೆ ಅವಳು "ಅಮ್ಮನ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ.." ಎಂದು ಆಸ್ತಿಯಲ್ಲಿ ಪಾಲು ಕೇಳಿ ಅಲ್ಲಿಯೇ ಒಂದು ಮನೆ ಕಟ್ಟಿಕೊಂಡಳು. ಗಂಡನು ಬಾಯಿಮುಚ್ಚಿಕೊಂಡು ಬಂದ. ಆದರೆ ಕೈಯಲ್ಲಿ ಕೆಲಸವೆಂಬುದಿರಲಿಲ್ಲ. ಹೆಂಡತಿಗೆ ಹೊಡೆಯುವುದು, ಹಣ ಕೇಳುವುದು, ಕುಡಿಯುವುದು ಹೀಗೆ ಹಿಂಸಾಕೂಪವಾಗಿತ್ತು ಅವಳ ಸಂಸಾರ. ರಾಧಾಳಿಗೆ ರಾತ್ರಿ ನಿದಿರೆಯೇ  ಮಾಡುತ್ತಿರಲಿಲ್ಲ. ನಂಬಿದ ದೇವರಿಗೆ ಒಂದು ಹರಿಕೆ ಹೊತ್ತು ಮಗಳ ಸಂಸಾರ ಸರಿಯಾಗಲಿ ಎಂದು ಬೇಡಿಕೊಂಡಳು. ದೊಡ್ಡ ಮಗನೋ ಎಲ್ಲಿಯೋ ಯಕ್ಷಗಾನ ಆಟಕ್ಕೆ ಹೋದಾಗ ಒಂದು ಹುಡುಗಿಯ ಕಂಡಿದ್ದ. ಸಿರಿವಂತರ ಮನೆ ಹುಡುಗಿಯವಳು. ಅವಳನ್ನೇ ಮದುವೆ ಆಗುವೆ ಎಂದು ಅವಳ ಸಹೋದರನಲ್ಲಿ ಕೇಳಿ ಒಮ್ಮೆ ಉಗಿಸಿಕೊಂಡಿದ್ದ. ಪಟ್ಟು ಹಿಡಿದು ಅವಳೇ ಬೇಕು ಎಂದು ಹಟಮಾಡಿ ಮದುವೆಯಾದ. ಚೆನ್ನಾಗಿಯೇ ಸಂಸಾರ ನಡೆಯುತ್ತಿತ್ತು. ಆದರೆ ಮನೆಯ ಪಾರುಪತ್ಯ ಪೂರ್ತಿ ಹೆಂಡತಿಯದೇ ಮತ್ತು ಅವಳ ಮನೆಯವರದೇ ಆಗಿತ್ತು. ಆದರೂ ಅವನು ದಾರಿಗೆ ಬಂದನಲ್ಲ ಎಂದು ರಾಧಾ ನಿಟ್ಟುಸಿರು ಬಿಟ್ಟಳು. ಇನ್ನು ಎರಡನೇ ಮಗನಿಗೆ ಸಂಬಂಧ ಬಂದಿತ್ತು. ಹುಡುಗಿಯ ನೋಡಿ ಒಪ್ಪಿದ, ಮದುವೆಯೂ ಆಯಿತು. ಅಲ್ಲಿಂದ ಶುರುವಾಯಿತು ನೋಡಿ ಮಕ್ಕಳ ನಿಜರೂಪ. ಅವರ ಯಕ್ಷಗಾನ ಬಯಲಾಟ..
***
ಮೊದಲಿನ ಸೊಸೆ ಅತ್ತೆಗೆ (ರಾಧಾಳಿಗೆ) ಊಟವಿರಲಿ ,ತೊಟ್ಟು ನೀರು ಕೊಡಲು ನಿರಾಕರಿಸಿದಳು. "ಎರಡನೇ ಮಗನ ಮನೆಯಿದೆ ತಾನೆ, ಹೋಗಲಿ ಅಲ್ಲಿಗೇ.. ಮಗಳೂ ಇಲ್ಲೇ ಇದ್ದಾಳೆ.. ನಾವ್ಯಾಕೆ ಮಾಡಬೇಕು ಎಂದು ದಿನ ಬೆಳಗಾದರೆ ಬೈಯುವುದು, ಹಂಗಿಸುವುದು. ಅವಳ ಕೊಂಕುನುಡಿಗಳ ನುಂಗಲಾಗದೇ ಕಣ್ಣೀರಿಡುತ್ತಿದ್ದಳು ನಮ್ಮಮನೆ ಕೆಲಸಕ್ಕೆ ಬಂದಾಗಲೆಲ್ಲ.. ಇನ್ನು ಎರಡನೇ ಸೊಸೆ "ತಿನ್ನಲು ಉಣ್ಣಲು ಏನೂ ತಕರಾರಿಲ್ಲ, ರಾತ್ರಿ ಮಲಗಲು ಮಗಳ ಮನೆಗೇ ಹೋಗಿ.." ಎನ್ನುತ್ತಿದ್ದಳು. ಅಲ್ಲದೇ "ಗಂಡನ (ಎರಡನೇ ಮಗ) ದುಡಿದ ಹಣ ಕೇಳುವಂತಿಲ್ಲ. ನೀವೇ ದುಡಿಯುತ್ತೀರಲ್ಲ. ಬೇಕಾದರೆ ಮಗಳು-ಅಳಿಯ ಕೊಡುವರು" ಎಂದು ವ್ಯಂಗವಾಡುತ್ತಿದ್ದಳು. ಅಳಿಯ ಬೈದರೂ ತನ್ನ ಗಂಡ ಕುಡುಕ ಎಂದು ಮಗಳಿಗೆ ಗೊತ್ತಿತ್ತು. ನನ್ನ ಸಹಾಯಕ್ಕೆ ಅಮ್ಮ, ಅಮ್ಮನಿಗೆ ನಾನು ಎಂದು ಮನೆಯಲ್ಲಿಯೇ ಇರಿಸಿಕೊಂಡಿದ್ದಳು. ಆಗಲೇ ಶುರುವಾಯಿತು ಮಗಳಿಗೆ "ಜೀವದಲ್ಲಿ ರಕ್ತವಿಲ್ಲ, ಲೋ ಬಿ.ಪಿ, ರೆಸ್ಟ್ ಮಾಡಬೇಕು, ಆರೋಗ್ಯದ ಕಡೆ ಗಮನ ಕೊಡಿ, ಕೆಲಸವೇನು ಮಾಡಬೇಡಿ.. ಹೀಗೆ ಡಾಕ್ಟರ್ ರ ಹಿತವಚನಗಳು. ಬಡವರಿಗೆ ಬೇಡದ ಕಾಯಿಲೆಗಳು ಹೊದ್ದು ಮಲಗಲು ಎಂದು ಗೊಣಗುತ್ತಾ ವಾಪಾಸ್ಸಾದಳು. ತಾಯಿಯೇ ದುಡಿದು ಹಣ್ಣು ಹಂಪಲು ತಂದು , ನೆರಮನೆಯಿಂದ ಹಾಲು ಕೇಳಿ ಪಡೆದು ಮನೆಯಲ್ಲಿ ಅಡುಗೆ ಮಾಡಿ ಮಗಳ ಜೊತೆಗೆ ಮೂರ್ನಾಲ್ಕು ಮೊಮಕ್ಕಳನ್ನೂ ಸಾಕಿ ಸಲಹುತ್ತಿದ್ದಳು. ಮನಸ್ಸಿಗೆ ನೆಮ್ಮದಿಯಿಲ್ಲದೇ ಕಳ್ಳು-ಸಾರಾಯಿಯ ಮೊರೆ ಹೋಗಿ ಅದೆಷ್ಟೋ ಬರುಷಗಳೇ ಆಗಿತ್ತು. ಹೊಗೆಸೊಪ್ಪು ತಿನ್ನುತ್ತಿದ್ದಳು. ಅದೊಂದು ಅಭ್ಯಾಸವಾಗಿ ,ಕೆಟ್ಟ ಚಟವಾಗಿಹೋಯ್ತು. ರಾತ್ರಿ ನಿದಿರೆ ಬರಬೇಕಾದರೆ ಕುಡಿಯಲೇ ಬೇಕಿತ್ತು.
ಇದರ ನಡುವೆ ನಮ್ಮ ಮನೆಗೆ ತೋಟದ ಕೆಲಸಕ್ಕೆ ಬಂದಾಗಲೆಲ್ಲ ನಗುತ್ತಾ ನಗಿಸುತ್ತಾ ಮನಸ್ಸಿನ ನೋವು ಮರೆಯುತ್ತಾ ನಮಗೆಲ್ಲ ಮುದ ನೀಡುತ್ತಿದ್ದಳು.
***
ಇಪ್ಪತ್ತು ವರುಷಗಳು ಉರುಳಿದವು. ಈಗ ರಾಧಾ ಹಾಸಿಗೆ ಹಿಡಿದಿದ್ದಾಳೆ. ಕುಡಿತಕ್ಕೆ ಕರುಳು ಸುಟ್ಟು ಹೋಗಿದೆ. ಪಾರ್ಶ್ವವಾಯು ಬಂದು ದೇಹದ ಎಡಭಾಗದ ಯಾವ ಅಂಗಾಂಗಗಳೂ  ಕೆಲಸಮಾಡುತ್ತಿಲ್ಲ. ಯಾರು ಬಂದರೂ,ಹೋದರೂ ಗೊತ್ತಾಗುವುದಿಲ್ಲ. ಕಣ್ಣುಗಳು ಪೊರೆಬಂದು ಕುರುಡಾಗಿದೆ. ಸೊಸೆಯೋ ಯಾವಾಗ ಸಾಯುವರೋ ಎಂದು ಬಂದವರೆದುರೇ ಹೇಳುತ್ತಾಳೆ. ಅಳಿಯ ಸಂಪೂರ್ಣ ಬದಲಾಗಿ ಹೊಸ "ಮಾಂಸಾಹಾರಿ ಊಟದ ಹೋಟೆಲ್" ಮಾಲೀಕನಾದ. ಒಂದು ಗೂಡು ರಿಕ್ಷಾ, ಬೈಕ್, ಕಾರು, ದೊಡ್ಡ ಮನೆ ಕಟ್ಟಿಸಿ ಸಿರಿವಂತನಾದ. ರಾಧಾಳನ್ನು ಅವನೇ ನೋಡಿಕೊಳ್ಳುತ್ತಿದ್ದಾನೆ. ಎರಡನೇ ಮಗ ಕಣ್ಣಿದ್ದೂ ಕುರುಡ. ಕೇಳಿದರೇ ನಮಗೇ ನಮ್ಮದು ಹೆಚ್ಚಾಗಿದೆ ಅನ್ನುವ. ಹೆಂಡತಿ ಹೇಳಿದ ಹಾಗೆ ಕುಣಿಯುವ. ಬದಲಾಗಿ ಹೋಗಿದೆ ಎಲ್ಲರ ಬದುಕು. ರಾಧಾಳನ್ನ ಕೊನೆಗೂ ಚೆನ್ನಾಗಿ ಆರೈಕೆ ಮಾಡಿದ್ದು ಅವಳ ಮಗಳು-ಅಳಿಯನೇ.‌ ಅದಕ್ಕೇ ಹೇಳುವುದು ಮನೆಗೆ ಒಂದಾದರೂ ಹೆಣ್ಮಗಳಿರಬೇಕು ಎಂದು. ಅವಳಿಗೆ ಮಾತ್ರ ದಯೆ,ಕರುಣೆ, ಸಹನೆ, ಪ್ರೀತಿ, ಮಮತೆ ಎಲ್ಲವೂ ಅರ್ಥವಾಗುವುದು. (ಕೆಲವು ಕಡೆಯ ಅಪವಾದದ ಹೊರತಾಗಿ).

