ಮೊಬೈಲ್ ಕ್ಲಿಕ್
ಹನಿಗವನಗಳು
ದತ್ತಪದಗಳು : ಯುಗಾದಿ, ಷರತ್ತು , ಬರಗೆಟ್ಟು
-(೧)- ಮಾಮರ
ಮಾಮರದಲ್ಲಿ ನಗುವ ಹೂಗಳು
ಝೇಂಕರಿಸುವ ದುಂಬಿಗಳ ಹಿಂಡು
ಗೊಂಚಲಿನ ಸಂಧಿಯಲ್ಲಿ ಮಿಡಿ ಮಾವು
ಇಣುಕುತಿದೆ ಜಗವ ನೋಡಲು..
ಮಾವಿನ ಎಲೆಗಳ ತೋರಣ ಕಟ್ಟಿ
ಹಬ್ಬಕೆ ಸ್ವಾಗತ ಕೋರೋಣ
ಬಂಧುಬಳಗವನು ಸಿಹಿಯೂಟಕೆ ಕರೆದು
ಕಷ್ಟ-ಸುಖಗಳ ಕೇಳೋಣ..
- ೨) - ಬೇವು ಬೆರೆಸಿ
ಬೇವಿನ ಚಿಗುರನು ಬೆಲ್ಲದ ಜೊತೆಗೆ
ಬೆರೆಸಿ ಕುಟ್ಟಿ ರಸ ತೆಗೆದು
ಯುಗಾದಿ ಹಬ್ಬದ ದಿನದಲಿ ಎಲ್ಲರೂ
ಜೊತೆಜೊತೆಗೆ ಸವಿದು
ಕಷ್ಟ ಸುಖಗಳ ಸ್ವೀಕರಿಸೋ ವಿಧಾನ
ಹಿರಿಯರಿಂದ ಮುಂದುವರಿದು
ಸಂಪ್ರದಾಯವ ಎಂದೂ ಮರೆಯದಿರಿ
ಬೆಳೆಸಿ, ವೈಜ್ಞಾನಿಕ ಕಾರಣ ತಿಳಿದು
(೩) ಚಿಗುರು
ನಿನ್ನ ಮೇಲೆ
ಮತ್ತೊಮ್ಮೆ ಒಲವಾಗಿದೆ
ಕಾರಣ,
ಮಾವು ಬೇವು ಚಿಗುರಿದೆ
ಹೊಸ ಸಂವತ್ಸರ
ಕೂಗಿ ಕರೆದಿದೆ
ನವನವೀನ
ನಿತ್ಯನೂತನ ಎನಿಸಿದೆ
(೪) ಬೆಲ್ಲದ ಪಾನಕ
ನಿನ್ನ ಪ್ರೀತಿಯು
ಬಿಸಿಲಿಗೆ
ತಂಪ ನೀಡುವ
ಬೆಲ್ಲದ ಪಾನಕ/
ಅಪ್ಪುಗೆಯಿಂದ
ಮರೆಸಯವೆ
ಮನದ
ನೋವಿನ ಸೂತಕ//
(೫) ನೂತನ
ನೂತನ ಗಳಿಗೆಯಲ್ಲಿ
ನವೀನವಾಗಿ
ನಿತ್ಯ ಜೀವನದಲ್ಲಿ
ನವರಂಗನು ಬೆರೆಸಿ
ನಯನಗಳಲ್ಲಿ
ಭರವಸೆಯ ಕಾಂತಿ
ಕುಗ್ಗದಂತೆ
ನೋಡಿಕೊಳ್ಳೋಣ..
-ನುಡಿಸಿಂಧು🍁
(೬) ಷರತ್ತು
ಷರತ್ತು ಹಾಕಿ ಪ್ರೀತಿಸಲು ಆಗದು..
ಷರತ್ತು ಹಾಕಿ ಮಕ್ಕಳ ಬೆಳೆಸಲು ಸಾಧ್ಯವಾಗದು..
ವಾತ್ಸಲ್ಯ, ಪ್ರೀತಿಯ ಒರತೆ ಸದಾ ಹರಿದು ಬರಲಿ
ಯಾರನ್ನು ಇಲ್ಲಿ ಬಂಧಿಸಲಾಗದು.
-ನುಡಿಸಿಂಧು🍁
(೭) ಷರತ್ತು ಬದ್ಧ
ನಿನ್ನ ಪ್ರೀತಿಯ ಮಾಡದ ತಪ್ಪಿಗೆ ಸಮಾಜದ ಎದುರು ಸಿಕ್ಕಿಬಿದ್ದೆ.
ಷರತ್ತುಬದ್ಧ ಜಾಮೀನು ಪಡೆದು ಈಗಷ್ಟೇ ಹೊರಬಂದೆ.
ಭಯವಿಲ್ಲ ನನಗೆ ಈ ಸಮಾಜ ಪ್ರೇಮಿಗಳ ಎಂದಿಗೂ ಬದುಕಲು ಬಿಡದು.
ಸತ್ತರೂ ಸರಿಯೇ ಹೋರಾಟ ನಡೆಸುವ ನಿಲ್ಲಿಸೆನು..
- ನುಡಿಸಿಂಧು🍁
(೮) ಬರಗೆಟ್ಟ ಬದುಕು
ಬರಗೆಟ್ಟ ಬದುಕಿಗೆ ಅವನೇ ರಾಜ
ಕಟ್ಟಿಕೊಂಡ ತಪ್ಪಿಗೆ ಅವಳೇ ರಾಣಿ..
ರಾಜ ರಾಣಿಗೆ ಹೊಟ್ಟೆ ತುಂಬಲು ಬಿಸಿ ಗಂಜಿಯೂಟ..
ಕಣ್ತುಂಬಾ ನಿದಿರೆ ಬರಲು ಆಗಸದ ಕಡೆ ನೋಟ..
ತಂಗಾಳಿ ಮೈ ಸೋಕಿದಾಗ ಜನಿಸಿದ ಎರಡು ಮತ್ತೊಂದು ಮಕ್ಕಳು..
ಭವಿಷ್ಯದ ಬಗ್ಗೆ ಭಯವಿಲ್ಲ, ಕೈಗೆ ಸಿಕ್ಕ ಕೆಲಸ ಮಾಡಬಲ್ಲರು..
- ಸಿಂಧು ಭಾರ್ಗವ, ಬೆಂಗಳೂರು
No comments:
Post a Comment