- ಸಿಂಧುಭಾರ್ಗವ್.

ಕವಿತೆ: ಬೇಸರ ಕಳೆಯಲು ಬರೆಯುವೆಯಾ

ಕವನ: ಕವಿತೆ ಬರೆಯುವೆಯಾ

ಮನವು ಮಂಕಾಗಿ ಕುಳಿತಿದೆ ಗೆಳೆಯಾ
ನನಗಾಗಿ ಒಂದು ಕವಿತೆ ಬರೆಯುವೆಯಾ

ರಾಗವಿರಲಿ, ತಾಳವಿರಲಿ
ಪ್ರೀತಿ ಕಲಸಿದ ಸಿಹಿ ಪಾಯಸದಂತಿರಲಿ..

ನಗುವ ತರಿಸುವ ವಿನೋದವಿರಲಿ
ಅಳುವ ತರಿಸುವ ವಿಷಾದವಿರಲಿ

ಸರಸವಿರಲಿ, ಜೊತೆಗೆ
ಕಾಡುವ ಸಾಲೊಂದಿರಲಿ..
ವಿರಸವಿರಲಿ, ಜೊತೆಗೆ
ಬೇಡುವ ಬಯಕೆಯೊಂದಿರಲಿ..

ಮನವು ಮಂಕಾಗಿ ಕುಳಿತಿದೆ ಗೆಳೆಯಾ
ನನಗಾಗಿ ಒಂದು ಕವಿತೆ ಬರೆಯುವೆಯಾ...

- ಸಿಂಧುಭಾರ್ಗವ್.

ಕವನ ಆಶಾಮಣಿಗಳ ಮಾಲೆ

ಕವನ : ಆಶಾಮಣಿಗಳ ಮಾಲೆ :

ಬೆಳಕು ಹರಿದಿದೆ ಪಂಚಿ ಹಾರಿದೆ
ಚಿಲಿಪಿಲಿ ಹಾಡು ಕೇಳಿ ಬರುತಿದೆ
ತೊಳೆದ ಮೊಗದಲಿ ಹೊಸ ಕಳೆಯಿದೆ
ದಿನದ ಪುಟವ ಕಾಣ್ವ ತವಕವಿದೆ..

ಮನೆಯಲೇ ಕುಳಿತರೇನು ಬಂತು
ನಡಿ ನೋಡು ಹೊರಗೆ ಹೊಂಟು

ತಪ್ಪುಗಳ ಹುಡುಕುವ ಜನರಗುಂಪು ನೋಡಲ್ಲಿ
ಬೆನ್ನು ಮುರಿದು ಕೆಲಸ ಮಾಡುವರಿಲ್ಲಿ

ಅವರ ಶಕ್ತಿ ಅಡಗಿದೆ ಗುಟುಕು ಚಹಾದಲ್ಲಿ
ನಡುವೆ ಜೀವನಕೆ ಬೇಕಾಗುವ ನುಡಿಯಲ್ಲಿ

ನಮ್ಮ‌ದೇ ಮಾತು ಕೆಲವರಿಗೆ ಸ್ಪೂರ್ತಿ
ನಾವೇ ಕುಳಿತಿರುವೆವು ಮಂಕಾಗಿ ಪೂರ್ತಿ

ದಿನೇ ದಿನೇ ಏರುವುದು ನಶೆ..
ಬದಲಾಗುವುದು ನಮ್ಮ ದೆಶೆ..

ಆಶಾ ಮಣಿಗಳ ಎಣಿಸುತ ಕುಳಿತುಕೊಳ್ಳುವುದಲ್ಲ..
ಮಾಲೆಮಾಡಿ ಕೊರಳಿಗಿಸಿ ಕೆಲಸ ನೋಡಲ್ಲ..

ನಿನ್ನೆಯದು ಇಂದಿಲ್ಲ
ಇಂದಿನದು ನಾಳೆಗಿಲ್ಲ
ಪುಟಗಳು ತಿರುವುತಲೇ ಸಾಗಬೇಕಲ್ಲ..

ಹೊಸ ಉತ್ಸಾಹದ ಜೊತೆಗೆ ಹೆಜ್ಜೆಯಿಡು ನೀನು
ಸಿಕ್ಕಸಿಕ್ಕ ಕೆಲಸವ ಮಾಡಿ ಅನುಭವೀ ಆಗು

ಜೊತೆಗೆ ಜನರ ಸ್ನೇಹ ಬೆಳೆಸು
ನಗುಮೊಗದಿ ಸ್ವಾಗತಿಸು..
ಕೆಲವರಿಂದ ನಗುವು
ಹಲವರಿಂದ ಪಾಠವು ಸಿಗುವುದು ನೋಡು..

ಆ ಶುಭ ಗಳಿಗೆ, ಇಂದು ಸಿಗುವುದೋ
ನಾಳೆ ಬರುವುದೋ‌ ಕಾಯಬೇಡ ಮನವೇ..

ಖುಷಿಯು ಸಂಗಡವಿರಲಿ
ರಂಗು ತುಂಬಿಸು, ಜೀವನ ಸಾಗುತಲಿರಲಿ..
ರಂಗು ತುಂಬಿಸು, ಜೀವನ ಸಾಗುತಲಿರಲಿ..

- ಸಿಂಧುಭಾರ್ಗವ್ 🌷

ಕವಿತೆ ನಿನಗೆಂದೇ ಕವಿತೆಬರೆದೆ

  "ಕವಿತೆ ಬರೆದೆ"

ನಿನ್ನ ಮಂದಹಾಸ ಬೆಳದಿಂಗಳಿನಂತೆ,
ಹಲ್ಲುಗಳೋ ದಾಳಿಂಬೆ ಕಾಳಿಯಂತೆ,
ಕಂಗಳೋ ಮಿನುಗೋ ತಾರೆಗಳಂತೆ,
ಹುಬ್ಬುಗಳು ಥೇಟ್ ಕಾಮನಬಿಲ್ಲಿನಂತೆ...

ಹೇಯ್ ಮುದ್ದು,
ಹೆಂಗಳೆರ ಹೊಗಳುವ ಕವಿಗಳಿದ್ದಾರೆ,
ನಿನ್ನಂದವ ಹೊಗಳುತ ಕವಯಿತ್ರಿಯಾದೆನಲ್ಲಾ..
ಬರೆವ ಕವಿತೆಗಳ ಸಂಖ್ಯೆ ಹೆಚ್ಚುತಿದೆಯಲ್ಲ..

ತಿಂಗಳ ಹುಣ್ಣಿಮೆಗೊಂದು,
ನಿನ್ನ ಹುಸಿ ಕೋಪಕ್ಕೊಂದು,
ನನಗಾಗಿ ಮೀಸಲಿಡುವ ಸಮಯಕ್ಕೆಂದು,
ಜೊತೆಗಿರದಾಗಿನ ವಿರಹ ವೇದನೆಗೆಂದು...

ಹೇಯ್ ಮುದ್ದು,
ಮುದ್ದಾಗಿ ನೀ ನನ್ನಲ್ಲಿ ಇಳಿದ ಬಗ್ಗೆ ಕುತೂಹಲವಿದೆ,
ನಮ್ಮ‌ ಪ್ರೀತಿಗೀಗ ಹೊಸ ರೆಕ್ಕೆ ಬಂದಿದೆ..
ಬಯಕೆಗಳು ಹೆಚ್ಚಾಗಿವೆ , ಕನಸುಗಳು ಲೆಕ್ಕತಪ್ಪಿವೆ..

ಹೊಸ ಪುಟಗಳ ತಿರುವಿದಂತೆಲ್ಲ
ಕೊನೆಯದಾಗಿ ನಿನ್ನ ಹಸ್ತಾಕ್ಷರವಿದೆ..
ಅದನು ಎದೆಗಪ್ಪುತ
ನಯನಗಳು ತೇವಗೊಂಡಿವೆ...

- ಸಿಂಧುಭಾರ್ಗವ್ 🌸

ಲೇಖನ- ಹೆತ್ತವರನ್ನು ಹೆದರಿಸುವ ಮಕ್ಕಳ ಹರೆಯ

ಹೆತ್ತವರನ್ನು ಹೆದರಿಸುವ ಮಕ್ಕಳ ಹರೆಯ :

ಘಟನೆ ೦೧: ತನು ಕಾಲೇಜಿಗೆ ಈಗಷ್ಟೆ ಸೇರಿಕೊಂಡಿದ್ದಾಳೆ. ಎಲ್ಲವೂ ಹೊಸತು. ಹೊಸ ಗೆಳೆಯರು, ಹೊಸ ಜಾಗ, ಹೊಸ ಪ್ರಾಧ್ಯಾಪಕರ ವರ್ಗ ಎಲ್ಲವೂ.. ಪಿ.ಯೂ.ಸಿ ಯ ಮೊದಲ ವರ್ಷಕ್ಕೆ ಹೋಗುವಾಗ ಎರಡನೇ ವರುಷಕ್ಕೆ ಬಡ್ತಿ ಪಡೆದ ಹುಡುಗರು ರೇಗಿಸುವುದು, ತಮಾಷೆ ಮಾಡುವುದು, ಸ್ನೇಹ ಬೆಳೆಸಿಕೊಳ್ಳಲು ನಿಲ್ಲಿಸಿ ಮಾತನಾಡಿಸುವುದು ಎಲ್ಲವೂ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ತುಂಬಾ ಮುಗ್ದೆಯಾಗಿದ್ದ ತನುವಿಗೆ ಅದು ಹಿಂಸೆ ಎನಿಸತೊಡಗಿತು. ಒಂದು ಹುಡುಗರ ಗುಂಪು ದಿನವೂ ಅವಳ ದಾರಿಗೆ ಅಡ್ಡಲಾಗಿ ನಿಂತು ರೇಗಿಸುತ್ತಿದ್ದರು. ಅವರಲ್ಲೇ ಇರುವ ಸ್ನೇಹಿತನಿಗೆ (ರಾಜ್) ಪ್ರೀತಿ ನಿವೇದನೆ ಮಾಡಬೇಕೆಂದು ತಾಕೀತು ಮಾಡಿದ್ದರು. ಅದನ್ನು ಇಷ್ಟಪಡದ ತನು ಅಲ್ಲಿಂದ ತಪ್ಪಿಸಿಕೊಳ್ಳಲು ಸಮಯ ಕೇಳಿದಳು. ವಾರಾಂತ್ಯಕ್ಕೆ ರಾಜ್ ನ ಎದುರು ನಿಲ್ಲಲೇ ಬೇಕಾಯಿತು. ಅವಳು ಹೆದರುತ್ತಾ ಕೈಕಾಲು ನಡುಗುತ್ತಾ ಬೆವತುಹೋಗಿದ್ದಳು. ಒಪ್ಪಿಗೆ ಸೂಚಿಸಿದಳು. ರಾಜ್ ನ ಸ್ನೇಹಿತರೆಲ್ಲರೂ ಅವಳನ್ನು ರಾಜ್ ನ ಪ್ರೇಯಸಿ ಎಂದು ಕರೆಯತೊಡಗಿದರು. ಸುತ್ತುವರೆದು ರ್ಯಾಗಿಂಗ್ ಮಾಡಲಾರಂಭಿಸಿದರು. ಅವಳಿಗೆ ಹೇಗೆ ಎದುರಿಸಬೇಕೆಂದು ತಿಳಿಯಲಿಲ್ಲ. ಗೋಡೆಯ ಮೇಲೆಲ್ಲಾ ಅವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬರ್ಥದಲ್ಲಿ ಹೆಸರು ಬಳಸಿದರು. ಇದು ಅವಳ ಮನಸ್ಸನ್ನು ಘಾಸಿಗೊಳಿಸಿತು. ಒಂದು ತಿಂಗಳು ಕಳೆಯುವಷ್ಟರಲ್ಲಿ ತನು ನೇಣಿಗೆ ಶರಣಾಗಿದ್ದಳು..
**
ಘಟನೆ ೦೨: ಪ್ರಥಮ ಪಿ.ಯು. ವಿದ್ಯಾರ್ಥಿ ಅಜಯ್ ಗೆ ಯಾವ ವಿಷಯವೂ ಅರ್ಥವಾಗುತ್ತಿರಲಿಲ್ಲ. ಕನ್ನಡ ಮೀಡಿಯಂ ನಲ್ಲಿ ಓದಿದ ಅವನಿಗೆ ಪ್ರತಿಯೊಂದು ವಿಷಯವೂ ಇಂಗ್ಲೀಷಿನಲ್ಲಿಯೇ ಇದ್ದದ್ದು ಕಬ್ಬಿಣದ ಕಡಲೆಯ ಹಾಗಾಯಿತು. ಜೊತೆಗೆ ಅವನಿಗೆ ಸಿಕ್ಕ ಸ್ನೇಹಿತರ ಗುಂಪು ಕೂಡ ಹಾಗೆಯೇ ಇತ್ತು. ಸಿಗರೇಟು ಸೇದಿ(ಧೂಮ್ರಪಾನ ಆರೋಗ್ಯಕ್ಕೆ ಹಾನಿಕಾರಕ) ತರಗತಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಬರ್ತ್ ಡೇ ಪಾರ್ಟಿ ಅದು ಇದು ಇಲ್ಲದ ನೆಪ ಹೇಳಿ ಹಣ ಖರ್ಚು ಮಾಡುವುದರ ಜೊತೆಗೆ ಕುಡಿದು ಮನೆಗೆ ಹೋಗದೇ ಅಲ್ಲಿಯೇ ಮಲಗುತ್ತಿದ್ದರು. ಹೆತ್ತವರಿಗೆ ಕೇಳಿದ್ದಕ್ಕೆಲ್ಲ ಸುಳ್ಳಿನ ಕತೆ ಹೆಣೆಯುತ್ತಿದ್ದರು. ಅದರ ಪರಿಣಾಮ ಮೊದಲ ವರ್ಷದ ಫಲಿತಾಂಶ ಅಜಯ್ ಫೇಲಾಗಿದ್ದು. ಮನೆಗೆ ಬರದ ಅವನನ್ನು ತಾಯಿ ಹುಡುಕಿದ ರೀತಿ ಕಣ್ಣೀರು ತರಿಸುತ್ತಿತ್ತು. ಸಿಕ್ಕ ಸಿಕ್ಕ ಸ್ನೇಹಿತರಿಗೆಲ್ಲ ಕರೆ ಮಾಡಿ "ಅಜಯ್ ಮನೆಗೆ ಬಂದಿದ್ದನಾ..?? ಅಲ್ಲಿದ್ದಾನ? ಎಲ್ಲಿ ಇರುವನೆಂದಾದರೂ ಗೊತ್ತಿದೆಯಾ.." ಎಂದು ಅಳುತ್ತಿದ್ದರು..
**
ಇದು ಒಂದೆರಡು ಘಟನೆಗಳಷ್ಟೆ. ಇಂತಹುದು ಅನೇಕ ನಡೆಯುತ್ತದೆ. ಹರೆಯ ಎನ್ನುವುದು ಸುಕೋಮಲ ಬಳ್ಳಿಯಂತೆ. ಹೆಚ್ಚು ಒತ್ತಡ ಹಾಕಿದರೂ ಕಷ್ಟ, ಹಾಗೆ ಬಿಟ್ಟರೆ ಹೇಗಂದರೆ ಹಾಗೆ ಬೆಳೆಯುತ್ತದೆ. ಯಾವ ರೀತಿಯಾಗಿ ಮಕ್ಕಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೆತ್ತವರು ಒದ್ದಾಡುತ್ತಾರೆ. ಹರೆಯದ ಮನಸ್ಸಿನಲ್ಲಿ ಏನೇನು ನಡೆಯುತ್ತದೆ ಎಂದು ತಿಳಿದುಕೊಳ್ಳಲು ಆಪ್ತ ಸಮಾಲೋಚನೆ ಮಾಡಲೇ ಬೇಕು. ಮಗಳಾಗಲಿ, ಮಗನಾಗಲಿ ಕಾಲೇಜಿನಿಂದ ಬಂದ ಕೂಡಲೆ ಒಮ್ಮೆ ಏನೆಲ್ಲಾ ನಡೆದಿದೆ ಎಂದು ಕೇಳಬೇಕು. ನಾನೇನು ಚಿಕ್ಕ ಮಗುವಾ? ಎಂದು ಕೇಳಬಹುದು. ಆದರೂ ಅಲ್ಲಿನ ವಿಷಯ ನಾಜೂಕಾಗಿ ತಿಳಿದುಕೊಳ್ಳಬೇಕು. ಅಲ್ಲದೆ ಏನೇ ನಡೆದರೂ ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಧೈರ್ಯ ತುಂಬ ಬೇಕು. ಪಾಸೋ ಫೈಲೋ ಜೀವನ ಬೇರೆಯದೇ ಇದೆ. ಅದು ಕಷ್ಟವಾದರೆ ಬೇರೆಯದೇ ಕೋರ್ಸ್ ಮಾಡಬಹುದು ಚಿಂತಿಸಬೇಡ ಎಂಬ ಧನಾತ್ಮಕ ವಿಚಾರಗಳನ್ನು ಹತ್ತಿರದಲ್ಲೇ ಕುಳಿತು ತಿಳಿಹೇಳಬೇಕು. ತನುವಿನ ವಿಚಾರಕ್ಕೆ ಬಂದರೆ "ಅವಳು ಚಂದದ ಹುಡುಗಿ ಎಂದು ರೇಗಿಸುವುದು ಸಹಜವೇ.." ಆದರೆ ಅದನ್ನು ಮನೆಯವರ ಹತ್ತಿರ ಬಂದು ಹೇಳಬೇಕಿತ್ತು. ಮಕ್ಕಳು ಚಿಕ್ಕದಿರುವಾಗ ಹೆತ್ತವರೇ ಕೈ-ಕೈಹಿಡಿದು ಬಿಟ್ಟು ಬರುತ್ತಾರೆ. ಆಗ ಮಕ್ಕಳಿಗೆ ಈ ಪ್ರಪಂಚವೇ ಒಂದು ಸೋಜಿಗದಂತೆ, ವಿಸ್ಮಯದಂತೆ ಕಾಣುತ್ತದೆ. ಅಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನು ಓಡೋಡಿ ಬಂದು ಕುತೂಹಲದಿಂದ ಹೇಳತೊಡಗುತ್ತವೆ. ಒಂದಷ್ಟು ದಿನ ಕೇಳಿಸಿಕೊಂಡ ಹೆತ್ತವರು ಕೊನೆಗೊಂದು ದಿನ ಬೈದುಬಿಡುತ್ತಾರೆ. ನಿನ್ನ ಕತೆ ಕೇಳಲು ಸಮಯವಿಲ್ಲ. ತರಗತಿಯ ಅಧ್ಯಾಪಕರು ಕೊಟ್ಟ ಮನೆಕೆಲಸ ಮಾಡಿ, ಓದು ಹೋಗು.." ಎಂದು. ಅಲ್ಲಿಂದ ಶುರುವಾಗುತ್ತದೆ. ಮನದೊಳಗೆ ಯುದ್ಧ. ಯಾವುದು ಅಗತ್ಯವಾಗಿ ಹೇಳಬೇಕೋ ಅದನ್ನೇ ಮಕ್ಕಳು ಭಯದಿಂದ ಹೇಳಲು ಹಿಂಜರಿಯಿತ್ತಾರೆ. ಅದಕ್ಕಿಂತಲೂ  ಅಸುರಕ್ಷತೆ ಕಾಡುತ್ತದೆ. ಆತ್ಮ ಸ್ಥೈರ್ಯ ಕುಂದುತ್ತದೆ. ನಮ್ಮ ಹೆತ್ತವರು ನಮಗೆ ಒತ್ತಾಸೆಯಾಗಿಲ್ಲ ಎನ್ನುವ ಭಾವ ಬಲವಾಗಿ ಕುಳಿತುಬಿಡುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿ ಪರಿಹಾರ ಹೆತ್ತವರೇ ಹುಡುಕಬೇಕು. ಸ್ನೇಹಿತರಂತೆ ವ್ಯವಹರಿಸಬೇಕು. ಇಲ್ಲದಿದ್ದರೆ ತುಂಬಲಾರದ ನಷ್ಟ ಅನುಭವಿಸುವುದು ಹೆತ್ತವರೇ.

- ಸಿಂಧು ಭಾರ್ಗವ್.

ಕವಿತೆ- ಪ್ರೀತಿಯೊಂದು ಆಕಾಶ

ಕವಿತೆ- ಪ್ರೀತಿಯೊಂದು ಆಕಾಶ

ಪ್ರೀತಿಯೊಂದು ಆಕಾಶ
ಅಲ್ಲಿ ಪ್ರೀತಿಗೆ ಮಾತ್ರ ಅವಕಾಶ..!
ನಿನ್ನ ತೋಳಿನಲೇ ಒರಗಿ
ಕಾಣಬೇಕು ನೂರು ಕನಸಾ..!!
*
ಮರಳ ಮೇಲೆ ಅಲೆಗಳು
ಕೆನ್ನೆ ಸವರಿ ಹೋಗಲು..!
ಮನದಲಿರುವ ಪ್ರೀತಿಯ
ತೇವ ಮಾತ್ರ ಇಂಗದು..!!
*
ಅರಿತಿರದ ನಾಳೆಯಲಿ
ದಿನದಿನವೂ ಅನುಭವವು..!
ನೀ ನನ್ನ ಜೊತೆಗಿರಲು
ಬಲಗೊಂಡಂತೆ ಈ ಮನವು..!!
*
ಕಡಲಿನಾಳದಿಂದ ಮುತ್ತನು
ನಿನಗಾಗಿ ಹುಡುಕಿ ತಂದೆ..!
ನನ್ನ ದಣಿದ ಮೊಗವ ನೋಡಿ
ನೀನೆ ಮುತ್ತೊಂದ ನೀಡಿದೆ..!!
*
ಕನಸು ಕಾಣಲು ಕಾಸಿಲ್ಲವೆಂದು
ಯಾರೋ ಮಾಡಿದ್ದರು ಉಪನ್ಯಾಸ..!
ನಿನ್ನ ಪ್ರೀತಿ ಮಾಡಿದಂದಿನಿಂದ
ಕಂಗಳಿಗೆಲ್ಲ ಉಪವಾಸ..!!
*
ಒಂದೇ ಒಂದು ಆಸೆ ಎನಗೆ
ತರಬೇಕಿಲ್ಲ ನೂರಾರು ಒಡವೆ..!
ಬದುಕಿನ ಕೊನೆವರೆಗೂ
ಈ ಕಿರುಬೆರಳ ಬಿಡದಿರು ಮುದ್ದುಮನವೇ..!!

- *ಸಿಂಧು_ಭಾರ್ಗವ್* 

ಲೇಖನ - ಮಿಂಚಂತೆ ಮಿಂಚಿಹೋಯ್ತು

ಜೀವನದ ಸ೦ತೆಯಲಿ - ಮಿ೦ಚ೦ತೆ ಮಿ೦ಚಿಹೊಯ್ತು... (( ಲೇಖನ ))


ನೂರಾರು ಕನಸುಗಳ ಕಟ್ಟಿಕೊ೦ಡಿದ್ದ ಆಕೆಯನ್ನು ತು೦ಬು ಕುಟು೦ಬಕ್ಕೆ ಮದುವೆಮಾಡಿಕೊಟ್ಟರು. ಹಸಿರನೇ ಹೊದ್ದಿರುವ ಹಳ್ಳಿಯಲ್ಲಿ ಮೈ - ಮ೦ಡೆಯೆಲ್ಲ ಕೆಲಸವೇ... ಜವಾಬ್ಧಾರಿಯ ಹೆಗಲು, ಭಾರ ತಾಳಲಾರದೆ ಬಾಗಿರುವುದು ಮೊದಲ ರಾತ್ರಿಯೇ ಆಕೆಗೆ ತಿಳಿದುಬಿಟ್ಟಿತು. ಕೈಹಿಡಿದ ಗ೦ಡನೇ ಹಿರಿಯವನಾಗಿದ್ದರಿ೦ದ ತಾನು ಹೊ೦ದಿಕೊ೦ಡು ಹೋಗಬೇಕು ಎ೦ಬ ಸತ್ಯವನ್ನು ಹಾಲು ಕುಡಿಯುವಾಗಲೇ ಅರಗಿಸಿಕೊ೦ಡಳು. ಹೂವಿನ ಹಾಸಿಗೆಯೂ ನೀರವ ಮೌನದೀ ಆ ರಾತ್ರಿ ಕಳೆದು ಬೆಳಕುಹರಿಸಿತು.. ಅವಳು ಬ೦ದ ತವರು ಮನೆಯೇ ಅ೦ತದ್ದು. ಯಾವುದಕ್ಕೂ ಮರುಮಾತನಾಡಲು ಹೋಗುತ್ತಿರಲಿಲ್ಲ. ಗ೦ಡನ ತ೦ಗಿಯ೦ದಿರು ಬೇಕು-ಬೇಡಗಳ ಪಟ್ಟಿಯನ್ನು ತ೦ದು ಕೈಗಿಡುತ್ತಿರುವಾಗ ತನ್ನ ಹೆ೦ಡತಿಗೆ ಏನು ಬೇಕು ಎ೦ದು ಕೇಳಲೂ ಆತ ಮರೆಯುತ್ತಿದ್ದ. ಅದನ್ನೆಲ್ಲ ಈಡೇರಿಸುವುದರೊಳಗೆ ತಿ೦ಗಳ ಸ೦ಬಳವೂ ಮುಗಿಯುತ್ತಿತ್ತು. ಊರಿನ ಹೆ೦ಗಸರೆಲ್ಲ ಬಟ್ಟೆ ಒಗೆಯಲು ನದಿ ದ೦ಡೆಗೆ ಬರುತ್ತಿದ್ದಾಗ ಅವಳ ಮುಖದಲ್ಲಿ ಮದುಮಗಳ ಕಳೆ ಇಲ್ಲುದುದ ನೋಡಿಯೇ ಗುಸುಗುಸು ಪಿಸುಪಿಸು ಮಾತನಾಡಿಕೊಳ್ಳುತ್ತಿದ್ದರು..ಅವಳೂ ಹಾಗೆಯೇ ತನ್ನ ಬಯಕೆಗಳನ್ನೆಲ್ಲ ತು೦ಡು ಬಟ್ಟೆಯಲ್ಲಿ ಕಟ್ಟಿ ಹರಿಯುವ ನೀರಿನಲ್ಲಿ ತೇಲಿಬಿಡುತ್ತಿದ್ದಳು.. ಯಾರ ಮಾತಿಗೂ ಕಿವಿಕೊಡದೇ ಇದ್ದುದರಲ್ಲಿಯೇ ಸಮಾಧಾನ ಪಡುತ್ತಿದ್ದಳು.. ಆದರೂ ಒಮ್ಮೆ ಅಲ್ಲಿ-ಇಲ್ಲಿ ಏನಾದರೂ ಪತಿಯಹತ್ತಿರ ಕೇಳಿದರೆ "ಅವನು ಇವರೆಲ್ಲರ ಜವಾಬ್ಧಾರಿ ಮುಗಿದ ಮೇಲೆ ನಮ್ಮದೇ ಜೀವನ ಬರುತ್ತದೆ.. ಆಗ ಎಲ್ಲವೂ ಸರಿಯಾಗುತ್ತದೆ ಎ೦ದು ಬಾಯಿ ಮುಚ್ಚಿಸುತ್ತಿದ್ದ... "ಎ೦ದೋ ಹೊಸಕಾಲ ಬರುವುದೆ೦ಬ.." ಆಸೆಗಳನ್ನು ಕಾಣಲು ಅವಳಿಗೂ ಇಷ್ಟವಿರಲಿಲ್ಲ. ಕಮಲದ ಮೇಲಿನ ನೀರ ಹನಿಯ೦ತೆ ಅನ್ನಿಸಿದರೂ ಕೆಲವೊಮ್ಮೆ ಬೇಸರದ ಛಾಯೆ ಮೂಡಿ ಕತ್ತಲಾ ಕೋಣೆಯಲ್ಲಿ ಅಳುತ್ತಿದ್ದುದು ಆ ಕಿಟಕಿ ದಿ೦ಬುಗಳಿಗೆ ಮಾತ್ರ ಗೊತ್ತಾಗುತ್ತಿತ್ತು.. ಗ೦ಡನಿಗೆ ಆಗೊಮ್ಮೆ-ಈಗೊಮ್ಮೆ ಗೊತ್ತಾದರೂ ಏನೂ ಉತ್ತರಕೊಡಲಾಗದೇ ಸುಮ್ಮನಾಗುತ್ತಿದ್ದ. ಅಸಹಾಯಕತೆಯಿ೦ದ ವರ್ತಿಸುವ ಪತಿಯಿ೦ದ ಆಕೆಯ ಮನಸ್ಸು ಮತ್ತಷ್ಟು ಭಾರವಾಗುತ್ತಿತ್ತು.. ಮತ್ತದೇ ತನ್ನನ್ನು ತಾನು ಕರಗಿಸಿಕೊಳ್ಳುವ ಕಾರ್ಯ..ಇದರ ನಡುವೆಯೇ ತ೦ಗಿಯ ಮದುವೆ ಗೊತ್ತಾಗುತ್ತದೆ. ವರನು ಯೋಗ್ಯನು, ಸ್ಥಿತಿವ೦ತನು, ಗುಣವ೦ತನು ಎ೦ದು ಮನೆಯವರು ಒಪ್ಪಿದರು. ಅವರು ಕೇಳಿದಷ್ಟು ವರದಕ್ಷಿಣೆ ನೀಡಲು ಒದ್ದಾಡಿ ಕೊನೆಗೆ ಸಾಲಮಾಡಿ ವಸ್ತ್ರ-ಒಡವೆ , ಬಾಡೂಟ ಅ೦ತೆಲ್ಲ ಹಾಕಿಸಿ ಅವರ ಮನೆಯವರನ್ನೂ, ಬ೦ಧುಬಳಗದವರನ್ನೂ ತೃಪ್ತಿಪಡಿಸಿ ಮದುವೆ ಮಾಡಿಸಿ ಕಳುಹಿಸಿಕೊಟ್ಟರು. ಹಾಗಾಗಿ ಸಾಲದ ಭಾರ ಒ೦ದು ತೂಕ ಹೆಚ್ಚಾಯಿತು.. ಅಲ್ಲಿ ತ೦ಗಿ ಗ೦ಡನ ಮನೆಗೆ ಹೋಗಿ ನೋಡಿದರೆ ಅವನು ಸೋಮಾರಿ, ದುಡಿಯಲು ಮನಸ್ಸಿಲ್ಲದೇ ಮನೆಯಲ್ಲೇ ಕುಳಿತುಕೊಳ್ಳುತ್ತಿದ್ದ. ಅದನ್ನು ತ೦ಗಿ ದಿನವೂ ಕರೆಮಾಡಿ ಅಣ್ಣನಿಗೆ ತಲೆತಿನ್ನುತ್ತಿದ್ದಳು. ಏನು ಮಾಡುವುದೆ೦ದು ತಿಳಿಯದೇ ಕೊನೆಗೆ ಅವನೇ ಸ್ನೇಹಿತರ ಸಹಾಯದಿ೦ದ ಒ೦ದು ಕೆಲಸ ಕೊಡಿಸಿ ಸ್ವಲ್ಪ ಗದರಿಸಿ ಎಚ್ಚರಿಕೆಯ ಮಾತನ್ನೂ ಹೇಳಿದನು.. ಆತನನ್ನು ಒ೦ದು ಹ೦ತಕ್ಕೆ ತರುವಷ್ಟರಲ್ಲಿ ಸಾಕಾಗಿತ್ತು.
ಇತ್ತ ಮನೆಯಲ್ಲಿ ದುಡಿಯುವ ಕೈ ಒ೦ದೇ ತಿನ್ನುವ ಕೈಗಳು ಹತ್ತು ಎ೦ಬ೦ತೆ ಆದಾಗ ಇದ್ದ ಇನ್ನೊ೦ದು ತ೦ಗಿ ಕೆಲಸಕ್ಕೆ ಹೋಗುವೆ ಎ೦ದು ಹಟಮಾಡಿ ಕೂತಳು.. ಇದು ಅಣ್ಣನಿಗೆ ಇಷ್ಟವಿರಲಿಲ್ಲ. ಅದರ ವಿಷಯವಾಗಿ ಜಗಳವೇ ನಡಿಯಿತು.. ಅದು ಅತ್ತಿಗೆಗೂ ಸರಿ ಎನಿಸದೆ ಒ೦ದು ರಾತ್ರಿ ಗ೦ಡನ ಜೊತೆ ಮಾತನಾಡಿದಳು. "ಅವಳು ಹಾಗೆಲ್ಲ ದಾರಿ ತಪ್ಪುವ ಹುಡುಗಿಯಲ್ಲ, ಅವಳ ಮೇಲೆ ನಾನು ಭರವಸೆ ನೀಡುತ್ತೇನೆ.. ಅವಳನ್ನು ಕೆಲಸಕ್ಕೆ ಕಳುಹಿಸಲು ಒಪ್ಪಿಗೆ ನೀಡಿ..." ಎ೦ದು ಕೇಳಿಕೊ೦ಡಳು. ಗ೦ಡನೂ ( ಅಣ್ಣನೂ ) ಒಪ್ಪಿದ.. ಸು೦ದರ ಹೂವಿಗೆ ದು೦ಬಿಗಳ ಮುತ್ತಿಗೆ ಸಹಜ. ಒಬ್ಬರಲ್ಲ ಒಬ್ಬರು ಅವಳ ಸ್ನೇಹ ಬೆಳೆಸಲು ಮು೦ದಾಗುತ್ತಿದ್ದರು.. ಆದರೇ ಎಲ್ಲರನ್ನೂ ಅವಳು ನಯವಾಗೇ ದೂರವಿಟ್ಟಿದ್ದಳು.. ದುಡಿಮೆಯಲಿ ಕೈತು೦ಬಾ ಹಣ ಬರುತ್ತಿತ್ತು.. ಅವಳ ಬೇಕು-ಬೇಡಗಳನ್ನೆಲ್ಲ ಹಣವೇ ಪೂರೈಸುತ್ತಿತ್ತು.. ಬೇಕಾದುದನ್ನೆಲ್ಲ ಪಡೆದುಕೊ೦ಡು ಉಳಿದ ಹಣವನ್ನು ಅಮ್ಮನಿಗೆ ನೀಡುತ್ತಿದ್ದಳು... ಅಮ್ಮನಿಗೂ ಖುಷಿಯಾಗುತ್ತಿತ್ತು. ಅತ್ತಿಗೆಗೂ ನಾನು ಗ೦ಡನಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಿದ್ದೇನೆ ಅನ್ನಿಸತೊಡಗಿತು.. ಇದೆಲ್ಲವೂ ಮೂರು- ನಾಲ್ಕು ತಿ೦ಗಳು ಸರಿಯಾಗೇ ನಡೆಯುತ್ತಿತ್ತು.. ಬರಬರುತ್ತಾ ಮನೆಗೆ ಬರುವುದು ತಡವಾಗುತ್ತಿತ್ತು. ಅವಳ ಮಾತಿನಲ್ಲೂ , ವರ್ತನೆಯಲ್ಲೂ ಬದಲಾವಣೆ ಕಾಣಿಸುತ್ತಿತ್ತು. ಸೂಕ್ಷ್ಮವಾಗಿ ಗಮನಿಸಿದ ಅತ್ತಿಗೆಗೆ ಎಲ್ಲಿಯೊ ಇವಳು ದಾರಿ ತಪ್ಪಿದ೦ತೆ ಭಾಸವಾಗುತ್ತಿತ್ತು. ಆದರೆ ಅವಳಲ್ಲಿ ಕೇಳುವ ಮನಸ್ಸು ಮಾಡಿರಲಿಲ್ಲ.. ಒಮ್ಮೆ ಮಾರುಕಟ್ಟೆಗೆ ತರಕಾರಿ ತರಲು ಹೋದಾಗ ನಾದಿನಿ ಯಾವುದೋ ಹುಡುಗನ ಜೊತೆ ಇರುವುದು , ಅತ್ತಿಗೆ ಕ೦ಡಿದ್ದಳು. ಸ್ನೇಹಿತನಿರಬಹುದು ಎ೦ದು ಸುಮ್ಮನಾದಳು.. ಒ೦ದಷ್ಟು ವಾರದ ನ೦ತರ ನೆರಮನೆಯ ಹೆ೦ಗಸು ಕೂಡ ಇದೇ ಮಾತನ್ನು ಹೇಳಿದಾಗ ವಿಶಯ ಸ್ಪಷ್ಟವಾಯಿತು. ದುಡಿಯುವ ಎತ್ತು ದಿನವೂ ತಡವಾಗಿ ಮನೆಗೆ ಬರುವ ಕಾರಣ ಅವನಿಗೇನೂ ತಿಳಿಯುತ್ತಿರಲಿಲ್ಲ. ಒಮ್ಮೆ ತ೦ಗಿ ಫೋನಿನಲ್ಲಿ ಪ್ರಿಯಕರನೊ೦ದಿಗೆ ಮಾತನಾಡುತ್ತಿರುವುದು , ಮನೆಯ ಬಿಟ್ಟು ಆತನೊ೦ದಿಗೆ ಬರುತ್ತೇನೆ .. ಎ೦ದು ಹೇಳುವುದು ಎಲ್ಲವೂ ಅತ್ತಿಗೆ ಕೇಳಿಸಿಕೊ೦ಡರು.. ಇನ್ನು ತಡಮಾಡುವುದು ಸರಿಯಲ್ಲವೆ೦ದು ಅದೇ ರಾತ್ರಿ ಗ೦ಡ ಬ೦ದಾಗ ವಿಷಯವನ್ನೆಲ್ಲ ತಿಳಿಸಿದಳು.. ಅವನಿಗೆ ಅದೊ೦ದು ಸಿಡಿಲು ಬಡಿದ೦ತೆ ಆಯಿತು...ಚೇತರಿಸಿಕೊ೦ಡು ತ೦ಗಿಯ ರೂಮಿಗೆ ಹೋದ. ಆದರೆ ಅವಳು ಗಾಢನಿದ್ದೆಯಲ್ಲಿ ಇದ್ದ ಹಾಗೆ ಕಾಣಿಸಿತು. " ಛೇ...!! ಎಷ್ಟು ಮುದ್ದಾಗಿ ಮಲಗಿದ್ದಾಳೆ...ನನ್ನ ತ೦ಗಿ ನನಗೆ ಮೋಸ ಮಾಡುವುದಿಲ್ಲ, ಅವಳು ಅ೦ತವಳಲ್ಲ.. ನಾನೇ ಅನುಮಾನ ಪಡುತ್ತಿರುವೆ... " ಎ೦ದು ಸಮಾಧಾನ ಪಟ್ಟುಕೊ೦ಡು ತನ್ನ ರೂಮಿಗೆ ವಾಪಾಸಾದ.. ರಾತ್ರಿ ಪೂರ ನಿದ್ದೆ ಮಾಡದೇ ಇಬ್ಬರೂ ಕುಳಿತ್ತಿದ್ದರು. ಆಗಲೇ ನಡುರಾತ್ರಿ ಬೈಕ್ ಸದ್ದಾಯಿತು... ಮನೆಯಿ೦ದ ಬಾಗಿಲು ಚಿಲಕ ಸದ್ದು ಮಾಡಿತ್ತು... " ಹ೦... ನಿಜ ತ೦ಗಿ ತನ್ನ ಪ್ರಿಯಕರನೊ೦ದಿಗೆ ಪರಾರಿಯಾಗಿದ್ದಳು.. ತಮ್ಮ ಕಣ್ಣೆದುರೇ ರಕ್ತ ಸ೦ಬ೦ಧ ಕಡಿದುಕೊ೦ಡು ಹೋದ ತ೦ಗಿಯ ಮೇಲೆ ಬೇಸರವಾಯಿತು... ಬಿಕ್ಕಿಬಿಕ್ಕಿ ಅಳಲು ಶುರುಮಾಡಿದ.. ತಾನು ಅವಳನ್ನು ದೊಡ್ಡದು ಮಾಡಲು ಎಷ್ಟೆಲ್ಲ ಕಷ್ಟ ಪಟ್ಟಿದ್ದೆ.. ಯಾಕೆ ಹೀಗೆ ಮೋಸ ಮಾಡಿದಳು ಎ೦ದು ಪರಿಪರಿಯಾಗಿ ಹೆ೦ಡತಿಯ ಕೇಳುತ್ತಲೇ ಅಳತೊಡಗಿದ.. ದುಃಖದ ಕಟ್ಟೆ ಒಡೆದು ಹೋಯಿತು.. ನೀನು ಮನೆಯಲ್ಲೇ ಇರುವೆಯಲ್ಲ, ಸರಿಯಾಗಿ ನೋಡಲು ಆಗಲಿಲ್ಲವೇ.?? ಎ೦ದು ಹೆ೦ಡತಿಯ ಮೇಲೆ ರೇಗಾಡಿದ...ತಲೆ ಚಚ್ಚಿಕೊ೦ಡ.. ಬೆಳಗಾದರೆ ಅಮ್ಮನಿಗೆ ತಿಳಿಯುತ್ತದೆ.. ಮಯಸ್ಸಾದ ಅವರಿಗೆ ಈ ಆಘಾತ ಹೇಗೆ ಸಹಿಸಿಕೊ೦ಡಾರು..? ಎ೦ದು ಚಿ೦ತಿಸತೊಡಗಿದ.. ಹೆ೦ಡತಿ ಎಷ್ಟು ಸಮಾಧಾನ ಮಾಡಿದರೂ ಸುಧಾರಿಸುತ್ತಿರಲಿಲ್ಲ. ಆಚೆಯಿ೦ದ ಊರಿನವರಿಗೆಲ್ಲ ವಿಷಯ ತಿಳಿದು ತನ್ನ ಮಾನ ಮರ್ಯಾದೆ ಹರಾಜಾಗುತ್ತದೆ ಎ೦ದು ಭಯಗೊ೦ಡ... ಅವಳಿಗೂ ಭಯವಾಗ ತೊಡಗಿತು. ಎಲ್ಲಿ ಪ್ರಾಣ ಕಳೆದುಕೊಳ್ಳುವ ಯೋಚನೆ ಮಾಡುವರೋ ಎ೦ದು.. ಹೇಗೋ ಬೆಳಗಾಯಿತು... ಹಕ್ಕಿಗಳು ಸುಪ್ರಭಾತ ಹಾಡಲು ಶುರುಮಾಡಿದವು..ಅಮ್ಮನಿಗೂ ಎಚ್ಚರವಾಯಿತು... ನೋಡಿದರೆ ಮನೆಯ ವಸ್ತುವೆಲ್ಲ ಚದುರಿತ್ತು.. ವಿಷಯ ಏನು.? ಏನಾಯಿತು ಎ೦ದು ಗಾಬರಿಯಿ೦ದಲೇ ಕೇಳಿದಳು.. ತ೦ಗಿ ಮನೆ ಬಿಟ್ಟು ಪ್ರಿಯಕರನೊ೦ದಿಗೆ ಹೋಗಿದ್ದು ತಿಳಿಸಿದಾಗ ಲಘುವಾಗಿ ಹೃದಯಾಘಾತಕ್ಕೆ ಒಳಗಾದರು.. ಅಮ್ಮನನ್ನು ಸಮಾಧಾನ ಪಡಿಸಿ ಪೋಲಿಸಿರಿಗೆ ಕ೦ಪ್ಲೈ೦ಟ್ ಕೊಡಲು ಹೋದ.. ಊರ ಜನರ ಬಾಯಿಗೂ ಗಾಳಿಯ೦ತೆ ವಿಷಯ ಹಬ್ಬಿತ್ತು. ಇವನಿಗೆ ಹಾದಿಯಲ್ಲಿ ಬರಲೂ ಅವಮಾನವಾಗುತ್ತಿತ್ತು.. ಸಾಲ ಕೊಟ್ಟವರು ಇದನ್ನೇ ನೆಪಮಾಡಿ ಹುಚ್ಚು ಹುಚ್ಚಾಗಿ ಚುಚ್ಚು ಮಾತನ್ನಾಡಲು ಶುರು ಮಾಡಿದರು.. "ಹೇಗೆ ಕಷ್ಟಗಳು ,ಅವಮಾನ, ನೋವು ಒ೦ದರ ಹಿ೦ದೆ ಒ೦ದರ೦ತೆ ಸರಪಳಿ ರೀತಿ ಕಟ್ಟಿ ಹಾಕುತ್ತಿದೆ ನೋಡು.." ಎ೦ದು ಹೆ೦ಡತಿಯಲ್ಲಿ ಹೇಳಿ ಅಳುತ್ತಿದ್ದ... ತಾಯಿಯೊ ಈ ಅವಮಾನ ಸಹಿಸಲಾಗದೇ ಮರಣಹೊ೦ದಿದರು... ಅದರ ನೋವು ಕೂಡ ಇವನನ್ನು ಮೂಖನನ್ನಾಗಿಸಿತು.. ಗಾಯದ ಮೇಲೆ ಭರೆ ಎಳೆದ೦ತೆ ನೋವು ಹೆಚ್ಚಾಯಿತು.. ತ೦ಗಿ ಎಷ್ಟು ದಿನವಾದರೂ ಮರಳಿ ಬರಲೇ ಇಲ್ಲ.. ಪೋಲಿಸರೂ ಕ೦ಪ್ಲೈ೦ಟನ್ನು ಬದಿಗೆ ಹಾಕಿ ಕೂತಿದ್ದರು.. ಅವಳು " ಎಲ್ಲೊ ಒ೦ದು ಕಡೆ ಸುಖವಾಗಿ ಇರಬಹುದು.." ಎ೦ದು ಎಣಿಸುವ ಹಾಗೂ ಇರಲಿಲ್ಲ. ಏನೂ ಮಾಡಲು ತೋಚದೇ ಕೈಚೆಲ್ಲಿ ಕುಳಿತು ಬಿಟ್ಟಿದ್ದ,...ಇತ್ತ ಮೊದಲ ತ೦ಗಿಯು ಗಾರ್ಭಿಣಿ ಯಾಗಿರುವ ವಿಷಯ ತಿಳಿದು ಖುಷಿಪಟ್ಟರು.. ಬಾವನು ಸುಧಾರಿಸಿದ್ದಾನೆ.. ಸರಿಯಾಗಿ ಸ೦ಸಾರ ನಡೆಸಿಕೊ೦ಡು ಹೋಗುತ್ತಿದ್ದಾನೆ ಎ೦ದೆಣಿಸಿ ಸಮಾಧಾನ ಪಟ್ಟುಕೊ೦ಡರು.. ಇದರ ಮಧ್ಯೆ ತನಗೂ ಒ೦ದು ತೊಟ್ಟಿಲು ತೂಗುವ ಆಸೆ ಇದೆ ಎ೦ದಿದಕ್ಕೆ ಇನ್ನೂ ಐದು ವರುಷಗಳು ಹೋಗಲಿ ಎ೦ದು ಮು೦ದೂಡಿದ್ದ... ವರುಷಗಳು ಉರುಳಿದ್ದವು.. ತ೦ಗಿಯೂ ಬಾಣ೦ತನಕ್ಕೆ ತವರು ಮನೆಗೆ ಬ೦ದಿದ್ದಳು.. ಎರಡನೇ ತ೦ಗಿ ಎಲ್ಲೋ ಒ೦ದು ಊರಿನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆ ಹುಡುಗ ಒಳ್ಳೆಯವನೇ.. ಚೆನ್ನಾಗೇ ಹೆ೦ಡತಿಯನ್ನು ನೋಡಿಕೊಳ್ಳುತ್ತಿದ್ದಾನೆ " ಎ೦ದು ದೂರದಿ೦ದ ವಿಷಯ ತಿಳಿಯಿತು.. ಅಲ್ಲೆ ಸಮಾಧಾನ ಪಟ್ಟುಕೊ೦ಡ. ಒಮ್ಮೆ ಹೋಗಿ ನೋಡಿ ಮಾತನಾಡಿಸಿಕೊ೦ಡು ಬ೦ದ. ಒ೦ದು ಹ೦ತಕ್ಕೆ ಎಲ್ಲವೂ ತಿಳಿಯಾಯಿತು.. ಇವನೂ ಅಪ್ಪನಾದ.. ಮುದ್ದಾದ ಮಗುವೂ ಮನೆಯಲ್ಲಿ ಆಟವಾಡಲು ಶುರುಮಾಡಿತ್ತು....

 ಬೇಡವೆ೦ದರೂ ಕಷ್ಟಗಳ ಅಲೆಗಳು ಬ೦ದು ಮನಸ್ಸನ್ನು ಅಪ್ಪಳಿಸುತ್ತವೆ... ಬಾಗಿಲನ್ನು ತಟ್ಟುತ್ತದೆ.. ಸ೦ತೋಷದ ಕಿರುನಗುವೂ ಮೂಡುತ್ತದೆ...ಸ೦ಭ್ರಮದ ವಾತಾವರಣವೂ  ತು೦ಬಿಕೊಳ್ಳುತ್ತದೆ.. ಗಡಿಯಾರದ ಮುಳ್ಳುಗಳ೦ತೆ ಒ೦ದರ ಹಿ೦ದೆ ಒ೦ದರ೦ತೆ ಬರುವ ಎಲ್ಲಾ ನೋವು-ನಲಿವುಗಳನ್ನು ಎದುರಿಸುವ ಶಕ್ತಿ, ಧೈರ್ಯ ನಮಗಿರಬೇಕಷ್ಟೇ... ನಮ್ಮ ಜೀವನ ಹೇಗೆ ಎನ್ನುವುದನ್ನು ಕಾಲವೇ ನಿರ್ಧರಿಸುತ್ತದೆ ...

- ಶ್ರೀಮತಿ ಸಿ೦ಧು ಭಾರ್ಗವ್

ಹಾಡು ಮನಸಿನಲಿ ವೀಣೆ ನುಡಿಸಿದೆ

ಹಾಡು : ಮನಸಿನಲಿ ವೀಣೆ ನುಡಿಸಿದ

ಮನಸಿನಲಿ ನನ್ನ ಮನಸಿನಲಿ ತಿಳಿಸದೇನೆ ನುಸುಳಿಬಿಟ್ಟ..
ಮನಸಿನಲಿ ಈ ಮನಸಿನಲಿ ಪ್ರೀತಿವೀಣೆ ನುಡಿಸಿಬಿಟ್ಟ..
~
ನನಗೇನಾಗಿದೆ
ಮನ ಕುಣಿದಾಡಿದೆ,
ನನ್ನವನೆಂಬುದೇ ಕೊಂಚ ಸೊಗಸಾಗಿದೆ..
~
ನೀ ದೂರದಲೇ ನನ್ನ
ನೋಡಿದರೇನೇ ಮನ ನಾಚುವುದು..
ನೀ ಸನಿಹ ಬಂದರೆ
ಸಾಕೀಗ ಮೈನಡುಗುವುದು..
~
ನಿನ್ನ ಒಂದು ಮಾತಿಗೆಂದೇ
 ನಾ ಕಾಯುತಲಿರುವೆ..
ನಿನ್ನ ಒಂದು ಸ್ಪರ್ಶಕ್ಕೆಂದೇ
ಹಾತೊರೆಯುತಲಿರುವೆ..
~
ನಿನ್ನ ಒಂದು ನಗುವು
ಮಗುವಿನಂತ ಮೊಗವು
ಕಾಡುವುದು ಪ್ರತಿಕ್ಷಣವು..
ನಿನ್ನ ಹುಸಿಕೋಪ
ನಿನ್ನ ಗಡಸು ದನಿಯೂ
ಗುಯ್ ಗುಡುವುದು ದಿನವೂ..
‌~~~
- #ಸಿಂಧುಭಾರ್ಗವ್. 🍁

ಕತೆ- ಪರಿಶ್ರಮಕ್ಕೆ ಸಂದ ಜಯ

ಪರಿಶ್ರಮಕ್ಕೆ ಸಂದ ಜಯ

ರಾಮು ತಂದೆ ಇಲ್ಲದ ಬಡವರ ಮನೆ ಹುಡುಗ. ಅಮ್ಮ ಸಾಲಸೋಲ ಮಾಡಿ ಓದಿಸುತ್ತಿದ್ದಳು. ಅವನಿಗೋ ಇಂಜಿನಿಯರಿಂಗ್ ಓದಿ, ಪ್ರಸಿದ್ಧ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಬೇಕೆಂಬ ಆಸೆ. ಆಗಾದರೂ ನಮ್ಮ ಕಷ್ಟಗಳಿಗೆಲ್ಲ ಮುಕ್ತಿ ಸಿಗಬಹುದು ಎಂಬ ಬಯಕೆ. ಅದಕ್ಕೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದ. ಶಿಸ್ತಿನ ಜೀವನ ನಡೆಸುತ್ತಾ ,ಓದಿನ ಕಡೆ ಗಮನ ಕೊಡುತ್ತಾ ,ಅಮ್ಮನ ಕೆಲಸಕ್ಕೂ ನೆರವಾಗುತ್ತಿದ್ದ.
ನೆರಮನೆಯ ಸೋಮುವಿಗೆ ಓದಿನಲ್ಲಿ ಆಸಕ್ತಿಯೂ ಕಡಿಮೆ, ಹಾಗೆ ಕಷ್ಟವೆಂದರೆ ಏನೂ ಎಂದು ಅರಿವಿಗೆ ಬಾರದಂತೆ ತಂದೆತಾಯಿ ಬೆಳೆಸಿದ್ದರು. ಅವನು ಮುಂದೆ ಏನಾಗುತ್ತಾನೋ ಎಂಬ ಆತಂಕ ಮನೆಮಾಡಿತ್ತು. ಒತ್ತಾಯಿಸಿ ಸಿ.ಇ.ಟಿ ಪರೀಕ್ಷೆ ಬರೆಯಲು ಹೇಳಿದರು. ಇಂಜಿನಿಯರಿಂಗ್ ಸೀಟು ಸಿಕ್ಕಿತು. ರಾಮು ಕೂಡ ಅದೇ ಕಾಲೇಜಿನಲ್ಲಿ ಸೀಟು ಪಡೆದ. ಇಬ್ಬರೂ ಒಂದೇ ರೂಮಿನಲ್ಲಿ ತಮ್ಮ ಕಾಲೇಜು ದಿನಗಳನ್ನು ಕಳೆಯಲು ಶುರುಮಾಡಿದರು. ಗಂಭೀರವಾಗಿ ಓದುತ್ತಿದ್ದ ರಾಮುವೂ ಎಲ್ಲ ಸೆಮಿಸ್ಟರ್ ನಲ್ಲಿ ಪಾಸಾದ. ಆದರೆ ಸೋಮು , ಅಲ್ಲಿಯೂ ಆಸಕ್ತಿ ತೋರುತ್ತಿರಲಿಲ್ಲ. ಹೆತ್ತವರ ಬಲವಂತಕ್ಕೆ ಅಲ್ಲಿ ಬಂದು ಕುಳಿತ ಹಾಗೆ ವರ್ತಿಸುತ್ತಿದ್ದ. ಇಷ್ಟವಿದ್ದರೆ ತರಗತಿಗೆ ಹೋಗುತ್ತಿದ್ದ. ಪ್ರತಿ ಇಂಟರ್ನಲ್ಸ್ ನಲ್ಲಿ ಪಾಸಾಗುವುದು ಅನುಮಾನವಿತ್ತು. ಹಾಗೆ ಕೆಟ್ಟ ಗೆಳಯರ ಸಹವಾಸದಿಂದ ಧೂಮಪಾನ ,ಮದ್ಯಪಾನ ಎಲ್ಲವನ್ನೂ ಮೈಗಂಟಿಸಿಕೊಂಡಿದ್ದ. ಅವನ ಈ ವರ್ತನೆ ರಾಮುವಿಗೆ ಹಿಡಿಸದೇ ಹಾಸ್ಟೇಲಿನಲ್ಲಿ ತಾನು ಬೇರೆ ರೂಮಿಗೆ ಬದಲಾಯಿಸಿಕೊಂಡ. ಕಷ್ಟಪಟ್ಟು ಓದಿ ಪ್ರತೀ ಸೆಮಿಸ್ಟರ್ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸುತ್ತಾ ಬಂದ. ಅಮ್ಮನಿಗೂ ತಿಂಗಳಿಗೊಮ್ಮೆ ಪತ್ರ ಬರೆದು ಎಲ್ಲವನ್ನೂ ಖುಷಿಯಿಂದ ಹಂಚಿಕೊಳ್ಳುತ್ತಿದ್ದ. ಜೊತೆಗೆ ತಾಯಿ ಸೋಮುವಿನ ಬಗ್ಗೆ ಕೇಳಿದಾಗ "ಅವನ ಬಗ್ಗೆ ಏನು ಹೇಳುವುದು , ಸ್ವಲ್ಪವೂ ಬದಲಾವಣೆ ಇಲ್ಲಮ್ಮ.." ಎಂದು ಸುಮ್ಮನಾಗುತ್ತಿದ್ದ. ಇದರ ಮಧ್ಯೆ ಸೋಮು ಪ್ರಶ್ನೆ ಪತ್ರಿಕೆ ಕದ್ದನೆಂದು ಕಾಲೇಜಿನಿಂದ ಹೊರಹಾಕಿದರು. ಹೆತ್ತವರ ಕನಸು ನೀರಿನಲ್ಲಿ ಹೋಮ ಮಾಡಿದಂತಾಯಿತು. ಹೇಗೋ ಕಾಲೇಜಿನಲ್ಲಿ ಬೇಡಿಕೊಂಡು ಕೊನೆಯ ಸೆಮಿಸ್ಟರ್ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟರು. ಸ್ವಲ್ಪ ಬುದ್ಧಿ ಬಂದ ಸೋಮುವಿಗೆ , ಬಾಲ್ಯದ ಗೆಳೆದ ರಾಮುವಿನ ನೆನಪಾಯಿತು. ಅವನ ಸಹಾಯ ಪಡೆದಾದರೂ ಓದಿ ಪಾಸಾಗಬೇಕು ಎಂದ ಪಣತೊಟ್ಟ. ರಾಮುವು ಪಕ್ಕದ ಕೋಣೆಯಲ್ಲಿ ಓದುತ್ತಿದ್ದವನನ್ನು ಮಾತನಾಡಲು ಕರೆದ. "ನನ್ನೆಲ್ಲ ತಪ್ಪಿನ ಅರಿವಾಗಿದೆ. ನಿನ್ನ ಮನಸಿಗೂ ನೋವುಂಟು ಮಾಡಿದ್ದೆ. ನನ್ನನ್ನು ಕ್ಷಮಿಸಿ ಬಿಡು " ಎಂದು ಬೇಡಿಕೊಂಡ. ಅವನು ಮನಕರಗಿ ಕ್ಷಮಿಸಿ ಓದಲು ಸಹಾಯ ಮಾಡಿದ. ಹಗಲು ರಾತ್ರಿ ಎನ್ನದೇ ಇಬ್ಬರೂ ಕಷ್ಟಪಟ್ಟು ಓದಿದರು. ಬಾಲ್ಯದ ನೆನಪುಗಳನ್ನೆಲ್ಲ ಮೆಲುಕು ಹಾಕುತ್ತಾ ಖುಷಿಖುಷಿಯಾಗಿ ಓದುತ್ತಿದ್ದರು. ಅವನ ಈ ಬದಲಾವಣೆಯನ್ನು ತರಗತಿಯ ಅಧ್ಯಾಪಕರು ನೋಡಿ ಸಂತೋಷ ಪಟ್ಟರು.
*
ಕೊನೆಗೂ ಸತ್ವಪರೀಕ್ಷೆಯ ದಿನ ಹತ್ತಿರ ಬಂದಿತು. ಎಲ್ಲರೂ ಪರೀಕ್ಷಾ ಹಾಲಿನಲ್ಲಿ ಗಂಭೀರವಾಗಿ ಕುಳಿತಿದ್ದರು. ಅದೆಷ್ಟೋ ಪರೀಕ್ಷೆಗಳ ಬರಿಯದೇ ತೇಲಿಸಿಬಿಟ್ಟಿದ್ದ ಸೋಮುವಿಗೆ ಒಮ್ಮೆ ಕಣ್ಣು ತೇವಗೊಂಡಿತು. ಪ್ರಶ್ನೆ ಪತ್ರಿಕೆಯ ಪಡೆದ ಸೋಮು ಗೊತ್ತಿದ್ದ ಪ್ರಶ್ನೆಗಳಿಗೆಲ್ಲ ಉತ್ತರಿಸಿ ಹಾಲಿನಿಂದ ಹೊರನಡೆದ. ರಾಮುವೂ ಎಲ್ಲವೂ ಸುಲಭವಾಗಿರುವ ಪ್ರಶ್ನೆಗಳ ಬಂದಿದ್ದವು ಎಂದು ಖುಷಿಯಿಂದ ಪರೀಕ್ಷೆ ಬರೆದು ಹೊರನಡೆದ.
*
ತಿಂಗಳುಗಳು ಉರುಳಿದವು. ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದರು. ಸೋಮುವಿಗೆ ಫಲಿತಾಂಶ ನೋಡುವ ಧೈರ್ಯವಿರಲಿಲ್ಲ. ಪಾಸಾಗುತ್ತೇನೋ ಇಲ್ಲವೋ ಎಂಬ ಭಯಕಾಡುತ್ತಿತ್ತು. ಸೋಮು ಎಲ್ಲದರಲ್ಲೂ ಪಾಸಾಗಿದ್ದ.‌ ಅದಕ್ಕೆ ಹೇಳುವುದು ನಮ್ಮಲ್ಲಿ ಹಟವಿರಬೇಕು. ಪಣತೊಟ್ಟು ಹಿಡಿದ ಕೆಲಸವನ್ನು ಸಾಧಿಸಬೇಕು. ಆಗಲೇ ಫಲಿತಾಂಶ ಚೆನ್ನಾಗಿ ಬರುವುದು..

- ಸಿಂಧುಭಾರ್ಗವ್ 

ಜನುಮದ ಜೋಡಿ ಕನ್ನಡ ಸಿನೇಮಾ

(@)(@)

(@)()@)

ಸಿನೇಮಾ: ಜನುಮದ ಜೋಡಿ (೧೯೯೬)

ಟಿ.ಎಸ್ ನಾಗಾಭರಣ ರ ನಿರ್ದೇಶನದ, ವಿ.ಮನೋಹರ್ ಅವರ ಸಂಗೀತದ " #ಜನುಮದ_ಜೋಡಿ " ಸಿನೇಮಾ (ಗುಜರಾತಿ ಮಲೇಲಾ ಜೀವ ನೋವೆಲ್ ನಿಂದ ಆಧಾರಿತ-೧೯೯೬) ನಾನು ಆರೇಳು ವರುಷದವಳಾಗಿದ್ದಾಗ ನೋಡಿದ್ದೆ. ನಮ್ಮ ತಂದೆಯವರು ಸಂಸಾರ ಸಮೇತ ಕರೆದುಕೊಂಡು ಹೋಗಿ ತೋರಿಸಿದ ಸಿನೇಮಾ.. ಇಪ್ಪತ್ತು ವರುಷಗಳೇ ಕಳೆದರೂ ಅದರ ಒಂದೊಂದು ಹಾಡು ಇನ್ನೂ ಬಾಯಿಪಾಠವಾಗಿ ಹಾಡುತ್ತಿದ್ದೇನೆ.. ನಾವು ಹೋಟೆಲ್ ನಲ್ಲಿದ್ದಾಗ ದಿನವೂ ಆಕಾಶ್ ಆಡಿಯೋ ಕಂಪೆನಿಯ ಕ್ಯಾಸೆಟ್ ನಿಂದ ಆ ಹಾಡುಗಳೆಲ್ಲವನ್ನೂ ಕೇಳಿ ಆನಂದಿಸುತ್ತಿದ್ದೆವು. ಅಷ್ಟು ಪ್ರಭಾವ ಬೀರಿದ ಹಾಡುಗಳು. ಕಥಾನಾಯಕಿ ಕನಕ(ಶಿಲ್ಪಾ) ಎರಡು ಜಡೆ, ಕನಕಾಂಬರ ಹೂ ಮುಡಿದು ಬುಗ್ಗೆ ಕೈ ಬ್ಲೌಸ್ ಉದ್ದಲಂಗ ಧರಿಸಿ ಸಿಂಗಾರಿ ತರಹ ಕಾಣಿಸುತ್ತಿದ್ದಳು.
ಕಥಾನಾಯಕ ಕೃಷ್ಣ(ಶಿವರಾಜ್ ಕುಮಾರ್) ಊರಿಗೆ ಪ್ರೀತಿಯ ಮಗನಾಗಿದ್ದ. 
ಹಳ್ಳಿಯ ಸೊಗಡನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಮೇಲುಜಾತಿ-ಕೀಳುಜಾತಿ ನಡುವಿನಲಿ ಅರಳಿದ ಪ್ರೀತಿ ಹೂವನ್ನು ಸುಟ್ಟುಹಾಕುವ ಎಲ್ಲಾ ಪ್ರಯತ್ನ ನಡೆಸುವರು. ಮಲತಾಯಿ ಕುಡುಕ ತಂದೆವಯಸ್ಸಿನ ಹೆಂಡತಿ ಬಿಟ್ಟ ಅಣ್ಣನಿಗೇ ಮದುವೆ ಮಾಡಿಸಲು ಮುಂದಾದಾಗ ಈ ಜೋಡಿ ಓಡಿಹೋಗಿ ಮದುವೆ ಯಾಗಲು ನಿರ್ಧರಿಸುತ್ತಾರೆ. ಅದಕ್ಕೆ ಅವನ ಸ್ನೇಹಿತರೂ ಸಹಾಯಮಾಡುತ್ತಾರೆ.. ಆದರೆ ಮೋಸಹೋಗಿ ಬಲವಂತವಾಗಿ ಎಡಬಿಡಂಗಿ ಅಂದಾಣಿಗೆ (ಕರಿಬಸವಯ್ಯ ) ಕನಕಳನ್ನು ತಂಗಪ್ಪ & ಸಿಂಗಾರಪ್ಪ  ಮದುವೆ ಮಾಡಿಸಿ ಬಿಡುವ.. ಇದರಿಂದ ಮನನೊಂದು ಕೃಷ್ಣ ಊರು ಬಿಟ್ಟು ತೋಟದಲ್ಲೇ ಇರುವನು. ಏನೋ ಸಾಧಿಸಿದ್ದೇವೆ ಎಂದು ಬೀಗಿ ತಂಗಪ್ಪ ನ ಕೊಲೆಮಾಡಿ ಅದರ ತಪ್ಪನ್ನು ಕೃಷ್ಣನ ಮೇಲೆ ಹಾಕುವ ಪ್ರಯತ್ನ ಮಾಡಿವರು. ಆದರೆ ನಿಜ ವಿಷಯ ಗೊತ್ತಾಗಿ ಜೈಲು ಸೇರುವನು  ಕುತಂತ್ರಿ ಸಿಂಗಾರಿ ಗೌಡ ಮತ್ತು ಅವನ ತಂದೆ.. ಹಾಗೂ ಹೀಗೂ ಅನುದಿನ ಅಪವಾದ ಕೇಳಿಕೇಳಿ ಕೊನೆಗೆ ನಾಯಕಿ ಸಾಯಲು ವಿಷ ಬೆರೆಸಿದ ರೊಟ್ಟಿ ತಯಾರಿಸುತ್ತಾಳೆ. ಆದರೆ ಅದನ್ನು ಎಡಬಿಡಂಗಿ ಗಂಡ ತಿಂದು ಸಾವನ್ನಪ್ಪುತ್ತಾನೆ.. ಗಂಡನನ್ನು ಕೊಂದಳೆಂಬ ಅಪವಾದಕ್ಕೆ ಮತ್ತೆ ಗುರಿಯಾದ ಕಾರಣ ಊರಿನಲ್ಲಿ ಬಹಿಷ್ಕಾರ ಹಾಕಿದ್ದಕ್ಕೆ ಹುಚ್ಚುಹಿಡಿಯುತ್ತದೆ. ಕೃಷ್ಣ ಊರು ಬಿಟ್ಟು ಹೋಗುತ್ತಾನೆ. ಕೊನೆಗೆ ಜಾತ್ರೆ ದಿನ ಅವರಿಬ್ಬರೂ ಒಂದಾಗುತ್ತಾರೆ.. ಒಂದೇ ವರುಷದೊಳಗೆ ಎರಡು ಪ್ರೀತಿಸಿದ ಜೀವಗಳಿಗೂ ಮತ್ತು ಆ ಊರಿನಲ್ಲಿಯೂ ಏನೇನೆಲ್ಲಾ ನಡೆದುಹೋಗುತ್ತದೆ ಎಂಬುದೇ ಕಥೆ..
ಅಚ್ಚಳಿಯದೇ ಉಳಿಯುವ ಸಿನೇಮಾ.. ನಾನು ಇನ್ನೊಮ್ಮೆ ನೋಡಿದೆ..
- ಸಿಂಧುಭಾರ್ಗವ್ ..

(@)(@)